ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯೊಬ್ಬರು ಭಾನುವಾರ (ನವೆಂಬರ್ 16) ಮೃತಪಟ್ಟಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕರ್ತವ್ಯಗಳಿಗೆ ಸಂಬಂಧಿಸಿದ ಮಾನಸಿಕ ಒತ್ತಡದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಶಾಲಾ ಶಿಕ್ಷಕ ಅನೀಶ್ ಜಾರ್ಜ್ (44) ಸಾವಿಗೀಡಾದ ವ್ಯಕ್ತಿ. ಇವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯ ಸಿದ್ಧತೆಗಳಿಗೆ ಸಂಬಂಧಿಸಿದ ಕರ್ತವ್ಯಗಳಿಂದ ಜಾರ್ಜ್ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಎಫ್ಐಆರ್ ಹೇಳಿದೆ.
ಎಸ್ಐಆರ್ ಟಾರ್ಗೆಟ್ ರೀಚ್ ಮಾಡಲು ಜಾರ್ಜ್ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು ಎಂದು ಮೃತ ಜಾರ್ಜ್ ಅವರ ಕುಟುಂಬಸ್ಥರು ಮತ್ತು ಅವರ ಊರಿನವರು ಹೇಳಿದ್ದಾರೆ. ಎಸ್ಐಆರ್ಗೆ ಸಂಬಂಧಿತ ಫಾರ್ಮ್ಗಳನ್ನು ಪೂರ್ಣಗೊಳಿಸಲು ಮತ್ತು ಅವುಗಳನ್ನು ತನ್ನ ಗೊತ್ತುಪಡಿಸಿದ ಪ್ರದೇಶದಾದ್ಯಂತ ವಿತರಿಸುವ ಅಪಾರ ಒತ್ತಡದಲ್ಲಿದ್ದ ಜಾರ್ಜ್, ಭಾನುವಾರ ಬೆಳಗಿನ ಜಾವ 2 ಗಂಟೆಯವರೆಗೆ ಕೆಲಸ ಮಾಡಿದ್ದರು ಎಂದು ಜಾರ್ಜ್ ಅವರು ಕುಟುಂಬದ ಪರಿಚಯಸ್ಥ ಶ್ಯಾಮ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಜಾರ್ಜ್ ಅವರ ಆತ್ಮಹತ್ಯೆ ಸರ್ಕಾರಿ ನೌಕರರಲ್ಲಿ ಆಕ್ರೋಶದ ಅಲೆಯನ್ನು ಹುಟ್ಟುಹಾಕಿದ್ದು, ಮೂರು ಪ್ರಮುಖ ಸಂಘಟನೆಗಳಾದ ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಕ್ರಿಯಾ ಮಂಡಳಿ, ಶಿಕ್ಷಕರ ಸೇವಾ ಸಂಸ್ಥೆಗಳ ಜಂಟಿ ಸಮಿತಿ ಮತ್ತು ಕೇರಳ ಎನ್ಜಿಒ ಸಂಘ ನವೆಂಬರ್ 17, ಸೋಮವಾರದಂದು ರಾಜ್ಯಾದ್ಯಂತ ಬಿಎಲ್ಒ ಕರ್ತವ್ಯಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ತಿರುವನಂತಪುರಂನಲ್ಲಿರುವ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮತ್ತು ಎಲ್ಲಾ ಜಿಲ್ಲೆಗಳ ಕಲೆಕ್ಟರೇಟ್ಗಳಲ್ಲಿ ಜಂಟಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೇಳಿವೆ.
ಎಸ್ಐಆರ್ ಪ್ರಕ್ರಿಯೆಯನ್ನು ಮುಂದೂಡಲು ಪದೇ ಪದೇ ಮಾಡಿದ ಮನವಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಸಂಘಟನೆಗಳು ತಮ್ಮ ಹೇಳಿಕೆಯಲ್ಲಿ ಚುನಾವಣಾ ಆಯೋಗವನ್ನು (ಇಸಿ) ದೂಷಿಸಿವೆ. 23 ವರ್ಷಗಳ ಹಿಂದೆ ಪ್ರಕಟಿಸಲಾದ ಮತದಾರರ ಪಟ್ಟಿಯನ್ನು ನವೀಕರಿಸಲು ಅತ್ಯಂತ ಕಡಿಮೆ ಅವಧಿಯಲ್ಲಿ ಅವಾಸ್ತವಿಕ ಗುರಿಗಳೊಂದಿಗೆ ಬಿಎಲ್ಒಗಳನ್ನು ‘ಹಗಲಿರುಳು’ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸದಿದ್ದರೆ ತೀವ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಜಾರ್ಜ್ ಅವರ ಸಾವು ರಾಜಕೀಯ ಚರ್ಚೆಯನ್ನೂ ತೀವ್ರಗೊಳಿಸಿದೆ. ಎಸ್ಐಆರ್ ಅವಧಿಯಲ್ಲಿ ಬಿಎಲ್ಒಗಳ ಮೇಲೆ ಅತಿಯಾದ ಕೆಲಸದ ಒತ್ತಡವನ್ನು ಹೇರಲಾಗುತ್ತಿದೆ ಎಂದು ನಮ್ಮ ಪಕ್ಷವು ಈಗಾಗಲೇ ಹೇಳಿದೆ ಎಂದು ಸಿಪಿಐ(ಎಂ) ನಾಯಕ ಎಂ. ವಿ ಜಯರಾಜನ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಿಜಿಲ್ ಮಾಕ್ಕುಟ್ಟಿ, ‘ಬಿಜೆಪಿ ಕಾರ್ಯಸೂಚಿಯನ್ನು ಪೂರೈಸಲು’ ಚುನಾವಣೆಗೆ ಮುಂಚಿತವಾಗಿ ಎಸ್ಐಆರ್ ಅನ್ನು ಜಾರಿಗೆ ತಂದಿರುವ ಚುನಾವಣಾ ಆಯೋಗದ ಒತ್ತಡಕ್ಕೆ ಜಾರ್ಜ್ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇಬ್ಬರೂ ನಾಯಕರು ಆತ್ಮಹತ್ಯೆಯನ್ನು ‘ತೀವ್ರ ದುರದೃಷ್ಟಕರ’ ಎಂದು ಹೇಳಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯವರೆಗೆ ಚುನಾವಣಾ ಆಯೋಗ ಎಸ್ಐಆರ್ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಾರ್ಜ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಆಗ್ರಹಿಸಿದ್ದಾರೆ. ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಸರಿಯಾದ ತನಿಖೆ ನಡೆಸಿ ಸ್ಪಷ್ಟ ವಿವರಣೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಎಸ್ಐಆರ್ ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವಾಗಿದೆ. ಈಗ ನಡೆಯುತ್ತಿರುವ ಪ್ರಕ್ರಿಯೆಯು ವಿಧಾನಸಭಾ ಚುನಾವಣೆಯ ಸಿದ್ಧತೆಗಳಿಗಿಂತ ಹೆಚ್ಚು ತೀವ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಜಾರ್ಜ್ ಅವರ ಸಾವಿನ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ ಮತ್ತು ಕಣ್ಣೂರು ಜಿಲ್ಲಾ ಕಲೆಕ್ಟರ್ ಅವರಿಂದ ವಿವರವಾದ ವರದಿಯನ್ನು ಕೇಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ರಥನ್ ಯು ಕೇಳ್ಕರ್ ಹೇಳಿದ್ದಾರೆ. ಬಿಎಲ್ಒಗಳು ‘ಸಾಮೂಹಿಕ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಮತ್ತು ಕೆಲಸದ ಒತ್ತಡದ ಬಗ್ಗೆ ಯಾವುದೇ ಔಪಚಾರಿಕ ದೂರುಗಳು ಬಂದಿಲ್ಲ ಎಂದು ಕೇಳ್ಕರ್ ಸಮರ್ಥಿಸಿಕೊಂಡಿದ್ದಾರೆ. ಬಿಎಲ್ಒಗಳು 31 ದಿನಗಳವರೆಗೆ ಎಸ್ಐಆರ್ ಕರ್ತವ್ಯಗಳ ಮೇಲೆ ಮಾತ್ರ ಗಮನಹರಿಸಬೇಕಾಗುತ್ತದೆ. ಹೀಗಿರುವಾಗ ಸಾಮಾನ್ಯವಾಗಿ ಹೆಚ್ಚುವರಿ ಕೆಲಸದ ಹೊರೆ ಬೀಳುವ ಸಾಧ್ಯತೆಯಿಲ್ಲ ಎಂದಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಕೇರಳ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ


