Homeಮುಖಪುಟಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

- Advertisement -
- Advertisement -

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಚುನಾವಣಾ ಆಯೋಗ ಇದನ್ನು ‘ಲಿಪಿಕ ದೋಷ’ (ಬರವಣಿಗೆಯ ದೋಷ/ ಸಿಬ್ಬಂದಿ ದೋಷ/ ತಾಂತ್ರಿಕ ತಪ್ಪು-clerical error)’ ಎಂದು ಹೇಳಿ ಸಮಜಾಯಿಸಿ ನೀಡಿದೆ. ಈ ಸಂಬಂಧ ಒಬ್ಬರು ಸಹಾಯಕ ವಿಭಾಗೀಯ ಅಧಿಕಾರಿಯನ್ನು ಆಯೋಗ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಆದರೂ, ಈ ವಿಚಾರದ ಚರ್ಚೆ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಮುಂದುವರಿದಿದೆ.

ಈ ನಡುವೆ ಚುನಾವಣಾ ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇರಳ ಪೊಲೀಸರು ಸೂಚಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಚುನಾವಣಾ ಆಯೋಗದ ಪತ್ರದ ಕುರಿತ ಪೋಸ್ಟ್‌ಗಳು ‘ಗೌರವಾನ್ವಿತ ರಾಷ್ಟ್ರೀಯ ಸಂಸ್ಥೆ’ಯಾದ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ‘ಬಹಿರಂಗವಾಗಿ ಅವಮಾನಿಸುತ್ತವೆ’ ಎಂದು ಪೊಲೀಸರು ಹೇಳಿದ್ದಾರೆ. ಕುತೂಹಲಕಾರಿಯಾಗಿ ಇವು ‘ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು’ ಹರಡುತ್ತಿವೆ ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.

ಚುನಾವಣಾ ಆಯೋಗದ ಪತ್ರವನ್ನು ಪೋಸ್ಟ್ ಮಾಡಿದ ಬಳಕೆದಾರರಿಗೆ, ಅದನ್ನು ತೆಗೆದು ಹಾಕುವಂತೆ ಕೇರಳ ಪೊಲೀಸರು ಸೂಚಿಸಿರುವುದಾಗಿ ಎಕ್ಸ್‌ ತಿಳಿಸಿದೆ.

“ನಮ್ಮ ಬಳಕೆದಾರರ ಧ್ವನಿಯನ್ನು ಗೌರವಿಸುವುದು ಮತ್ತು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಆದ್ದರಿಂದ, ಯಾವುದೇ ಕಾನೂನು ಜಾರಿ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯಿಂದ ನಿಮ್ಮ ಖಾತೆಯ ಮಾಹಿತಿಯನ್ನು ತೆಗೆದುಹಾಕಲು ನಮಗೆ ವಿನಂತಿ ಬಂದಾಗ, ಆ ಬಗ್ಗೆ ಬಳಕೆದಾರರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ” ಎಂದು ಪತ್ರಕರ್ತ ಪಿಯೂಷ್ ರೈ ಅವರಂತಹ ಬಳಕೆದಾರರಿಗೆ ಎಕ್ಸ್‌ ಸಂಸ್ಥೆಯಿಂದ ಬಂದ ಇಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.

ಚುನಾವಣಾ ಆಯೋಗದ ಪತ್ರವನ್ನು ಪೋಸ್ಟ್ ಮಾಡಿದ್ದಕ್ಕೆ ಎಕ್ಸ್‌ನಿಂದ ಇಮೇಲ್ ಸ್ವೀಕರಿಸಿರುವ ಕಾಂಗ್ರೆಸ್ ನಾಯಕಿ ರುಚಿರಾ ಚತುರ್ವೇದಿ ಅವರು, “ಸಾಮಾಜಿಕ ಮಾಧ್ಯಮಗಳನ್ನು ಸೆನ್ಸಾರ್ ಮಾಡಲು ಈ ರೀತಿಯ ಟೇಕ್‌ಡೌನ್ ನೋಟಿಸ್‌ಗಳು (ತೆಗೆದು ಹಾಕುವಿಕೆ ನೋಟಿಸ್) ನೀಡುವುದು ಈಗ ವಾಡಿಕೆಯ ಅಸ್ತ್ರವಾಗಿಬಿಟ್ಟಿವೆ. ಕೇರಳ ಪೊಲೀಸರ ಪ್ರಕಾರ, ನನ್ನ ಪೋಸ್ಟ್ ಚುನಾವಣಾ ಆಯೋಗವನ್ನು ಅವಮಾನಿಸುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ಚುನಾವಣಾ ಆಯೋಗದ ಈ ‘ಲಿಪಿಕ ದೋಷ’ (clerical error) ಕುರಿತಾದ ಪೋಸ್ಟ್‌ಗಳು ಕೋಮು ಸೌಹಾರ್ದತೆಗೆ ಹೇಗೆ ಧಕ್ಕೆ ತರುತ್ತವೆ ಎಂಬುದು ಪೊಲೀಸರಿಗೇ ಗೊತ್ತಿರಬೇಕು. ಒಂದು ವೇಳೆ ಚುನಾವಣಾ ಆಯೋಗದೊಂದಿಗೆ ಬಿಜೆಪಿಯ ಹೆಸರನ್ನು ಜೋಡಿಸುವುದರಿಂದಲೇ ಅಶಾಂತಿ ಉಂಟಾಗುತ್ತದೆ ಎಂದು ಅವರು ಭಾವಿಸದ ಹೊರತು, ಈ ಆರೋಪದ ಹಿಂದಿನ ಉದ್ದೇಶ ಅಸ್ಪಷ್ಟವಾಗಿದೆ” ಎಂದಿದ್ದಾರೆ.

ಎಕ್ಸ್ ಸಂಸ್ಥೆಯು ಇನ್ನೂ ಆ ಪೋಸ್ಟ್‌ಗಳನ್ನು ತೆಗೆದುಹಾಕಿಲ್ಲದಿದ್ದರೂ, ಕೇರಳ ಪೊಲೀಸರು ನೀಡಿದ ನೋಟಿಸ್‌ನಲ್ಲಿ ಬಳಸಲಾದ ತೀವ್ರ ಪದಬಳಕೆಯು ಅನೇಕರ ಗಮನ ಸೆಳೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೈಬರ್ ಕಾರ್ಯಾಚರಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿಜೋಯ್ ಎಸ್. ಸಹಿ ಮಾಡಿರುವ ನೋಟಿಸ್ ಅನ್ನು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಭಾರತಿ ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಇಂದು ಬೆಳಗ್ಗೆ ಅವರ ಪ್ರೇಮ ಪತ್ರವನ್ನು (ನೋಟಿಸ್) ನೋಡಿಯೇ ನನ್ನ ಕಣ್ಣು ತೆರೆಯಿತು” ಎಂದು ವ್ಯಂಗ್ಯವಾಡಿದ್ದಾರೆ.

ಪೊಲೀಸ್ ನೋಟಿಸ್ ಅನ್ನು ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 79(3)(b) ಮತ್ತು ಐಟಿ ನಿಯಮಗಳು, 2021 ರ ಸೆಕ್ಷನ್ 3(1)(d) ಅಡಿಯಲ್ಲಿ ನೀಡಲಾಗಿದೆ. ಮೊದಲನೆಯ ನಿಯಮದ ಪ್ರಕಾರ, ಸರ್ಕಾರಿ ಸಂಸ್ಥೆಯಿಂದ ಸೂಚನೆ ಬಂದ ನಂತರವೂ ‘ಎಕ್ಸ್‌ನಂತಹ ಮಧ್ಯವರ್ತಿ ಸಂಸ್ಥೆಗಳು ಆ ವಿಷಯವನ್ನು ತೆಗೆದುಹಾಕಲು ವಿಫಲವಾದರೆ, ಅವುಗಳಿಗೆ ಇರುವ ಕಾನೂನು ರಕ್ಷಣೆ ರದ್ದಾಗುತ್ತದೆ. ಎರಡನೆಯ ನಿಯಮದಂತೆ, ನ್ಯಾಯಾಲಯದ ಆದೇಶ ಅಥವಾ ಅಧಿಕೃತ ಸರ್ಕಾರಿ ಸಂಸ್ಥೆಯಿಂದ ಸೂಚನೆ ಬಂದ 36 ಗಂಟೆಗಳ ಒಳಗೆ ಅಂತಹ ವಿಷಯಗಳನ್ನು ತೆಗೆದುಹಾಕುವುದು ಕಡ್ಡಾಯವಾಗಿದೆ.

ಎಕ್ಸ್‌ ಜಾಲತಾಣದ 10 ಪೋಸ್ಟ್‌ಗಳನ್ನು ಉಲ್ಲೇಖಿಸಿರುವ ಕೇರಳ ಪೊಲೀಸರು, “ಈ ಎಕ್ಸ್‌ ಪೋಸ್ಟ್ ಭಾರತೀಯ ಚುನಾವಣಾ ಆಯೋಗವನ್ನು ಬಹಿರಂಗವಾಗಿ ಅವಮಾನಿಸುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತದೆ. ಈ ಪೋಸ್ಟ್ ಕೇವಲ ಗೌರವಾನ್ವಿತ ರಾಷ್ಟ್ರೀಯ ಸಂಸ್ಥೆಗೆ ಮಾಡಿದ ನೇರ ಅವಮಾನ ಮಾತ್ರವಲ್ಲದೆ, ಸಮಾಜದಲ್ಲಿ ಒಡಕು ಮತ್ತು ಹಗೆತನವನ್ನು ಪ್ರಚೋದಿಸುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ” ಎಂದು ಹೇಳಿರುವುದಾಗಿ thewire.in ಉಲ್ಲೇಖಿಸಿದೆ.

ಕೇರಳದ ಮುಖ್ಯ ಚುನಾವಣಾಧಿಕಾರಿಯೇ (ಸಿಇಒ) ಇದು ‘ಲಿಪಿಕ ದೋಷ’ (clerical error) ಎಂದು ಈಗಾಗಲೇ ಒಪ್ಪಿಕೊಂಡಿರುವಾಗ, ಈ ಕ್ರಮವನ್ನು ಏಕೆ ಕೈಗೊಳ್ಳಲಾಗುತ್ತಿದೆ ಎಂದು ಪತ್ರಕರ್ತ ಅರವಿಂದ್ ಗುಣಶೇಖರ್ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ಪತ್ರದ ನಿರಂತರ ಹಂಚಿಕೆಯು ಭಾರತೀಯ ಚುನಾವಣಾ ಆಯೋಗದ (ಇಸಿಐ) ಸಮಗ್ರತೆಯನ್ನು ಕುಗ್ಗಿಸುತ್ತದೆ ಎಂದು ಕೇರಳ ಪೊಲೀಸರು ಹೇಳಿದ್ದಾರಂತೆ.

“ಇದಲ್ಲದೆ, ಸಿಬ್ಬಂದಿಯ ತಪ್ಪಿನಿಂದಾಗಿ ರಾಜಕೀಯ ಪಕ್ಷವೊಂದರ ಲಾಂಛನವನ್ನು ಅಚಾತುರ್ಯದಿಂದ ಒಳಗೊಂಡಿದ್ದ, ಈಗಾಗಲೇ ತಿದ್ದುಪಡಿ ಮಾಡಲಾದ 2019ರ ಹಳೆಯ ದಾಖಲೆಯನ್ನು ಹೊಂದಿರುವ ಎಲ್ಲಾ ಡಿಜಿಟಲ್ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವ ತುರ್ತು ಅಗತ್ಯವಿದೆ. ಹಿಂಪಡೆಯಲಾದ ಈ ವಿಷಯದ ನಿರಂತರ ಪ್ರಸರಣವನ್ನು ಸುಳ್ಳು ಆರೋಪಗಳನ್ನು ಹರಡಲು ಬಳಸಲಾಗುತ್ತಿದೆ, ಆ ಮೂಲಕ ಚುನಾವಣಾ ಆಯೋಗದ ಸಮಗ್ರತೆ ಮತ್ತು ಪಾರದರ್ಶಕತೆಗೆ ಧಕ್ಕೆ ತರಲಾಗುತ್ತಿದೆ. ಇಂತಹ ತಪ್ಪು ಮಾಹಿತಿ ನೀಡುವಿಕೆಯು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಏಕೆಂದರೆ ಇದು ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ವಿಭಜನೆ ಮತ್ತು ಹಗೆತನವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ರಾಜ್ಯಾದ್ಯಂತ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚುನಾವಣಾ ಪ್ರಕ್ರಿಯೆಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಮತ್ತು ಕೋಮು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳು ಈ ದೋಷಪೂರಿತ ದಾಖಲೆಯ ವಿತರಣೆಯನ್ನು ನಿಲ್ಲಿಸಲು ಮತ್ತು ಅದನ್ನು ತಮ್ಮ ದಾಖಲೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಕ್ಷಣವೇ ತೆಗೆದುಹಾಕಲು ಇದರ ಮೂಲಕ ಸೂಚಿಸಲಾಗಿದೆ” ಎಂದು ಪೊಲೀಸರು ನೀಡಿದ ನೋಟಿಸ್‌ನಲ್ಲಿ ಹೇಳಿದ್ದಾರೆ ಎಂದು thewire.in ತಿಳಿಸಿದೆ.

ಕೇರಳದ ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು, ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರೋಧ ಪಕ್ಷವಾದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಇದನ್ನು ಮುನ್ನಡೆಸುತ್ತಿದೆ. ಆದಾಗ್ಯೂ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ರಾಜ್ಯ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾರತೀಯ ಚುನಾವಣಾ ಆಯೋಗದ (ಇಸಿಐ) ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.

ಚುನಾವಣೆ ಸಮೀಪಿಸುತ್ತಿರುವ ಕೇರಳದಲ್ಲಿ ಎಡರಂಗದ ವಿರುದ್ಧ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಈ ಪೊಲೀಸ್ ನೋಟಿಸ್ ‘ಬಿಜೆಪಿ-ಎಲ್‌ಡಿಎಫ್ ಒಳಸಂಚಿ’ಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.

“ಬೆಳಿಗ್ಗೆ ಒಂದು ವಿಚಾರವನ್ನು ‘ಸಿಬ್ಬಂದಿ ತಪ್ಪು’ ಎಂದು ಕರೆದು, ಸಂಜೆಯ ವೇಳೆಗೆ ಅದರ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಸೆನ್ಸಾರ್ (ನಿರ್ಬಂಧ) ಮಾಡಲು ಮುಂದಾಗಲು ಸಾಧ್ಯವಿಲ್ಲ. ಇದು ಹಾನಿಯನ್ನು ನಿಯಂತ್ರಿಸುವ ಪ್ರಯತ್ನವಲ್ಲ, ಬದಲಿಗೆ ಹಾನಿ ಸಂಭವಿಸಿದೆ ಎಂಬುದನ್ನು ದೃಢಪಡಿಸುವ ಕ್ರಮ” ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಬರೆದುಕೊಂಡಿದ್ದಾರೆ.




ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತ 6ನೇ ಅತ್ಯಂತ ಕಲುಷಿತ ರಾಷ್ಟ್ರ; ಉತ್ತರ ಪ್ರದೇಶದ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರ: ವರದಿ

ಪ್ರಮುಖ ವಾಯು ಮಾಲಿನ್ಯಕಾರಕ ಸೂಕ್ಷ್ಮ ಕಣಗಳ ಮಟ್ಟದಲ್ಲಿ ಭಾರತ ಆರನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, ಉತ್ತರ ಪ್ರದೇಶದ ಲೋನಿ ಜಗತ್ತಿನಾದ್ಯಂತ ಅತ್ಯಂತ ಕಲುಷಿತ ನಗರವಾಗಿದೆ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಶ್ವ ವಾಯು...

ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ ದೆಹಲಿ ಏಮ್ಸ್‌ನಲ್ಲಿ ನಿಧನ

ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿ, ಅಂತಿಮವಾಗಿ 2026ರ ಮಾರ್ಚ್ 11ರಂದು ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ 32 ವರ್ಷದ ಯುವಕ ಹರೀಶ್ ರಾಣಾ, ಮಂಗಳವಾರ (ಮಾ.24)...

ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯವರ್ತಿಯಾದರೆ ಅದು ಭಾರತದ ರಾಜತಾಂತ್ರಿಕ ಹಿನ್ನೆಡೆಯಾಗಬಹುದು; ಕಾಂಗ್ರೆಸ್ 

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂವಹನದಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ದೃಢಪಟ್ಟರೆ ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಬಹುದು ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ,...

ಭಯೋತ್ಪಾದಕ ಚಟುವಟಿಕೆಗಳ ಆರೋಪ; ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆಕೆಯ ಸಹಚರರಾದ ಸೋಫಿ...

ಪಂಜಾಬ್: ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳಕ್ಕೆ ಅಧಿಕಾರಿ ಆತ್ಮಹತ್ಯೆ; ಅಮೃತಸರದಲ್ಲಿ ಶವಪರೀಕ್ಷೆಗೆ ಕುಟುಂಬ ಒಪ್ಪಿಗೆ

ಪಂಜಾಬ್‌ನ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಗೋದಾಮು ನಿಗಮದ ಅಧಿಕಾರಿ ಗಗನ್‌ದೀಪ್ ಸಿಂಗ್ ರಾಂಧವ ಅವರ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ಅಮೃತಸರದಲ್ಲಿ ನಡೆಸಲಾಗುವುದು...

ಮುಸ್ಲಿಂ ಮಹಿಳೆಯರು ‘ನಮಾಜ್’ ಮಾಡುತ್ತಿದ್ದ ಕೊಠಡಿಯಲ್ಲಿ ಮಂತ್ರ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ

ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ)ದ ವಿವಾದಾತ್ಮಕ ನಾಯಕಿ ಮಾಧವಿ ಲತಾ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ನಮಾಜ್‌ ಮಾಡುತ್ತಿದ್ದವರ ಹಿಂದೆ ಮಂತ್ರ ಪಠಿಸುತ್ತಿರುವ ಅವರ ವೀಡಿಯೊವೊಂದು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...

ತೂತುಕುಡಿ ಸಾತನ್‌ಕುಳಂ ತಂದೆ ಮಗನ ಕಸ್ಟಡಿ ಸಾವು ಪ್ರಕರಣ : ಒಂಬತ್ತು ಪೊಲೀಸರು ದೋಷಿಗಳು ಎಂದ ಕೋರ್ಟ್

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ; ಗುರುಗ್ರಾಮ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹರಿಯಾಣದ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಹರಿಯಾಣ ಪೊಲೀಸರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಗುವಿನೊಂದಿಗೆ...

ದಾವಣಗೆರೆ: ನಿಮ್ಮ ದೇಶಭಕ್ತಿ ಪ್ರಶ್ನಿಸುವ ಅಯೋಗ್ಯರಿಗೆ ಮತ ಹಾಕಬೇಡಿ; ಮುಸ್ಲಿಮರಿಗೆ ಪ್ರದೀಪ್ ಈಶ್ವರ್ ಮನವಿ

ದಾವಣಗೆರೆ: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ, ಅವರ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇವತ್ತು ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕದರೆ ನಿಮ್ಮ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಇಂತಹ ಅಯೋಗ್ಯರಿಗೆ ಮತ...

ಭಜನ್‌ಪುರ ಹತ್ಯೆ: ದೇವಾಲಯದ ಬಳಿ ಇರಿತಕ್ಕೊಳಗಾಗಿದ್ದ 18 ವರ್ಷದ ಮುಸ್ಲಿಂ ಯುವಕ ಸಾವು 

"ದೇವಾಲಯದ ಬಳಿ ಇರಿತಕ್ಕೊಳಗಾಗಿದ್ದ 18 ವರ್ಷದ ಮೊಹಮ್ಮದ್ ಆಸಿಫ್ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ" ಎಂದು ಭಜನ್‌ಪುರ ಹತ್ಯೆಯ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ಈಶಾನ್ಯ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ 18 ವರ್ಷದ ಯುವಕನೊಬ್ಬನನ್ನು...