Homeಕವನಅನುವಾದ; ಕೆಲವು ರೂಮಿ ಪದ್ಯಗಳು

ಅನುವಾದ; ಕೆಲವು ರೂಮಿ ಪದ್ಯಗಳು

- Advertisement -
- Advertisement -

ದೀವಿ ಸುಬ್ಬರಾವ್ ಅವರು ತೆಲುಗಿಗೆ ಅನುವಾದಿಸಿರುವ ಮೌಲಾನಾ ಜಲಾಲುದ್ದೀನ್ ರೂಮೀಯವರ ಪದ್ಯಗಳನ್ನು ಲಕ್ಕೂರು ಆನಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವುಗಳು ಪ್ರಕಟವಾಗಿಲಿರುವ ’ದೇವ ಕಣಗಿಲೆ ಹೂ’ (ಶತಮಾನದ ಸೂಫೀ ಕಾವ್ಯ) ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ರೂಮೀ, ಫರೀವುದ್ದೀನ್ ಅತ್ತಾರ್, ರಬಿಯಾ ಮತ್ತು ಹಾಫೀಜ್ ಅವರ ಸೂಫಿ ಪದ್ಯಗಳಿವೆ.

ಪ್ರೀತಿಯ ಮುಖಗಳು

ಓ ಪ್ರೀತಿಯೇ!
ನಿನ್ನನ್ನು ಸಾವಿರ ಮಂದಿ ಸಾವಿರ ಹೆಸರಿಟ್ಟು ಕರೆಯುತ್ತಾರೆ.
ದೇಹವೆಂಬ ಪಾನಪಾತ್ರೆಯಲ್ಲಿ ಮಧುವನ್ನು ಹೇಗೆ ತುಂಬಬೇಕೋ
ನಿನಗೆ ಚೆನ್ನಾಗಿ ಗೊತ್ತು.
ಸಾವಿರದಷ್ಟು ನಾಗರಿಕತೆಗಳಿಗೆ
ನಾಗರಿಕತೆ ಏನೆಂದು ಕಲಿಸಿದವಳು.
ನಿನಗೆ ಪ್ರತ್ಯೇಕವಾಗಿ ಒಂದು ರೂಪವೆಂಬುದು ಇಲ್ಲವೇ ಹೊರತು
ಸಾವಿರ ರೂಪಗಳ ಸಮೂಹಾರವು ನೀನು.

ಪ್ರೀತಿ!

ತುರ್ಕಿಯವರನ್ನು, ಐರೋಪಿಯನ್ನರನ್ನುಜಾಂಜಿಬಾರು ದ್ವೀಪದಲ್ಲಿ ಇರುವ ಆದಿವಾಸಿಗಳನ್ನು.
ಭೂಮಿಯ ಮೇಲೆ ಎಲ್ಲರ ಮುಖಗಳಲ್ಲೂ ನೀನೇ ಚಿಗುರುವೆ.
ಅಂತಹ ನೀನು, ಓ ಪ್ರೇಮವೇ!
ನಿನ್ನ ಸೀಸೆಯಲ್ಲಿನದು ತೆಗೆದು ನನ್ನ ಗ್ಲಾಸಿನಲ್ಲಿ ಸ್ವಲ್ಪ ಮಧುವನ್ನು ಸುರಿ.
ನಿನ್ನ ಕೊಂಬೆಗಿರುವ ಎರಡೂ ರೆಂಬೆಗಳನ್ನು ಮುರಿದು
ಸ್ವಲ್ಪ ಭಂಗಿ ಸೊಪ್ಪನ್ನು ಸೇರಿಸಿಕೊಡು.

ಸೀಸೆಗಿರುವ ಬಿರಡೆಯನ್ನು
ಒಂದು ಸಾರಿ ಕಿತ್ತುಬಿಡು.

ಆಗ ನೋಡೋಣ ನಾವು
ವಿಜೃಂಭಿಸಿದ ಸಾವಿರ ಮಂದಿ ಯೋಧರು (ಅಹಂಕಾರದಿಂದ ಮೆರೆದ)
ಚಾಪೆಯ ಸುತ್ತಲೂ ಸಾಷ್ಟಾಂಗ ಬೀಳುವುದ.
ಅಷ್ಟೇನಾ…
ಸುತ್ತಲೂ ಸೇರಿ ಪರವಶದಿಂದ
ಗಾಯಕರು ಘನವಾಗಿ ಹಾಡುಗಳನ್ನು ಹಾಡುವುದ.

ಆಗ
ಮರುಳಾದವನು ಅವುಗಳಿಂದ ಮನಸು ಮರಳಿಸಿಕೊಳ್ಳುತ್ತಾನೆ.
ಅವನು ಆಗ ಪುನರುಜ್ಜೀವಿತನಾಗಿ ಆ ಕೊನೆಯ ದಿನಕ್ಕಾಗಿ
ನಿರ್ಭಯವಾಗಿ ಎದುರು ನೋಡುತ್ತಿರುತ್ತಾನೆ.

*******

ರಾತ್ರಿ ಪಯಣಿಗರು

ಸ್ನೇಹಿತರೊಂದಿಗೆ ಸೇರಿ ಕುಳಿತುಕೋ; ಮತ್ತೆ ನಿದ್ದೆಯೊಳಗೆ ಜಾರಬೇಡ.
ಮೀನಿನಂತೆ ಮುಳುಗಿ ಕಡಲಿನ ಅಡಿಗೆ ಸೇರಬೇಡ.

ಸಮುದ್ರದಂತೆ ಪೂರ್ತಿಯಾಗಿ ಏಳು
ತುಫಾನಿನಂತೆ ದಿಢೀರನೆ ಬಿದ್ದು ಚೆಲ್ಲಾಪಿಲ್ಲಿಯಾಗಬೇಡ.

ಜೀವಜಲ ಭೂಮಿಯ ಕತ್ತಲ ಗರ್ಭದಿಂದ ಚಿಮ್ಮಿಬರುತ್ತದೆ.
ಕತ್ತಲನ್ನು ಶೋಧಿಸು; ಅದರಿಂದ ದೂರಕ್ಕೆ ಸರಿದು ಹೋಗಬೇಡ.

ರಾತ್ರಿ ಪ್ರಯಾಣಿಕರು ಬೆಳಕಿಗೆ ಪ್ರತೀಕಗಳು
ಅವರ ಸಹವಾಸವನ್ನು ಯಾವಾಗಲೂ ಬಿಡಬೇಡ.
ಬಂಗಾರದ ಹಣತೆಯಲ್ಲಿ ಎಚ್ಚರವಾಗಿರುವ ಬೆಳಕಾಗು
ಪಾದರಸದಂತೆ ಜಾರಿ ಕೆಸರಿನಲ್ಲಿ ಬೀಳಬೇಡ.
ರಾತ್ರಿಯ ಪಯಣಿಗರಿಗಾಗಿಯೇ ಚಂದ್ರನು ಉದಯಿಸುತ್ತಾನೆ
ರಾತ್ರಿ ಯಾವ ವೇಳೆಯಲ್ಲಿ ಬರುತ್ತಾನೋ ಪೂರ್ಣಚಂದ್ರನು!
ಎಚ್ಚರದಿಂದ ಕಾಯುತ್ತಾ ಇರು.

******

ಇವು ಎರಡೇ

ಮೋಡ ಕಣ್ಣೀರು ಸುರಿಸದೇ ಹೋದರೇ
ಹೂದೋಟದ ತುಟಿಯ ಮೇಲೆ ನಗು ಹೇಗೆ ಚಿಗುರುತ್ತದೆ?

ಸೂರ್ಯನು ತನ್ನ ಬಿಸಿಯ ಕಿರಣಗಳ ಚಾಟಿಯನ್ನು ಝಳಪಿಸದೆ ಹೋದರೇ
ಹೀಚುಗಳೊಂದಿಗಿರುವ ಗಿಡ ಹೇಗೆ ಫಸಲಿಗೆ ಬರುತ್ತದೆ?

ಮೋಡದ ದುಃಖ, ಸೂರ್ಯನ ಬಿಸಿಲು.
ಇವು ಎರಡೇ ಲೋಕಗಳನ್ನು ಉಳಿಸುವ ಮೂಲಸ್ತಂಭಗಳು.

ನೀನೂ ಕೂಡಾ ನಿನ್ನ ಜ್ಞಾನ ಸೂರ್ಯನನ್ನು ಜ್ವಾಲಾಮಾನವಾಗಿ ಬೆಳಗಿಸು.
ಕಣ್ಣಿನ ಅಂಚುಗಳನ್ನು ದುಃಖಾಶ್ರವಗಳ ತೇವದೊಂದಿಗೆ ಹೊಳೆಯುವಂತೆ ಮಾಡು.

**********

ಕಣ್ಣೀರು

ಇಳಿಬಾವಿಯಿಂದ ಏತದಲ್ಲಿ ನೀರನ್ನು ಮೇಲಕ್ಕೆ ಸೇದಿದಂತೆ
ಅಳುವಿನಿಂದ ನಿನ್ನ ಕಣ್ಣಾಲಿಗಳಲ್ಲಿ ನೀರು ತುಂಬಿಹೋಗಲಿ.

ನಿನ್ನ ಹೃದಯದ ಗದ್ದೆಯ ಬಯಲಿನಲ್ಲಿ
ಹಚ್ಚ ಹಸುರಿನ ಚಿಗುರುಗಳು ಮೊಳಕೆಯೊಡೆಯಲಿ

ಕಣ್ಣೀರು ಬೇಕಾದರೇ
ಕಣ್ಣಿರು ಸುರಿಸುವವರೊಂದಿಗೆ ಪ್ರೀತಿಯಿಂದ-ದಯೆಯಿಂದ ಇರು.
ದಯೆ ಬೇಕಾದರೇ
ನಿಸ್ಸಹಾಯಕರ ಕುರಿತು ದಯೆ ತೋರಿಸು.

*****

ರಾತ್ರಿಹಾಡು

ನಿದ್ದೆ ಹತ್ತದೇ
ರಾತ್ರಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡಿಕೊಳ್ಳುತ್ತೇನೆ.
ಅರಳಿದ ಪದ್ಮದಂತಿರುವ ಆಕೆಯ ಮುಖ ನೆನಪಾಗಿ
ತುಂಬಾ ಕಳವಳ ಪಡುತ್ತೇನೆ.
ಕಣ್ಣಿಗೆ ಸ್ವಲ್ಪವೂ ತೂಕಡಿಕೆ ಬರದು.
ಮೈಗೆ ಎಚ್ಚರವಾಗಿರುವಷ್ಟು ಸಹನೆಯಿಲ್ಲ.
ಒಳ್ಳೇಯದು ಕೆಟ್ಟದ್ದೂ ಮರ್ಯಾದಸ್ಥರಿಗೆಯೇ ಹೊರತು
ನನಗಿಲ್ಲ.

ಜ್ಞಾನದ ಬಟ್ಟೆಗಳು ಭಾರವಾಗಿ ಬಿಚ್ಚಿ ಪಕ್ಕದಲ್ಲಿ ಬಿಸಾಡಿದೆ.
ಮೇಲ್ಮೈನ ಹೊಳಪು ವಯ್ಯಾರಗಳು ಇಷ್ಟವಾಗದೆ ಅವುಗಳಿಗೆ ದೂರವಾಗಿ ಸರಿದೆ.

ಹೃದಯಕ್ಕೂ, ಮೆದುಳಿಗೂ
ಸಂಬಂಧ ತುಂಡಾಗಿದೆ.
ತಾರೆಗಳಿಗೆ, ಚಂದ್ರನಿಗೆ
ಪ್ರಪಂಚ ಹೀಗೆ ಕುಗ್ಗಿಹೋಗುವುದಕ್ಕೆ ಕಾರಣ
ಪ್ರತಿಯೊಂದಕ್ಕೂ ನಡುವೆ ದೂರ ಬೆಳೆದದ್ದು.

ಚಂದಮಾಮ ಹೇಳುತ್ತದೆಯಲ್ಲವೆ,
“ಎಷ್ಟು ದಿನ ಹೀಗೆ ಒಂಟಿಯಾಗಿ
ಸೂರ್ಯನಿಲ್ಲದೆ ನೇತಾಡುತ್ತಿರಬೇಕು?” ಎಂದು
ನನ್ನಲ್ಲಿರಬೇಕಾದ ಪ್ರೀತಿಯ ಹಾರ ಇಲ್ಲದೆ ಹೋದ ಮೇಲೆ
ಇನ್ನು ಯಾವುದೊ ನನ್ನನ್ನು ಬಾಧಿಸದು.
ಒಂದೊಂದು ಕಲ್ಲು ಉದುರಿ
ಬದುಕಿನ ಅಂಗಡಿ ಪೂರ್ತಿ ಕುಸಿದು ಬಿದ್ದರೂ
ಚಿಂತೆಯಿಲ್ಲ.

*******

ಪ್ರೀತಿಯ ಪೂರ್ಣಚಂದ್ರನು

ಪ್ರೀತಿ ಬಂದರೆ ಅರೆಕೊರೆಯಾಗಿ ಬರುವುದಿಲ್ಲ
ಎದುರು ಕಿಟಕಿಯಲ್ಲಿ ಪೂರ್ಣ ಚಂದ್ರನಂತೆ ಪೂರ್ತಿಯಾಗಿ ಬರುತ್ತದೆ.

ಪೂರ್ವಕ್ಕೋ, ಪಶ್ಚಿಮಕೋ
ಯಾವ ಒಂದು ದಿಕ್ಕಿಗೋ ತಾವಿಗೋ ಪರಿಮಿತವಾಗದ ಸೂರ್ಯನಂತೆ
ದಢಾರನೆ ಬಾಗಿಲುಗಳನ್ನು ತೆರೆದುಕೊಂಡು ಬರುತ್ತದೆ.
ಆ ಸೂರ್ಯನೊಂದಿಗೆ ಸಹ
ಪೂರ್ವ, ಪಶ್ಚಿಮ ಜೋಡಿಯಾಗಿ ಬರುತ್ತವೆ.
ಯಾವುದರ ಕುರಿತು ಆಸೆ ಹೋಯಿತೋ
ಅದನ್ನೆ ಬಯಸು
ದಾರಿ ಯಾವುದಕ್ಕೆ ಕಾಣಿಸದೋ
ಅದನ್ನು ಹುಡುಕಿಕೋ

ಪ್ರೀತಿಯೆಂದರೆ ಸಣ್ಣಗಾತ್ರದ ನದಿಯಲ್ಲ
ಸ್ವಲ್ಪಮಟ್ಟಿನ ಎತ್ತರವಾದ ಬೆಟ್ಟವಲ್ಲ.
ಅದು ಅವಧಿಯಿಲ್ಲದ ಅಹಂಕಾರವಿಲ್ಲದ ಮಹಾಸಮುದ್ರ
ಅಲ್ಲಿ ಈಜು ಯಾವಾಗಲೂ
ಮುಳುಗುವಿಕೆಯಿಂದ ಮುಗಿಯುತ್ತದೆ.

ಸಮುದ್ರದವರೆಗೂ ಪ್ರಯಾಣವೆಂದರೇ
ಕುದುರೆಗಳು ಬೇಕು, ಅವುಗಳಿಗೆ “ಮೇವು ಇಡಬೇಕು, ಪ್ರಯಾಸ ಪಡಬೇಕು”
ಆದರೆ, ನೆಲದ ಅಂಚಿಗೆ ಬರುವ ಸಮಯಕ್ಕೆ
ಎಲ್ಲಾ ಪಾದಮುದ್ರೆಗಳೂ ಅದೃಶ್ಯವಾಗುತ್ತವೆ.

ತೇವವಾಗದೆ ಇರುವುದಕ್ಕೆ
ಬಟ್ಟೆಯ ಕೊನೆಯನ್ನು ಮೇಲಕ್ಕೆ ಎತ್ತಿ ಹಿಡಿಯುವೆ ಯಾಕೆ?
ಬಾ ಬಂದು ಇಲ್ಲಿ ಸಮುದ್ರದಲ್ಲಿ ತಲೆ ತೇವವಾಗುವಂತೆ
ಮುಳುಗು.

ಅಹಂಕಾರ ಲಯಿಸಿದ ವಿಶಾಲ ಸಮುದ್ರದ ಮೇಲೆ
ತಣ್ಣನೆಯ ಚಂದ್ರನು ದಾಟಿ ಹೋಗುತ್ತಿದ್ದಾನೆ.
ಎದ್ದ ತಂಪೆರಲಗಳು ಮರಳಿ
ಅಲೆಗಳ ನೆತ್ತಿಯ ಮೇಲೆ ಜಾರಿ ಬೀಳುತ್ತಿದೆ.

ಕೊನೆಯಿಲ್ಲದ ಆ ಮಹಾಸಮುದ್ರದ ಮೇಲೆ
ಲಕ್ಷ ನಕ್ಷತ್ರಗಳ ಸಮೂಹಗಳೂ ಕೂಡಾ
ಸಣ್ಣ ಮಣ್ಣಿನ ಹೆಂಟೆಯೊಂದಿಗೆ ಸಮಾನ.

*******

ಸುಂಕುರ್

ಆ ಊರಿನ ಧನಿಕನಿಗೆ ಆಗಾಗ ಆವಿಸ್ನಾನ ಮಾಡುವ ಅಭ್ಯಾಸವಿದೆ.
ಒಂದು ದಿನ ಬೆಳಿಗ್ಗೆ ಸೇವಕ ’ಸುಂಕುರ್’ನನ್ನು ಏಳಿಸಿ
ತೇವದ ಮಣ್ಣು, ಹರಕುಬಟ್ಟೆ, ಅಗಲದ ಪಾತ್ರೆಯನ್ನು ತನ್ನ ಹಿಂದೆ ತರಲೆಂದು
ಆ ತಾವಿಗೆ ಹೊರಟುನಿಂತ. ಸುಂಕುರ್ ಕೂಡಾ ಹೇಳಿರುವುದನ್ನೆಲ್ಲಾ ತೆಗೆದುಕೊಂಡು
ಯಜಮಾನಿಯ ಹಿಂದೆ ಹೊರಟ.
ದಾರಿಯಲ್ಲಿ ಮಸೀದಿಯ ಮುಂದೆಯಿಂದ ಹೋಗುತ್ತೀರಬೇಕಾದರೆ
ನಮಾಜಿಗೆ ಸಮಯವಾಗಿದೆಯೆಂದು ಕರೆ ಕೇಳಿಸಿತು.
ಸುಂಕುರ್‌ಗೆ ಐದು ಸಾರಿ ನಮಾಜ್ ಎಂದರೆ ಪ್ರೀತಿ. “ಅಯ್ಯಾ!”

ಈ ಕುರ್ಚಿಯ ಮೇಲೆ ನೀವು ಸ್ವಲ್ಪಹೊತ್ತು ಕುಳಿತಿದ್ದರೇ
ನಾನು ಒಳಗೆ ಹೋಗಿ
“ನಿನ್ನ ಸೇವಕನನ್ನು ದಯೆಯಿಂದ ನೋಡುವ ನೀನು! ಎಂದು ಇರುವ ಅಮೃತವನ್ನು
ಬಾಯಿಪಾಠ ಮಾಡಿ ಬರುತ್ತೇನೆ” ಎಂದನು ವಿನಯವಾಗಿ.

ಪ್ರಾರ್ಥನೆಗಳು ಮುಗಿದ ಮೇಲೂ ಕೂಡಾ,
ಧರ್ಮದ ಹಿರಿಯರು ಉಳಿದವರು ಹೋದ ಮೇಲೆಯೂ ಕೂಡಾ,
ಸುಂಕುರ್ ಒಳಗಡೆಯೇ ಉಳಿದು ಹೋದ. ಯಜಮಾನಿ ನೋಡಿದ ನೋಡಿದ
ಕೊನೆಗೆ ಬೇಸರವಾಗಿ, ದನಿಯೇರಿಸಿ ಕರೆ
ಸುಂಕುರ್!
“ಈ ಬುದ್ಧಿವಂತ ನನ್ನನ್ನು ಬಿಡುತ್ತಿಲ್ಲ ಸ್ವಲ್ಪ ಸಮಯ ಸಹನೆಯಿಂದ ಇರಿ”
ಅದಕ್ಕೂ ಏಳುಪಟ್ಟು ಸಹನೆ ಹಿಡಿದಿದ್ದ ಯಜಮಾನಿ
ಈ ಸಾರಿ ಗಟ್ಟಿಯಾಗಿ ಕಿರುಚಿದ. ಸುಂಕುರ್

ಸುಂಕುರ್ ಉತ್ತರ ಯಾವಾಗಲೂ ಒಂದೇ “ಈಗಲೇ
ಆಗುವುದಿಲ್ಲ. ಆತ ನನ್ನನ್ನು ಇನ್ನೂ ಬಿಡುತ್ತಿಲ್ಲ ನಿನ್ನ ಹೊರತಾಗಿ
ಒಳಗೆ ಇನ್ನು ಯಾರೂ ಇಲ್ಲವಲ್ಲಾ! ಎಲ್ಲರೂ ಯಾವಾಗಲೋ ಹೊರಟುಹೋದರು.
ನಿನ್ನನ್ನು ಯಾರು ಅಲ್ಲಿಯೇ ನಿಲ್ಲಿಸುತ್ತಿರುವುದು?”
“ಇಲ್ಲ ಯಾರು ನನ್ನನ್ನು ಒಳಗೆ ನಿಲ್ಲಿಸುತ್ತಿದ್ದಾರೋ
ಆತನೇ ನಿನ್ನನ್ನು ಹೊರಗೆ ನಿಲ್ಲಿಸಿಕೊಳ್ಳುತ್ತಿದ್ದಾನೆ.
ಯಾರು ನಿನ್ನನ್ನು ಒಳಗೆ ಬರಲು ಬಿಡುತ್ತಿಲ್ಲವೋ
ಆತನೇ ನನ್ನನ್ನು ಹೊರಗೆ ಬರಲು ಬಿಡುತ್ತಿಲ್ಲ.”
ಎಂದನು ಸುಂಕುರ್ ಆ ಕಡೆಯಿಂದ.

********

ಬಿಳಿಹಸು

ಸುತ್ತಲೂ ಹಸಿರು ಬಯಲಿರುವ ಚೊಕ್ಕವಾದ ಕಾಡಿನ ಪ್ರದೇಶದಲ್ಲಿ
ಸುಂದರವಾದ ಬಿಳಿಹಸು ಒಂದೇ ಇರುತ್ತಿತ್ತು.
ಕತ್ತಲಾಗುವವರೆಗೂ ಚೆನ್ನಾಗಿ ಮೇಯ್ದು ಬಲಿಷ್ಠವಾಗಿದ್ದರೂ,
ರಾತ್ರಿಯಾಗುವ ಹೊತ್ತಿಗೆ ಭಯದಿಂದ ಗಾಬರಿಯಲ್ಲಿ ಕಳೆಯುತ್ತಿತ್ತು.
“ಹುಲ್ಲಿನ ಕಡ್ಡಿ ಉಳಿಯಲಿಲ್ಲ. ನಾಳೆ ಏನಿದೆ ತಿನ್ನುವುದಕ್ಕೆ?” ಎಂದು ನೆನೆದು
ಸೊರಗಿ ಬಡವಾಗಿ ಕಡ್ಡಿಪುಳ್ಳೆಯಂತೆ ಆಗುತ್ತಿತ್ತು.
ಬೆಳಗಾಗುವ ಸಮಯಕ್ಕೆ ಹುಲ್ಲು ಮತ್ತೆ ಮೊದಲಿನಂತೆ
ಸೊಂಟದ ಎತ್ತರ ಸೊಂಪಾಗಿ ಬೆಳೆದಿರುತ್ತಿತ್ತು.
ಹಸು ಮೇಯಲು ಶುರುಮಾಡಿ, ಕತ್ತಲಾಗುವ ವೇಳೆಗೆ
ಮೊದಲಿನಂತೆ ಮತ್ತೆ ಬಯಕೆಯಾಗುತ್ತಿತ್ತು.
ದಷ್ಟಪುಷ್ಟವಾಗಿ ಬಲವಾಗಿ ತಯಾರಾಗುತ್ತಿದ್ದಾದರೂ,
ರಾತ್ರಿಯ ವೇಳೆ ಮೊದಲಿನಂತೆ ಭಯ, ಗಾಬರಿಪಟ್ಟು,
ಮತ್ತೆ ಸೊರಗಿ ಬಡವಾಗಿ ಕಡ್ಡಿಪುಳ್ಳೆಯಂತೆ ಆಗುತ್ತಿತ್ತು.

ಹೀಗೆ ಮಾತುಮಾತಿಗೆ ಗಾಬರಿಯಾಗುವುದು,
ಅದಕ್ಕೆ ಯಾವಾಗಲೂ ಹೊಳೆಯಲಿಲ್ಲ-
“ಹಸಿರು ಬಯಲು ಮತ್ತೆ ಬೆಳೆಯದೆ
ಯಾವಾಗಲೂ ಇರಲಿಲ್ಲ. ಪ್ರತಿ ರಾತ್ರಿಯೇಕೆ ಭಯಗೊಳ್ಳುವುದು ನಾನು?” ಎಂದು.

ಈ ಹಸು ದೇಹಾತ್ಮ
ಹಸಿರು ಬಯಲು ಹೊರಗಿನ ಪ್ರಪಂಚ.
ಭಯಗಳಿಂದ ಸೊರಗಿ ಬರಡಾಗುತ್ತಾ,
ವರಗಳಿಂದ ಉಬ್ಬಿಹೋಗುತ್ತಿರುವುದು ದೇಹಾತ್ಮದ ಲಕ್ಷಣ.
ಓ ಬಿಳಿ ಹಸುವೇ!
ಏನು ನಡೆಯುತ್ತದೆಯೋ, ಏನು ನಡೆಯದೋ ಎಂಬ
ಕೊರಗಿನಿಂದ ಬದುಕನ್ನು ಭಾರ ಮಾಡಿಕೊಳ್ಳಬೇಡ.

****

ಮೌಲಾನಾ ಜಲಾಲುದ್ದೀನ್ ರೂಮೀ
13ನೇ ಶತಮಾನದ ಸೂಫಿ ಕವಿ. ಟರ್ಕಿ ದೇಶದಲ್ಲಿ ನೆಲೆಸಿದ್ದ ರೂಮೀಯ ಬೆಡಗಿನ ಪದ್ಯಗಳು ಆಧ್ಯಾತ್ಮವನ್ನು ಮತ್ತು ವಿವೇಕವನ್ನು ಒಳಗೊಂಡಿರುವಂತಹವು.

ದೀವಿ ಸುಬ್ಬಾರಾವ್
ತೆಲುಗಿನ ಖ್ಯಾತ ಕವಿ ಮತ್ತು ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಸುಬ್ಬಾರಾವ್ ಅವರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಲಕ್ಕೂರು ಆನಂದ
ಕೇಂದ್ರ ಸಾಹಿತ್ಯ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ. ತೆಲುಗಿನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಊರಿಂದ ಊರಿಗೆ’, ’ಇಪ್ಪತ್ತರ ಕಲ್ಲಿನ ಮೇಲೆ’, ’ಬಟವಾಡೆಯಾಗದ ರಸೀತಿ’ ಇವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಕವನ: ಅವಳು ಸಂಪೂರ್ಣವಾಗಿ ಪ್ರಕಟವಾಗದ ಕವಿತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...