Homeಮುಖಪುಟಅಮಾನತು ಬೆನ್ನಲ್ಲೇ ಬಿಆರ್‌ಎಸ್‌ ತೊರೆದ ಕೆ. ಕವಿತಾ: ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ

ಅಮಾನತು ಬೆನ್ನಲ್ಲೇ ಬಿಆರ್‌ಎಸ್‌ ತೊರೆದ ಕೆ. ಕವಿತಾ: ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ

- Advertisement -
- Advertisement -

ತೆಲಂಗಾಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದಿಂದ, ಅದರ ಸ್ಥಾಪಕ ಕೆ. ಚಂದ್ರಶೇಖರ್ ರಾವ್ ಅವರ ಮಗಳನ್ನು ಅಮಾನತುಗೊಳಿಸಲಾಗಿದೆ. ಅಪ್ಪ ಸ್ಥಾಪಿಸಿದ, ಸಹೋದರ ಅಧ್ಯಕ್ಷನಾಗಿರುವ ಪಕ್ಷದಿಂದ ವಿಧಾನಪರಿಷತ್ ಸದಸ್ಯೆ ಕೆ.ಕವಿತಾ ಅಮಾನತುಗೊಂಡಿದ್ದಾರೆ.

ಅಮಾನತುಗೊಂಡ ಬೆನ್ನಲ್ಲೇ, ಬುಧವಾರ (ಸೆ.3) ಹೈದಾರಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕವಿತಾ ಅವರು, ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಬಿಆರ್‌ಎಸ್‌ 2014ರಿಂದ 2024ರವರೆಗೆ 10 ವರ್ಷಗಳ ಕಾಲ ತೆಲಂಗಾಣದಲ್ಲಿ ಆಡಳಿತ ನಡೆಸಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದ ಮೂಲಕ ಹುಟ್ಟಿಕೊಂಡ ಪಕ್ಷವಾಗಿದೆ ಬಿಆರ್‌ಎಸ್‌. ಆರಂಭದಲ್ಲಿ ಟಿಆರ್‌ಎಸ್‌ (ತೆಲಂಗಾಣ ರಾಷ್ಟ್ರ ಸಮಿತಿ) ಎಂದಿದ್ದ ಪಕ್ಷದ ಹೆಸರನ್ನು, 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಆರ್‌ಎಸ್‌ ಎಂದು ಬದಲಾಯಿಸಲಾಯಿತು. ಬಿಆರ್‌ಎಸ್‌ ಪಕ್ಷದ ಸ್ಥಾಪಕ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) 10 ವರ್ಷದ ತೆಲಂಗಾಣದ ಮುಖ್ಯಮಂತ್ರಿ ಆಗಿದ್ದರು. ಅವರ ಮಗ ಕೆ.ಟಿ ರಾಮರಾವ್ (ಕೆಟಿಆರ್‌) ಪೌರಾಡಳಿತ ಮತ್ತು ಐಟಿಬಿಟಿ ಸಚಿವರಾಗಿದ್ದರು. ಪ್ರಸ್ತುತ ಕೆಟಿಆರ್ ಬಿಆರ್‌ಎಸ್‌ ಪಕ್ಷದ ತೆಲಂಗಾಣ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿದ್ದಾರೆ. ಕೆಸಿಆರ್‌ ಪಕ್ಷದ ರಾಷ್ಟ್ರೀಯ ನಾಯಕ ಎನಿಸಿಕೊಂಡಿದ್ದಾರೆ.

ಕವಿತಾ ಅವರು ಬಿಆರ್‌ಎಸ್‌ ತೊರೆದ ಬಳಿಕ ತಮ್ಮದೇ ಹೊಸ ಪಕ್ಷ ಕಟ್ಟುತ್ತಾರೆಯೇ ಎಂದು ಸ್ಪಷ್ಟವಾಗಿಲ್ಲ. ಆದರೆ, “ತಾನು ಬೇರೆ ಪಕ್ಷಕ್ಕೆ ಸೇರುವ ಬಗ್ಗೆ ಯೋಚನೆ ಮಾಡುವುದಿಲ್ಲ. ನನ್ನ ಜೀವನದ ಕಳೆದ 20 ವರ್ಷಗಳಿಂದ ನಾನು ತೆಲಂಗಾಣ ಮತ್ತು ಬಿಆರ್‌ಎಸ್‌ಗಾಗಿ ಕೆಲಸ ಮಾಡಿದ್ದೇನೆ. ನಾನು ತೆಲಂಗಾಣ ಆಂದೋಲನಕ್ಕೆ ಬಂದಾಗ 27 ವರ್ಷ ವಯಸ್ಸಾಗಿತ್ತು, ಈಗ 47 ವರ್ಷ. ನಾನು ನನ್ನ ಜೀವನದ ಬಹುಭಾಗವನ್ನು ತೆಲಂಗಾಣ ಮತ್ತು ಬಿಆರ್‌ಎಸ್‌ಗಾಗಿ ನೀಡಿದ್ದೇನೆ” ಎಂದು ಕವಿತಾ ಹೇಳಿದ್ದಾರೆ.

“ಕಲ್ವಕುಂಟ್ಲ ಕುಟುಂಬ (ಕೆಸಿಆರ್‌ ಕುಟುಂಬ) ಮತ್ತು ಬಿಆರ್‌ಎಸ್ ಅನ್ನು ಒಡೆಯಲು ಪಿತೂರಿ ನಡೆಯುತ್ತಿದೆ” ಎಂದ ಕವಿತಾ, “ನಿಮ್ಮನ್ನು ಯಾರು ಸುತ್ತುವರಿದಿದ್ದಾರೆ ಎಂದು ಪರಿಶೀಲಿಸಿಕೊಳ್ಳಿ” ಎಂದು ತಂದೆ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ. ಪಕ್ಷದಿಂದ ತನ್ನನ್ನು ಹೊರಹಾಕುವಲ್ಲಿ ತನ್ನ ಸೋದರಸಂಬಂಧಿಗಳು ಮತ್ತು ಬಿಆರ್‌ಎಸ್ ನಾಯಕರಾದ ಟಿ. ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಪಾತ್ರವಿದೆ ಎಂದು ಆರೋಪಿಸಿದ್ದಾರೆ.

ಈ ಇಬ್ಬರ ವಿರುದ್ದ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪ ಹೊರಿಸಿದ ಕವಿತಾ, “ಸುವರ್ಣ ತೆಲಂಗಾಣ ಎಂದರೆ ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಅವರ ಮನೆಗಳಿಗೆ ಚಿನ್ನ ತಲುಪುವುದು ಎಂದಲ್ಲ” ಎಂದು ಕಿಡಿಕಾರಿದ್ದಾರೆ.

ಬಿಆರ್‌ಎಸ್‌ ಸರ್ಕಾರದಲ್ಲಿ ಹರೀಶ್ ರಾವ್ ತೆಲಂಗಾಣದ ನೀರಾವರಿ ಸಚಿವರಾಗಿದ್ದರು. ಸಂತೋಷ್ ಕುಮಾರ್ ಪಕ್ಷದ ಮಾಜಿ ರಾಜ್ಯಸಭಾ ಸಂಸದರಾಗಿದ್ದಾರೆ.

“ಇಂದು ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ನಾಳೆ ಕೆಸಿಆರ್ ಸೇರಿದಂತೆ ಯಾರಿಗೂ ಬೇಕಾದರು ಇದೇ ಪರಿಸ್ಥಿತಿ ಎದುರಾಗಬಹುದು. ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲದಿದ್ದರೆ ಹರೀಶ್ ರಾವ್ ಸಂಪತ್ತು ಸಂಗ್ರಹಿಸಿದ್ದು ಹೇಗೆ? ಹರೀಶ್ ರಾವ್ ಭ್ರಷ್ಟಾಚಾರದ ಹಣವನ್ನು ತಮ್ಮ ಚುನಾವಣೆಗೆ ಬಳಸಿಕೊಂಡಿದ್ದಾರೆ” ಎಂದು ಕವಿತಾ ಗುಡುಗಿದ್ದಾರೆ.

ತನ್ನ ಸಹೋದರ ಹಾಗೂ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅವರು ಪಕ್ಷದಲ್ಲಿನ ತನ್ನ ಸಮಸ್ಯೆಗಳೇನು ಎಂದು ಕೇಳಿಲ್ಲ. ಅವರ ತಂದೆ ಕೂಡ ಬಿಆರ್‌ಎಸ್‌ನಿಂದ ಮುಂದಿನ ಬಾರಿ ಉಚ್ಚಾಟನೆಗೆ ಒಳಗಾಗಬಹುದು ಎಂದು ಕವಿತಾ, “ಪಕ್ಷದ ಪ್ರಧಾನ ಕಚೇರಿಯಾದ ತೆಲಂಗಾಣ ಭವನದಲ್ಲಿ ಕುಳಿತು, ಪಕ್ಷದ ಮಹಿಳಾ ನಾಯಕಿಯಾಗಿ, ಪಕ್ಷದಲ್ಲಿ ನನ್ನನ್ನು ಗುರಿಯಾಗಿಸಿಕೊಂಡಿರುವ ದುಷ್ಟ ಶಕ್ತಿಗಳಿವೆ ಎಂದು ನಾನು ಹೇಳಿದ್ದೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಟಿಆರ್‌ ಈ ಬಗ್ಗೆ ನನಗೆ ಕರೆ ಮಾಡಿ ವಿಚಾರಿಸಬೇಕಿತ್ತು. ಅವರು ಏಕೆ ನನ್ನನ್ನು ಸಂಪರ್ಕಿಸಿಲ್ಲ? ನನ್ನನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ನಾನು ಮೊದಲ ಬಾರಿಗೆ ವಿಷಯ ಪ್ರಸ್ತಾಪಿಸಿ 103 ದಿನಗಳೇ ಕಳೆದಿವೆ ಆದರೂ ಅವರು ಒಂದು ಮಾತು ಏಕೆ ಕೇಳಿಲ್ಲ?” ಎಂದು ಕವಿತಾ ಪ್ರಶ್ನೆ ಹಾಕಿದ್ದಾರೆ.

“ಕೆಸಿಆರ್ ಮತ್ತು ಕೆಟಿಆರ್ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಎ. ರೇವಂತ್ ರೆಡ್ಡಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸ್ಥಾಪಿತ ಹಿತಾಸಕ್ತಿಗಳು ಸುತ್ತುವರೆದಿವೆ. ಕೆಟಿಆರ್ ಮತ್ತು ಕೆಸಿಆರ್ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿದ್ದರೂ, ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಕಾಂಗ್ರೆಸ್ ಬೆಂಬಲವನ್ನು ಪಡೆಯುತ್ತಿದ್ದಾರೆ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಅವರ ವಿಷಯಕ್ಕೆ ಬಂದಾಗ ಮೌನವಾಗುತ್ತಿದೆ” ಎಂದು ಕವಿತಾ ಆರೋಪಿಸಿದ್ದಾರೆ.

ತಮ್ಮ ಎನ್‌ಜಿಒ ಮತ್ತು ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯ ಕಚೇರಿಯಲ್ಲಿ ಬೆಂಬಲಿಗರ ಗುಂಪುಗಳ ನಡುವೆ ಕುಳಿತು ಮಾತನಾಡಿದ ಕವಿತಾ, “ನಾನು ಪಕ್ಷಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿದ್ದೇನೆ. ಗುರುಕುಲ ಶಾಲೆಗಳು, ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಹಲವಾರು ದುರ್ಬಲ ವರ್ಗಗಳಿಗಾಗಿ ಕೆಲಸ ಮಾಡಿದ್ದೇನೆ. ನನ್ನ ಈ ಕೆಲಸಗಳಲ್ಲಿ ಪಕ್ಷ ವಿರೋಧಿ ಯಾವುದು?” ಎಂದು ಕವಿತಾ ಕೇಳಿದ್ದಾರೆ.

ಮಂಗಳವಾರ (ಸೆ.2) ಕವಿತಾ ಅವರಿಗೆ ನೀಡಲಾದ ಬಿಆರ್‌ಎಸ್‌ನ ಶಿಸ್ತು ಸಮಿತಿಯ ನೋಟಿಸ್‌ನಲ್ಲಿ, ಅವರ ಮೇಲೆ ‘ಪಕ್ಷ ವಿರೋಧಿ ಚಟುವಟಿಕೆಗಳ’ ಆರೋಪ ಹೊರಿಸಲಾಗಿತ್ತು. ತನ್ನ ತಂದೆ ಮಾರ್ಗದರ್ಶನ ನೀಡಿದಂತೆಯೇ ತಾನು ‘ಜನರ ತೆಲಂಗಾಣ’ ಮತ್ತು ‘ಸುವರ್ಣ ತೆಲಂಗಾಣ’ಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದಿರುವ ಕವಿತಾ, “ಇವುಗಳು ಪಕ್ಷ ವಿರೋಧಿ ಚಟುವಟಿಕೆಗಳಾಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಕಾಳೇಶ್ವರಂ ಏತ ನೀರಾವರಿ ಯೋಜನೆ ಭ್ರಷ್ಟಾಚಾರದ ಸಿಬಿಐ ತನಿಖೆ

ಕಾಳೇಶ್ವರಂ ಏತ ನೀರಾವರಿ ಯೋಜನೆ (Kaleshwaram Lift Irrigation Project – KLIP) ತೆಲಂಗಾಣದ ಅತಿದೊಡ್ಡ ಮತ್ತು ದುಬಾರಿ ಏತ ನೀರಾವರಿ ಯೋಜನೆಯಾಗಿದೆ. ಇದನ್ನು ಗೋದಾವರಿ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಯೋಜನೆಯ ಉದ್ದೇಶ ತೆಲಂಗಾಣದ ವಿವಿಧ ಜಿಲ್ಲೆಗಳಿಗೆ ನೀರಾವರಿ, ಕುಡಿಯುವ ನೀರು ಮತ್ತು ಕೈಗಾರಿಕಾ ಬಳಕೆಗೆ ನೀರು ಒದಗಿಸುವುದಾಗಿದೆ. ಆದರೆ, ಈ ಯೋಜನೆಯು ತಾಂತ್ರಿಕ ದೋಷಗಳು, ಆರ್ಥಿಕ ಅಕ್ರಮಗಳು ಮತ್ತು ರಾಜಕೀಯ ವಿವಾದಗಳಿಂದಾಗಿ ಗಮನ ಸೆಳೆದಿದೆ.

ಬಿಆರ್‌ಎಸ್‌ ಸರ್ಕಾರ ಮಹತ್ವಕಾಂಕ್ಷಿ ಕಾಳೇಶ್ವರಂ ಏತ ನೀರಾವರಿಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ, ಕವಿತಾ ಅವರು ತನ್ನ ವಿರುದ್ದ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾಜಿ ನೀರಾವರಿ ಸಚಿವ ಹರೀಶ್ ರಾವ್ ವಿರುದ್ದ ಆರೋಪಗಳನ್ನು ಹೊರಿಸಲಾಗಿದೆ.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣದ ಹಾಲಿ ಸರ್ಕಾರವು ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿದೆ.

ಆಗಸ್ಟ್ 31, 2025 ರಂದು ತೆಲಂಗಾಣ ವಿಧಾನಸಭೆಯಲ್ಲಿ 10 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಚರ್ಚೆಯ ನಂತರ, ಸೆಪ್ಟೆಂಬರ್ 1, 2025 ರಂದು ಸಿಬಿಐ ತನಿಖೆಗೆ ಆದೇಶ ಹೊರಡಿಸಲಾಗಿದೆ. ಜುಲೈ 31, 2025 ರಂದು ನ್ಯಾಯಮೂರ್ತಿ ಪಿ.ಸಿ. ಘೋಷ್ ಆಯೋಗ ಸಲ್ಲಿಸಿದ ವರದಿಗಳನ್ನು ಆಧರಿಸಿ ತನಿಖೆಗೆ ಆದೇಶ ಮಾಡಲಾಗಿದೆ. ಆಗಸ್ಟ್ 31, 2025ರಂದು ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಲಾಗಿತ್ತು.

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ನೇತೃತ್ವದ ಆಯೋಗವು, ಮೇಡಿಗಡ್ಡ, ಅಣ್ಣಾರಾಮ್ ಮತ್ತು ಸುಂಡಿಲ್ಲಾ ಬ್ಯಾರೇಜ್‌ಗಳ ನಿರ್ಮಾಣದಲ್ಲಿ ನಿರ್ಲಕ್ಷ್ಯ, ಆರ್ಥಿಕ ಅಕ್ರಮಗಳು ಮತ್ತು ಕಳಪೆ ಯೋಜನೆ ಸೇರಿದಂತೆ ಗಮನಾರ್ಹ ಲೋಪಗಳನ್ನು ಗುರುತಿಸಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ (NDSA) ವಿನ್ಯಾಸ ದೋಷಗಳು, ಕಳಪೆ ಗುಣಮಟ್ಟದ ನಿಯಂತ್ರಣ ಮತ್ತು ನಿರ್ಮಾಣ ನ್ಯೂನತೆಗಳನ್ನು ವರದಿ ಮಾಡಿದೆ, ವಿಶೇಷವಾಗಿ ಅಕ್ಟೋಬರ್ 21, 2023 ರಂದು ಮೇಡಿಗಡ್ಡ ಬ್ಯಾರೇಜ್‌ನಲ್ಲಿ ಆರು ಕಂಬಗಳು ಮುಳುಗಿದ್ದ ವಿಷಯವನ್ನು ಉಲ್ಲೇಖಿಸಿದೆ ಎಂದು ವರದಿಯಾಗಿದೆ.

ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಕವಿತಾ ಬಂಧನ

ದೆಹಲಿ ಮದ್ಯ ನೀತಿ ಅಥವಾ ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಹೊಂದಿಕೊಂಡಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೆ. ಕವಿತಾ ಅವರನ್ನು ಮಾರ್ಚ್ 15, 2024ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ನಂತರ, ದೆಹಲಿ ಮದ್ಯ ನೀತಿ ಹಗರಣಕ್ಕೆ ಹೊಂದಿಕೊಂಡಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಕೆ. ಕವಿತಾ ಅವರನ್ನು ತಿಹಾರ್ ಜೈಲಿನಿಂದ ಬಂಧಿಸಿತ್ತು. ಇಡಿ ಬಂಧನದ ನಂತರ  ನ್ಯಾಯಾಂಗ ಬಂಧನದಲ್ಲಿದ್ದ ಕವಿತಾ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು.

ಸರಿಸುಮಾರು ಐದು ತಿಂಗಳುಗಳ ಕಾಲ ಬಂಧನದಲ್ಲಿದ್ದ ನಂತರ, ಆಗಸ್ಟ್ 27, 2024 ರಂದು ಸುಪ್ರೀಂ ಕೋರ್ಟ್ ಕವಿತಾ ಅವರಿಗೆ ಜಾಮೀನು ನೀಡಿತ್ತು.

ಎಐಎಡಿಎಂಕೆ ನಾಯಕರ ನಡುವಿನ ಮಾತುಕತೆ ವಿಫಲ; ಎನ್‌ಡಿಎ ತೊರೆಯುವುದಾಗಿ ಘೋಷಿಸಿದ ಟಿಟಿವಿ ದಿನಕರನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ.​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...

“ಎಚ್.ಎಸ್. ದೊರೆಸ್ವಾಮಿ ಭೌತಿಕವಾಗಿ ಇಲ್ಲದಿದ್ದರೂ ನಮ್ಮನ್ನು ಸದಾ ಪ್ರೇರೇಪಿಸುತ್ತಾರೆ”: ತೀಸ್ತಾ ಸೆಟಲ್ವಾಡ್

ಬೆಂಗಳೂರು: "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ" ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ...