ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮೊಬೈಲ್ ನಂಬರ್ನಿಂದ ಗುಜರಾತ್ನ ಬಿಜೆಪಿ ಯುವ ಮೋರ್ಚಾ ಮುಖಂಡನಿಂದ ಹಣ ಮತ್ತು ವಜ್ರಗಳನ್ನು ಸುಲಿಗೆ ಮಾಡಲು ಬಳಸಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಈ ಕುರಿತು ತೇಜಸ್ವಿ ಸೂರ್ಯರವರ ಆಪ್ತ ಕಾರ್ಯದರ್ಶಿ ಭಾನು ಪ್ರಕಾಶ್ ಬನಶಂಕರಿಯ ಸೌತ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತೇಜಸ್ವಿ ಸೂರ್ಯರವರು ಬ್ಯುಸಿಯಾಗಿರುವುದರಿಂದ ಅವರ ಫೋನ್ ತನ್ನ ಬಳಿ ಇದ್ದಾಗ ಗುಜರಾತ್ ಬಿಜೆವೈಎಂ ಘಟಕದ ಅಧ್ಯಕ್ಷ ಪ್ರಶಾಂತ್ ಕೊರಾಟ್ ಫೋನ್ ಮಾಡಿ ಹಣ ಕೇಳಿದ್ದರ ಬಗ್ಗೆ ವಿಚಾರಿಸಿದಾಗ ಈ ವಿಚಾರ ಗೊತ್ತಾಗಿದೆ ಎಂದು ಭಾನು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 1 ರಂದು ಬಿಜೆವೈಎಂ ಗುಜರಾತ್ ಘಟಕದ ಅಧ್ಯಕ್ಷ ಪ್ರಶಾಂತ್ ಕೊರಾಟ್ ಅವರಿಗೆ ತೇಜಸ್ವಿ ಸೂರ್ಯರವರ ಮೊಬೈಲ್ ಫೋನ್ನಿಂದ ಕರೆ ಬಂದಿದ್ದು, ಹಣ ಮತ್ತು ವಜ್ರಕ್ಕೆ ಬೇಡಿಕೆ ಇಡಲಾಗಿದೆ. ಅದರ ಬಗ್ಗೆ ತಿಳಿಸಲು ಅವರು ವಾಪಸ್ ತೇಜಸ್ವಿ ಸೂರ್ಯರವರಿಗೆ ಫೋನ್ ಮಾಡಿದಾಗ ಅವರು ಆ ರೀತಿಯ ಯಾವುದೇ ಕರೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿ, ದೂರು ನೀಡಿದ್ದಾರೆ.
ಯಾರೋ ಮೊಬೈಲ್ ಫೋನ್ ಅನ್ನು ಕದ್ದು ಕರೆ ಮಾಡಿ ಸುಲಿಗೆಗೆ ಪ್ರಯತ್ನಿಸಿದ್ದಲ್ಲದೇ ವಾಪಸ್ ಅಲ್ಲೆ ಇಟ್ಟು ಹೋಗಿದ್ದಾರೆ ಎಂದು ಭಾನುಪ್ರಕಾಶ್ ದೂರಿದ್ದಾರೆ.
ದಕ್ಷಿಣ ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಸಿ) (ಗುರುತಿನ ಕಳ್ಳತನ) ಮತ್ತು 66 (ಡಿ) (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ) ಮತ್ತು ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ; ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?