ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪೂರ್ವವಾಗಿ ಗ್ಯಾರೆಂಟಿಗಳ ಘೋಷಣೆ ಮಾಡಿದಂತೆ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಕೂಡ ಗ್ಯಾರೆಂಟಿಗಳನ್ನು ಘೋಷಣೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವನ್ನು ಸಾಧಿಸಿತ್ತು. ಇದಕ್ಕೆ ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳು ಕೂಡ ಪ್ರಮುಖ ಕಾರಣವಾಗಿತ್ತು. ಈ ಯಶಸ್ವಿ ಸೂತ್ರವನ್ನು ಕಾಂಗ್ರೆಸ್ ದೇಶದ ಇತರ ರಾಜ್ಯಗಳಲ್ಲಿ ಕೂಡ ಬಳಕೆ ಮಾಡಲು ಮುಂದಾಗಿದೆ.
ಹೈದರಾಬಾದ್ನಲ್ಲಿ ಸೆ.17ರಂದು ನಡೆಯಲಿರುವ ‘ವಿಜಯ ಭೇರಿ’ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭರವಸೆಗಳನ್ನು ಘೋಷಿಸಲಿದ್ದಾರೆ.
119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ ಇದೇ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಈ ಕುರಿತು ಚುನಾವಣಾ ಆಯೋಗ ಸಿದ್ಧತೆಯನ್ನು ಕೂಡ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟದಲ್ಲಿ ಘೋಷಿಸಿದಂತೆ 6 ಗ್ಯಾರೆಂಟಿಗಳನ್ನು ಜಾರಿಗೆ ತರಲಿದೆ. ಆದರೆ ಗ್ಯಾರೆಂಟಿಗಳು ಕರ್ನಾಟಕಕ್ಕಿಂತ ಭಿನ್ನವಾಗಿರಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.
ತೆಲಂಗಾಣ ಕಾಂಗ್ರೆಸ್ನ ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರೋರ್ವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಚುನಾವಣೆಗೆ ಮುನ್ನ ರಾಜ್ಯದಲ್ಲಿ ಗ್ಯಾರೆಂಟಿಗಳನ್ನು ಘೋಷಿಸಲಾಗುವುದು. ಸ್ಥಳೀಯ ಜನರ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ಗ್ಯಾರೆಂಟಿಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಘೋಷಿಸಲಿರುವ ಆರು ಗ್ಯಾರೆಂಟಿಗಳಲ್ಲಿ ಬಿಪಿಎಲ್ ವರ್ಗದ ಮಹಿಳೆಯರಿಗೆ 3,000ರೂ. 500ರೂ.ಗೆ ಎಲ್ಪಿಜಿ ಸಿಲಿಂಡರ್ ಮತ್ತು 5ಲಕ್ಷ ರೂ. ಮನೆ ನಿರ್ಮಾಣಕ್ಕೆ ನೆರವು ಸೇರಿದೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಮೂಲಗಳು ತಿಳಿಸಿದೆ.
ನಾಳೆ ಹೈದರಾಬಾದ್ನಲ್ಲಿ ವಿಜಯ ಭೇರಿ ಸಾರ್ವಜನಿಕ ರ್ಯಾಲಿ ನಡೆಯಲಿದೆ. ಇದರಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಇದನ್ನು ಓದಿ: ಕೊಪ್ಪಳ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಅಮಿತ್ ಶಾ ಹೆಸರಿನಲ್ಲಿ ವಂಚನೆ