Homeಮುಖಪುಟಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

- Advertisement -
- Advertisement -

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಚುನಾವಣಾ ಆಯೋಗ ಇದನ್ನು ‘ಲಿಪಿಕ ದೋಷ’ (ಬರವಣಿಗೆಯ ದೋಷ/ ಸಿಬ್ಬಂದಿ ದೋಷ/ ತಾಂತ್ರಿಕ ತಪ್ಪು-clerical error)’ ಎಂದು ಹೇಳಿ ಸಮಜಾಯಿಸಿ ನೀಡಿದೆ. ಈ ಸಂಬಂಧ ಒಬ್ಬರು ಸಹಾಯಕ ವಿಭಾಗೀಯ ಅಧಿಕಾರಿಯನ್ನು ಆಯೋಗ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಆದರೂ, ಈ ವಿಚಾರದ ಚರ್ಚೆ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಮುಂದುವರಿದಿದೆ.

ಈ ನಡುವೆ ಚುನಾವಣಾ ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇರಳ ಪೊಲೀಸರು ಸೂಚಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಚುನಾವಣಾ ಆಯೋಗದ ಪತ್ರದ ಕುರಿತ ಪೋಸ್ಟ್‌ಗಳು ‘ಗೌರವಾನ್ವಿತ ರಾಷ್ಟ್ರೀಯ ಸಂಸ್ಥೆ’ಯಾದ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ‘ಬಹಿರಂಗವಾಗಿ ಅವಮಾನಿಸುತ್ತವೆ’ ಎಂದು ಪೊಲೀಸರು ಹೇಳಿದ್ದಾರೆ. ಕುತೂಹಲಕಾರಿಯಾಗಿ ಇವು ‘ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು’ ಹರಡುತ್ತಿವೆ ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.

ಚುನಾವಣಾ ಆಯೋಗದ ಪತ್ರವನ್ನು ಪೋಸ್ಟ್ ಮಾಡಿದ ಬಳಕೆದಾರರಿಗೆ, ಅದನ್ನು ತೆಗೆದು ಹಾಕುವಂತೆ ಕೇರಳ ಪೊಲೀಸರು ಸೂಚಿಸಿರುವುದಾಗಿ ಎಕ್ಸ್‌ ತಿಳಿಸಿದೆ.

“ನಮ್ಮ ಬಳಕೆದಾರರ ಧ್ವನಿಯನ್ನು ಗೌರವಿಸುವುದು ಮತ್ತು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಆದ್ದರಿಂದ, ಯಾವುದೇ ಕಾನೂನು ಜಾರಿ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯಿಂದ ನಿಮ್ಮ ಖಾತೆಯ ಮಾಹಿತಿಯನ್ನು ತೆಗೆದುಹಾಕಲು ನಮಗೆ ವಿನಂತಿ ಬಂದಾಗ, ಆ ಬಗ್ಗೆ ಬಳಕೆದಾರರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ” ಎಂದು ಪತ್ರಕರ್ತ ಪಿಯೂಷ್ ರೈ ಅವರಂತಹ ಬಳಕೆದಾರರಿಗೆ ಎಕ್ಸ್‌ ಸಂಸ್ಥೆಯಿಂದ ಬಂದ ಇಮೇಲ್‌ನಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.

ಚುನಾವಣಾ ಆಯೋಗದ ಪತ್ರವನ್ನು ಪೋಸ್ಟ್ ಮಾಡಿದ್ದಕ್ಕೆ ಎಕ್ಸ್‌ನಿಂದ ಇಮೇಲ್ ಸ್ವೀಕರಿಸಿರುವ ಕಾಂಗ್ರೆಸ್ ನಾಯಕಿ ರುಚಿರಾ ಚತುರ್ವೇದಿ ಅವರು, “ಸಾಮಾಜಿಕ ಮಾಧ್ಯಮಗಳನ್ನು ಸೆನ್ಸಾರ್ ಮಾಡಲು ಈ ರೀತಿಯ ಟೇಕ್‌ಡೌನ್ ನೋಟಿಸ್‌ಗಳು (ತೆಗೆದು ಹಾಕುವಿಕೆ ನೋಟಿಸ್) ನೀಡುವುದು ಈಗ ವಾಡಿಕೆಯ ಅಸ್ತ್ರವಾಗಿಬಿಟ್ಟಿವೆ. ಕೇರಳ ಪೊಲೀಸರ ಪ್ರಕಾರ, ನನ್ನ ಪೋಸ್ಟ್ ಚುನಾವಣಾ ಆಯೋಗವನ್ನು ಅವಮಾನಿಸುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ಚುನಾವಣಾ ಆಯೋಗದ ಈ ‘ಲಿಪಿಕ ದೋಷ’ (clerical error) ಕುರಿತಾದ ಪೋಸ್ಟ್‌ಗಳು ಕೋಮು ಸೌಹಾರ್ದತೆಗೆ ಹೇಗೆ ಧಕ್ಕೆ ತರುತ್ತವೆ ಎಂಬುದು ಪೊಲೀಸರಿಗೇ ಗೊತ್ತಿರಬೇಕು. ಒಂದು ವೇಳೆ ಚುನಾವಣಾ ಆಯೋಗದೊಂದಿಗೆ ಬಿಜೆಪಿಯ ಹೆಸರನ್ನು ಜೋಡಿಸುವುದರಿಂದಲೇ ಅಶಾಂತಿ ಉಂಟಾಗುತ್ತದೆ ಎಂದು ಅವರು ಭಾವಿಸದ ಹೊರತು, ಈ ಆರೋಪದ ಹಿಂದಿನ ಉದ್ದೇಶ ಅಸ್ಪಷ್ಟವಾಗಿದೆ” ಎಂದಿದ್ದಾರೆ.

ಎಕ್ಸ್ ಸಂಸ್ಥೆಯು ಇನ್ನೂ ಆ ಪೋಸ್ಟ್‌ಗಳನ್ನು ತೆಗೆದುಹಾಕಿಲ್ಲದಿದ್ದರೂ, ಕೇರಳ ಪೊಲೀಸರು ನೀಡಿದ ನೋಟಿಸ್‌ನಲ್ಲಿ ಬಳಸಲಾದ ತೀವ್ರ ಪದಬಳಕೆಯು ಅನೇಕರ ಗಮನ ಸೆಳೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೈಬರ್ ಕಾರ್ಯಾಚರಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿಜೋಯ್ ಎಸ್. ಸಹಿ ಮಾಡಿರುವ ನೋಟಿಸ್ ಅನ್ನು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಭಾರತಿ ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಇಂದು ಬೆಳಗ್ಗೆ ಅವರ ಪ್ರೇಮ ಪತ್ರವನ್ನು (ನೋಟಿಸ್) ನೋಡಿಯೇ ನನ್ನ ಕಣ್ಣು ತೆರೆಯಿತು” ಎಂದು ವ್ಯಂಗ್ಯವಾಡಿದ್ದಾರೆ.

ಪೊಲೀಸ್ ನೋಟಿಸ್ ಅನ್ನು ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 79(3)(b) ಮತ್ತು ಐಟಿ ನಿಯಮಗಳು, 2021 ರ ಸೆಕ್ಷನ್ 3(1)(d) ಅಡಿಯಲ್ಲಿ ನೀಡಲಾಗಿದೆ. ಮೊದಲನೆಯ ನಿಯಮದ ಪ್ರಕಾರ, ಸರ್ಕಾರಿ ಸಂಸ್ಥೆಯಿಂದ ಸೂಚನೆ ಬಂದ ನಂತರವೂ ‘ಎಕ್ಸ್‌ನಂತಹ ಮಧ್ಯವರ್ತಿ ಸಂಸ್ಥೆಗಳು ಆ ವಿಷಯವನ್ನು ತೆಗೆದುಹಾಕಲು ವಿಫಲವಾದರೆ, ಅವುಗಳಿಗೆ ಇರುವ ಕಾನೂನು ರಕ್ಷಣೆ ರದ್ದಾಗುತ್ತದೆ. ಎರಡನೆಯ ನಿಯಮದಂತೆ, ನ್ಯಾಯಾಲಯದ ಆದೇಶ ಅಥವಾ ಅಧಿಕೃತ ಸರ್ಕಾರಿ ಸಂಸ್ಥೆಯಿಂದ ಸೂಚನೆ ಬಂದ 36 ಗಂಟೆಗಳ ಒಳಗೆ ಅಂತಹ ವಿಷಯಗಳನ್ನು ತೆಗೆದುಹಾಕುವುದು ಕಡ್ಡಾಯವಾಗಿದೆ.

ಎಕ್ಸ್‌ ಜಾಲತಾಣದ 10 ಪೋಸ್ಟ್‌ಗಳನ್ನು ಉಲ್ಲೇಖಿಸಿರುವ ಕೇರಳ ಪೊಲೀಸರು, “ಈ ಎಕ್ಸ್‌ ಪೋಸ್ಟ್ ಭಾರತೀಯ ಚುನಾವಣಾ ಆಯೋಗವನ್ನು ಬಹಿರಂಗವಾಗಿ ಅವಮಾನಿಸುತ್ತದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತದೆ. ಈ ಪೋಸ್ಟ್ ಕೇವಲ ಗೌರವಾನ್ವಿತ ರಾಷ್ಟ್ರೀಯ ಸಂಸ್ಥೆಗೆ ಮಾಡಿದ ನೇರ ಅವಮಾನ ಮಾತ್ರವಲ್ಲದೆ, ಸಮಾಜದಲ್ಲಿ ಒಡಕು ಮತ್ತು ಹಗೆತನವನ್ನು ಪ್ರಚೋದಿಸುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ” ಎಂದು ಹೇಳಿರುವುದಾಗಿ thewire.in ಉಲ್ಲೇಖಿಸಿದೆ.

ಕೇರಳದ ಮುಖ್ಯ ಚುನಾವಣಾಧಿಕಾರಿಯೇ (ಸಿಇಒ) ಇದು ‘ಲಿಪಿಕ ದೋಷ’ (clerical error) ಎಂದು ಈಗಾಗಲೇ ಒಪ್ಪಿಕೊಂಡಿರುವಾಗ, ಈ ಕ್ರಮವನ್ನು ಏಕೆ ಕೈಗೊಳ್ಳಲಾಗುತ್ತಿದೆ ಎಂದು ಪತ್ರಕರ್ತ ಅರವಿಂದ್ ಗುಣಶೇಖರ್ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ಪತ್ರದ ನಿರಂತರ ಹಂಚಿಕೆಯು ಭಾರತೀಯ ಚುನಾವಣಾ ಆಯೋಗದ (ಇಸಿಐ) ಸಮಗ್ರತೆಯನ್ನು ಕುಗ್ಗಿಸುತ್ತದೆ ಎಂದು ಕೇರಳ ಪೊಲೀಸರು ಹೇಳಿದ್ದಾರಂತೆ.

“ಇದಲ್ಲದೆ, ಸಿಬ್ಬಂದಿಯ ತಪ್ಪಿನಿಂದಾಗಿ ರಾಜಕೀಯ ಪಕ್ಷವೊಂದರ ಲಾಂಛನವನ್ನು ಅಚಾತುರ್ಯದಿಂದ ಒಳಗೊಂಡಿದ್ದ, ಈಗಾಗಲೇ ತಿದ್ದುಪಡಿ ಮಾಡಲಾದ 2019ರ ಹಳೆಯ ದಾಖಲೆಯನ್ನು ಹೊಂದಿರುವ ಎಲ್ಲಾ ಡಿಜಿಟಲ್ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವ ತುರ್ತು ಅಗತ್ಯವಿದೆ. ಹಿಂಪಡೆಯಲಾದ ಈ ವಿಷಯದ ನಿರಂತರ ಪ್ರಸರಣವನ್ನು ಸುಳ್ಳು ಆರೋಪಗಳನ್ನು ಹರಡಲು ಬಳಸಲಾಗುತ್ತಿದೆ, ಆ ಮೂಲಕ ಚುನಾವಣಾ ಆಯೋಗದ ಸಮಗ್ರತೆ ಮತ್ತು ಪಾರದರ್ಶಕತೆಗೆ ಧಕ್ಕೆ ತರಲಾಗುತ್ತಿದೆ. ಇಂತಹ ತಪ್ಪು ಮಾಹಿತಿ ನೀಡುವಿಕೆಯು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಏಕೆಂದರೆ ಇದು ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ವಿಭಜನೆ ಮತ್ತು ಹಗೆತನವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ರಾಜ್ಯಾದ್ಯಂತ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚುನಾವಣಾ ಪ್ರಕ್ರಿಯೆಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಮತ್ತು ಕೋಮು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳು ಈ ದೋಷಪೂರಿತ ದಾಖಲೆಯ ವಿತರಣೆಯನ್ನು ನಿಲ್ಲಿಸಲು ಮತ್ತು ಅದನ್ನು ತಮ್ಮ ದಾಖಲೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಕ್ಷಣವೇ ತೆಗೆದುಹಾಕಲು ಇದರ ಮೂಲಕ ಸೂಚಿಸಲಾಗಿದೆ” ಎಂದು ಪೊಲೀಸರು ನೀಡಿದ ನೋಟಿಸ್‌ನಲ್ಲಿ ಹೇಳಿದ್ದಾರೆ ಎಂದು thewire.in ತಿಳಿಸಿದೆ.

ಕೇರಳದ ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು, ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರೋಧ ಪಕ್ಷವಾದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಇದನ್ನು ಮುನ್ನಡೆಸುತ್ತಿದೆ. ಆದಾಗ್ಯೂ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ರಾಜ್ಯ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾರತೀಯ ಚುನಾವಣಾ ಆಯೋಗದ (ಇಸಿಐ) ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.

ಚುನಾವಣೆ ಸಮೀಪಿಸುತ್ತಿರುವ ಕೇರಳದಲ್ಲಿ ಎಡರಂಗದ ವಿರುದ್ಧ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಈ ಪೊಲೀಸ್ ನೋಟಿಸ್ ‘ಬಿಜೆಪಿ-ಎಲ್‌ಡಿಎಫ್ ಒಳಸಂಚಿ’ಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.

“ಬೆಳಿಗ್ಗೆ ಒಂದು ವಿಚಾರವನ್ನು ‘ಸಿಬ್ಬಂದಿ ತಪ್ಪು’ ಎಂದು ಕರೆದು, ಸಂಜೆಯ ವೇಳೆಗೆ ಅದರ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಸೆನ್ಸಾರ್ (ನಿರ್ಬಂಧ) ಮಾಡಲು ಮುಂದಾಗಲು ಸಾಧ್ಯವಿಲ್ಲ. ಇದು ಹಾನಿಯನ್ನು ನಿಯಂತ್ರಿಸುವ ಪ್ರಯತ್ನವಲ್ಲ, ಬದಲಿಗೆ ಹಾನಿ ಸಂಭವಿಸಿದೆ ಎಂಬುದನ್ನು ದೃಢಪಡಿಸುವ ಕ್ರಮ” ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಬರೆದುಕೊಂಡಿದ್ದಾರೆ.




ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ 2021 ರ "ಬಟ್ಟೆ ಚೀಲ ಹಗರಣ"ಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ...

‘ಯುದ್ಧ ಸೃಷ್ಟಿಸಿದ್ದು ನೀವೇ’: ಹಾರ್ಮುಜ್ ಅಡ್ಡಿಗೆ ಅಮೆರಿಕವನ್ನು ದೂಷಿಸಿದ ಚೀನಾ, ಟ್ರಂಪ್ ಅವರ ‘ಧೈರ್ಯದ ಕೊರತೆ’ ಹೇಳಿಕೆಗೆ ತಿರುಗೇಟು

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು "ಧೈರ್ಯ" ಹೊಂದಿಲ್ಲ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಚೀನಾ ಬಲವಾಗಿ ವಿರೋಧಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ...

ಮೂರನೇ ಅತ್ಯಾಚಾರ ಪ್ರಕರಣ: ಸ್ವ-ಘೋಷಿತ ‘ದೇವಮಾನವ’ ಖರತ್‌ಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಾಸಿಕ್ ನ್ಯಾಯಾಲಯ

ನಾಸಿಕ್: ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಸೋಮವಾರ ಏಪ್ರಿಲ್...

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...