Homeಅಂಕಣಗಳುಕಂಡದ್ದು ಹೇಳಿದ ಕಾರ್ನಾಡರು! - ಬಿ.ಚಂದ್ರೇಗೌಡ

ಕಂಡದ್ದು ಹೇಳಿದ ಕಾರ್ನಾಡರು! – ಬಿ.ಚಂದ್ರೇಗೌಡ

- Advertisement -
- Advertisement -

| ಬಿ. ಚಂದ್ರೇಗೌಡ |

ಗಿರೀಶ್ ಕಾರ್ನಾಡರು ತೀರಿಕೊಂಡ ಸುದ್ದಿಕೇಳಿ ಮನಸ್ಸು ಶಾಕ್ ಅನುಭವಿಸುತ್ತಲೇ ಪಟಾಕಿ ಸದ್ದೇನಾದರೂ ಬರಬಹುದೆ ಎಂದು ಆಲಿಸತೊಡಗಿದೆ. ಹಾಗೇನೂ ಆಗಲಿಲ್ಲ, ಯಾಕೆಂದರೆ ಕಾರ್ನಾಡ್ ಅನಂತಮೂರ್ತಿಯವರಷ್ಟು ಪುರೋಹಿತಶಾಹಿಗಳ ಮನಸ್ಸನ್ನ ಕೆರಳಿಸಿರಲಿಲ್ಲ. ಇಂದು ಬಿಜೆಪಿಯ ಅಜೆಂಡಾದೊಳಗೆ ಸೇರಿಹೋಗಿರುವ ಗೋರಕ್ಷಣೆಗೆ ಪ್ರೇರಣೆ ನೀಡುವಂತಹ ತಬ್ಬಲಿ ನೀನಾದೆ ಮಗನೆ ಚಿತ್ರ ತೆಗೆದಿದ್ದರು. ಅಲ್ಲದೆ ವಂಶವೃಕ್ಷ ಚಿತ್ರ ತೆಗೆದಿದ್ದರು. ಇವೆರಡೂ ಆರೆಸೆಸ್ ಕಾರ್ಯಕರ್ತರಾದ ಎಸ್ಸೆಲ್ ಭೈರಪ್ಪನವರ ಕೃತಿಗಳು. ಈ ಕೃತಿಗಳು ರಚನೆಗೊಂಡ ಕಾಲದಲ್ಲಿ ತುಂಬ ಖ್ಯಾತಿಗಳಿಸಿದ್ದವು. ಅವು ಹಾಗೇ ಇದ್ದು ಓದಿಸಿಕೊಳ್ಳುವ ಕಾದಂಬರಿಗಳಾಗಿದ್ದರೂ, ಸುಮ್ಮನೆ ತಮ್ಮ ದೈತ್ಯ ಶ್ರಮವನ್ನು ಬಳಸಿ ಕಾರ್ನಾಡ್, ಕಾರಂತ ಸಿನಿಮಾ ಮಾಡಿದ್ದರು. ಈ ವ್ಯರ್ಥ ಪ್ರಯತ್ನಕ್ಕಿಂತ ಬೇರೇನನ್ನಾದರೂ ಮಾಡಬಹುದಿತ್ತೆಂದು ಪ್ರಜ್ಞಾವಂತ ಕನ್ನಡದ ಮನಸ್ಸುಗಳಿಗೆ ಅನ್ನಿಸಿದ ನಂತರ ಈ ಚಿತ್ರ ತೆಗೆದವರಿಗೂ ಅನ್ನಿಸಿದ್ದೊಂದು ವಿಶೇಷ. ಕಾರ್ನಾಡ್ ಶಿವಮೊಗ್ಗದ ಅಶೋಕ್ ಪೈಯವರ ಆತ್ಮೀಯರಾಗಿದ್ದರು. ಆ ಕಾರಣಕ್ಕೆ ಅವರ ಒಂದೆರಡು ಸಿನಿಮಾಗಳಲ್ಲಿ ಮನೋವೈದ್ಯರಾಗಿ ಅಭಿನಯಿಸಿದ್ದರು. ಜೊತೆಗೆ ತಮ್ಮ ಸಹಜಾಭಿನಯದಿಂದ ಮನೋವೈದ್ಯ ಹೇಗಿರುತ್ತಾನೆಂದು ತೋರಿದ್ದರು. ಮನೋವೈದ್ಯರಾದ ಅಶೋಕ ಪೈ ಕೂಡ ಕಾರ್ನಾಡರ ಅಭಿನಯ ಮೆಚ್ಚಿಕೊಂಡಿದ್ದರೂ ಅವರಂತಾಗಲು ಸಾಧ್ಯವಾಗಲಿಲ್ಲ. ಪೈಯವರು ತಮ್ಮ ಆಸ್ಪತ್ರೆಗೆ ಬಂದ ರೋಗಿಗಳನ್ನು ನೋಡಿ ಕತೆ ಕಾದಂಬರಿ ಬರೆಯಲು ಕನ್ನಡ ನಾಡಿನ ಖ್ಯಾತ ಕತೆಗಾರರನ್ನು ಕರೆಸಿ ತೋರಿಸಿ ಕತೆ ಬರೆಸಿದರು.

ಇದನ್ನು ವೈದ್ಯನೊಬ್ಬನ ಅಮಾನುಷ ನಡವಳಿಕೆ ಎಂದು ಲಂಕೇಶ್ ಪತ್ರಿಕೆ ಬರೆಯಿತು. ವ್ಯಗ್ರಗೊಂಡ ಅಶೋಕ ಪೈ ಪತ್ರಿಕೆಯ ಮೇಲೆ ಕೇಸು ಮಾಡಲು ಹೊರಟರು. ಆಗ ಗಿರೀಶ್ ಕಾರ್ನಾಡರು ಲಂಕೇಶ್ ಮೇಲೆ ಕೇಸಾಕುವುದು ಬೇಡವೆಂದು ತಡೆದಿದ್ದರು. ಬಹುಶಃ ಕಾರ್ನಾಡರಿಗೆ ಪೈ ಕೆಲಸ ಇಷ್ಟವಾಗದೆ ಇದ್ದಿರಬಹುದು. ಆದರೆ ಲಂಕೇಶ್ ಮತ್ತು ಕಾರ್ನಾಡರ ನಡುವೆ ಸ್ಪರ್ಧೆ ಇದ್ದದ್ದು, ಅವ್ಯಕ್ತ ಹೊಟ್ಟೆಕಿಚ್ಚುಗಳು ತಾಂಡವವಾಡಿದ್ದು ಎಪ್ಪತ್ತರ ದಶಕದ ದಾಖಲೆಗಳಾಗಿವೆ. ಲಂಕೇಶ್‍ರ ಸಂಕ್ರಾಂತಿ, ಕಾರ್ನಾಡರ ತಲೆದಂಡ. ಹಾಗೆಯೇ ತುಘಲಕ್ ಮತ್ತು ಗುಣಮುಖ ಕನ್ನಡದ ದೈತ್ಯ ಪ್ರತಿಭೆಗಳ ಸ್ಪರ್ಧೆಯಂತೆ ಕಾಣುತ್ತವೆ.

ಗಿರೀಶ್ ಕಾರ್ನಾಡ್ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಅಪರೂಪದ ಪ್ರತಿಭೆ. ಅವರೇ ಹೇಳುವಂತೆ ನಾಟಕ ರಚನೆಗೆ ಕುಳಿತು ಮೊದಲು ಬರೆದದ್ದೇ ಕನ್ನಡದಲ್ಲಿ. ಪುರಾಣ, ಜಾನಪದ ಮತ್ತು ಇತಿಹಾಸದಲ್ಲೆಲ್ಲಾ ಅವರು ಹುಡುಕಿ ಕೊಟ್ಟಿದ್ದು ವರ್ತಮಾನ ಮತ್ತು ಭವಿಷ್ಯಕ್ಕೂ ಸಲ್ಲುವ ತಲ್ಲಣಗಳನ್ನು. ನಟ, ನಿರ್ದೇಶಕ ಮತ್ತು ನಾಟಕ ರಚನಕಾರರಾದ ಕಾರ್ನಾಡ್ ಸಾಹಿತಿಯಾದವನು ಹೇಗಿರಬೇಕೆಂಬುದನ್ನು ತೋರಿ ಹೋಗಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಕುವೆಂಪುರವರ ಕಾನೂನು ಹೆಗ್ಗಡತಿ ಚಿತ್ರವನ್ನು ಚಿತ್ರೀಕರಿಸುತ್ತಿದ್ದಾಗಲೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾಯ್ತು. ಆ ಸಂಗತಿಯನ್ನ ಅವರು ಅತ್ಯಂತ ಸಹಜವಾಗಿ ತೆಗೆದುಕೊಂಡರು. ಈ ಹಿಂದೆ ಪಡೆದವರು ನಾಡಿನ ಮೂಲೆಮೂಲೆಗೆ ಹೋಗಿ ಸನ್ಮಾನ ಪಡೆದಿದ್ದರು. ಅವರೆಲ್ಲರಿಗೆ ಹೋಲಿಸಿದಾಗ ಕಾರ್ನಾಡ್ ವಿಭಿನ್ನವಾಗಿ ವರ್ತಿಸಿ ಎಲ್ಲು ಸಮಾರಂಭಗಳಿಗೆ ಹೋಗಿ ಸನ್ಮಾನ ಮಾಡಿಸಿಕೊಳ್ಳಲಿಲ್ಲ, ಅವರು ಸನ್ಮಾನಗಳ ಮೂಲಕ ಖ್ಯಾತಿಗಳಿಸುವವರಾಗಿರಲಿಲ್ಲ.

ಇನ್ನು ತರುಣರಾಗಿದ್ದ ಅವಧಿಯಲ್ಲೇ ಸಂಸ್ಕಾರದ ಪ್ರಾಣೇಶಾಚಾರಿಯ ಪಾತ್ರ ಮಾಡಿದ ಕಾರಣಕ್ಕೆ ಅವರಿಗೆ ಅಂತವೇ ಪಾತ್ರಗಳು ದೊರಕುತ್ತವೆ. ಸಹಜಾಭಿನಯದ ನಟರಾಗಿದ್ದ ಕಾರ್ನಾಡರು ಕಳಪೆಯಾಗಿ ಅಭಿನಯಿಸಿದ್ದೇ ಇಲ್ಲ. ಕನ್ನಡದ ಮಟ್ಟಿಗೆ ಅವರು ವಂಶವೃಕ್ಷ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ ಮತ್ತು ಆನಂದ ಭೈರವಿಯಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.

ದೇಶದಲ್ಲಿ ಮತೀಯವಾದದ ಆತಂಕ ಶುರುವಾಗಿ ಅಭಿವ್ಯಕ್ತಿ ಮನಸ್ಸುಗಳು ಆತಂಕಗೊಂಡಾಗ ಸಹಜವಾಗಿ ಸಾಹಿತಿಯಾದವನ ಕರ್ತವ್ಯ ಏನು ಎಂಬುದನ್ನು ಕಾರ್ನಾಡರು ತೋರಿಸಿಕೊಟ್ಟರು. ಚಿಕ್ಕಮಗಳೂರು ಬಾಬಾ ಬುಡನ್‍ಗಿರಿ ವಿಷಯದಲ್ಲಿ ಅಲ್ಲಿಗೋಗಿ ಪ್ರತಿಭಟಸಿ ಅರೆಸ್ಟಾಗಿ ಜೈಲು ಸೇರುವ ತೀರ್ಮಾನದಿಂದ ಗೌರಿ ಲಂಕೇಶ್ ಜೊತೆ ಹೊರಟ ಕಾರ್ನಾಡರು ಚಿಕ್ಕಮಗಳೂರು ತಲುಪಲಾಗಲಿಲ್ಲ. ಅವರನ್ನ ಮಾರ್ಗ ಮಧ್ಯದಲ್ಲೇ ತಡೆದು ವಶಕ್ಕೆ ಪಡೆದ ಹಾಸನದ ಎಸ್ಪಿ ರಾಣೆಯವರು “ನಿಮ್ಮ ಮೇಲೆ ಚಿಕ್ಕಮಗಳೂರಲ್ಲಿ ದಾಳಿ ಮಾಡುವ ಸಂಚು ರೂಪಿತಗೊಂಡಿದೆ. ಇದರಿಂದ ದೇಶವ್ಯಾಪಿ ಸುದ್ದಿ ಮಾಡುವ, ಆ ಮುಖಾಂತರ ರಾಷ್ಟ್ರವ್ಯಾಪಿ ಬಾಬಾ ಬುಡನ್‍ಗಿರಿ ವಿಷಯವನ್ನ ಹರಡುವ ಹುನ್ನಾರವಿರುವುದರಿಂದ ತಾವು ದಯಮಾಡಿ ನಮ್ಮ ಮಾತು ಕೇಳಿ ವಾಪಸ್ಸು ಹೋಗಬೇಕೆಂದು” ವಿನಂತಿಸಿಕೊಂಡರು. ಕಾರ್ನಾಡರು ಅನಿವಾರ್ಯವಾಗಿ ಅದಕ್ಕೊಪ್ಪಿ ವಾಪಸು ಹೋದರು. ಆದರೆ ಕೆಲವರಿಗೆ ಇದು ಪಲಾಯನವಾದದಂತೆ ಕಂಡಿತು. ಕಾರ್ನಾಡ್ ಕೂಡ ವಿವರಿಸಲು ಹೋಗಲಿಲ್ಲ.

ಅವರೊಬ್ಬ ಈ ನಾಡಿನ ನೆಮ್ಮದಿಗಾಗಿ ತನ್ನ ಖ್ಯಾತಿಯನ್ನ ಪಣಕ್ಕೊಡ್ಡಿ ಹೋರಾಡುವ ಧೀಮಂತ ನಾಯಕರಾಗಿದ್ದರು. ಆದ್ದರಿಂದಲೇ ತಮ್ಮ ಮತ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಾವು ಯಾರಿಗೆ ಓಟು ಮಾಡಬೇಕೆಂಬ ಬಗ್ಗೆ ಪ್ರಚಾರಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದ ನಾಟಕಕಾರ, ಸಿನಿಮಾ ನಟ ಮತ್ತು ನಿರ್ದೇಶಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಇಂತಹ ಯಾವುದೇ ಸ್ಥಾನಮಾನದ ಹಂಗಿಲ್ಲದೆ ಭಾರತದ ಸಾಮಾನ್ಯ ಪ್ರಜೆಯಂತೆ ನಡೆದುಕೊಂಡ ಕಾರ್ನಾಡ್, ಸಾವಿನಲ್ಲೂ ತಮ್ಮ ವಿಶೇಷತೆ ಮೆರೆದು ಹೋಗಿದ್ದಾರೆ. ದಿನವಿಡೀ ಕಾರ್ನಾಡರ ಸಂಸ್ಕಾರ ತೋರಿಸಲು ರೆಡಿಯಾಗಿದ್ದ ಟಿವಿಗಳಿಗೆ ನಿರಾಶೆಯಾಗಿದೆ. ಆದರೂ ಕೆಲವು ಕಿಡಿಗೇಡಿ ಮೂರ್ಖರು, ಕಾರ್ನಾಡರ ನ್ಯಾಯೋಚಿತವಾದ ಹೇಳಿಕೆಗಳನ್ನೇ ತಿರುಚಿ ಕಿರುಚಿದವು. ಈ ಪೈಕಿ ಭಾರದ್ವಾಜ್ ಎಂಬ ಶ್ಯಾನುಭೋಗರ ಹುಡುಗ, ತನ್ನ ಪರೋಹಿತ ಭಾಷೆಯಲ್ಲೇ ಕಾರ್ನಾಡರನ್ನು ಹೀಗಳೆಯಲು ಯತ್ನಿಸಿದ.

ಕಾರ್ನಾಡರು ನೇರ ನಡೆನುಡಿಯ ವ್ಯಕ್ತಿ. ತಮ್ಮ ಅಧ್ಯಯನ ಮತ್ತು ಆಲೋಚನೆಯಿಂದ ಕಂಡಿದ್ದನ್ನು ಕಂಡಂತೆ ಹೇಳುತ್ತಿದ್ದರು. ಇದನ್ನು ಅರಗಿಸಿಕೊಳ್ಳಲಾರದ ಮಂದ ಮತಿಗಳು ಸರಿಯುತ್ತರ ಕೊಡುವುದು ಬಿಟ್ಟು ತೇಜೋವಧೆ ಮಾಡುತ್ತಿದ್ದವು. ಇದರಿಂದ ಕಾರ್ನಾಡರಿಗೆ ನೋವಾಗುತ್ತದೆಂದು ಅವು ಭಾವಿಸಿದ್ದವು. ಮೊನ್ನೆ ಅವರ ಸಾವಿನ ಸಂದರ್ಭದಲ್ಲೂ ಕೂಡ ಅವರ ಸಾಧನೆಯ ಶಿಖರ ಹತ್ತಿ ನೋಡಲಾಗದವರು ಅವರು ಬದುಕಿದ್ದಾಗ ನಿರ್ಭೀತಿಯಿಂದ ಹೇಳುವ ಹೇಳಿಕೆಗಳನ್ನ ಹೆಕ್ಕಿ ಗುಂಜಾಡಿದವು. ಕಾವೇರಿ ವಿಷಯದಲ್ಲೂ ಕೂಡ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆಂಬ ಮಾತಿಗೆ ಕೆರಳಿದ ಹಲವರು ಕಾರ್ನಾಡರನ್ನು ಹೀಯಾಳಿಸಿದರು. ಈ ರೀತಿ ಹೇಳಲು ನೀವ್ಯಾರು ಎಂದು ಕೇಳಿದರು. ನಮಗೆ ಬೇಕಾದ ತೀರ್ಪು ಕೊಡುವುದು ಕೋರ್ಟಿನ ಕೆಲಸ ಎಂಬ ಮನೋಭಾವ ಫ್ಯಾಸಿಸ್ಟರದು.

ಕಲೆ, ಸಾಹಿತ್ಯ, ಸಂಗೀತ ತಲೆಯೊಳಗಿಂದ ಖಾಲಿಯಾಗುತ್ತಿದ್ದಂತೆ, ಆ ಜಾಗವನ್ನು ಮೌಢ್ಯತೆ ಆವರಿಸುತ್ತಾ ಹೋಗುತ್ತದೆ. ಅಂತಹ ಮೆದುಳಿಗೆ ಕಾರ್ನಾಡರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಮೆರೆಸಿದ್ದು, ಅವರ ರಂಗ ಕೃತಿಗಳು, ನಟನೆ ಮತ್ತು ನಿರ್ದೇಶನ, ಜ್ಞಾನಪೀಠ, ಪದ್ಮವಿಭೂಷಣ ಇದ್ಯಾವುದೂ ಕಾಣುವುದಿಲ್ಲ. ಟಿಪ್ಪೂವನ್ನು ಮೆಚ್ಚಿದ್ದು, ಬಾಬಾಬುಡನ್‍ಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದೇ ಅಪರಾಧವಾಗಿ ಕಾಣುತ್ತದೆ. ಇದು ಮಂದಮತಿಗಳ ಭಾಗಕ್ಕೆ ಸರಿ. ಆದರೆ ದೃಶ್ಯ ಮಾಧ್ಯಮವೂ ಕೂಡ ಯಕ್ಕುಟ್ಟಿ ಹೋಗಿರುವುದೊಂದು ದುರಂತ!

ಕಾರ್ನಾಡರು ಗೌರಿಯ ನೆನಪಿನ ಸಭೆಗೆ ಬಂದಿದ್ದರು. ಆದೂ ಆಮ್ಲಜನಕ ಪೂರೈಸುವ ಯಂತ್ರವನ್ನು ಕೊರಳಿಗೆ ಹಾಕಿಕೊಂಡಿದ್ದಲ್ಲದೆ, “ನಾನು ಅರ್ಬನ್ ನಕ್ಸಲ್” ಎಂಬ ಬೋರ್ಡನ್ನು ಹಾಕಿಕೊಂಡು ಬಂದಿದ್ದರು. ಎಂದಿನಂತೆ ಮಾಧ್ಯಮದ ಕೆಲ ಕಿಡಿಗೇಡಿಗಳು, ಗೌರಿ ಸಭೆ, ಕನ್ಹಯ್ಯ, ಜಿಗ್ನೇಶ್ ಏನು ಹೇಳಿದರೆಂಬುದನ್ನು ಬಿಟ್ಟು ಕಾರ್ನಾಡರ ಕಡೆ ತಮ್ಮ ಗಮನ ಹರಿಸಿ, ಇಡೀ ಸಭೆಯ ದಿಕ್ಕು ತಪ್ಪಿಸಲು ಯತ್ನಿಸಿದವು. ಕಾರ್ನಾಡರು ಸರಿಯುತ್ತರ ಕೊಟ್ಟರು. ಇದೆಲ್ಲಕ್ಕಿಂತ ಮುಖ್ಯವಾಗಿ ಅಂತಹ ಸ್ಥಿತಿಯಲ್ಲು ಕಾರ್ನಾಡರು ಬಂದುದಲ್ಲದೆ, ತಮ್ಮ ಅನಾರೋಗ್ಯದ ಸಲಕರಣೆಗಳನ್ನ ತೂಗು ಹಾಕಿಕೊಂಡೇ ಹಾಜರಾಗಿದ್ದು ಅವರ ಬದ್ಧತೆಯನ್ನು ತೋರುತ್ತಿತ್ತು. ಕಾರ್ನಾಡರು ಮುಂಬೈನಲ್ಲಿ ನೆಲೆಸಬಹುದಿತ್ತು. ಧಾರವಾಡದಲ್ಲಿ ನೆಲೆಸಬಹುದಿತ್ತು. ಆದರೆ ಬೆಂಗಳೂರಿಗೆ ಬಂದು ನೆಲೆಸಿದರು. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಅದಾಗತಾನೆ “ಆಡಾಡತ ಆಯುಷ್ಯ” ಓದಿದ್ದ ನಾನು, ಹತ್ತಿರ ಹೋಗಿ ಅದರ ಮುಂದಿನ ಭಾಗ ಬರುತ್ತ ಸಾರ್ ಎಂದೆ. ಇಲ್ಲ ಎಂದರು, ಪ್ರಶ್ನೆ ಕೇಳಿದವನ ಕಡೆ ತಿರುಗಿಯೂ ನೋಡದೆ, ಅದೇ ಕಾರ್ನಾಡರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದಗಳು ಸಾರ್.
    ಕಾರ್ನಾಡರ ಬಗ್ಗೆ ಒಂದೊಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ.

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...