Homeಅಂಕಣಗಳುಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

- Advertisement -
- Advertisement -

ಕಾನೂನುಗಳಿಗಿಂತ ನನ್ನ ಧರ್ಮವೇ ದೊಡ್ಡದು, ಆದ್ದರಿಂದ ನಾನು ಕಾನೂನುಗಳಿಗೆ ಹೆದರುವುದಿಲ್ಲ ಎಂಬಂತಹ ಮಾತೊಂದು ಪತ್ರಿಕೆಗಳಲ್ಲಿ ಹರಿದಾಡಿದಾಗ ಗ್ಯಾರಂಟಿ ಈ ಮಾತನ್ನು ತಾಲೀಬಾನಿಗಳು ಆಡಿರಬಹುದು ಅಥವ ಯಾವುದಾದರೂ ಮೂಲಭೂತಾವಾದಿ ಸಂಘಟನೆಯ ಲೀಡರು ಆಡಿರಬಹುದೆಂದು ಅಷ್ಟೇನು ಗಾಬರಿಯಿಲ್ಲದೆ ಹುಡುಕಿದಾಗ ಈ ಮಾತನ್ನಾಡಿದವರು ನಮ್ಮ ಶರಣ ಪರಂಪರೆಯ ಪ್ರಖರ ವಿಚಾರವಾದಿ ಸ್ವಾಮಿಜಿಯೊಬ್ಬರು ಎಂಬುದು ಗೊತ್ತಾದಾಗ ಏರಿ ನೀರುಂಬೊಡೆ, ಬೇಲಿ ಹೊಲ ಮೇಯ್ದೊಡೆ, ನಾರಿ ತನ್ನ ಮನೆಯಲ್ಲಿ ಕದ್ದೊಡೆ ಬದುಕುವುದೇನಯ್ಯ ಎಂಬಂತಾಯ್ತಲ್ಲಾ.

ಮಧ್ಯ ಕರ್ನಾಟಕದ ಒಂದೆರಡು ಜಿಲ್ಲಾ ಪ್ರದೇಶದಲ್ಲಿ ಗೊತ್ತಿರುವ ಜಗದ್ಗುರುವೊಬ್ಬರು ಹೀಗೆ ಮಾತಾಡುತ್ತಿರಬೇಕಾದರೆ, ಅವರು ಕಾನೂನು ಮೀರಿ ಬಹಳ ವರ್ಷಗಳೇ ಆಗಿರಬೇಕು. ಮಠದ ಸಂವಿಧಾನದ ಪ್ರಕಾರ ಅರವತ್ತು ವರ್ಷಕ್ಕೆ ನಿವೃತ್ತಿ ಪಡೆದು, ಮರಿ ಸ್ವಾಮಿಗೆ ಪಟ್ಟಕಟ್ಟಿ ತಾವು ಪಕ್ಕದಲ್ಲಿ ನಿಲ್ಲಬೇಕಿತ್ತು. ಆದರೆ ಮಠದ ಪರಂಪರೆ ಬದಿಗೊತ್ತಿ, ಅರವತ್ತು ವರ್ಷವನ್ನ ಹಿಂದಿಕ್ಕಿ ಮುಂದುವರಿದ ಜಗದ್ಗುರುವಿನ ನಡೆಗೆ ಬೇಸತ್ತ ಭಕ್ತಾದಿಗಳು ಕಾನೂನು ಮೊರೆಹೋಗಿದ್ದಾರಂತಲ್ಲಾ! ಅದಕ್ಕೆ ಹೆದರಿದ ಜಗದ್ಗುರು ನಾನು ಕಾನೂನಿಗೆ ಹೆದರುವುದಿಲ್ಲ ಎಂದರಂತಲ್ಲಾ ಥೂತ್ತೇರಿ.

ಈ ನೆಲದ ಕಾನೂನಿಗಾಗಲಿ ಮಠದ ಕಾನೂನಿಗಾಗಲಿ ಹೆದರುವುದಿಲ್ಲ ಎಂದಮೇಲೆ ಭಂಡತನ ಆವರಿಸುತ್ತೆ. ಆನಂತರ ಮಾಡುವ ಎಲ್ಲ ಕೆಲಸಗಳು ಭಂಡತನದಿಂದಲೇ ಕೂಡಿರುತ್ತವೆ. ಬಹು ಹಿಂದೆ ಜಗದ್ಗುರುಗಳೇ ಬಿಗಿದ ಭಾಷಣವಿದು. ಆ ಮಾತಿನ ಪ್ರಯೋಗಕ್ಕಿಳಿದಂತಿರುವ ಜಗದ್ಗುರುಗಳು ಮಠದ ಆಸ್ತಿಯನ್ನೇ ಸ್ವಂತದ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತ ಅದನ್ನ ದಕ್ಕಿಸಿಕೊಳ್ಳಲು ಟ್ರಸ್ಟು ಮಾಡಿಕೊಂಡು, ಪ್ರತಿಭಟಿಸುವಂತಹ ಭಕ್ತಾದಿಗಳನ್ನು ಬೆದರಿಸಲು ಶಿವಸೈನ್ಯವನ್ನೇ ಕಟ್ಟಿದ್ದಾರಂತಲ್ಲಾ! ಇಂತಹ ಸಾಹಸಗಳನ್ನು ಮಾಡಿದ ಮೇಲೆ ಪ್ರಭುತ್ವದ ರಕ್ಷಣೆ ಬೇಕಿರುತ್ತದೆ. ಅದಕ್ಕಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಕರೆದು ಹಿಗ್ಗಾಮುಗ್ಗ ಹೊಗಳಿದರಂತಲ್ಲಾ! ಹಿಂದೆ ರಾಜಕಾರಣಿಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾ, ಅವರ ಕರ್ತವ್ಯಗಳನ್ನು ಅರಿವು ಮಾಡಿಕೊಡುತ್ತಿದ್ದ ಜಗದ್ಗುರುಗಳಿಂದ ಹೊಗಳಿಸಿಕೊಂಡ ಹಾಲಿ ಮತ್ತು ಮಾಜಿಗಳು ಗಲಿಬಿಲಿಗೊಂಡು, ಮತ್ತೊಮ್ಮೆ ಪಾದಗಳಿಗೆ ಪೊಡಮರುವಷ್ಟರಲಿ, ಪೊಲೀಸ್ ಅಧಿಕಾರಿಯೊಬ್ಬರು ಅನಾಮತ್ತು ಜಗದ್ಗುರುವಿನ ಪದತಳಕ್ಕೆ ಡೈ ಹೊಡೆದು ಇಲ್ಲದ ಬಾಲವಾಡಿಸಿದರಂತಲ್ಲಾ.. ಥೂತ್ತೇರಿ.

ಇದೇ ಮಠದ ಭವ್ಯಪರಂಪರೆಯಲ್ಲಿ ಹಿಂದಿನ ಜಗದ್ಗುರುಗಳು ನಡೆಸುತ್ತಿದ್ದ ಸಮಾರಂಭಕ್ಕೆ ಸಮವಸ್ತ್ರದಲ್ಲಿ ಬಂದ ಪೊಲೀಸ್ ಅಧಿಕಾರಿ ಸ್ವಾಮೀಜಿ ಕಾಲಿಗೆ ಬೀಳಲು ಹೋದಾಗ ಸ್ವಾಮಿಗಳು ಅದನ್ನ ತಡೆದು “ನೀವು ಸಮವಸ್ತ್ರದಲ್ಲಿರುವ ಸರಕಾರಿ ಅಧಿಕಾರಿ, ಕಾನೂನು ರಕ್ಷಿಸಬೇಕಾದವರು, ಆದ್ದರಿಂದ ಒಂದು ಮಠದ ಸ್ವಾಮಿ ಕಾಲಿಗೆ ಬೀಳಬಾರದು. ಹಾಗೆ ಗೌರವ ಕೊಡುವುದಿದ್ದರೆ ಸಮವಸ್ತ್ರ ತೆಗೆದು ಖಾಸಗಿ ಕಾರಿನಲ್ಲಿ ಬಂದು ಆಶೀರ್ವಾದ ಪಡೆಯಿರಿ” ಎಂದದ್ದು ಮಠದ ಪರಂಪರೆಯಲ್ಲಿ ಐತಿಹಾಸಿಕ ಘಟನೆಯಾಗಿ ಉಳಿದಿದೆಯಲ್ಲಾ. ಆದರೇನು ಈಚೆಗೆ ಇಲ್ಲಿಗೆ ಬಂದ ಐಪಿಎಸ್ ಅಧಿಕಾರಿಯೊಬ್ಬ ಜಗದ್ಗುರುವಿನ ಕಾಲಿಗೆ ದೀರ್ಘ ದಂಡ ಹೊಡೆದುದ್ದಲ್ಲದೆ ಧರ್ಮವೇ ದೊಡ್ಡದು ಎಂದುಬಿಟ್ಟರಲ್ಲಾ. ಈ ಅಧಿಕಾರಿಯ ಮಾತನ್ನ ಅನುಮೋದಿಸುವುದಾದರೆ, ಆಯ್ತು ಕಾನೂನಿಗಿಂತ ಧರ್ಮ ದೊಡ್ಡದು ಅಂದುಕೊಂಡರೆ, ಸದ್ಯ ತಮ್ಮ ಧರ್ಮ ಹಿಡಿದುಕೊಂಡು ಭಂಡತನ ಪ್ರದರ್ಶನ ಮಾಡುತ್ತಿರುವ ಜಗದ್ಗುರುವಿನ ಎದುರು ಭಕ್ತಾದಿಗಳು ಸಿಡಿದೆದ್ದರೆ ಧರ್ಮವಿರೋಧಿ ಕಾನೂನನ್ನ ಮುಲಾಜಿಲ್ಲದೆ ಜಾರಿ ಮಾಡಲು ರೆಡಿಯಿರುವ ಈ ಪೊಲೀಸ್ ಅಧಿಕಾರಿ ಮತ್ತು ಜಗದ್ಗುರುಗಳ ಪಾದವನ್ನೆ ನೋಡುವ ಜಿಲ್ಲಾಧಿಕಾರಿಗಳ ದೆಸೆಯಿಂದ ನೆಲದ ಕಾನೂನು ನೆಲಸಮವಾಗುತ್ತಿದೆಯಂತಲ್ಲಾ, ಥೂತ್ತೆರಿ.

ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಆದರೆ ನೂರು ವರ್ಷದ ನಂತರ ಅಥವ ಐನೂರು ವರ್ಷಗಳೂ ಆಗಬಹುದೆಂದು ಘಂಟಾಘೋಷವಾಗಿ ಹೇಳುತ್ತ ಅದನ್ನ ಸಮರ್ಥಿಸುತ್ತಿರುವ ಬಿಜೆಪಿಯ ಮೇಧಾವಿ ಮಂತ್ರಿಗಳಾದ ಈಶ್ವರಪ್ಪನ ಕೇಸರಿ ಮಾತುಗಳ ಬಗ್ಗೆ ಪತ್ರಕರ್ತರು ಜೆಡಿಎಸ್ ನಾಯಕ ಕುಮಾರಣ್ಣನಿಗೆ ಕೇಳಲಾಗಿ, ಕುಮಾರಣ್ಣ ಥೇಟ್ ಈಶ್ವರಪ್ಪನಂತೆಯೇ ಮಾತನಾಡಿದರಲ್ಲಾ.

“ಕೇಸರಿ ಅನತಕ್ಕಂತದ್ದೇನಿದೆ, ಅದು ಒಂದು ಬಟ್ಟೆ ಅಂತ ನಾವು ಪರಿಗಣಿಸಿ ಮಾತನಾಡತಕ್ಕಂತದ್ದೇನಿದೆ, ಆ ಒಂದು ವಿಷಯ ಇವತ್ತು ಪಡಕಂತಿರತಕ್ಕಂತ ಪ್ರಚಾರಯೇನಿದೆ, ಅದನ್ನ ನಾವು ಪರಿಶೀಲನೆ ಮಾಡಿದ್ರೆ ಈ ಕೇಸರಿ ಸಾಮಾನ್ಯದಾದಂತಹ ಜನ ಧರಸತಕ್ಕಂತ ಬಟ್ಟೆ ಅಲ್ಲ. ಅದೊಂದು ಶ್ರೇಷ್ಠವಾದ ಬಟ್ಟೆ ಅನತಕ್ಕಂತ ವಿಷಯವನ್ನ ನಮ್ಮ ಪರಂಪರೆಲಿ ನಮ್ಮ ಹಿರಿಯರು ತೋರಿಸಿಕೊಟ್ಟಿರತಕ್ಕಂತ ವಿಷಯ ಏನಿದೆ ಆ ಬಗ್ಗೆ ನಾವು ಹಗುರವಾಗಿ ಮಾತನಾಡಕ್ಕಂತದ್ದು ಸರಿಕಾಣದಿಲ್ಲ, ಅನತಕ್ಕಂತದ್ದು ನನ್ನ ಅಭಿಪ್ರಾಯ” ಎಂದರಂತಲ್ಲಾ. ಈ ಮಾತನ್ನ ಕೇಳಿಸಿಕೊಂಡ ಶಿವಮೊಗ್ಗದ ಕಡೆ ಜೆಡಿಎಸ್‌ನವರು ಕುಮಾರಣ್ಣ ಈಶ್ವರಪ್ಪನಂತೆ ಮಾತನಾಡುವುದಾದರೆ ನಾವ್ಯಾಕೆ ಜೆಡಿಎಸ್‌ನಲ್ಲಿರಬೇಕು ಎಂದು ಅನ್ಯ ಪಾರ್ಟಿಯ ಕಡೆ ಗುಳೆ ಹೊರಟಿದ್ದಾರಂತಲ್ಲಾ..

ಥೂತ್ತೇರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಯ್‌ ಬರೇಲಿ, ಅಮೇಥಿ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ: ರಾಹುಲ್‌ ಗಾಂಧಿ, ಕಿಶೋರಿ ಲಾಲ್‌...

0
ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಮತ್ತು ಅಮೇಥಿ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರಪ್ರದೇಶದ ರಾಯ್‌...