ಕೇರಳ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಸೋಮವಾರ (ಮಾ.23) ಬಿಜೆಪಿ ರಾಜ್ಯ ಘಟಕದ ಸೀಲ್ ಹೊಂದಿರುವ ಚುನಾವಣಾ ಆಯೋಗದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ- ಸಿಪಿಐ (ಎಂ) ಪಕ್ಷ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪತ್ರದ ವಿಷಯ ಬೆಳಕಿಗೆ ಬಂದಿತ್ತು.
2019ಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ವಿವರಗಳ ಪ್ರಕಟಣೆಗೆ ಸಂಬಂಧಿಸಿದ ಚುನಾವಣಾ ಆಯೋಗದ ಪತ್ರದಲ್ಲಿ ಆಯೋಗದ ಸೀಲ್ ಬದಲು ಬಿಜೆಪಿ ಕೇರಳ ಘಟಕದ ಸೀಲ್ ಇತ್ತು.
ಈ ಪತ್ರವನ್ನು ಅನೇಕ ರಾಜಕೀಯ ಪಕ್ಷಗಳಿಗೆ ಕಳುಹಿಸಲಾಗಿತ್ತು. ಇದನ್ನು ಗಮನಿಸಿದ ಸಿಪಿಐ(ಎಂ), ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ ‘ಒಂದೇ ರೀತಿಯ ಒಳಸಂಚು’ ಇದೆ ಎಂದು ಗಂಭೀರ ಆರೋಪ ಮಾಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಕೇರಳದ ಮುಖ್ಯ ಚುನಾವಣಾ ಅಧಿಕಾರಿ ಡಾ. ರತನ್ ಯು. ಖೇಲ್ಕರ್, “ಈ ಹಿಂದೆ ಬಿಜೆಪಿ ಘಟಕವು ವಿವರಣೆ ಕೇಳಲು ಬಂದಾಗ ಸಲ್ಲಿಸಿದ್ದ ಪೋಟೋಕಾಪಿ (ನಕಲು) ಪತ್ರವನ್ನು ಕಚೇರಿಯ ಸಿಬ್ಬಂದಿ ಅರಿಯದೇ ಇತರ ಪಕ್ಷಗಳಿಗೂ ವಿತರಿಸಿದ್ದಾರೆ. ಇದು ಕೇವಲ ಒಂದು ‘ಲಿಪಿಕ ದೋಷ’ (ಬರವಣಿಗೆಯ ದೋಷ/ ಸಿಬ್ಬಂದಿ ದೋಷ/ ತಾಂತ್ರಿಕ ತಪ್ಪು-clerical error)” ಎಂದು ತಿಳಿಸಿದ್ದಾರೆ.
“ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯು ಈ ಲೋಪವನ್ನು ಪತ್ತೆಹಚ್ಚಿದ ಕೂಡಲೇ ಅದನ್ನು ಒಪ್ಪಿಕೊಂಡಿದೆ. ಅದರಂತೆ, ಮಾರ್ಚ್ 21ರಂದು ಉಪ ಮುಖ್ಯ ಚುನಾವಣಾ ಅಧಿಕಾರಿಯು ಆ ತಪ್ಪಾದ ಪತ್ರವನ್ನು ಹಿಂಪಡೆಯುವ ಅಧಿಕೃತ ಪತ್ರವನ್ನು ಹೊರಡಿಸಿದ್ದಾರೆ” ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಹಾಯಕ ವಿಭಾಗೀಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಸಿಪಿಐ(ಎಂ)ನ ಕೇರಳ ಘಟಕವು ಸೋಮವಾರ ಮಧ್ಯಾಹ್ನ ಪತ್ರದ ವಿಷಯವನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿತ್ತು. ಮಾರ್ಚ್ 21ರ ಇ-ಮೇಲ್ ಒಂದರ ಸ್ಕ್ರೀನ್ಶಾಟ್ ಅನ್ನು ಪಕ್ಷವು ಹಂಚಿಕೊಂಡಿತ್ತು. ಅದರಲ್ಲಿ ದೇಶದ ರಾಜಕೀಯ ಪಕ್ಷಗಳಿಗೆ ಮಾರ್ಚ್ 19, 2019ರಂದು ಕಳುಹಿಸಲಾಗಿದ್ದ ಪತ್ರಕ್ಕೆ ಸಂಬಂಧಿಸಿದ ಅಫಿಡವಿಟ್ (ಪ್ರಮಾಣಪತ್ರ) ಲಗತ್ತಿಸಲಾಗಿತ್ತು.
2019ರ ಆ ಪತ್ರವು ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗೆ ಸಂಬಂಧಿಸಿದ ನಿಯಮಗಳನ್ನು ವಿವರಿಸಿತ್ತು. ಆ ಪತ್ರದ ಮೇಲೆ ಬಿಜೆಪಿ ಕೇರಳ ಘಟಕದ ಸೀಲ್ ಇತ್ತು ಮತ್ತು ಅದರ ಮೇಲೆ ಚುನಾವಣಾ ಆಯೋಗದ ಅಧಿಕಾರಿಯ ಸಹಿ ಕೂಡ ಇತ್ತು.
ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಪಕ್ಷದ ಸೀಲ್ ಇರುವುದನ್ನು ನೋಡಿ, “ಇವರು ಸರ್ಕಾರಿ ಸೀಲ್ ಮತ್ತು ಬಿಜೆಪಿ ಸೀಲ್ಗಳ ನಡುವೆ ವ್ಯತ್ಯಾಸವೇ ಇಲ್ಲದಂತೆ ಬೇಕಾಬಿಟ್ಟಿ ಬಳಸುತ್ತಿದ್ದಾರೆ” ಎಂದು ಸಿಪಿಐ(ಎಂ) ಟೀಕಿಸಿತ್ತು. ಚುನಾವಣಾ ಆಯೋಗ ಮತ್ತು ಬಿಜೆಪಿ ಒಂದೇ ಆಗಿಬಿಟ್ಟಿವೆಯೇ? ಇಷ್ಟು ದಿನ ತಾವು ಬೇರೆ ಬೇರೆ ಎಂದು ಮಾಡುತ್ತಿದ್ದ ನಾಟಕವನ್ನು ಈಗ ಪೂರ್ತಿಯಾಗಿ ಬಿಟ್ಟುಬಿಟ್ಟಿದ್ದಾರೆಯೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿತ್ತು.
“ಚುನಾವಣಾ ಆಯೋಗ ಮತ್ತು ಬಿಜೆಪಿ ಎರಡನ್ನೂ ಒಂದೇ ಅಧಿಕಾರ ಕೇಂದ್ರ ನಿಯಂತ್ರಿಸುತ್ತಿದೆ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಹಾಗಿದ್ದರೂ ಸಹ, ಕನಿಷ್ಠ ಸೌಜನ್ಯಕ್ಕಾದರೂ ಇವೆರಡಕ್ಕೂ ಪ್ರತ್ಯೇಕ ಕಚೇರಿ ಅಥವಾ ವ್ಯವಸ್ಥೆಯನ್ನು ನಿರ್ವಹಿಸಿ” ಎಂದು ವ್ಯಂಗ್ಯವಾಗಿ ಹೇಳಿತ್ತು.
ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಕೂಡ ಸಿಪಿಐ(ಎಂ) ಆರೋಪಗಳನ್ನು ಬೆಂಬಲಿಸಿದ್ದವು. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು, ಚುನಾವಣಾ ಆಯೋಗವು ಕೊನೆಗೂ ಬಿಜೆಪಿ ಸೀಲ್ ಇರುವ ಅಧಿಕೃತ ಪತ್ರಗಳನ್ನು ಹೊರಡಿಸುವ ಧೈರ್ಯವನ್ನು ತೋರಿದೆ” ಎಂದು ವ್ಯಂಗ್ಯವಾಗಿ ಕಿಡಿಕಾರಿದ್ದರು.
ಕಾಂಗ್ರೆಸ್ನ ಕೇರಳ ಘಟಕವು ಚುನಾವಣಾ ಸಂಸ್ಥೆಯನ್ನು ಪ್ರಶ್ನಿಸುತ್ತಾ, “ನೀವು ಬಿಜೆಪಿಯ ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದೀರಾ?” ಎಂದು ಕೇಳಿತ್ತು. ಅಲ್ಲದೆ, “ಚುನಾವಣಾ ಅಧಿಕಾರಿಗಳಿಗೆ ಬಿಜೆಪಿಯ ಅಧಿಕೃತ ಮುದ್ರೆಗಳು (ಸೀಲುಗಳು) ಸಿಕ್ಕಿದ್ದಾದರೂ ಹೇಗೆ?” ಎಂದು ಆಶ್ಚರ್ಯ ವ್ಯಕ್ತಪಡಿಸಿತ್ತು.
ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಈ ಬಗ್ಗೆ ವ್ಯಂಗ್ಯವಾಡುತ್ತಾ, ಬಿಜೆಪಿಯ ಘೋಷಣೆಯಾದ “ಅಬ್ಕಿ ಬಾರ್, ಮೋದಿ ಸರ್ಕಾರ್” (ಈ ಬಾರಿ ಮೋದಿ ಸರ್ಕಾರ) ಎಂಬುದು ಕೂಡ ಇದೇ ರೀತಿಯ “ಲಿಪಿಕ ದೋಷ”ದ ಫಲಿತಾಂಶವೇ? ಎಂದು ಪ್ರಶ್ನಿಸಿದ್ದರು.
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಪ್ರಕಟಿಸುವ ಕುರಿತಾದ 2019ರ ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟನೆ ಕೋರಿ ಬಿಜೆಪಿ ಕೇರಳ ಘಟಕವು ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು, ಈ ಸಂದರ್ಭದಲ್ಲಿ ಈ ತಪ್ಪು ಸಂಭವಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿ ಸಲ್ಲಿಸಿದ ದಾಖಲೆಯಲ್ಲಿ ಪಕ್ಷದ ಸೀಲ್ ಇರುವುದನ್ನು ಕಚೇರಿಯ ಸಿಬ್ಬಂದಿ ಗಮನಿಸದ ಕಾರಣ ಈ ಅಚಾತುರ್ಯ ಸಂಭವಿಸಿದೆ. ಸ್ಪಷ್ಟನೆ ಕೇಳಿ ಬಂದಿದ್ದ ಸಮಯದಲ್ಲಿ, ಅದೇ ದಾಖಲೆಯನ್ನು ಅಜಾಗರೂಕತೆಯಿಂದ ಇತರ ರಾಜಕೀಯ ಪಕ್ಷಗಳಿಗೂ ವಿತರಿಸಲಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ.
ಆ ತಪ್ಪನ್ನು ಗಮನಿಸಿದ ತಕ್ಷಣವೇ, ಎಲ್ಲಾ ರಾಜಕೀಯ ಪಕ್ಷಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ರಿಟರ್ನಿಂಗ್ ಆಫೀಸರ್ಗಳಿಗೆ ಅಧಿಕೃತ ಪತ್ರದ ಮೂಲಕ ಈ ‘ತಪ್ಪಾದ ದಾಖಲೆ’ಯನ್ನು ಹಿಂಪಡೆಯಲಾಗಿದೆ ಮತ್ತು ಅದನ್ನು ಪರಿಗಣಿಸಬಾರದು ಎಂದು ತಿಳಿಸಲಾಗಿದೆ ಎಂದು ಆಯೋಗವು ಹೇಳಿದೆ.
ಈ ಲಿಪಿಕ ದೋಷದ ಆಧಾರದ ಮೇಲೆ ತಪ್ಪು ಮಾಹಿತಿಯನ್ನು ಹರಡದಂತೆ ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿ ವಿನಂತಿಸುತ್ತೇವೆ ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಪ್ರಕ್ರಿಯೆಯು ಯಾವುದೇ ಹೊರಗಿನ ಹಸ್ತಕ್ಷೇಪ ಅಥವಾ ಪ್ರಭಾವಕ್ಕೆ ಒಳಗಾಗದಂತೆ ತಡೆಯಲು ಚುನಾವಣಾ ಆಯೋಗವು ಅತ್ಯಂತ ಕಟ್ಟುನಿಟ್ಟಾದ ಮತ್ತು ದೋಷರಹಿತ ವ್ಯವಸ್ಥೆಯನ್ನು ಹೊಂದಿದೆ ಎಂದು ಅದು ಹೇಳಿಕೊಂಡಿದೆ.


