Homeಮುಖಪುಟಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ `ನಾನು ಗೌರಿ’ ಮೀಡಿಯಾದೊಂದಿಗೆ ಮಾತನಾಡಿದ ಬೂದಾಳು ಅವರು, ಸರಹಪಾದನ ತಾತ್ವಿಕತೆಯ ಪ್ರಸ್ತುತತೆ, ಶ್ರಮಣ ಪರಂಪರೆಯ ವೈಶಿಷ್ಟ್ಯತೆ ಹಾಗೂ ಕೃತಿಯ ಅನುವಾದದ ಹಿಂದಿನ ಶ್ರಮವನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ಕನ್ನಡದ ಪ್ರಮುಖ ಸಾಂಸ್ಕೃತಿಕ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್‌ ಬೂದಾಳು ಅವರು ಅನುವಾದಿಸಿರುವ ‘ಸರಹಪಾದ’ ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಶ್ರಮಣ ಪರಂಪರೆಯ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲುತ್ತಿರುವ ನಟರಾಜ ಬೂದಾಳು ಅವರು ಹೊರ ತಂದಿರುವ ವಿಶೇಷ ಕೃತಿಗಳಲ್ಲಿ ‘ಸರಹಪಾದ’ವೂ ಒಂದು. ಶ್ರಮಣ ಪರಂಪರೆಗಳಾದ ಸಿದ್ಧ, ನಾಥ, ಆರೂಢ, ಬೌದ್ಧ, ತತ್ವಪದ ಮೊದಲಾದವುಗಳ ತಾತ್ವಿಕತೆಗಳನ್ನು ಚರ್ಚೆಗೆ ತಂದಿರುವವರಲ್ಲಿ ಬೂದಾಳು ಪ್ರಮುಖರು.

ಎಲ್ಲ ಮಿಥ್ಯಾವಾದಗಳನ್ನು ದಾಟುವುದನ್ನು ಕಲಿಸಿದ ಮಹಾಬೌದ್ಧ ಸಿದ್ಧ ಸರಹಪಾದನ ವಿಚಾರಗಳನ್ನು ಬೂದಾಳು ವಿಶಿಷ್ಟವಾಗಿ ಕನ್ನಡಕ್ಕೆ ತಂದಿದ್ದಾರೆ. ಲೋಕಾನುಭವವೇ ಮುಖ್ಯವೆಂದ ಅನುಭಾವ ಪರಂಪರೆಯಲ್ಲಿ ಬರುವ ಬೌದ್ಧಸಿದ್ಧ ಸರಹಪಾದ. ಬೌದ್ಧ ತಾತ್ವಿಕತೆಯಲ್ಲಿ ಪ್ರಧಾನವಾಗಿರುವ ‘ಮೂಲಮಾಧ್ಯಮಕಕಾರಿಕೆ’ ಕೃತಿಯ ರಚನಾಕಾರನಾದ ನಾಗಾರ್ಜುನನ ಗುರು ಸರಹಪಾದ.

ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

‘ನಾಗಾರ್ಜುನ ಅಲ್ಲಮಪ್ರಭು ಒಂದು ತೌಲನಿಕ ಅಧ್ಯಯನ’, ‘ನಾಗಾರ್ಜುನ ಮಧ್ಯಮಮಾರ್ಗ’, ‘ಬುದ್ಧನೆಂಬ ಜ್ಞಾನಪೂರ್ಣ ಜಗಂಜ್ಯೋತಿ’, ‘ಬುದ್ಧಗುರುವಿನ ಮಧ್ಯಮಮಾರ್ಗ’, ‘ಪ್ರತ್ಯೇಕ ಬುದ್ಧ ಅಲ್ಲಮಪ್ರಭು’, ‘ಹಿಂದಣ ಹೆಜ್ಜೆಯನರಿತನಲ್ಲದೆ’, ‘ಪ್ರಜ್ಞಾ ಪಾರಮಿತ ಹೃದಯ ಸೂತ್ರ’, ‘ಬೌದ್ಧ ಮಧ್ಯಮ ಮಾರ್ಗ’, ‘ಮಾತಿನ ಮೊದಲು’, ‘ಶಂಕರಾನಂದಯೋಗಿ ಮತ್ತು ಶಂಕರಾರ್ಯರ ತತ್ವಪದಗಳು’, ‘ದಾವ್ ದೆ ಚಿಂಗ್’, ‘ಮನಮಗ್ನತೆ’ ಸೇರಿದಂತೆ ಹಲವು ಕೃತಿಗಳನ್ನುಅವರು ರಚಿಸಿದ್ದಾರೆ. ತತ್ವಪದ ಕ್ಷೇತ್ರದಲ್ಲಿ ಬೂದಾಳು ಅವರು ಮಾಡಿರುವ ಕಾರ್ಯಗಳು ಅವಿಸ್ಮರಣೀಯ.

‘ಸರಹಪಾದ ಕನ್ನಡಕ್ಕೇ ಯಾವತ್ತೋ ಬರಬೇಕಿತ್ತು’

ಪ್ರಶಸ್ತಿ ಲಭಿಸಿದ ಈ ಸಂದರ್ಭದಲ್ಲಿ ‘ನಾನು ಗೌರಿ’ ಮಾಧ್ಯಮದೊಂದಿಗೆ ಮಾತನಾಡಿದ ನಟರಾಜ ಬೂದಾಳು ಅವರು, “ಭಾರತದ ಬಹಳ ಮುಖ್ಯವಾದ ಸಾಧಕ ಪರಂಪರೆ ಎಂದರೆ ಶ್ರಮಣ ಪರಂಪರೆ. ಈ ಪರಂಪರೆಯ ಮಹಾಗುರು ಸರಹಪಾದ. ಆತನ ತಾತ್ವಿಕತೆಗಳು ಕನ್ನಡಕ್ಕೆ ಯಾವತ್ತೋ ಬರಬೇಕಿತ್ತು. ತಡವಾಗಿಯಾದರೂ ಬಂತು. ಅದನ್ನು ಓದುಗರು ಗುರುತಿಸಿದ್ದು ಸಂತೋಷ ತಂದಿದೆ” ಎಂದರು.

“ಸರಹಪಾದನ ತಾತ್ವಿಕತೆಗಳು ದೇವನಾಗರಿ ಲಿಪಿಯಲ್ಲಿ, ಅಪಭ್ರ೦ಶ ಭಾಷೆಯಲ್ಲಿ ಇವೆ. ಅಪಭ್ರಂಶ ಭಾಷೆಯಲ್ಲಿನ ಕೃತಿ, ಸಂಸ್ಕೃತಿಗೆ ಆಗಿರುವ ಅನುವಾದ ಹಾಗೂ ಮೂರು ಇಂಗ್ಲಿಷ್ ಭಾಷಾಂತರಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡಕ್ಕೆ ‘ಸರಹಪಾದ’ ಕೃತಿಯನ್ನು ತಂದೆ. ದೇವನಾಗರಿ ಲಿಪಿಯಲ್ಲಿರುವ ಕೃತಿಯು ಅಪಭ್ರಂಶ ಆವೃತ್ತಿಯಲ್ಲೇ ಇದೆ. ಅಪಭ್ರಂಶ ಈಗ ಇಲ್ಲ. ಆದರೆ ಆ ಕೃತಿ ಇದೆ. ಇಂಗ್ಲಿಷ್‌ಗಿಂತ, ಸಂಸ್ಕೃತಕ್ಕಿಂತ ಕನ್ನಡಕ್ಕೆ ಹತ್ತಿರವಾದ ಭಾಷೆ ‘ಅಪಭ್ರಂಶ’. ಮೂರು ಭಾಷೆಗಳಲ್ಲಿ ಬಂದಿರುವ ಕೃತಿಗಳನ್ನು ಅಧ್ಯಯನ ಮಾಡಿ ಅನುವಾದ ಮಾಡಿರುವೆ” ಎಂದು ಬೂದಾಳು ತಿಳಿಸಿದರು.

“ಬೌದ್ಧತಾತ್ವಿಕತೆಯನ್ನು ಪಸರಿಸಿದ ನಾಗಾರ್ಜುನ ಗುರು ಸರಹಪಾದ. ಆತ ದಕ್ಷಿಣ ಭಾರತಕ್ಕೂ ಬಂದಿದ್ದ ಎನ್ನುವವರಿದ್ದಾರೆ. ಆತ ಮಹಾನ್‌ ತಾತ್ವಿಕನೂ ಹೌದು, ಸಾಧಕನೂ ಹೌದು. ಸರಹ ಎಲ್ಲವನ್ನೂ ತಿರಸ್ಕರಿಸಿ ಸುಮ್ಮನಿರುವ ಮಾರ್ಗದ ಕುರಿತು ಮಾತನಾಡುತ್ತಾನೆ. ಅವನ ಎದುರು ನಾಗಾರ್ಜುನ ಸೇರಿದಂತೆ ಯಾವ ತಾತ್ವಿಕರೂ ನಿಲ್ಲಲು ಸಾಧ್ಯವಿಲ್ಲ” ಎಂಬುದು ಬೂದಾಳು ಅವರ ಅಭಿಪ್ರಾಯ.

“ಆತ ಪೊಳ್ಳು ಜಗದ್ಗುರುಗಳನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುತ್ತಾನೆ. ಸರಹನ ಪ್ರಕಾರ ಕುಟುಂಬವೇ ದೊಡ್ಡದು. ಪಾರಲೌಖಿತ ವ್ಯಮೋಹಕ್ಕೆ ಏಕೆ ಬೀಳುತ್ತೀರಾ? ಲೌಕಿಕದಲ್ಲಿ ಚೆನ್ನಾಗಿ ಬಾಳಲು ಸಾಧ್ಯವಿಲ್ಲದನು ಅಲ್ಲೇನು ಮಾಡುತ್ತಾನೆ? ಅಧಿಕಾರ ಕೇಂದ್ರಗಳು, ಸರ್ಕಾರಗಳು ವಿಧೇಯರಾಗಿರಬೇಕಾದದ್ದು ಕುಟುಂಬಗಳಿಗೆ ಹೊರತು ಜಗದ್ಗುರುಗಳಿಗೂ ಅಲ್ಲ, ದೇವಸ್ಥಾನಕ್ಕೂ ಅಲ್ಲ. ಕುಟುಂಬವೇ ಶ್ರೇಷ್ಟ ಎಂದು ಹೇಳಿದವನು ಸರಹ” ಎನ್ನುತ್ತಾರೆ ಅವರು.

“ಶ್ರಮಣ ಪರಂಪರೆಯನ್ನು ಯಾರೂ ಮುನ್ನಲೆ ತರಬೇಕಾಗಿಲ್ಲ. ಅದು ಪ್ರಯೋಗಿಕವಾಗಿ ಈಗಾಗಲೇ ಸಮಾಜದಲ್ಲಿದೆ. ನಮ್ಮ ನಡುವೆ ತತ್ವಪದಕಾರರು ಇದ್ದಾರೆ. ಇಂದಿಗೂ ಶ್ರಮಣ ಪರಂಪರೆ ಜೀವಂತವಾಗಿದೆ. ಆದರೆ ಶೈಕ್ಷಣಿಕ ವಲಯದಲ್ಲಿ ಈ ಕುರಿತು ಗಂಭೀರ ಚರ್ಚೆಗಳಾಗುತ್ತಿಲ್ಲ. ಅಕಾಡೆಮಿಕ್‌ ವಲಯ ಈ ಶ್ರಮಣ ಪರಂಪರೆಯನ್ನು ಕಣ್ಣುಬಿಟ್ಟು ನೋಡಬೇಕಾಗಿದೆ” ಎಂದು ತಿಳಿಸಿದರು ಬೂದಾಳು.


ಇದನ್ನೂ ಓದಿ: ‘ಕುವೆಂಪು ಸಮಗ್ರ ಸಾಹಿತ್ಯ ಸಂಪುಟ 12’ ಮಾರಾಟಕ್ಕೆ ಹೈಕೋರ್ಟ್ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...