Homeಮುಖಪುಟಅಮಾನತು ಬೆನ್ನಲ್ಲೇ ಬಿಆರ್‌ಎಸ್‌ ತೊರೆದ ಕೆ. ಕವಿತಾ: ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ

ಅಮಾನತು ಬೆನ್ನಲ್ಲೇ ಬಿಆರ್‌ಎಸ್‌ ತೊರೆದ ಕೆ. ಕವಿತಾ: ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ

- Advertisement -
- Advertisement -

ತೆಲಂಗಾಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದಿಂದ, ಅದರ ಸ್ಥಾಪಕ ಕೆ. ಚಂದ್ರಶೇಖರ್ ರಾವ್ ಅವರ ಮಗಳನ್ನು ಅಮಾನತುಗೊಳಿಸಲಾಗಿದೆ. ಅಪ್ಪ ಸ್ಥಾಪಿಸಿದ, ಸಹೋದರ ಅಧ್ಯಕ್ಷನಾಗಿರುವ ಪಕ್ಷದಿಂದ ವಿಧಾನಪರಿಷತ್ ಸದಸ್ಯೆ ಕೆ.ಕವಿತಾ ಅಮಾನತುಗೊಂಡಿದ್ದಾರೆ.

ಅಮಾನತುಗೊಂಡ ಬೆನ್ನಲ್ಲೇ, ಬುಧವಾರ (ಸೆ.3) ಹೈದಾರಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕವಿತಾ ಅವರು, ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಬಿಆರ್‌ಎಸ್‌ 2014ರಿಂದ 2024ರವರೆಗೆ 10 ವರ್ಷಗಳ ಕಾಲ ತೆಲಂಗಾಣದಲ್ಲಿ ಆಡಳಿತ ನಡೆಸಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದ ಮೂಲಕ ಹುಟ್ಟಿಕೊಂಡ ಪಕ್ಷವಾಗಿದೆ ಬಿಆರ್‌ಎಸ್‌. ಆರಂಭದಲ್ಲಿ ಟಿಆರ್‌ಎಸ್‌ (ತೆಲಂಗಾಣ ರಾಷ್ಟ್ರ ಸಮಿತಿ) ಎಂದಿದ್ದ ಪಕ್ಷದ ಹೆಸರನ್ನು, 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಆರ್‌ಎಸ್‌ ಎಂದು ಬದಲಾಯಿಸಲಾಯಿತು. ಬಿಆರ್‌ಎಸ್‌ ಪಕ್ಷದ ಸ್ಥಾಪಕ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) 10 ವರ್ಷದ ತೆಲಂಗಾಣದ ಮುಖ್ಯಮಂತ್ರಿ ಆಗಿದ್ದರು. ಅವರ ಮಗ ಕೆ.ಟಿ ರಾಮರಾವ್ (ಕೆಟಿಆರ್‌) ಪೌರಾಡಳಿತ ಮತ್ತು ಐಟಿಬಿಟಿ ಸಚಿವರಾಗಿದ್ದರು. ಪ್ರಸ್ತುತ ಕೆಟಿಆರ್ ಬಿಆರ್‌ಎಸ್‌ ಪಕ್ಷದ ತೆಲಂಗಾಣ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿದ್ದಾರೆ. ಕೆಸಿಆರ್‌ ಪಕ್ಷದ ರಾಷ್ಟ್ರೀಯ ನಾಯಕ ಎನಿಸಿಕೊಂಡಿದ್ದಾರೆ.

ಕವಿತಾ ಅವರು ಬಿಆರ್‌ಎಸ್‌ ತೊರೆದ ಬಳಿಕ ತಮ್ಮದೇ ಹೊಸ ಪಕ್ಷ ಕಟ್ಟುತ್ತಾರೆಯೇ ಎಂದು ಸ್ಪಷ್ಟವಾಗಿಲ್ಲ. ಆದರೆ, “ತಾನು ಬೇರೆ ಪಕ್ಷಕ್ಕೆ ಸೇರುವ ಬಗ್ಗೆ ಯೋಚನೆ ಮಾಡುವುದಿಲ್ಲ. ನನ್ನ ಜೀವನದ ಕಳೆದ 20 ವರ್ಷಗಳಿಂದ ನಾನು ತೆಲಂಗಾಣ ಮತ್ತು ಬಿಆರ್‌ಎಸ್‌ಗಾಗಿ ಕೆಲಸ ಮಾಡಿದ್ದೇನೆ. ನಾನು ತೆಲಂಗಾಣ ಆಂದೋಲನಕ್ಕೆ ಬಂದಾಗ 27 ವರ್ಷ ವಯಸ್ಸಾಗಿತ್ತು, ಈಗ 47 ವರ್ಷ. ನಾನು ನನ್ನ ಜೀವನದ ಬಹುಭಾಗವನ್ನು ತೆಲಂಗಾಣ ಮತ್ತು ಬಿಆರ್‌ಎಸ್‌ಗಾಗಿ ನೀಡಿದ್ದೇನೆ” ಎಂದು ಕವಿತಾ ಹೇಳಿದ್ದಾರೆ.

“ಕಲ್ವಕುಂಟ್ಲ ಕುಟುಂಬ (ಕೆಸಿಆರ್‌ ಕುಟುಂಬ) ಮತ್ತು ಬಿಆರ್‌ಎಸ್ ಅನ್ನು ಒಡೆಯಲು ಪಿತೂರಿ ನಡೆಯುತ್ತಿದೆ” ಎಂದ ಕವಿತಾ, “ನಿಮ್ಮನ್ನು ಯಾರು ಸುತ್ತುವರಿದಿದ್ದಾರೆ ಎಂದು ಪರಿಶೀಲಿಸಿಕೊಳ್ಳಿ” ಎಂದು ತಂದೆ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ. ಪಕ್ಷದಿಂದ ತನ್ನನ್ನು ಹೊರಹಾಕುವಲ್ಲಿ ತನ್ನ ಸೋದರಸಂಬಂಧಿಗಳು ಮತ್ತು ಬಿಆರ್‌ಎಸ್ ನಾಯಕರಾದ ಟಿ. ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಪಾತ್ರವಿದೆ ಎಂದು ಆರೋಪಿಸಿದ್ದಾರೆ.

ಈ ಇಬ್ಬರ ವಿರುದ್ದ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪ ಹೊರಿಸಿದ ಕವಿತಾ, “ಸುವರ್ಣ ತೆಲಂಗಾಣ ಎಂದರೆ ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಅವರ ಮನೆಗಳಿಗೆ ಚಿನ್ನ ತಲುಪುವುದು ಎಂದಲ್ಲ” ಎಂದು ಕಿಡಿಕಾರಿದ್ದಾರೆ.

ಬಿಆರ್‌ಎಸ್‌ ಸರ್ಕಾರದಲ್ಲಿ ಹರೀಶ್ ರಾವ್ ತೆಲಂಗಾಣದ ನೀರಾವರಿ ಸಚಿವರಾಗಿದ್ದರು. ಸಂತೋಷ್ ಕುಮಾರ್ ಪಕ್ಷದ ಮಾಜಿ ರಾಜ್ಯಸಭಾ ಸಂಸದರಾಗಿದ್ದಾರೆ.

“ಇಂದು ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ನಾಳೆ ಕೆಸಿಆರ್ ಸೇರಿದಂತೆ ಯಾರಿಗೂ ಬೇಕಾದರು ಇದೇ ಪರಿಸ್ಥಿತಿ ಎದುರಾಗಬಹುದು. ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲದಿದ್ದರೆ ಹರೀಶ್ ರಾವ್ ಸಂಪತ್ತು ಸಂಗ್ರಹಿಸಿದ್ದು ಹೇಗೆ? ಹರೀಶ್ ರಾವ್ ಭ್ರಷ್ಟಾಚಾರದ ಹಣವನ್ನು ತಮ್ಮ ಚುನಾವಣೆಗೆ ಬಳಸಿಕೊಂಡಿದ್ದಾರೆ” ಎಂದು ಕವಿತಾ ಗುಡುಗಿದ್ದಾರೆ.

ತನ್ನ ಸಹೋದರ ಹಾಗೂ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅವರು ಪಕ್ಷದಲ್ಲಿನ ತನ್ನ ಸಮಸ್ಯೆಗಳೇನು ಎಂದು ಕೇಳಿಲ್ಲ. ಅವರ ತಂದೆ ಕೂಡ ಬಿಆರ್‌ಎಸ್‌ನಿಂದ ಮುಂದಿನ ಬಾರಿ ಉಚ್ಚಾಟನೆಗೆ ಒಳಗಾಗಬಹುದು ಎಂದು ಕವಿತಾ, “ಪಕ್ಷದ ಪ್ರಧಾನ ಕಚೇರಿಯಾದ ತೆಲಂಗಾಣ ಭವನದಲ್ಲಿ ಕುಳಿತು, ಪಕ್ಷದ ಮಹಿಳಾ ನಾಯಕಿಯಾಗಿ, ಪಕ್ಷದಲ್ಲಿ ನನ್ನನ್ನು ಗುರಿಯಾಗಿಸಿಕೊಂಡಿರುವ ದುಷ್ಟ ಶಕ್ತಿಗಳಿವೆ ಎಂದು ನಾನು ಹೇಳಿದ್ದೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಟಿಆರ್‌ ಈ ಬಗ್ಗೆ ನನಗೆ ಕರೆ ಮಾಡಿ ವಿಚಾರಿಸಬೇಕಿತ್ತು. ಅವರು ಏಕೆ ನನ್ನನ್ನು ಸಂಪರ್ಕಿಸಿಲ್ಲ? ನನ್ನನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ನಾನು ಮೊದಲ ಬಾರಿಗೆ ವಿಷಯ ಪ್ರಸ್ತಾಪಿಸಿ 103 ದಿನಗಳೇ ಕಳೆದಿವೆ ಆದರೂ ಅವರು ಒಂದು ಮಾತು ಏಕೆ ಕೇಳಿಲ್ಲ?” ಎಂದು ಕವಿತಾ ಪ್ರಶ್ನೆ ಹಾಕಿದ್ದಾರೆ.

“ಕೆಸಿಆರ್ ಮತ್ತು ಕೆಟಿಆರ್ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಎ. ರೇವಂತ್ ರೆಡ್ಡಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸ್ಥಾಪಿತ ಹಿತಾಸಕ್ತಿಗಳು ಸುತ್ತುವರೆದಿವೆ. ಕೆಟಿಆರ್ ಮತ್ತು ಕೆಸಿಆರ್ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿದ್ದರೂ, ಹರೀಶ್ ರಾವ್ ಮತ್ತು ಸಂತೋಷ್ ಕುಮಾರ್ ಕಾಂಗ್ರೆಸ್ ಬೆಂಬಲವನ್ನು ಪಡೆಯುತ್ತಿದ್ದಾರೆ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಅವರ ವಿಷಯಕ್ಕೆ ಬಂದಾಗ ಮೌನವಾಗುತ್ತಿದೆ” ಎಂದು ಕವಿತಾ ಆರೋಪಿಸಿದ್ದಾರೆ.

ತಮ್ಮ ಎನ್‌ಜಿಒ ಮತ್ತು ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯ ಕಚೇರಿಯಲ್ಲಿ ಬೆಂಬಲಿಗರ ಗುಂಪುಗಳ ನಡುವೆ ಕುಳಿತು ಮಾತನಾಡಿದ ಕವಿತಾ, “ನಾನು ಪಕ್ಷಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿದ್ದೇನೆ. ಗುರುಕುಲ ಶಾಲೆಗಳು, ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಹಲವಾರು ದುರ್ಬಲ ವರ್ಗಗಳಿಗಾಗಿ ಕೆಲಸ ಮಾಡಿದ್ದೇನೆ. ನನ್ನ ಈ ಕೆಲಸಗಳಲ್ಲಿ ಪಕ್ಷ ವಿರೋಧಿ ಯಾವುದು?” ಎಂದು ಕವಿತಾ ಕೇಳಿದ್ದಾರೆ.

ಮಂಗಳವಾರ (ಸೆ.2) ಕವಿತಾ ಅವರಿಗೆ ನೀಡಲಾದ ಬಿಆರ್‌ಎಸ್‌ನ ಶಿಸ್ತು ಸಮಿತಿಯ ನೋಟಿಸ್‌ನಲ್ಲಿ, ಅವರ ಮೇಲೆ ‘ಪಕ್ಷ ವಿರೋಧಿ ಚಟುವಟಿಕೆಗಳ’ ಆರೋಪ ಹೊರಿಸಲಾಗಿತ್ತು. ತನ್ನ ತಂದೆ ಮಾರ್ಗದರ್ಶನ ನೀಡಿದಂತೆಯೇ ತಾನು ‘ಜನರ ತೆಲಂಗಾಣ’ ಮತ್ತು ‘ಸುವರ್ಣ ತೆಲಂಗಾಣ’ಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದಿರುವ ಕವಿತಾ, “ಇವುಗಳು ಪಕ್ಷ ವಿರೋಧಿ ಚಟುವಟಿಕೆಗಳಾಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಕಾಳೇಶ್ವರಂ ಏತ ನೀರಾವರಿ ಯೋಜನೆ ಭ್ರಷ್ಟಾಚಾರದ ಸಿಬಿಐ ತನಿಖೆ

ಕಾಳೇಶ್ವರಂ ಏತ ನೀರಾವರಿ ಯೋಜನೆ (Kaleshwaram Lift Irrigation Project – KLIP) ತೆಲಂಗಾಣದ ಅತಿದೊಡ್ಡ ಮತ್ತು ದುಬಾರಿ ಏತ ನೀರಾವರಿ ಯೋಜನೆಯಾಗಿದೆ. ಇದನ್ನು ಗೋದಾವರಿ ನದಿಯ ಮೇಲೆ ನಿರ್ಮಿಸಲಾಗಿದೆ. ಈ ಯೋಜನೆಯ ಉದ್ದೇಶ ತೆಲಂಗಾಣದ ವಿವಿಧ ಜಿಲ್ಲೆಗಳಿಗೆ ನೀರಾವರಿ, ಕುಡಿಯುವ ನೀರು ಮತ್ತು ಕೈಗಾರಿಕಾ ಬಳಕೆಗೆ ನೀರು ಒದಗಿಸುವುದಾಗಿದೆ. ಆದರೆ, ಈ ಯೋಜನೆಯು ತಾಂತ್ರಿಕ ದೋಷಗಳು, ಆರ್ಥಿಕ ಅಕ್ರಮಗಳು ಮತ್ತು ರಾಜಕೀಯ ವಿವಾದಗಳಿಂದಾಗಿ ಗಮನ ಸೆಳೆದಿದೆ.

ಬಿಆರ್‌ಎಸ್‌ ಸರ್ಕಾರ ಮಹತ್ವಕಾಂಕ್ಷಿ ಕಾಳೇಶ್ವರಂ ಏತ ನೀರಾವರಿಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ, ಕವಿತಾ ಅವರು ತನ್ನ ವಿರುದ್ದ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾಜಿ ನೀರಾವರಿ ಸಚಿವ ಹರೀಶ್ ರಾವ್ ವಿರುದ್ದ ಆರೋಪಗಳನ್ನು ಹೊರಿಸಲಾಗಿದೆ.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣದ ಹಾಲಿ ಸರ್ಕಾರವು ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿದೆ.

ಆಗಸ್ಟ್ 31, 2025 ರಂದು ತೆಲಂಗಾಣ ವಿಧಾನಸಭೆಯಲ್ಲಿ 10 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಚರ್ಚೆಯ ನಂತರ, ಸೆಪ್ಟೆಂಬರ್ 1, 2025 ರಂದು ಸಿಬಿಐ ತನಿಖೆಗೆ ಆದೇಶ ಹೊರಡಿಸಲಾಗಿದೆ. ಜುಲೈ 31, 2025 ರಂದು ನ್ಯಾಯಮೂರ್ತಿ ಪಿ.ಸಿ. ಘೋಷ್ ಆಯೋಗ ಸಲ್ಲಿಸಿದ ವರದಿಗಳನ್ನು ಆಧರಿಸಿ ತನಿಖೆಗೆ ಆದೇಶ ಮಾಡಲಾಗಿದೆ. ಆಗಸ್ಟ್ 31, 2025ರಂದು ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಲಾಗಿತ್ತು.

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ನೇತೃತ್ವದ ಆಯೋಗವು, ಮೇಡಿಗಡ್ಡ, ಅಣ್ಣಾರಾಮ್ ಮತ್ತು ಸುಂಡಿಲ್ಲಾ ಬ್ಯಾರೇಜ್‌ಗಳ ನಿರ್ಮಾಣದಲ್ಲಿ ನಿರ್ಲಕ್ಷ್ಯ, ಆರ್ಥಿಕ ಅಕ್ರಮಗಳು ಮತ್ತು ಕಳಪೆ ಯೋಜನೆ ಸೇರಿದಂತೆ ಗಮನಾರ್ಹ ಲೋಪಗಳನ್ನು ಗುರುತಿಸಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ (NDSA) ವಿನ್ಯಾಸ ದೋಷಗಳು, ಕಳಪೆ ಗುಣಮಟ್ಟದ ನಿಯಂತ್ರಣ ಮತ್ತು ನಿರ್ಮಾಣ ನ್ಯೂನತೆಗಳನ್ನು ವರದಿ ಮಾಡಿದೆ, ವಿಶೇಷವಾಗಿ ಅಕ್ಟೋಬರ್ 21, 2023 ರಂದು ಮೇಡಿಗಡ್ಡ ಬ್ಯಾರೇಜ್‌ನಲ್ಲಿ ಆರು ಕಂಬಗಳು ಮುಳುಗಿದ್ದ ವಿಷಯವನ್ನು ಉಲ್ಲೇಖಿಸಿದೆ ಎಂದು ವರದಿಯಾಗಿದೆ.

ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಕವಿತಾ ಬಂಧನ

ದೆಹಲಿ ಮದ್ಯ ನೀತಿ ಅಥವಾ ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಹೊಂದಿಕೊಂಡಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೆ. ಕವಿತಾ ಅವರನ್ನು ಮಾರ್ಚ್ 15, 2024ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ನಂತರ, ದೆಹಲಿ ಮದ್ಯ ನೀತಿ ಹಗರಣಕ್ಕೆ ಹೊಂದಿಕೊಂಡಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಕೆ. ಕವಿತಾ ಅವರನ್ನು ತಿಹಾರ್ ಜೈಲಿನಿಂದ ಬಂಧಿಸಿತ್ತು. ಇಡಿ ಬಂಧನದ ನಂತರ  ನ್ಯಾಯಾಂಗ ಬಂಧನದಲ್ಲಿದ್ದ ಕವಿತಾ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು.

ಸರಿಸುಮಾರು ಐದು ತಿಂಗಳುಗಳ ಕಾಲ ಬಂಧನದಲ್ಲಿದ್ದ ನಂತರ, ಆಗಸ್ಟ್ 27, 2024 ರಂದು ಸುಪ್ರೀಂ ಕೋರ್ಟ್ ಕವಿತಾ ಅವರಿಗೆ ಜಾಮೀನು ನೀಡಿತ್ತು.

ಎಐಎಡಿಎಂಕೆ ನಾಯಕರ ನಡುವಿನ ಮಾತುಕತೆ ವಿಫಲ; ಎನ್‌ಡಿಎ ತೊರೆಯುವುದಾಗಿ ಘೋಷಿಸಿದ ಟಿಟಿವಿ ದಿನಕರನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ಪ್ರೆಶ್ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ಕೇವಲ ಎರಡು ವರ್ಷಗಳ ಹಿಂದೆ ಒಂದು ರಾಜಕೀಯ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...