Homeಅಂಕಣಗಳುಆದರ್ಶವಾದಿಗಳು ಸೋಲುತ್ತಿರುವುದೇಕೆ?

ಆದರ್ಶವಾದಿಗಳು ಸೋಲುತ್ತಿರುವುದೇಕೆ?

- Advertisement -
- Advertisement -

ಇದು ಈಚೆಗೆ ಜಯನಗರದ ಚುನಾವಣೆಯಲ್ಲಿ ಸೋಲುಂಡ ಲಂಚಮುಕ್ತ ಕರ್ನಾಟಕ ವೇದಿಕೆಯ ಮುಖ್ಯಸ್ಥರಾದ ರವಿಕೃಷ್ಣಾರೆಡ್ಡಿ ಸಾಮಾಜಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರ:
“ಒಬ್ಬ ಯೋಗ್ಯ ಅರ್ಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿರುವ ಮತ್ತು ಅಂತಹ ಕೆಲಸ ಮಾಡಿರುವ ಇತಿಹಾಸ ಇರುವ ಯಾವುದೇ ವ್ಯಕ್ತಿ ಚುನಾವಣೆÀಗೆ ನಿಂತರೆ, ಯಾವುದೇ ಆಕ್ರಮ ಮಾಡದೆ ಜನರ ತನು ಮತ್ತು ಧನದ ಸಹಾಯದಿಂದಲೇ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಂಡರೆ, ಅಂತಹ ವ್ಯಕ್ತಿಯನ್ನು ಜಾತಿ ಮತ್ತು ಪಕ್ಷಾತೀತವಾಗಿ ಜನತೆ ಗೆಲ್ಲಿಸುತ್ತಾರೆ ಎನ್ನುವುದನ್ನು ತೋರಿಸಬೇಕು ಎನ್ನುವ ಕನಸು ಮತ್ತು ಆದರ್ಶವನ್ನು ಸರಿಯಾಗಿ ಹತ್ತು ವರ್ಷಗಳಿಂದ ನಾನು ಪೋಷಿಸಿಕೊಂಡು ಬಂದಿದ್ದೆ. ಅದರ ಭಾಗವಾಗಿಯೇ ನನ್ನ ಇಲ್ಲಿಯತನಕದ ಚುನಾವಣ ಹೋರಾಟಗಳು ಇದ್ದವು. ಈಗ ಆ ಕನಸಿಗೆ ಮತ್ತು ಅಂತಹ ಪ್ರಯತ್ನಗಳಿಗೆ ತಿಲಾಂಜಲಿ ಇಡುತ್ತಿದ್ದೇನೆ (ತಾತ್ಕಾಲಿಕವಾಗಿ). ಆದರೆ ಇಂತಹ ಪ್ರಯತ್ನ ಯಾರಾದರೂ ಮಾಡಿದರೆ ಅವರಿಗೆ ನನ್ನ ನೈತಿಕ ಬೆಂಬಲವಿರುತ್ತದೆ ಮತ್ತು ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.’’
ಇದಕ್ಕೂ ಮುನ್ನ ಇದರ ಪೂರ್ವಪೀಠಿಕೆಯಂತಿರುವ ಭಾಷಣದ ವೀಡಿಯೊವನ್ನೂ ರವಿ ಬಿಡುಗಡೆ ಮಾಡಿದ್ದರು. ಅದರಲ್ಲಿ ಅಮೆರಿಕದಿಂದ ಸಾಫ್ಟ್‍ವೇರ್ ಉದ್ಯೋಗವನ್ನು ಬಿಟ್ಟು ಭಾರತದ ರಾಜಕಾರಣದಲ್ಲಿ ಪ್ರಯೋಗ ಮಾಡಲು ಬಂದ ತಮ್ಮ ಹಿನ್ನೆಲೆಯನ್ನು ಹೇಳಿ, ಅನಾಮಿಕನಾಗಿ ಸ್ಪರ್ಧಿಸಿದಾಗ ಬಂದುದಕ್ಕಿಂತಲೂ ಜಯನಗರದಲ್ಲಿ ಕಡಿಮೆ ಮತ ಬಂದಿರುವುದಕ್ಕೆ ಬಿಟಿಎಂ ಬಡಾವಣೆಯ ಜನರ ಕ್ಷಮೆ ಕೇಳಿದ್ದರು; ತಮಗೆ ಸೋಲಿಗಿಂತಲೂ ಇಷ್ಟೊಂದು ಅಲ್ಪಪ್ರಮಾಣದ ಮತ ಬಿದ್ದಿರುವುದು ಹೆಚ್ಚಿನ ಆಘಾತ ತಂದಿದೆಯೆಂದು ನುಡಿದಿದ್ದರು; ಜನರಿಗೆ ಪ್ರಾಮಾಣಿಕ ಅಭ್ಯರ್ಥಿಗಳು ಬೇಕಾಗಿಲ್ಲವೆಂದೂ ಅವರು ಭ್ರಷ್ಟಾಚಾರ ವಿರೋಧಿಗಳಿಂದ ತಮಗೆ ತೊಂದರೆಯಾಗಬಹುದೆಂದು ಹೆದರಿದ್ದಾರೆಂದೂ ವ್ಯಾಖ್ಯಾನಿಸಿದ್ದರು. ಚುನಾವಣ ಹೋರಾಟದಲ್ಲಿ ತಮ್ಮ ಜತೆನಿಂತ ಜೀವನಸಂಗಾತಿಗೂ ಗೆಳೆಯರಿಗೂ ಕೃತಜ್ಞತೆ ಹೇಳಿ, ತನುಮನಧನ ಯಾವುದರಲ್ಲೂ ನೆರವಾಗದೆ ಕೇವಲ ಶುಭ ಹಾರೈಸಿದವರನ್ನು ಇಂತಹ ಆತ್ಮವಂಚನೆ ಮಾಡಬೇಡಿ ಎಂದು ಟೀಕಿಸಿದ್ದರು. ಅವರ ಮಾತಲ್ಲಿ ತಮ್ಮನ್ನು ಕಷ್ಟಕಾಲದಲ್ಲಿ ಬೆಂಬಲಿಸದ ಪರ್ಯಾಯ ರಾಜಕಾರಣದ ಬಗ್ಗೆ ಮಾತಾಡುವ ಪ್ರಗತಿಪರ ಚಿಂತಕರ ಮತ್ತು ಚಳುವಳಿಗಳ ಮೇಲೆ ಸಿಟ್ಟಿದ್ದರೆ ಅದು ಸಹಜ.
ಶಕ್ತಿರಾಜಕಾರಣಕ್ಕೆ ವಿದಾಯ ಹೇಳುತ್ತಿರುವಂತಿರುವ ರವಿಯವರ ತ್ಯಾಗಪತ್ರದಲ್ಲಿ ಸೋಲಿನ ಹತಾಶೆಯಿಂದ ಬಂದ ನೋವಿದೆ. ಸಾಫ್ಟ್‍ವೇರ್ ಇಂಜಿನಿಯರಿಕೆಗೆ ಹೊಂದಾಣಿಕೆಯಾಗದಂತೆ ತೋರುವ ಅವರ ಖಾದಿಧಿರಿಸು ಗಾಂಧಿಟೋಪಿಗಳು, ಪರೋಕ್ಷವಾಗಿ ಗಾಂಧಿಮಾರ್ಗದ ಸೋಲಿನಂತೆಯೂ ಕಂಡಿದ್ದರೆ ಸೋಜಿಗವಿಲ್ಲ. ಅದರೆ ಅವರ ನೋವು ಅವರದು ಮಾತ್ರವಲ್ಲ. ವಾಸ್ತವತೆಯ ಗೋಡೆಗೆ ಢಿಕ್ಕಿಹೊಡೆದು ಜರ್ಜರಿತವಾಗಿರುವ, ಪರ್ಯಾಯ ರಾಜಕಾರಣ ರೂಪಿಸುವಲ್ಲಿ ವಿಫಲವಾಗಿರುವ ನÀಮ್ಮ ಕಾಲದ ಅನೇಕರದ್ದೂ ಹೌದು.
ಈ ಸಲದ ಚುನಾವಣೆಯಲ್ಲಿ ಸೋತ ಆದರ್ಶವಾದಿ ಅಭ್ಯರ್ಥಿಗಳಲ್ಲಿ ರವಿ ಒಬ್ಬಂಟಿಯಲ್ಲ. ಕಮ್ಯುನಿಸ್ಟ್ ಪಕ್ಷಗಳ ಶ್ರೀರಾಮರೆಡ್ಡಿ, ಮುನೀರ್ ಕಾಟಿಪಾಳ್ಳ, ಮಾನಸಯ್ಯ, ಸ್ವರಾಜ್ ಇಂಡಿಯಾದ ದರ್ಶನ್ ಪುಟ್ಟಣ್ಣಯ್ಯ-ಹೀಗೆ ಹಲವರಿದ್ದಾರೆ. ಬಲವಾದ ಸ್ಪರ್ಧೆ ನೀಡಿ ಎರಡನೇ ಸ್ಥಾನಕ್ಕೆ ಬಂದು ಸೋತ ಶ್ರೀರಾಮರೆಡ್ಡಿ ಹಾಗೂ ದರ್ಶನ್ ಬಿಟ್ಟರೆ, ಹೆಚ್ಚಿನವರು ಠೇವಣಿ ಕಳೆದುಕೊಂಡವರು. ನಮ್ಮ ಮತದಾರರು ಶ್ರೇಷ್ಠ ಲೇಖಕರಾದ ಶಿವರಾಮ ಕಾರಂತ ಗೋಪಾಲಕೃಷ್ಣ ಅಡಿಗ, ಚಳುವಳಿಗಾರ ಎಂ.ಡಿ. ನಂಜುಂಡಸ್ವಾಮಿಯವರನ್ನು, ಈಶಾನ್ಯಭಾರತದಲ್ಲಿ ಸೈನಿಕ ಅತಿರೇಕಗಳ ವಿರುದ್ಧ ಉಪವಾಸವಿದ್ದು ಹೋರಾಡಿದ ಇರೋಮ್ ಶರ್ಮಿಳಾ ಅವರನ್ನು ಸೋಲಿಸಿರುವರು. ರಾಜ್ಯಸಭಾ ಚುನಾವಣೆಯಲ್ಲಿ ಅನಂತಮೂರ್ತಿಯವರೂ ಸೋತವರು. ರವಿಯವರದು ಇವರೆಲ್ಲರ ಸೋಲಿಗಿಂತ ಭಿನ್ನ. ಇವರು ಕಾರಂತರಂತೆ ಚುನಾವಣೆಯನ್ನು ಸಾಂಕೇತಿಕವಾಗಿ ತೆಗೆದುಕೊಂಡಿರಲಿಲ್ಲ. ದರ್ಶನ್ ಅವರಂತೆ ಕಣಕ್ಕೆ ಧುತ್ತನೆ ಇಳಿದವರಲ್ಲ. ವಿದೇಶದಲ್ಲಿ ಸುರಕ್ಷಿತ ಜೀವನ ನಡೆಸುತ್ತಿದ್ದ ಅವರು ಭಾರತಕ್ಕೆ ಮರಳಿ, ರಾಜಕೀಯ ಸುಧಾರಣೆಗಾಗಿ ಜೀವನವನ್ನೆ ತೊಡಗಿಸಿ, ಬೀದಿಯಲ್ಲಿ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡವರು. ಇಂತಹವರ ಸೋಲು ಆದರ್ಶವಾದಿ ಅಥವಾ ಚಳುವಳಿ ರಾಜಕಾರಣದ ಹಿನ್ನಡೆಯಂತೆ ಕಾಣುತ್ತದೆ. ಅದರಲ್ಲೂ ಕಾಂಗ್ರೆಸ್- ಬಿಜೆಪಿ-ಜೆಡಿಎಸ್ ಹೊರತುಪಡಿಸಿದ ಪರ್ಯಾಯ ರಾಜಕಾರಣವನ್ನು ಕಲ್ಪಿಸಿಕೊಂಡಿದ್ದ ಎಲ್ಲರಿಗೂ ಇದು ಪಾಠದಂತಿದೆ. ಪ್ರಶ್ನೆಯೆಂದರೆ, ಆದರ್ಶವಾದಿಗಳೇಕೆ ಸೋತರು?
ಹಣ-ಜಾತಿ-ಸಾವು-ಕೋಮುವಾದಗಳನ್ನು ಅಯುಧಗಳಾಗಿ ಬಳಸಿ ಪಳಗಿರುವ ಪ್ರಧಾನಧಾರೆಯ ರಾಜಕೀಯ ಪಕ್ಷಗಳ ಎದುರು, ತಕ್ಕ ರಾಜಕೀಯ ತಂತ್ರಗಾರಿಕೆಯಿಲ್ಲದೆ, ಕೇವಲ ಭಾವುಕ ಆದರ್ಶಗಳು ಸಾಲುವುದಿಲ್ಲವೇ? ಹಿಂದೆ ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡರು ಜನರೇ ಓಟಿನ ಜತೆ ಹಣಕೊಟ್ಟು ಗೆಲ್ಲಿಸುತ್ತಿದ್ದ ಮಾದರಿಯು, ರಾಜಕಾರಣವು ಬಂಡವಾಳಹೂಡಿ ಲಾಭ ಮಾಡುವ ಕ್ಷೇತ್ರವಾಗಿ ಸನ್ನಿವೇಶದಲ್ಲಿ ಅಪ್ರಸ್ತುತಗೊಂಡಿದೆಯೇ? ರಾಜಕೀಯ ಸಮಾನಮನಸ್ಕರು ಸಮಾನ ಎದುರಾಳಿಯ ವಿರುದ್ಧ ಚುನಾವಣ ಪೂರ್ವ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದೆ ಹೋಗಿದ್ದರಿಂದ ಹೀಗಾಯಿತೆ? ಚುನಾವಣೆ ಗೆಲ್ಲಬಲ್ಲ ಕೇಡರ್‍ಆಧಾರಿತ ಚಳುವಳಿಯನ್ನು ಕಟ್ಟದೆ ಏಕಾಂಗಿ ಆದರ್ಶವಾದಿಗಳು ಗೆಲ್ಲುವುದು ಕಷ್ಟವೇ? (ಬಿಎಸ್‍ಪಿಯ ಮಹೇಶ್ ಗೆಲುವಿನ ಹಿಂದೆ ಮೇಲ್ಕಾಣಿಸಿದ ಎರಡೂ ಕಾರಣಗಳಿವೆ.) ಚಳುವಳಿ ರಾಜಕಾರಣದ ಯುಗ ಮುಗಿದುಹೋಯಿತೆ? ಪರ್ಯಾಯ ರಾಜಕಾರಣ ಬಯಸುವ ಪ್ರಗತಿಪರ ಚಿಂತಕರು ಚಳುವಳಿಗಾರರು ಒಗ್ಗಟ್ಟಾಗಿ ನಿಂತು ಆದರ್ಶವಾದಿಗಳನ್ನು ಗೆಲ್ಲಿಸದೆ ಹೋದರೆÉೀ? ಆದರ್ಶವಾದಿಗಳಿಗೆ ಮತಹಾಕಿದರೂ ಗೆಲ್ಲುವುದಿಲ್ಲ ಎಂಬ ಜನರ ಕಾಮನ್‍ಸೆನ್ಸ್ ಇವರನ್ನು ನಿರ್ಲಕ್ಷ್ಯ ಮಾಡಿತೇ? ಫ್ಯಾಸಿಸಮ್ಮಾಗಿ ರೂಪಾಂತರಗೊಂಡು ಬೆದರಿಕೆ ಒಡ್ಡುತ್ತಿರುವ ಬಿಜೆಪಿಯ ಗುಮ್ಮ ಕಾಂಗ್ರೆಸನ್ನು ಗೆಲ್ಲಿಸುವ ಬಿಜೆಪಿಯನ್ನು ಸೋಲಿಸುವ ಎರಡು ಆಯ್ಕೆಗೆ ಜನರನ್ನು ನೂಕಿತೇ? ಜನರನ್ನು ಬದಲಾವಣೆಗೆ ಸಜ್ಜುಗೊಳಿಸದೆ ನಿಮ್ಮ ಉದ್ಧಾರಕ್ಕೆ ಬಂದಿರುವ ನನ್ನನ್ನು ಗೆಲ್ಲಿಸುವುದು ನಿಮ್ಮ ಕರ್ತವ್ಯ ಎಂಬ ಆದರ್ಶವಾದಿಗಳ ಮನೋಭಾವವು ಜನರಿಗೆ ನೈತಿಕ ಅಹಂಕಾರದ ಹಾಗೆ ಕಂಡಿರಬಹುದೆÉೀ? ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆಯಲ್ಲ, ಅಥವಾ ಅದರ ನಿವಾರಣೆ ಸಾಧ್ಯವಿಲ್ಲ, ಅದರೊಳಗೆ ತಮ್ಮ ಸಣ್ಣಪುಟ್ಟ ಕೆಲಸಗಳಾದರೆ ಸಾಕು ಎಂಬ ಅನೈತಿಕ-ವಾಸ್ತವಿಕತೆಗೆ ನಮ್ಮ ರಾಜಕಾರಣ ಜನರನ್ನು ತಲುಪಿಸಿಬಿಟ್ಟಿದೆಯೇ? ತಾಳ್ಮೆಯಿಂದ ಉತ್ತರ ಹುಡುಕಬೇಕಿದೆ. ಯಾಕೆಂದರೆ ಚುನಾವಣ ಸೋಲು-ಗೆಲುವುಗಳಿಗೆ ಒಂದೇ ಕಾರಣವಿರುವುದಿಲ್ಲ.
ರವಿ ಮತ್ತು ಅವರಂಥವರು ಮಾಡಿದ ಯತ್ನ ಮತ್ತು ಪ್ರಯೋಗಗಳು ಚಾರಿತ್ರಿಕವಾಗಿ ಮಹತ್ವದವು. ಅಮೂಲ್ಯವಾದವು. ನಮ್ಮ ಅಸಹಾಯಕತೆಯನ್ನೂ ಹೇಳುವಂತಹವು. ಹೀಗಾಗಿ ಅವರ ಸೋಲಿಗೆ ಆಯಾ ಕ್ಷೇತ್ರದ ಮತದಾರರು ಮಾತ್ರವಲ್ಲ, ನಾವೂ ಕಾರಣ ಎಂಬ ಅಪರಾಧಿಭಾವ ಅನೇಕರನ್ನು ಕಾಡುತ್ತಿದೆ. ರವಿ, ಮುನೀರ್, ಶ್ರೀರಾಮರೆಡ್ಡಿ, ಮಾನಸಯ್ಯ ಸದನದಲ್ಲಿದ್ದರೆ ಅದರ ಘನತೆ ಬೇರೆಯೇ ಇತ್ತು. ಆದರೆ ರವಿಕೃಷ್ಣಾರೆಡ್ಡಿ ಅಥವಾ ಮುನೀರ್ ಗೆದ್ದಿದ್ದರೆ ಅಸೆಂಬ್ಲಿಯಲ್ಲಿ ಎಲ್ಲ ಬಗೆಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತ ಮಾಡಬಹುದಾದ ರಗಳೆಗೆ ಅವರ ಸೋಲನ್ನು ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಅಧಿಕಾರಸ್ಥ ಪಕ್ಷಗಳೂ ಬಯಸಿದ್ದವು. ಆದರ್ಶವಾದಿಗಳ ಪರವಾಗಿದ್ದವರಿಗೂ ಈ ಹಣಾಹಣಿಯಲ್ಲಿ ಅವರು ಗೆಲ್ಲುವುದು ಕಠಿಣವೆಂದೂ ಗೊತ್ತಿತ್ತು. ಮಾತ್ರವಲ್ಲ, ಇವರು ಸೆಕ್ಯುಲರ್ ಮತಗಳನ್ನು ಗಳಿಸಿ ಪರೋಕ್ಷವಾಗಿ ಬಿಜೆಪಿಯನ್ನು ಗೆಲ್ಲಿಸಬಹುದು ಎಂಬ ಆತಂಕವೂ ಇತ್ತು. ಅನೇಕ ಕ್ಷೇತ್ರಗಳಲ್ಲಿ ಇದಾಗಿದೆ. ಹೀಗಾಗಿ ಇವರ ವಿರುದ್ಧ ಗೆದ್ದಿರುವುದು ಕಡಿಮೆ ಅಪಾಯಕಾರಿಯಾದ ಕಾಂಗ್ರೆಸ್ಸು ಎಂಬುದು ಸಮಾಧಾನದ ನಿಟ್ಟುಸಿರನ್ನೂ ಬಿಡುವಂತೆ ಮಾಡಿತು.
ರವಿಯವರ ಮಾತುಗಳಲ್ಲಿ ಸೋಲುಂಡವರಿಗೆ ಅನುಭವಕ್ಕೆ ಬರುವ ವಾಸ್ತವಿಕ ತಥ್ಯಗಳ ವಿಷಾದಕರ ಅರಿವೂ, ಅದರಿಂದ ಬಂದ ಪ್ರಬುದ್ಧತೆಯೂ ಇದೆ. ಎಂತಲೇ ಅವರು ನೆಲ ಹದವಾಗದೆ ನಾನು ಬೀಜವನ್ನು ಬಿತ್ತಿದ್ದನೇನೊ ಎಂದು ಹೇಳಿದರು. ಇದು ಮಾವೊ ಹೇಳಿದ ಮೊಟ್ಟೆಯ ರೂಪಕವನ್ನು ನೆನಪಿಸುತ್ತದೆ. ಮೊಟ್ಟೆಗೆ ಮರಿಯಾಗುವ ಸಮಸ್ತ ಶಕ್ತಿಯಿದ್ದರೂ ಕಾವುಕೊಡುವ ಕೋಳಿಯಿಲ್ಲದಿದ್ದರೆ ಅದರ ಕನಸು ನಿಜಗೊಳ್ಳದು. ಬದಲಾವಣೆ ಬಯಸುವವರಿಗೆ ಜನತೆಯೆಂಬ ಕೋಳಿ ಕಾವಿಗೆ ಬಾರದೆಯಿದ್ದಾಗ ಮೊಟ್ಟೆಯಿಡಬಾರದು ಎಂಬ ಅರಿವಿರಬೇಕು. ಪ್ರಶ್ನೆಯೆಂದರೆ, ಆದರ್ಶವಾದಿಗಳು ಗೆಲ್ಲಬಲ್ಲ ಚಾರಿತ್ರಿಕ ಅವಕಾಶ ಬರುವುದು ಯಾವಾಗ? ಅದು ಬರುವಂತಾಗಲು ಏನು ಮಾಡಬೇಕು? ಇವು ಸರಳ ಉತ್ತರವಿರುವ ಪ್ರಶ್ನೆಗಳಿಲ್ಲ. ಆದರೆ ಕಾಲಕೂಡಿದಾಗ ರಾಜಕಾರಣದಲ್ಲಿ ಊಹಾತೀತ ಪವಾಡ ಸಂಭವಿಸಬಲ್ಲವು. ಆಪ್ ದೆಹಲಿಯಲ್ಲಿ ಪ್ರಚಂಡ ಬಹುಮತ ಪಡೆಯುವುದನ್ನು-ಆಗತಾನೇ ದೇಶವನ್ನು ವಶಪಡಿಸಿಕೊಂಡು ಪ್ರಧಾನಿಯಾಗಿ ಮೆರೆಯುತ್ತಿದ್ದ ಮೋದಿಯ ಕಾಲ್ಬುಡದಲ್ಲೇ- ಯಾರುತಾನೇ ಊಹಿಸಿದ್ದರು? ಪ್ರತಿ ಕಾಲಘಟ್ಟದ ಚುನಾವಣೆಯಲ್ಲೂ ರಾಜಕೀಯ ಆದ್ಯತೆಗಳು ವಿಲಕ್ಷಣವಾಗಿ ಬದಲಾಗುತ್ತವೆ. ಇಂತಹ ನಾಟಕೀಯ ಬದಲಾವಣೆಯಲ್ಲಿ ಆಪ್ ಗೆದ್ದಿತು. ನಮ್ಮೂರಲ್ಲಿ, ಅಕ್ರಮ ಗಣಿಗಾರಿಕೆಯ ವಿರುದ್ಧ ಬರೆಹ ಚಳುವಳಿ ಮಾಡಿಕೊಂಡು ಬಂದಿದ್ದವರೆಲ್ಲ ಬಿಜೆಪಿಯಿಂದ ವಲಸೆ ಬಂದಿದ್ದ ಆನಂದಸಿಂಗರನ್ನು ಗೆಲ್ಲಿಸುವ; ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದು ಬಿಜೆಪಿ ಹುರಿಯಾಳಾಗಿದ್ದ ಗವಿಯಪ್ಪನವರನ್ನು ಸೋಲಿಸುವ ಒತ್ತಡಕ್ಕೆ ಪ್ರಗತಿಪರರು ಸಿಲುಕಿದ್ದರು. ಫ್ಯಾಸಿಸಂನ ಭಯ ಎಂತೆಂತಹ ವೈರುಧ್ಯಗಳಿಗೆ ನಮ್ಮನ್ನು ದೂಡಿದೆ?
ರವಿಯವರ ಧಾಟಿಯಲ್ಲೇ ವೈವಿಎಸ್ ದತ್ತ ಅವರೂ ಪತ್ರ ಬಿಡುಗಡೆ ಮಾಡಿದರು. ದತ್ತ ಜೆಡಿಎಸ್ ಅಭ್ಯರ್ಥಿಯಾಗಿದ್ದರೂ, ಬಹಳ ಜನ ಅವರ ಗೆಲುವನ್ನೂ ಹಾರೈಸಿದ್ದರು; ಅತ್ಯಲ್ಪ ಸಂಖ್ಯೆಯಲ್ಲಿರುವ ಸಮುದಾಯದಿಂದ ಬಂದ ಅವರನ್ನು ಗೆಲ್ಲಿಸಿದ ಮತದಾರರ ಜಾತ್ಯತೀತತೆ ಮತ್ತು ಪ್ರಬುದ್ಧತೆಯನ್ನು ಮೆಚ್ಚಿಕೊಂಡಿದ್ದರು. ದತ್ತ ತಮ್ಮ ಪತ್ರದಲ್ಲಿ ತಮ್ಮ ತಪ್ಪನ್ನು ಕ್ಷಮಿಸುವಂತೆ ಜನರನ್ನು ಕೋರಿರುವುದಲ್ಲದೆ, ಪ್ರಾಮಾಣಿಕರನ್ನು ಆರಿಸಿದ್ದಕ್ಕೆ ಜನರನ್ನು ಪತ್ರದಲ್ಲಿ ಅಭಿನಂದಿಸಿದರು. ಈ ಕ್ಷಮಾಪಣೆ ಮತ್ತು ಅಭಿನಂದನೆಯಲ್ಲಿ ಕಹಿವ್ಯಂಗ್ಯವಿದೆ. ತನ್ನಂತಹ ಸಾಮಾಜಿಕ ಬದ್ಧತೆಯುಳ್ಳ ಅಭ್ಯರ್ಥಿಯನ್ನು ಸೋಲಿಸಿದ್ದಕ್ಕಾಗಿ ಗಾಢವಿಷಾದವಿದ್ದರೂ ರವಿಯವರ ಪತ್ರದಲ್ಲಿ ವ್ಯಂಗ್ಯವಿಲ್ಲ. ಇಬ್ಬರ ಪತ್ರ- ಭಾಷಣಗಳ ಹಿಂದೆ ಎಷ್ಟೇ ಕೆಟ್ಟ ಅನುಭವವಾಗುತ್ತಿದ್ದರೂ `ಸದಾ ಒಳ್ಳೆಯದನ್ನು ಮಾಡಿ’ ಎಂಬ ಇತ್ಯಾತ್ಮಕ ಚಿಂತನೆಯಿದೆ. ಈ ಚಿಂತನೆಯುಳ್ಳ ಪುಸ್ತಕವನ್ನು ಸ್ವತಃ ರವಿ ಅನುವಾದಿಸಿ ಪ್ರಕಟಿಸಿರುವರು. ಅವರು ಆ ಪುಸ್ತಕದಲ್ಲಿರುವ ಹತ್ತು ವಿರೋಧಾಭಾಸದ ಆದೇಶಗಳನ್ನು ತಮ್ಮ ಭಾಷಣದ ಕೊನೆಯಲ್ಲಿ ಓದಿದರು. ಅದರಲ್ಲಿ ಜನ ಬಲಿಷ್ಠರನ್ನೇ ಬೆಂಬಲಿಸುತ್ತಾರೆಂದೂ ಆದರ್ಶಗಳನ್ನು ಸೋಲಿಸುತ್ತಾರೆಂದೂ, ಆದರೂ ಧೃತಿಗೆಡಬಾರದೆಂದೂ ಹೇಳಿದೆ. ಆದರೆ ಕರ್ನಾಟಕದ ರಾಜಕಾರಣ, ಹೀಗೆ ಸರಳ ಚೌಕಟ್ಟಿನಲ್ಲಿ ವ್ಯಾಖ್ಯಾನಿಸದಷ್ಟು ಜಟಿಲಗೊಂಡಿದೆ.
ರವಿ ವೀಡಿಯೊ ಭಾಷಣ ಮಾಡುವಾಗ ಪಕ್ಕದಲ್ಲಿ ಬಾಡಿದ ಮುಖದಲ್ಲಿ ಕ್ಯಾಮೆರಾ ನೋಡಲು ನಿರಾಕರಿಸುವವರಂತೆ ಬಾಡಿದ ಮುಖದಲ್ಲಿ ಮುಖತಗ್ಗಿಸಿ ಗಂಡನ ದುಗುಡವನ್ನು ಒಳಗೇ ಅನುಭವಿಸುತ್ತಿರುವಂತಿದ್ದ ಅವರ ಜೀವನಸಂಗಾತಿ ಸುಪ್ರಿಯಾರ ಮುಖ ಯಾಕೊ ಕಾಡುತ್ತಿದೆ? ಅವರ ಮನಸ್ಸಿನೊಳಗೆ ಯಾವ ಮಥನ ನಡೆದಿರಬಹುದು? ಅವರು ಮನಬಿಚ್ಚಿ ಮಾತಾಡಲು ಸಾಧ್ಯವಾಗಿದ್ದರೆ ಏನೆಲ್ಲ ಹೇಳುತ್ತಿದ್ದರು? ಕುತೂಹಲವಾಗುತ್ತಿದೆ. ಅವರದು ಕಸ್ತೂರಬಾ ಮೌನ. ಇಷ್ಟಕ್ಕೂ ರವಿಯೆದುರು ಗೆದ್ದಿರುವವರು ಒಬ್ಬ ಹೊಸತಲೆಮಾರಿನ ಮಹಿಳೆ. ಅವರ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿಯವರಂಥ ಬಲಿಷ್ಠ ರಾಜಕಾರಣಿ ಪ್ರಭಾವಳಿಯಿದೆ, ನಿಜ. ಆದರೂ ರವಿ ಆಕೆಗೆ ಔಪಚಾರಿಕವಾಗಿ ಶುಭ ಕೋರಿದರು. ಆಕೆ ಬಯಸಿದರೆ ಜಯನಗರದ ಕೆಲಸಗಳಲ್ಲಿ ಕೈಜೋಡಿಸುವುದಾಗಿಯೂ ಹೇಳಿದರು. ಇದು ಸೋತವರು ತೋರುವ ನಮ್ರತೆ. ಈ ನಮ್ರತೆಯೆ ತನ್ನೆಲ್ಲ ವಿಕಾರಗಳೊಡನೆ ಡೆಮಾಕ್ರಸಿಯಲ್ಲಿರುವ ಚೆಲುವು. ರವಿ ಪತ್ರದಲ್ಲಿ ರಾಜಕಾರಣಕ್ಕೆ ತಿಲಾಂಜಲಿ ಕೊಡುವ ನಿರ್ಣಯವನ್ನು ಕಂಸದಲ್ಲಿ ತಾತ್ಕಾಲಿಕವೆಂದು ಸೂಚಿಸಿದ್ದಾರೆ. ಆ ಕಂಸ ತೆರವಾಗುವ ದಿನ; “ಯೋಗ್ಯ ಅರ್ಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿರುವ ವ್ಯಕ್ತಿ ಚುನಾವಣೆÀಗೆ ನಿಂತರೆ’’ ಜಾತಿ ಮತ್ತು ಪಕ್ಷಾತೀತವಾಗಿ ಗೆಲ್ಲಿಸುವ ದಿನ ಬಂದೀತು. ಅದಕ್ಕಾಗಿ ವ್ಯಕ್ತಿವಾದಿ ಹೋರಾಟಗಳಿಗಿಂತ ಚದುರಿದ ಸಂಗಾತಿಗಳು ಒಗ್ಗೂಡಿ ಕೆಲಸ ಮಾಡಬೇಕಾಗುವುದೊ ಏನೊ?

– ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...