ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಮತ್ತು ತಿರುವಳ್ಳುವರ್ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ವಿಎಚ್ಪಿ ಮಾಜಿ ನಾಯಕ ಆರ್ಬಿವಿಎಸ್ ಮಣಿಯನ್ಗೆ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ತಮಿಳುನಾಡು ಘಟಕದ ಮಾಜಿ ಉಪಾಧ್ಯಕ್ಷರಾಗಿರುವ ಆರ್ಬಿವಿಎಸ್ ಮಣಿಯನ್, ಸಂವಿಧಾನದ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಮತ್ತು ತಮಿಳು ಸಂತ-ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆಯನ್ನು ನೀಡಿದ್ದರು.
76 ವರ್ಷದ ಮಣಿಯನ್ ವಿಎಚ್ಪಿಯ ಪ್ರಮುಖ ಕಾರ್ಯಕಾರಿ ಸದಸ್ಯರಾಗಿದ್ದು, ಹಲವು ವರ್ಷಗಳಿಂದ ಆಧ್ಯಾತ್ಮಿಕ ಪ್ರವಚನಗಳನ್ನು ನೀಡುತ್ತಿದ್ದರು.
ಕಳೆದ ಸೋಮವಾರ ಚೆನ್ನೈನ ಟಿ.ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮವನ್ನು ಎತ್ತಿ ಹಿಡಿದ ಮಣಿಯನ್, ಅಂಬೇಡ್ಕರ್ ಹಾಗೂ ತಿರುವಳ್ಳುವರ್ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದರು. ಇದಲ್ಲದೆ ಅವರು ಪರಿಶಿಷ್ಟ ಜಾತಿ ಸಮುದಾಯದ ಜನರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅವರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿತ್ತು.
ವಿದುತಲೈ ಚಿರುತೈಗಲ್ ಕಚ್ಚಿ ಪದಾಧಿಕಾರಿ ಸೆಲ್ವಂ ಅವರು ನೀಡಿದ ದೂರಿನ ಆಧಾರದ ಮೇಲೆ ಮಾಂಬಲಂ ಪೊಲೀಸರು ಮಣಿಯನ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಸನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಣಿಯನ್ ಅವರನ್ನು ಟಿ.ನಗರದ ರಾಜಾಂಬಳ್ ಸ್ಟ್ರೀಟ್ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಬಳಿಕ ಅವರನ್ನು ಸೈದಾಪೇಟೆ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಇದನ್ನು ಓದಿ: ಹಿಂದೂ ಧಾರ್ಮಿಕ ಪುಸ್ತಕ ‘ರಾಮಚರಿತಮಾನಸ ಪೊಟ್ಯಾಶಿಯಂ ಸೈನೈಡ್’ನಷ್ಟೇ ವಿಷಕಾರಿ: ಬಿಹಾರದ ಸಚಿವ ಚಂದ್ರಶೇಖರ್