Homeಮುಖಪುಟಅಮಾನತು ಬೆನ್ನಲ್ಲೇ ಬಿಆರ್‌ಎಸ್‌ ತೊರೆದ ಕೆ. ಕವಿತಾ: ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ

ಅಮಾನತು ಬೆನ್ನಲ್ಲೇ ಬಿಆರ್‌ಎಸ್‌ ತೊರೆದ ಕೆ. ಕವಿತಾ: ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ

- Advertisement -
- Advertisement -

ತೆಲಂಗಾಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದಿಂದ, ಅದರ ಸ್ಥಾಪಕ ಕೆ. ಚಂದ್ರಶೇಖರ್ ರಾವ್ ಅವರ ಮಗಳನ್ನು ಅಮಾನತುಗೊಳಿಸಲಾಗಿದೆ. ಅಪ್ಪ ಸ್ಥಾಪಿಸಿದ, ಸಹೋದರ ಅಧ್ಯಕ್ಷನಾಗಿರುವ ಪಕ್ಷದಿಂದ ವಿಧಾನಪರಿಷತ್ ಸದಸ್ಯೆ ಕೆ.ಕವಿತಾ ಅಮಾನತುಗೊಂಡಿದ್ದಾರೆ.

ಅಮಾನತುಗೊಂಡ ಬೆನ್ನಲ್ಲೇ, ಬುಧವಾರ (ಸೆ.3) ಹೈದಾರಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕವಿತಾ ಅವರು, ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಬಿಆರ್‌ಎಸ್‌ 2014ರಿಂದ 2024ರವರೆಗೆ 10 ವರ್ಷಗಳ ಕಾಲ ತೆಲಂಗಾಣದಲ್ಲಿ ಆಡಳಿತ ನಡೆಸಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದ ಮೂಲಕ ಹುಟ್ಟಿಕೊಂಡ ಪಕ್ಷವಾಗಿದೆ ಬಿಆರ್‌ಎಸ್‌. ಆರಂಭದಲ್ಲಿ ಟಿಆರ್‌ಎಸ್‌ (ತೆಲಂಗಾಣ ರಾಷ್ಟ್ರ ಸಮಿತಿ) ಎಂದಿದ್ದ ಪಕ್ಷದ ಹೆಸರನ್ನು, 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಆರ್‌ಎಸ್‌ ಎಂದು ಬದಲಾಯಿಸಲಾಯಿತು. ಬಿಆರ್‌ಎಸ್‌ ಪಕ್ಷದ ಸ್ಥಾಪಕ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) 10 ವರ್ಷದ ತೆಲಂಗಾಣದ ಮುಖ್ಯಮಂತ್ರಿ ಆಗಿದ್ದರು. ಅವರ ಮಗ ಕೆ.ಟಿ ರಾಮರಾವ್ (ಕೆಟಿಆರ್‌) ಪೌರಾಡಳಿತ ಮತ್ತು ಐಟಿಬಿಟಿ ಸಚಿವರಾಗಿದ್ದರು. ಪ್ರಸ್ತುತ ಕೆಟಿಆರ್ ಬಿಆರ್‌ಎಸ್‌ ಪಕ್ಷದ ತೆಲಂಗಾಣ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿದ್ದಾರೆ. ಕೆಸಿಆರ್‌ ಪಕ್ಷದ ರಾಷ್ಟ್ರೀಯ ನಾಯಕ ಎನಿಸಿಕೊಂಡಿದ್ದಾರೆ.

ಕವಿತಾ ಅವರು ಬಿಆರ್‌ಎಸ್‌ ತೊರೆದ ಬಳಿಕ ತಮ್ಮದೇ ಹೊಸ ಪಕ್ಷ ಕಟ್ಟುತ್ತಾರೆಯೇ ಎಂದು ಸ್ಪಷ್ಟವಾಗಿಲ್ಲ. ಆದರೆ, “ತಾನು ಬೇರೆ ಪಕ್ಷಕ್ಕೆ ಸೇರುವ ಬಗ್ಗೆ ಯೋಚನೆ ಮಾಡುವುದಿಲ್ಲ. ನನ್ನ ಜೀವನದ ಕಳೆದ 20 ವರ್ಷಗಳಿಂದ ನಾನು ತೆಲಂಗಾಣ ಮತ್ತು ಬಿಆರ್‌ಎಸ್‌ಗಾಗಿ ಕೆಲಸ ಮಾಡಿದ್ದೇನೆ. ನಾನು ತೆಲಂಗಾಣ ಆಂದೋಲನಕ್ಕೆ ಬಂದಾಗ 27 ವರ್ಷ ವಯಸ್ಸಾಗಿತ್ತು, ಈಗ 47 ವರ್ಷ. ನಾನು ನನ್ನ ಜೀವನದ ಬಹುಭಾಗವನ್ನು ತೆಲಂಗಾಣ ಮತ್ತು ಬಿಆರ್‌ಎಸ್‌ಗಾಗಿ ನೀಡಿದ್ದೇನೆ” ಎಂದು ಕವಿತಾ ಹೇಳಿದ್ದಾರೆ.

“ಕಲ್ವಕುಂಟ್ಲ ಕುಟುಂಬ (ಕೆಸಿಆರ್‌ ಕುಟುಂಬ) ಮತ್ತು ಬಿಆರ್‌ಎಸ್ ಅನ್ನು ಒಡೆಯಲು ಪಿತೂರಿ ನಡೆಯುತ್ತಿದೆ” ಎಂದ ಕವಿತಾ, “ನಿಮ್ಮನ್ನು ಯಾರು ಸುತ್ತುವರಿದಿದ್ದಾರೆ ಎಂದು ಪರಿಶೀಲಿಸಿಕೊಳ್ಳಿ” ಎಂದು ತಂದೆ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ. ಪಕ್ಷದಿಂದ ತನ್ನನ್ನು ಹೊರಹಾಕುವಲ್ಲಿ ತನ್ನ ಸೋದರಸಂಬಂಧಿಗಳು ಮತ್ತು ಬಿಆರ್‌ಎಸ್ ನಾಯಕರಾದ ಟಿ. ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಪಾತ್ರವಿದೆ ಎಂದು ಆರೋಪಿಸಿದ್ದಾರೆ.

ಈ ಇಬ್ಬರ ವಿರುದ್ದ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪ ಹೊರಿಸಿದ ಕವಿತಾ, “ಸುವರ್ಣ ತೆಲಂಗಾಣ ಎಂದರೆ ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಅವರ ಮನೆಗಳಿಗೆ ಚಿನ್ನ ತಲುಪುವುದು ಎಂದಲ್ಲ” ಎಂದು ಕಿಡಿಕಾರಿದ್ದಾರೆ.

ಬಿಆರ್‌ಎಸ್‌ ಸರ್ಕಾರದಲ್ಲಿ ಹರೀಶ್ ರಾವ್ ತೆಲಂಗಾಣದ ನೀರಾವರಿ ಸಚಿವರಾಗಿದ್ದರು. ಸಂತೋಷ್ ಕುಮಾರ್ ಪಕ್ಷದ ಮಾಜಿ ರಾಜ್ಯಸಭಾ ಸಂಸದರಾಗಿದ್ದಾರೆ.

“ಇಂದು ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ನಾಳೆ ಕೆಸಿಆರ್ ಸೇರಿದಂತೆ ಯಾರಿಗೂ ಬೇಕಾದರು ಇದೇ ಪರಿಸ್ಥಿತಿ ಎದುರಾಗಬಹುದು. ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲದಿದ್ದರೆ ಹರೀಶ್ ರಾವ್ ಸಂಪತ್ತು ಸಂಗ್ರಹಿಸಿದ್ದು ಹೇಗೆ? ಹರೀಶ್ ರಾವ್ ಭ್ರಷ್ಟಾಚಾರದ ಹಣವನ್ನು ತಮ್ಮ ಚುನಾವಣೆಗೆ ಬಳಸಿಕೊಂಡಿದ್ದಾರೆ” ಎಂದು ಕವಿತಾ ಗುಡುಗಿದ್ದಾರೆ.

ತನ್ನ ಸಹೋದರ ಹಾಗೂ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅವರು ಪಕ್ಷದಲ್ಲಿನ ತನ್ನ ಸಮಸ್ಯೆಗಳೇನು ಎಂದು ಕೇಳಿಲ್ಲ. ಅವರ ತಂದೆ ಕೂಡ ಬಿಆರ್‌ಎಸ್‌ನಿಂದ ಮುಂದಿನ ಬಾರಿ ಉಚ್ಚಾಟನೆಗೆ ಒಳಗಾಗಬಹುದು ಎಂದು ಕವಿತಾ, “ಪಕ್ಷದ ಪ್ರಧಾನ ಕಚೇರಿಯಾದ ತೆಲಂಗಾಣ ಭವನದಲ್ಲಿ ಕುಳಿತು, ಪಕ್ಷದ ಮಹಿಳಾ ನಾಯಕಿಯಾಗಿ, ಪಕ್ಷದಲ್ಲಿ ನನ್ನನ್ನು ಗುರಿಯಾಗಿಸಿಕೊಂಡಿರುವ ದುಷ್ಟ ಶಕ್ತಿಗಳಿವೆ ಎಂದು ನಾನು ಹೇಳಿದ್ದೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಟಿಆರ್‌ ಈ ಬಗ್ಗೆ ನನಗೆ ಕರೆ ಮಾಡಿ ವಿಚಾರಿಸಬೇಕಿತ್ತು. ಅವರು ಏಕೆ ನನ್ನನ್ನು ಸಂಪರ್ಕಿಸಿಲ್ಲ? ನನ್ನನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ನಾನು ಮೊದಲ ಬಾರಿಗೆ ವಿಷಯ ಪ್ರಸ್ತಾಪಿಸಿ 103 ದಿನಗಳೇ ಕಳೆದಿವೆ ಆದರೂ ಅವರು ಒಂದು ಮಾತು ಏಕೆ ಕೇಳಿಲ್ಲ?” ಎಂದು ಕವಿತಾ ಪ್ರಶ್ನೆ ಹಾಕಿದ್ದಾರೆ.

“ಕೆಸಿಆರ್ ಮತ್ತು ಕೆಟಿಆರ್ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಎ. ರೇವಂತ್ ರೆಡ್ಡಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸ್ಥಾಪಿತ ಹಿತಾಸಕ್ತಿಗಳು ಸುತ್ತುವರೆದಿವೆ. ಕೆಟಿಆರ್ ಮತ್ತು ಕೆಸಿಆರ್ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿದ್ದರೂ, ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಕಾಂಗ್ರೆಸ್ ಬೆಂಬಲವನ್ನು ಪಡೆಯುತ್ತಿದ್ದಾರೆ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಅವರ ವಿಷಯಕ್ಕೆ ಬಂದಾಗ ಮೌನವಾಗುತ್ತಿದೆ” ಎಂದು ಕವಿತಾ ಆರೋಪಿಸಿದ್ದಾರೆ.

ತಮ್ಮ ಎನ್‌ಜಿಒ ಮತ್ತು ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯ ಕಚೇರಿಯಲ್ಲಿ ಬೆಂಬಲಿಗರ ಗುಂಪುಗಳ ನಡುವೆ ಕುಳಿತು ಮಾತನಾಡಿದ ಕವಿತಾ, “ನಾನು ಪಕ್ಷಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿದ್ದೇನೆ. ಗುರುಕುಲ ಶಾಲೆಗಳು, ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಹಲವಾರು ದುರ್ಬಲ ವರ್ಗಗಳಿಗಾಗಿ ಕೆಲಸ ಮಾಡಿದ್ದೇನೆ. ನನ್ನ ಈ ಕೆಲಸಗಳಲ್ಲಿ ಪಕ್ಷ ವಿರೋಧಿ ಯಾವುದು?” ಎಂದು ಕವಿತಾ ಕೇಳಿದ್ದಾರೆ.

ಮಂಗಳವಾರ (ಸೆ.2) ಕವಿತಾ ಅವರಿಗೆ ನೀಡಲಾದ ಬಿಆರ್‌ಎಸ್‌ನ ಶಿಸ್ತು ಸಮಿತಿಯ ನೋಟಿಸ್‌ನಲ್ಲಿ, ಅವರ ಮೇಲೆ ‘ಪಕ್ಷ ವಿರೋಧಿ ಚಟುವಟಿಕೆಗಳ’ ಆರೋಪ ಹೊರಿಸಲಾಗಿತ್ತು. ತನ್ನ ತಂದೆ ಮಾರ್ಗದರ್ಶನ ನೀಡಿದಂತೆಯೇ ತಾನು ‘ಜನರ ತೆಲಂಗಾಣ’ ಮತ್ತು ‘ಸುವರ್ಣ ತೆಲಂಗಾಣ’ಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದಿರುವ ಕವಿತಾ, “ಇವುಗಳು ಪಕ್ಷ ವಿರೋಧಿ ಚಟುವಟಿಕೆಗಳಾಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಕಾಳೇಶ್ವರಂ ಏತ ನೀರಾವರಿ ಯೋಜನೆ ಭ್ರಷ್ಟಾಚಾರದ ಸಿಬಿಐ ತನಿಖೆ

ಕಾಳೇಶ್ವರಂ ಏತ ನೀರಾವರಿ ಯೋಜನೆ (Kaleshwaram Lift Irrigation Project – KLIP) ತೆಲಂಗಾಣದ ಅತಿದೊಡ್ಡ ಮತ್ತು ದುಬಾರಿ ಏತ ನೀರಾವರಿ ಯೋಜನೆಯಾಗಿದೆ. ಇದನ್ನು ಗೋದಾವರಿ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಯೋಜನೆಯ ಉದ್ದೇಶ ತೆಲಂಗಾಣದ ವಿವಿಧ ಜಿಲ್ಲೆಗಳಿಗೆ ನೀರಾವರಿ, ಕುಡಿಯುವ ನೀರು ಮತ್ತು ಕೈಗಾರಿಕಾ ಬಳಕೆಗೆ ನೀರು ಒದಗಿಸುವುದಾಗಿದೆ. ಆದರೆ, ಈ ಯೋಜನೆಯು ತಾಂತ್ರಿಕ ದೋಷಗಳು, ಆರ್ಥಿಕ ಅಕ್ರಮಗಳು ಮತ್ತು ರಾಜಕೀಯ ವಿವಾದಗಳಿಂದಾಗಿ ಗಮನ ಸೆಳೆದಿದೆ.

ಬಿಆರ್‌ಎಸ್‌ ಸರ್ಕಾರ ಮಹತ್ವಕಾಂಕ್ಷಿ ಕಾಳೇಶ್ವರಂ ಏತ ನೀರಾವರಿಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ, ಕವಿತಾ ಅವರು ತನ್ನ ವಿರುದ್ದ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾಜಿ ನೀರಾವರಿ ಸಚಿವ ಹರೀಶ್ ರಾವ್ ವಿರುದ್ದ ಆರೋಪಗಳನ್ನು ಹೊರಿಸಲಾಗಿದೆ.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣದ ಹಾಲಿ ಸರ್ಕಾರವು ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿದೆ.

ಆಗಸ್ಟ್ 31, 2025 ರಂದು ತೆಲಂಗಾಣ ವಿಧಾನಸಭೆಯಲ್ಲಿ 10 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಚರ್ಚೆಯ ನಂತರ, ಸೆಪ್ಟೆಂಬರ್ 1, 2025 ರಂದು ಸಿಬಿಐ ತನಿಖೆಗೆ ಆದೇಶ ಹೊರಡಿಸಲಾಗಿದೆ. ಜುಲೈ 31, 2025 ರಂದು ನ್ಯಾಯಮೂರ್ತಿ ಪಿ.ಸಿ. ಘೋಷ್ ಆಯೋಗ ಸಲ್ಲಿಸಿದ ವರದಿಗಳನ್ನು ಆಧರಿಸಿ ತನಿಖೆಗೆ ಆದೇಶ ಮಾಡಲಾಗಿದೆ. ಆಗಸ್ಟ್ 31, 2025ರಂದು ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಲಾಗಿತ್ತು.

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ನೇತೃತ್ವದ ಆಯೋಗವು, ಮೇಡಿಗಡ್ಡ, ಅಣ್ಣಾರಾಮ್ ಮತ್ತು ಸುಂಡಿಲ್ಲಾ ಬ್ಯಾರೇಜ್‌ಗಳ ನಿರ್ಮಾಣದಲ್ಲಿ ನಿರ್ಲಕ್ಷ್ಯ, ಆರ್ಥಿಕ ಅಕ್ರಮಗಳು ಮತ್ತು ಕಳಪೆ ಯೋಜನೆ ಸೇರಿದಂತೆ ಗಮನಾರ್ಹ ಲೋಪಗಳನ್ನು ಗುರುತಿಸಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ (NDSA) ವಿನ್ಯಾಸ ದೋಷಗಳು, ಕಳಪೆ ಗುಣಮಟ್ಟದ ನಿಯಂತ್ರಣ ಮತ್ತು ನಿರ್ಮಾಣ ನ್ಯೂನತೆಗಳನ್ನು ವರದಿ ಮಾಡಿದೆ, ವಿಶೇಷವಾಗಿ ಅಕ್ಟೋಬರ್ 21, 2023 ರಂದು ಮೇಡಿಗಡ್ಡ ಬ್ಯಾರೇಜ್‌ನಲ್ಲಿ ಆರು ಕಂಬಗಳು ಮುಳುಗಿದ್ದ ವಿಷಯವನ್ನು ಉಲ್ಲೇಖಿಸಿದೆ ಎಂದು ವರದಿಯಾಗಿದೆ.

ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಕವಿತಾ ಬಂಧನ

ದೆಹಲಿ ಮದ್ಯ ನೀತಿ ಅಥವಾ ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಹೊಂದಿಕೊಂಡಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೆ. ಕವಿತಾ ಅವರನ್ನು ಮಾರ್ಚ್ 15, 2024ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ನಂತರ, ದೆಹಲಿ ಮದ್ಯ ನೀತಿ ಹಗರಣಕ್ಕೆ ಹೊಂದಿಕೊಂಡಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಕೆ. ಕವಿತಾ ಅವರನ್ನು ತಿಹಾರ್ ಜೈಲಿನಿಂದ ಬಂಧಿಸಿತ್ತು. ಇಡಿ ಬಂಧನದ ನಂತರ  ನ್ಯಾಯಾಂಗ ಬಂಧನದಲ್ಲಿದ್ದ ಕವಿತಾ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು.

ಸರಿಸುಮಾರು ಐದು ತಿಂಗಳುಗಳ ಕಾಲ ಬಂಧನದಲ್ಲಿದ್ದ ನಂತರ, ಆಗಸ್ಟ್ 27, 2024 ರಂದು ಸುಪ್ರೀಂ ಕೋರ್ಟ್ ಕವಿತಾ ಅವರಿಗೆ ಜಾಮೀನು ನೀಡಿತ್ತು.

ಎಐಎಡಿಎಂಕೆ ನಾಯಕರ ನಡುವಿನ ಮಾತುಕತೆ ವಿಫಲ; ಎನ್‌ಡಿಎ ತೊರೆಯುವುದಾಗಿ ಘೋಷಿಸಿದ ಟಿಟಿವಿ ದಿನಕರನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂಡುಬಿದಿರೆ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ತನಿಖೆಗೆ ಕಮಿಷನರ್ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಮಹಿಳೆಯರಿಗೆ ಲೈಂಗಿಕ, ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಹಣ ಕೊಡುವಂತೆ ಪೀಡಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ...

ಅಸ್ಸಾಂ: ರಂಜಾನ್ ಆಹಾರ ವ್ಯವಸ್ಥೆಗಾಗಿ ಮೀನು ಹಿಡಿಯುತ್ತಿದ್ದ ಮುಸ್ಲಿಂ ಸಹೋದರರ ಮೇಲೆ ಬಿಎಸ್‌ಎಫ್ ಗುಂಡಿನ ದಾಳಿ: ಗಂಭೀರ ಗಾಯ

ಅಸ್ಸಾಂನ ದಕ್ಷಿಣ ಸಲ್ಮಾರಾ–ಮಂಕಚಾರ್ ಜಿಲ್ಲೆಯ ಇಬ್ಬರು ಸಹೋದರರು ಭಾರತದ ಭೂಪ್ರದೇಶದೊಳಗಿನ ನದಿನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡು ಹಾರಿಸಿ ಪ್ರಾಣಕ್ಕಾಗಿ ಹೋರಾಡುತ್ತಿದ್ದಾರೆ. ಈ ಘಟನೆ ಮಾರ್ಚ್ 8-9, 2026...

ಊನಾ ದಲಿತ ದೌರ್ಜನ್ಯ ಪ್ರಕರಣ: ಐವರು ದೋಷಿಗಳೆಂದು ತೀರ್ಪು ನೀಡಿದ ನ್ಯಾಯಾಲಯ; 37 ಆರೋಪಿಗಳು ಖುಲಾಸೆ

ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಗುಜರಾತ್‌ನ ಊನಾ ದಲಿತರ ಮೇಲೆ ಹಲ್ಲೆ ಪ್ರಕರಣದಲ್ಲಿ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ನ್ಯಾಯಾಲಯವು ಸೋಮವಾರ ತನ್ನ ತೀರ್ಪು ನೀಡಿದ್ದು,...

ರಾಜ್ಯಸಭೆ ಚುನಾವಣೆ : ಬಿಹಾರದ ಎಲ್ಲಾ ಐದು ಸ್ಥಾನಗಳು ಎನ್‌ಡಿಎ ಪಾಲು; ಒಡಿಶಾದ ಮೂರು ಸ್ಥಾನಗಳಲ್ಲಿ ಗೆಲುವು

ರಾಜ್ಯಸಭೆಯ 37 ಸ್ಥಾನಗಳಿಗೆ ಸೋಮವಾರ (ಮಾ.16) ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 21 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಪೈಕಿ ಬಿಜೆಪಿ ಮಾತ್ರ 11 ಸ್ಥಾನಗಳನ್ನು ಪಡೆದಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಒಟ್ಟು 11 ಸ್ಥಾನಗಳನ್ನು...

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ ; ಕನಿಷ್ಠ 400 ಸಾವು : ವರದಿ

ರಾಜಧಾನಿ ಕಾಬೂಲ್‌ನಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆ ಪಾಕಿಸ್ತಾನದ ಮಿಲಿಟರಿ ವಾಯು ದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ. ಅಲ್‌-ಜಝೀರಾ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಆರೋಪವನ್ನು...

‘ನನ್ನ ಮನೆ ಮೇಲೆ ದಾಳಿ ಮಾಡಿ… ಹೇಗೆ ಎದುರಿಸಬೇಕೆಂದು ಗೊತ್ತಿದೆ..’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

"ತಮ್ಮ ನಿವಾಸ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕರ ನಿವಾಸವನ್ನು ಗುರಿಯಾಗಿಸಿಕೊಳ್ಳುವಂತೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ರಾಜ್ಯದಲ್ಲಿ, ಟಿಎಂಸಿ ನಾಯಕರ ಮೇಲಿನ ದಾಳಿಗೆ...

ಬೆಂಗಳೂರು: ವಿಶೇಷ ಪೂಜೆ ಹೆಸರಿನಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: 59 ವರ್ಷದ ‘ಗಿಳಿ ಶಾಸ್ತ್ರ’ ಹೇಳುವ ವ್ಯಕ್ತಿ ಬಂಧನ

ಬೆಂಗಳೂರು: ವಿಶೇಷ ಪೂಜೆ ಮಾಡುವುದಾಗಿ ಹೇಳಿಕೊಂಡು ಆದಾಯ ತೆರಿಗೆ ಅಧಿಕಾರಿಗೆ 35 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥೇಣಿಯ ಶೇಖರ್...

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...

ಬೆಂಗಳೂರು| ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಕ್ಕಳ ಮುಂದೆಯೇ ಥಳಿಸಿ ಕೊಂದ ಗುಂಪು

ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಕ್ಕಳ ಮುಂದೆಯೇ ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಬಡಾ ಮಕನ್ ರಸ್ತೆ ಬಳಿ ರಶೀದ್ ಪಾಷಾ ಎಂದು...