Homeಮುಖಪುಟಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

ಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

- Advertisement -
- Advertisement -

1.ಬೆಳಕಿನವತಾರ

ನನ್ನ ಕನ್ನಡಿಯೊಳಗೆ ನಡೆದು ಬಂದವಳು
ಪ್ರೀತಿ ಮತ್ತು ಅದರ ಇತರ ಉತ್ಪನ್ನಗಳ ಬಗ್ಗೆ
ಚಕಾರ ಎತ್ತುವುದಿಲ್ಲ,
ಸುಮ್ಮನೇ ನಿಂತಿರುತ್ತಾಳೆ,
ತನ್ನ ಮೌನವನ್ನು ತಾನೇ ಸುಖಿಸುತ್ತಾಳೆ,
ನನಗೆ ಗೊತ್ತಿರುವ ಎಲ್ಲ ಋತುಗಳೂ
ತಾನೇ ಎಂಬಂತೆ ಉಟ್ಟು ಮೆರೆಯುತ್ತಾಳೆ,
ಒಂದು ಮೊಲೆಯಲ್ಲಿ ಕಾಡು
ಇನ್ನೊಂದರಲ್ಲಿ ಸಮುದ್ರ ಧರಿಸಿಕೊಂಡಿದ್ದಾಳೆ.

ಯಾವುದೇ ಬೇಡಿಕೆಯಿಲ್ಲ ಅವಳಲ್ಲಿ
ಒಮ್ಮೆ ನೋಡಿದರೆ ಸಾಕು.
ಎಷ್ಟೆಲ್ಲಾ ಬೇಡಿಕೆ.

ಮಾಟ ಎಲ್ಲರ ಹಾಗೇ
ಪ್ರೇಮಕ್ಕೆ ಬೇಕಾದಷ್ಟು, ಸಾಕಾದಷ್ಟು,
ನನ್ನ ಕಟ್ಟಿ ಹಾಕಿರುವುದು ಅದಲ್ಲ,
ಅದರಾಚೆಗಿನ ಬೆಳಗು.

ಒಮ್ಮೊಮ್ಮೆ ನನಗನಿಸುತ್ತದೆ
ನಾನೂ ಹಾಗೇ
ಬೆಳಕಿನವತಾರ.

*****

2. Reading between Graffiti

ಟಾಯ್ಲೆಟ್‌ನ ಗೋಡೆಯ ಮೇಲೆ
ಮಸುಕು ಮಸುಕಾದ ಗೀಚು ಬರಹ,
‘FUCK THE STRANGER TONIGHT’
ಕಳೆದ ವಾರ ಕಣ್ಣಿಗೆ ಬಿದ್ದಿರಲಿಲ್ಲ.
ಬಾಕಿ ಎಲ್ಲ ಲವ್ ಸಿಂಬಲ್‌ಗಳು,
ಕಾಮ ಪ್ರಲಾಪಗಳು, ಉತ್ಕಟ ಹಳಹಳಿಕೆಗಳು
ಈ ಅನಾಮಿಕನ ಸಲಹೆಯ ಮುಂದೆ
ಸಪ್ಪೆ, ಸಪ್ಪೆ ಎನಿಸುವಂತಿದ್ದವು.
ಕಳೆದುಕೊಂಡವರು, ಸಾಯದ ಆದರೆ ದಿನದಿನಕ್ಕೂ
ಬಾತುಕೊಳ್ಳುತ್ತಲೇ ಸಣ್ಣಗಾಗುವವರು,
ಅನುಕಂಪಕ್ಕಾಗಿ ತುಡಿಯುವ ಆದರೆ
ಟಾಯ್ಲೆಟ್‌ನ ಗೋಡೆಗಳ ಮುಂದೆ ದಿಢೀರನೇ ದಾರ್ಶನಿಕರಾಗುವವರು,
ಹೀಗೆ ಗೋಡೆ ಬರಹಗಳು
ಆಯಾ ಗುಂಪಿನ ಮನಸ್ಥಿತಿಯನ್ನು ಹಾಡುತ್ತವೆ.
ಅದೇನೇ ಇರಲಿ
ಈ ಬರಹ ಬರೆದವನಿಗೆ
ಒಂದಿಷ್ಟು ಕ್ರೆಡಿಟ್ ಕೊಡಲೇಬೇಕು,
ಕೊನೆ ಪಕ್ಷ ತಿಳಿದುಕೊಳ್ಳಲಿಕ್ಕಾದರೂ
’ಯಾಕೆ? ರಾತ್ರಿ, ಹೀಗೆ ಒಳಗೆ ಇಳಿದು
ತನ್ನ ಉನ್ಮತ್ತ ದಾಸರಿಂದ
ತಪ್ಪುತಪ್ಪಾಗಿ ಬರೆಸುತ್ತದೆ
ಸತ್ಯ ವಚನ’

*****

3. ದುರಂತ

ನಿನ್ನೆ
ನಡು ಮನೆಯಲ್ಲಿರುವ
ಬೆಂಕಿಗೂಡಿನ ಹಿಂದೆ
ಪೆನ್ಸಿಲ್‌ನಲ್ಲಿ ಬರೆದಿರುವ ಒಂದು ಚೀಟಿ ಸಿಕ್ಕಿತು.
ಎಷ್ಟು ಹಳೆಯದೋ ಗೊತ್ತಿಲ್ಲ
ದಿನದ ಗೋಜಲುಗಳ ನಡುವೆ
ತನ್ನ ಪಾಳಿಗಾಗಿ ಕಾತುರದಿಂದ ಕಾಯುವಂತಿತ್ತು.

’ಬಾಸ್ಟರ್ಡ್’ ಹೀಗೆ ಶುರುವಾಗಿತ್ತು
’ಮತ್ತೆಂದೂ ವಾಪಸ್ ಆಗಲಾರೆ
ಇದೇ ಕೊನೆಯ ರಾತ್ರಿ
ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದೇನೆ’

ಕೆಳಗೆ ಬರೆದಿರುವ ಹೆಸರನ್ನ
ನನಗೆ ಗುರುತಿಸಲಾಗಲಿಲ್ಲ
ಆ ಸಹಿಯನ್ನ ಮಸಿ ನುಂಗಿ ಹಾಕಿತ್ತು.

ಅದು, ನನಗೇ ಬರೆದಿರುವ ಚೀಟಿ
ಎನ್ನುವ ಗ್ಯಾರಂಟಿ ಕೂಡ ನನಗಿರಲಿಲ್ಲ.
ಬಹುಶಃ ಇರಬಹುದು
ಬಹುಶಃ ಇರಲಿಕ್ಕೂ ಇಲ್ಲ.
ನನಗೆ ಅದು ಗೊತ್ತಾಗಲೂ ಇಲ್ಲ
ನಾನು ಕಾಳಜಿ ಕೂಡ ಮಾಡಲಿಲ್ಲ.

ತಮಾಷೆ ಎಂದರೆ ಒಮ್ಮೊಮ್ಮೆ
ದುರಂತ ಹೀಗೂ ನಡೆದುಹೋಗುತ್ತದೆ
ನಗಿಸದೇ ಅಳಿಸದೆ.
(The tragedy)

*****

4. ಹುಲ್ಲಿನ ಗರಿ

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು,
ನಾನು ಹುಲ್ಲಿನ ಗರಿ ಕೊಟ್ಟೆ.
ಉಹೂಂ,
ಕವಿತೆಯೇ ಬೇಕು ನಿನ್ನ ಹಟ,
ಹುಲ್ಲಿನ ಗರಿ ಸಾಕು ನನ್ನ ವಾದ.

ಮಂಜಿನಲ್ಲಿ ಮಿಂದ ಗರಿ ಎಲ್ಲಕ್ಕಿಂತ ಹೊಸದು
ನನ್ನ ಯಾವ ರೂಪಕಕ್ಕಿಂತಲೂ
ನನ್ನ ಸಮಜಾಯಿಷಿ,
ಆದರೂ ಅದು ಕವಿತೆಯಲ್ಲ…..
ಮುಂದುವರಿದಿದೆ ನಿನ್ನ ಹಟ.

ನಿನಗೆ ಸಿಟ್ಟು
ಹುಲ್ಲಿನ ಗರಿ ಸುಲಭ ಎಂಬ ನಂಬಿಕೆ
ಯಾರೂ ಕೊಡಬಲ್ಲರು ಎಂಬ ತಿಳಿವಳಿಕೆ.

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು
ಹುಲ್ಲಿನ ಗರಿಯನ್ನು
ನಿನಗೆ ಒಪ್ಪಿಸಲಾಗದ ನನ್ನ ಅಸಹಾಯಕತೆಯ ಕುರಿತು
ನಾನೊಂದು ದುರಂತ ಕವಿತೆ ಬರೆದೆ
ಅದರಲ್ಲೊಂದು ಸಾಲಿತ್ತು
ನಿನ್ನ ಬಗ್ಗೆ
ವಯಸ್ಸಾಗುತ್ತಾ ಹೋದಂತೆ
ಹುಲ್ಲಿನ ಗರಿಯನ್ನು
ಒಪ್ಪಿಕೊಳ್ಳದ ನಿನ್ನ ಜಿದ್ದಿನ ಬಗ್ಗೆ.
(Blade of grass)

*****

5. What I need for the present

ಥ್ಯಾಂಕ್ಸ್, ಆದರೆ
ವಾಪಸ್ ತೆಗೆದುಕೊಂಡುಬಿಡು
ಈ ಉಂಗುರ ಮತ್ತು ಅದರ ಬಾಕ್ಸ್,
ಚಿಟ್ಟೆಯ ರೆಕ್ಕೆ ಮತ್ತು ಗಾಜಿನ ಮಣಿಗಳಿಂದ
ಅಲಂಕೃತವಾದ ಈ ಬಣ್ಣದ ಚಿತ್ರ
ಬೇಡ ನನಗೀಗ ಇವೆಲ್ಲ.
ದಯವಿಟ್ಟು, ಈ ಪುಸ್ತಕಗಳು,
ಪೋಸ್ಟ್ ಕಾರ್ಡುಗಳು,
ಜೇನು ಮೇಣದ ಕ್ಯಾಂಡಲ್‌ಗಳು,
ಹೂವಿನ ಕುಂಡಗಳು, ಪೇಂಟಿಂಗ್‌ಗಳು,
ಮತ್ತು ಈ ದುಬಾರಿ ಪೆನ್
ಎಲ್ಲವನ್ನೂ ವಾಪಸ್ ತೆಗೆದುಕೊಂಡುಬಿಡು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಯಾವುದನ್ನು ಕೊಡಲಾಗುವುದಿಲ್ಲವೋ
ಅದರ ಬದಲಿಗೆ ಕೊಡಲಾಗಿದೆ
ಎಂಬಂತಿವೆ ಈ ಉಡುಗೊರೆಗಳು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಈ ಕೋಣೆಯಲ್ಲಿ ಓಡಾಡುವಾಗಲೆಲ್ಲ
ಕಣ್ಣಿಗೆ ಬೀಳುವುದು ಈ ಉಡುಗೊರೆಗಳಲ್ಲ
ಅವುಗಳ ಮೇಲೆ ಧೂಳಿನಂತೆ ಕುಳಿತಿರುವ
ನಿನ್ನ ಗೈರು ಹಾಜರಿ ಮಾತ್ರ.

ದಯವಿಟ್ಟು ಕ್ಷಮಿಸು

ನೀನೇನೊ ಪ್ರೀತಿಯಿಂದಲೇ ಕೊಟ್ಟಿರಬಹುದು, ಆದರೆ
ಸದ್ಯ ಈ ಬೇಡಿಗಳ ತುರ್ತು ನನಗಿಲ್ಲ.

******

ಬ್ರಯಾನ್ ಪ್ಯಾಟನ್

6. She complicates her life

ಅದೇನೋ ಅವಳು
ಎಲ್ಲವನ್ನು ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಳ್ಳುತ್ತಾಳೆ.
ಕೆಲ ಭೂತಗಳು ಅವಳ ದಿನಗಳನ್ನು
ಹಿಡಿದು ಅಲ್ಲಾಡಿಸುತ್ತಿವೆ.

ಪ್ರೇಮ ತಾನಾಗಿಯೇ ಬಂದು, ಕೈಹಿಡಿದು
’ನಿಲ್ಲು’ ಎಂದರೆ
’ಹೋಗು’ ಎಂದು ಕೇಳಿಸಿಕೊಂಡು
ಬೆನ್ನು ತಿರುವಿ ಹೊರಟುಬಿಡುತ್ತಾಳೆ.

ಎಲ್ಲ ಬಾಗಿಲುಗಳನ್ನ ಮುಚ್ಚಿಕೊಂಡಿದ್ದಾಳೆ
ನೋವು ಹೆಚ್ಚಾದಾಗಲೆಲ್ಲ ಹಿಮವಾಗಿಬಿಡುತ್ತಾಳೆ.

*****

7. ತುಂಬಿಕೊಂಡವಳು

ಮೊನ್ನೆ ನಿನ್ನ
ಕಿಟಕಿಯಲ್ಲಿ ನೋಡಿದೆ.
ಅದೇ ಚೆಲುವು, ಅದೇ ಹೊಂಗೂದಲಿನ ಜಡೆ
ಅವೇ ಅಲೌಕಿಕ ನೀಳ ಕಾಲುಗಳು.
ಓಡಿ ಬೀದಿಗೆ ಬಂದವನೇ
ನಿನ್ನ ಹೆಸರಿಟ್ಟು ಕೂಗಿದೆ.
ನೀನು ಹಿಂತಿರುಗಿ ನೋಡಿ
ನನ್ನ ಆತುರಕ್ಕೆ
’ಛೀ’ ಎಂದೆ.
ಹೌದು obviously ಆಕೆ ನೀನಾಗಿರಲಿಲ್ಲ

ಮೂವತ್ತು ವರ್ಷ ಹೇಗೆ ಕಳೆದುಹೋಯಿತೆಂಬುದನ್ನ

ನಾನೂ ಮರೆತುಬಿಟ್ಟಿದ್ದೆ.
ಕ್ಷಮೆ ಕೇಳಿದೆ

“ಸಾರಿ, ಬೇರೆ ಯಾರೋ ಅಂದುಕೊಂಡಿದ್ದೆ” ತೊದಲಿದೆ.
ಆದರೆ ಇದರಲ್ಲಿ ನನ್ನದೇನೂ ಅಂಥ ತಪ್ಪಿಲ್ಲ.
ನಾನು ನೋಡಿದ್ದು,
ನನ್ನೊಳಗೆ ಅಂದು ತುಂಬಿಕೊಂಡಿದ್ದ ನಿನ್ನನ್ನು
ಈ ಹೊತ್ತಿಗೂ.

*****

8. ಪ್ರೇಮ ಪಾಠ

ಹಠಾತ್ ಆಗಿ ಪ್ರೇಮ
ತನ್ನ ಎಲ್ಲ ಹತಾಶೆಗಳಿಂದ ವಾಪಸ್ಸಾಗಿ
ನಿಮ್ಮ ತೋಳಲ್ಲಿ ಹುದುಗಿ, ಮುಲುಕುತ್ತ

“ಇನ್ನು ಎಲ್ಲೂ ಹೋಗಲಾರೆ,
ಬೇರೆ ದೇಹಗಳೆಲ್ಲ ಬಹುತೇಕ ರಾಜಿ ಮಾತ್ರ”

ಎಂದರೆ ಆ ಸುಳ್ಳನ್ನ
ಥಟ್ ಅಂತ ಒಪ್ಪಿಕೊಂಡುಬಿಡುತ್ತೀರಿ ನೀವು
ಅಕಸ್ಮಾತ್ ಜಾಣರಾಗಿದ್ದರೆ.
(Love lesson)

*****

9. ಸಿನಿಕನ ಪ್ರೇಮಗೀತೆ

ಪ್ರೇಮದ ಕೆಲಸವೇ
ಬರೋದು, ಹೋಗೋದು
ಮತ್ತು
ಆಗಾಗ ನಿಲ್ಲೋದು
ಆದರೆ

ಮತ್ತೆ ವಾಪಸ್ ಬರೋದು ಮಾತ್ರ
ಆದ ಅನಾಹುತದ ಪರಿಶೀಲನೆಗೆ

*****

10. ವ್ಯಾಲಂಟೈನ್

ಒಬ್ಬರು ಇನ್ನೊಬ್ಬರ ಜೊತೆ
ಹೀಗೇ ಸದಾ
ಯಾವದೇ ಸಂಶಯ ಇಲ್ಲದೆ
ಇದ್ದುಬಿಡುವ ಆಸೆ ಉಳ್ಳವರು,
(ಮುಂದೆ ಆಗಬಹುದಾದ ದಣಿವಿನ ಬಗ್ಗೆ ಯಾವ ಕಳವಳವೂ ಇಲ್ಲದೆ)

ನನ್ನ ನಿನ್ನ ಹಾಗೆ ಇರುವವರೇ,

ರಾತ್ರಿ ಇಡೀ ಪಿಸುಮಾತಿನಲ್ಲಿ
ಲೋಕದ ಉಸಿರನ್ನು ಜೀವಂತವಾಗಿಟ್ಟವರು,

ಶಾಶ್ವತದ ಮಿತಿಗೆ ಗಾಬರಿಯಾಗಿ
ನೆಲಕ್ಕೆ ಅಂಗುಷ್ಟವ ಒತ್ತಿದವರು,

ಎರಡು ಉಸಿರುಗಳ ನಡುವಿನ ಅಂತರದ ವಿರುದ್ಧ
ಕೋರ್ಟಿನಲ್ಲಿ ಸಾಕ್ಷಿ ಹೇಳಿದವರು.
( A Valentine)

ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...