ಭಾರತದ ಶಕ್ತಿ ಹೆಚ್ಚುತ್ತಿರುವುದರಿಂದ ಒಕ್ಕೂಟ ಸರ್ಕಾರವು ಉಕ್ರೇನ್ನಿಂದ ನಾಗರಿಕರನ್ನು ಸ್ಥಳಾಂತರಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಬುಧವಾರ ಹೇಳಿದ್ದಾರೆ. ಉಕ್ರೇನ್ನಿಂದ ಭಾತೀಯರನ್ನು ವಾಪಾಸು ಕರೆತರಲು ಸರ್ಕಾರವು ಯಾವುದೇ ಪ್ರಯತ್ನವನ್ನು ಕೈಚೆಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ.
“ಭಾರತದ ಶಕ್ತಿ ಹೆಚ್ಚುತ್ತಿರುವುದರಿಂದಾಗಿ ನಾವು ಉಕ್ರೇನ್ನಿಂದ ನಾಗರಿಕರನ್ನು ಸ್ಥಳಾಂತರಿಸಲು ಸಾಧ್ಯವಾಯಿತು” ಎಂದು ಯುಪಿಯ ಸೋನ್ಭದ್ರಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿನ ಭಾರತೀಯ ವಿದ್ಯಾರ್ಥಿಗಳ ಸ್ಥಿತಿಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ
“ಸಶಸ್ತ್ರ ಪಡೆಗಳ ಶೌರ್ಯ ಮತ್ತು ‘ಮೇಕ್ ಇನ್ ಇಂಡಿಯಾ’ವನ್ನು ಪ್ರಶ್ನಿಸುವವರು ದೇಶವನ್ನು ಬಲಿಷ್ಠಗೊಳಿಸಲಾರರು” ಎಂದು ಅವರು ಪ್ರತಿಪಕ್ಷಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಗಳ ಬಿರುಸಿನ ಪ್ರಚಾರದ ಮಧ್ಯದಲ್ಲಿ, ಉಕ್ರೇನ್ ಬಿಕ್ಕಟ್ಟು ಮತ್ತು ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟವು ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಉಕ್ರೇನ್ನಲ್ಲಿರುವ ಹಲವಾರು ಭಾರತೀಯ ವಿದ್ಯಾರ್ಥಿಗಳು ಭಾರತೀಯ ರಾಯಭಾರ ಕಚೇರಿಯು ಯಾವುದೆ ಕೆಲಸವನ್ನು ಮಾಡುತ್ತಿಲ್ಲ ಎಂದು ಆರೋಪಿಸಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಗಳಲ್ಲಿ ಹರಿಯಬಿಡುತ್ತಿದ್ದಾರೆ.
ಪ್ರಧಾನಿಯ ಈ ಹೇಳಿಕೆಯ ವಿರುದ್ಧ ಭಾರತದ ಅನಿವಾಸಿ ಕಾಂಗ್ರೆಸ್ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ರೊಮಾನಿಯಾ ಗಡಿಯ ಪರಿಸ್ಥಿತಿ ಹೀಗಿದೆ ಎಂದು ಹೇಳಿ ಟ್ವಿಟರ್ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಿದೆ. ವಿಡಿಯೊದಲ್ಲಿ ವಿದ್ಯಾರ್ಥಿಗಳ ಗುಂಪು ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ.
"Because Of India's Rising Power": PM Modi On Citizens' Ukraine Evacuation !
Ground situation from Romanian boarder 👇🏽#IndiaHasWeakPM #UkraineRussiaWar pic.twitter.com/zmg7xWGxfk
— Indian Overseas Congress (@INCOverseas) March 2, 2022
ಪ್ರಧಾನಿಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿ ಸಂಘಟನೆ ಕೆವಿಎಸ್ ಸಂಚಾಲಕ ಸರೋವರ್ ಬೆಂಕಿಕೆರೆ, “ಈ ಪ್ರಧಾನಿಗೆ ಒಂದಿಷ್ಟು ಕೂಡಾ ನಾಚಿಕೆ ಇಲ್ಲ. ಭಾರತ ಸರ್ಕಾರವು ಗಲ್ಫ್ ಯುದ್ಧದ ಸಮಯದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿತ್ತು. ಆದರೆ ಅವತ್ತಿನ ಸರ್ಕಾರವು ಇದನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿಲ್ಲ. ಅಲ್ಲಿ ಯುದ್ಧ ನಡೆಯುತ್ತದೆ ಎಂದು ತಿಳಿದಿದ್ದರೂ, ಭಾರತೀಯ ಪ್ರಜೆಗಳ ಬಗ್ಗೆ ಯಾವುದೇ ಯೋಚನೆ ಇಲ್ಲದೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಇದೀಗ ಒಬ್ಬ ವಿದ್ಯಾರ್ಥಿಯ ಹತ್ಯೆಯಾದ ನಂತರ, ವಿದ್ಯಾರ್ಥಿಗಳನ್ನೇ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ. ಜನರಿಗೆ ನೆರವಾಗುವುದನ್ನು ಬಿಟ್ಟು ಬೇರೆಲ್ಲವನ್ನೂ ಈ ಸರ್ಕಾರ ಮಾಡುತ್ತಿದೆ” ಎಂದು ಹೇಳಿದ್ದಾರೆ
ಇದನ್ನೂ ಓದಿ: ಕೇಂದ್ರ ಸರ್ಕಾರ ಮತ್ತು ಗೋದಿ ಮಿಡಿಯಾಗಳಿಗೆ ಛೀಮಾರಿ ಹಾಕುತ್ತಿರುವ ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು