ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ. ಬಯ್ಯಾರೆಡ್ಡಿ ಇಂದು (ಜ.4) ಮುಂಜಾನೆ 3ಗಂಟೆಗೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೀರ್ಘಕಾಲ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ಬಯ್ಯಾರೆಡ್ಡಿ ಕಳೆದೊಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಬಯ್ಯಾರೆಡ್ಡಿ ಅವರ ಮೃತದೇಹವನ್ನು ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಚೇರಿ ಇಎಂಎಸ್ ಭವನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ತಿಳಿಸಿದೆ.

ನಾಳೆ (ಜ.5) ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಯ್ಯಾರೆಡ್ಡಿಯವರ ಸ್ವಗ್ರಾಮ ಗಡಿಗವಾರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.
ಜನಚಳುವಳಿಯಲ್ಲಿ 5 ದಶಕ ಸೇವೆ: ಜಿ.ಸಿ.ಬಯ್ಯಾರೆಡ್ಡಿಯವರು ಜನಪರ ಚಳವಳಿಯಲ್ಲಿ 5 ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1981ರಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮೂಲಕ ಸಾರ್ವಜನಿಕ ರಂಗ ಪ್ರವೇಶಿಸಿದ ಅವರು ಅವಿಭಜಿತ ಕೋಲಾರ ಜಿಲ್ಲೆಯ SFI ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಕೋಲಾರದಲ್ಲಿ ವಿದ್ಯಾರ್ಥಿ ಚಳವಳಿ ಬಲಗೊಳಿಸಿದ್ದರು. 1987ರಲ್ಲಿ ಕಲಬುರ್ಗಿಯಲ್ಲಿ ನಡೆದ SFI ರಾಜ್ಯ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1994ರ ವರೆಗೆ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಸ್ ಪಾಸ್ ರದ್ದತಿ ವಿರುದ್ದ, ಐಟಿಐ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ದ ಸಾವಿರಾರು ವಿದ್ಯಾರ್ಥಿಗಳನ್ನು ಬೀದಿಗಿಳಿಸಿದ್ದರು.
1993 ರಿಂದ ಚಿಂತಾಮಣಿಯಲ್ಲಿ ಪ್ರಾಂತರೈತ ಸಂಘದ ಕಾರ್ಯಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಿದರು. 2000 ರಿಂದ 2013 ರ ವರೆಗೆ ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2017ರಿಂದ ಇಲ್ಲಿಯವರೆಗೆ ರಾಜ್ಯಾಧ್ಯಕ್ಷರಾಗಿ ಅನೇಕ ರೈತ ಹೋರಾಟಗಳನ್ನು ಸಂಘಟಿಸಿದ್ದರು.
ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಪಾದಯಾತ್ರೆ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚನ್ನರಾಯಪಟ್ಟಣದ ರೈತರ ಭೂ ಸ್ವಾಧೀನದ ವಿರುದ್ಧ ಪ್ರಭಲ ಹೋರಾಟವನ್ನು ಬಯ್ಯಾರೆಡ್ಡಿಯವರು ಸಂಘಟಿಸಿದ್ದರು. ಈ ಹೋರಾಟವು ಈಗ 1000 ದಿನಗಳನ್ನು ಪೊರೈಸಿದೆ. ಕರ್ನಾಟಕದ ರೈತ, ಕಾರ್ಮಿಕ ಚಳುವಳಿಯ ಐಕ್ಯತೆಗಾಗಿ ಶ್ರಮ ಹಾಕಿದ್ದರು. ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಹೈನುಗಾರಿ, ಕುಕ್ಕುಟೋಧ್ಯಮ, ರೇಶ್ಮೆ ಬೆಳೆಗಾರರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
1983 ರಲ್ಲಿ ಸಿಪಿಐ(ಎಂ)ಪಕ್ಷದ ಸದಸ್ಯತ್ವ ಪಡೆದ ಅವರು, 1991ರಿಂದ ಇಲ್ಲಿವರೆಗೆ ರಾಜ್ಯ ಸಮಿತಿ ಸದಸ್ಯರಾಗಿ , ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಅವರು ಸಿಪಿಐ(ಎಂ) ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ : ಹಿರಿಯ ಚಿಂತಕ, ಲೇಖಕ ಪ್ರೊ.ಮುಝಫ್ಫರ್ ಅಸ್ಸಾದಿ ನಿಧನ


