ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರಗಳಾಗಿ ಗುರುತಿಸುವ ಮೂಲಕ ಸಂಘರ್ಷ ಕೊನೆಗೊಳಿಸಬೇಕೆಂಬ ತನ್ನ ದೀರ್ಘ ಕಾಲದ ನಿಲುವನ್ನು ಭಾರತ ಪುನರುಚ್ಚರಿಸಿದೆ.
ಪ್ಯಾಲೆಸ್ತೀನ್ಗೆ ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ನೀಡಲು ಅನುಮತಿಸಲು ಮತದಾನ ನಡೆಸುವಂತೆ ಶಿಫಾರಸು ಮಾಡುವ ಕರಡು ನಿರ್ಣಯವನ್ನು ಯುನೈಟೆಡ್ ಸ್ಟೇಟ್ಸ್ (ಯುಎಸ್) ಏಪ್ರಿಲ್ 18ರಂದು ತಡೆದಿತ್ತು.
ನಿರ್ಣಯದ ಪರವಾಗಿ 12 ಮತಗಳು ಬಿದ್ದಿತ್ತು. ಸ್ವಿಟ್ಜರ್ಲೆಂಡ್ ಮತ್ತು ಯುನೈಟೆಡ್ ಕಿಂಗ್ಡಮ್ (ಯುಕೆ) ಮತದಾನದಿಂದ ದೂರ ಉಳಿದಿತ್ತು. ನಿರ್ಣಯದ ಪರವಾಗಿ ಒಂಬತ್ತು ಮತಗಳ ಅಗತ್ಯವಿತ್ತು. ವಿಶ್ವ ಸಂಸ್ಥೆಯ ಖಾಯಂ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ವೀಟೋ ಪ್ರಯೋಗಿಸಿರಲಿಲ್ಲ.
ಪ್ಯಾಲೆಸ್ತೀನ್ ಪ್ರಸ್ತುತ ವಿಶ್ವಸಂಸ್ಥೆಯಲ್ಲಿ “ಶಾಶ್ವತ ವೀಕ್ಷಕ” ಸ್ಥಾನಮಾನವನ್ನು ಹೊಂದಿದೆ. ಇದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಭೆಗಳಲ್ಲಿ ಮಾತನಾಡಲು ಅವಕಾಶ ನೀಡುತ್ತದೆ. ಆದರೆ, ನಿರ್ಣಯಗಳ ಮೇಲೆ ಮತ ಚಲಾಯಿಸಲು ಅವಕಾಶವಿಲ್ಲ.
"…India is committed to supporting a Two-State solution where the Palestinian people are able to live freely in an independent country within secure borders, with due regard to the security needs of Israel…"
– PR at #UNGA Meeting on Gaza today pic.twitter.com/3znI9sn0FF
— India at UN, NY (@IndiaUNNewYork) May 1, 2024
ಬುಧವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ “ವಿಶ್ವಸಂಸ್ಥೆಯಲ್ಲಿ ಸದಸ್ಯತ್ವಕ್ಕಾಗಿ ಪ್ಯಾಲೆಸ್ತೀನ್ನ ಅರ್ಜಿಯನ್ನು ಭದ್ರತಾ ಮಂಡಳಿಯು ಮೇಲಿನ ವೀಟೋ ಕಾರಣದಿಂದ ಅನುಮೋದಿಸಲಿಲ್ಲ ಎಂದು ನಾವು ಗಮನಿಸಿದ್ದೇವೆ. ಪೂರ್ಣ ಸದಸ್ಯತ್ವಕ್ಕಾಗಿ ಪ್ಯಾಲೆಸ್ತೀನ್ ಮಾಡಿರುವ ಮನವಿಯನ್ನು ಪರಿಶೀಲಿಸಿ ಅನುಮೋದಿಸುವ ಭರವಸೆ ನಮಗಿದೆ” ಎಂದಿದ್ದಾರೆ.
“ಕಳೆದ ಆರು ತಿಂಗಳಿನಿಂದ ಗಾಝಾ ಮೇಲೆ ದಾಳಿ ನಡೆಯುತ್ತಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗಿದ್ದಾರೆ. ಇದು ಸ್ವೀಕಾರ್ಹವಲ್ಲ” ಎಂದು ರುಚಿರಾ ಕಾಂಬೋಜ್ ಹೇಳಿದ್ದಾರೆ.
“ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಎಲ್ಲಾ ಸಂದರ್ಭಗಳಲ್ಲಿಯೂ, ಎಲ್ಲರೂ ಗೌರವಿಸಬೇಕು” ಎಂದು ರುಚಿರಾ ಹೇಳಿದ್ದು, ಆಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ಗುಂಪು ನಡೆಸಿದ ದಾಳಿಯನ್ನು ಖಂಡಿಸಿದ್ದಾರೆ. ಆದರೆ, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಾರಣಹೋಮದ ಬಗ್ಗೆ ಅವರು ಚಕಾರವೆತ್ತಿಲ್ಲ.
ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಎರಡು ದೇಶಗಳ ಜನರು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುವಂತಹ ದ್ವಿರಾಷ್ಟ್ರ ಸೂತ್ರವನ್ನು ಬೆಂಬಲಿಸುವುದಾಗಿ ರುಚಿರಾ ಕಾಂಬೋಜ್ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ : ಘೋರ ಅಪರಾಧದ ಆರೋಪದ ಹೊರತು ಜಾಮೀನು ರಹಿತ ವಾರಂಟ್ ಹೊರಡಿಸಬಾರದು: ಸುಪ್ರೀಂ ಕೋರ್ಟ್