ತಾನು ಹುಟ್ಟಿ ಎರಡೂವರೆ ಸಾವಿರ ವರ್ಷಗಳ ಬಳಿಕವೂ ಜೈನಧರ್ಮದ ಸನ್ಯಾಸಿಗಳು ಇಂದಿಗೂ ಕಾಲು ನಡಿಗೆಯಲ್ಲಿಯೇ ತಮ್ಮ ಪರಿಕ್ರಮಣವನ್ನು ಪೂರೈಸಬೇಕಿರುವುದು ನನ್ನನ್ನು ವರ್ಷಗಳಿಂದ ವಿಸ್ಮಯ, ಅಚ್ಚರಿ ಮತ್ತು ಜಿಜ್ಞಾಸೆಗೆ ತಳ್ಳಿದೆ. ಬೇರಾವ ದರ್ಶನಗಳು ಇಂಥದ್ದೊಂದು ಕಠಿಣ ನಿಯಮವನ್ನು ಪಾಲಿಸಿಕೊಂಡು ಬಂದಿವೆಯೋ ಗೊತ್ತಿಲ್ಲ.
ಪರಿತ್ಯಾಗಿ ದಿಗಂಬರ ಮೊದಲು ಎಲ್ಲವನ್ನೂ ಕಳಚಬೇಕು. ಬಳಿಕ ತನ್ನನ್ನು ನಿಸರ್ಗಕ್ಕೆ ಒಪ್ಪಿಸಿಕೊಳ್ಳಬೇಕು. ಲೋಕವನ್ನು ನಗ್ನ ಸ್ಥಿತಿಯಲ್ಲಿಯೇ ಎದುರುಕೊಳ್ಳುತ್ತಲೇ ಅಂತಿಮವಾಗಿ ಪ್ರಕೃತಿಯಲ್ಲಿ ಒಂದಾಗಬೇಕು.
ಇಲ್ಲಿ ಎಲ್ಲವೂ ಅನಿರೀಕ್ಷಿತ, ದುರ್ಗಮ, ಅಗಮ್ಯ, ಅಗೋಚರ. ನಿರೀಕ್ಷಿತವಾದುದೆಂದರೆ ಆ ಕ್ಷಣಕ್ಕೆ ಎದುರಾಗುವ ಅನುಭವ ಮಾತ್ರ. ದೇಹದ ಐದೂ ಬಗೆಯ ‘ಗೋಚರ’ ಇಂದ್ರೀಯಗಳು; ಏಕಕಾಲಕ್ಕೆ ಅಸ್ತಿತ್ವದಲ್ಲಿರುವ ಅಗೋಚರವಾದ ಹಲ ಬಗೆಯ ‘ಮನಸ್ಸು’ಗಳನ್ನು ಈ ಸವಣ ‘ಪಂಚಭೂತ’ಗಳೊಂದಿಗೆ ನೇರ ಮುಖಾಮುಖಿಯಾಗಿಸಬೇಕಾಗುತ್ತದೆ. ರಾಜರಸ್ತೆಯ ನುಣುಪು, ಕಾಡಿನ ಕಾಲುದಾರಿಗಳ ಹುಲ್ಲು-ಮುಳ್ಳು, ಪಾದಕ್ಕೆ ಆಣೆ ಎಬ್ಬಿಸಬಲ್ಲ ಹಳಕು ಹರಳು, ಬೆಳಚುಗಲ್ಲು ತುಳಿದು ಮುಂದೆ ಹೋಗಬೇಕಾಗುತ್ತದೆ. ಭಯಾನಕ ಬಿಸಿಲು, ಗಾಳಿ, ತಂಪನೀವ ನೆರಳು, ಹೂವಿನಂತೆ ತಲೆ ಸವರುವ ತುಂತುರು ಮಳೆಗಳ ಕೃಪೆಯೂ ಒಂದೊಮ್ಮೆ ದೊರಕೀತು. ಎಲ್ಲವೂ ನಿಸರ್ಗದ ಕೃಪೆಯಷ್ಟೇ! ಸಾಯುಜ್ಯದ ದಾರಿಯಲ್ಲಿ ಅದೂ ಒಂದು ಅನುಭವ, ಅಷ್ಟೇ! ಅದೇ ಎಲ್ಲವೂ ಅಲ್ಲ.
ಇತಿಹಾಸವು ರೂಪಿಸುವ ಮುಖದ ಮೇಲಿನ ಗಾಯಗಳ ನಿಜವಾದ ವ್ಯಂಗ್ಯ ಮತ್ತು ದುರಂತವೆಂದರೆ, ಈ ಗಾಯಗಳು ಉಳಿದವರಿಗೆ ಸ್ಫಟಿಕದಂತೆ ಗೋಚರಿಸುತ್ತವೆ, ಆದರೆ ಅವನ್ನು ಹೊತ್ತವರಿಗೆ ಮಾತ್ರ ಕಾಣಿಸುವುದಿಲ್ಲ. ಮನುಷ್ಯಲೋಕದ ಈ ರೂಕ್ಷ ವಾಸ್ತವವನ್ನು ಮರೆಯಾಗಿಸಲೆಂಬಂತೆ ನಮ್ಮ ಜನಪದ ದೈವಾರಾಧನೆಗಳು ‘ಮುಖಮರೆ’ ಅಥವ ಬೇರೊಂದು ರೂಪವನ್ನು ತೊಟ್ಟು ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಸತ್ಯದ ನಿಯಮವನ್ನು ‘ಕಾರಣಿಕೆ’ಯ ಮೂಲಕ ಅರುಹುತ್ತವೆ! ಇವು ಬೇರೊಂದು ಲೋಕದಿಂದ ಬರುತ್ತಿದ್ದರೂ ನಮ್ಮ ಪೂರ್ವಿಕರದೇ ಆಗಿರುತ್ತವೆ. ಅಷ್ಟರಮಟ್ಟಿಗೆ ದೈವಕ್ಕೆ ನಮ್ಮ ಬದುಕಿನ ಪಡಿಪಾಟಲು ಏನೆಂದು ತಿಳಿದಿದೆ! ಹೀಗೆ ತಿಳಿದಿರುವುದರಿಂದಲೇ ಅವು ನಮ್ಮನ್ನು ವಿಮರ್ಶಿಸಿ, ಶಿಕ್ಷಿಸಿ, ಶಮನಗೊಳಿಸಬಲ್ಲುವು.
ಮೇಲಿನ ಎಲ್ಲ ಮಾತುಗಳು ಸಾಪೇಕ್ಷಿತ ಸತ್ಯಶೋಧಕನಿಗೂ ಅನ್ವಯ. ಆತ ಸಿದ್ಧಮಾದರಿಯ ಪರಿಕರಗಳೊಂದಿಗೆ ಎಲ್ಲವನ್ನೂ ಅರಿತುಕೊಳ್ಳುವೆ ಎಂಬ ಹಂಕಾರದಲಿ ಹೊರಡದಿರುವ ‘ದಿಗಂಬರ.’
ಒಂದು ಸಿದ್ಧಾಂತಕ್ಕೆ ಕಟ್ಟು ಬೀಳದೆ, ಒಂದು ಕಡೆ ನೆಲೆ ನಿಲ್ಲದೆ, ನಿರಂತರ ಜಂಗಮ ತತ್ತ್ವದಲಿ ನಂಬಿಕೆಯಿಟ್ಟ ಸವಣ.
ಒಂದೇ ಬಗೆಯ ನಾಲಗೆ ರುಚಿಗೆ (ಮಾತು) ಕಟ್ಟು ಬೀಳದೆ ಒಡಲನ್ನು ಹಸಿವಿನಿಂದ ಕಂಗೆಡಿಸಬಲ್ಲ ಸಂಯಮಿ. ಉಪವಾಸಿಗ, ಉಪಾಸಕ.
ಏಕಬಗೆಯ ಜನರನ್ನು ನೋಡುತ್ತ, ಭೇಟಿಯಾಗುತ್ತ ಲೋಲುಪ ವಾಚಾಳಿಯಾಗುವ ಬದಲು ದೇಶಭಾಷಿಕ ಗಡಿಗಳ ಮೀರಿ ನಡೆದು ಉಳಿದ ಜನರಾಡುವ ಸೊಲ್ಲಿನ ಒಂದೆರಡು ಶಬ್ದಗಳನು ಕಲಿತು, ಅರಿತುಕೊಳ್ಳುವ ಕಲಿಕೆದಾರ.
ಸ್ಥಿತಪ್ರಜ್ಞ, ಸ್ಥಾವರ, ಏಕತಾನದ ಕಟ್ಟುಪಾಡುಗಳಿಗಿಂತ ಕಟ್ಟು ಬಿಚ್ಚಿಟ್ಟ, ಕಗ್ಗಂಟಾದ, ಚಿನ್ನ ಮತ್ತು ಚಿಂದಿಗಳಿರುವ ಗಂಟನ್ನು ಬಿಚ್ಚಿ ನೋಡುವ ‘ಬಹುತ್ವ’ದ ಕುತೂಹಲಿ.
ಕಾಲು ನಡಿಗೆ ಕೂಡ ಸೊಗಸುಗಾರರ ‘ರೂಢಿಸಿಕೊಂಡ ಶೈಲಿಯ’ ನಡಿಗೆಯಾಗುವ;
ಪಡೆದ ಅನುಭವವು (ಕ್ಷೇತ್ರಕಾರ್ಯ) ಹಳಸಿದ ಅನ್ನವಾಗುವ, ಕೇಳಿಸಿಕೊಂಡಿದ್ದೇನೆಂಬ ಭ್ರಮೆಯಲ್ಲಿರುವ ‘ಕಾಲಜ್ಞಾನ’ದ ಮಾತು ಕೂಡ ಲೊಳಲೊಟ್ಟೆಯಾಗುವ ಅಪಾಯ ಸತ್ಯಶೋಧಕನಿಗೆ ಕಟ್ಟಿಟ್ಟ ಬುತ್ತಿ. ಆತ ‘ತಾನೊಬ್ಬ ದಿಗಂಬರ, ‘ಕವಣಿಗ’. ತನ್ನ ಕೈಯಲ್ಲಿ ಯಾವ ಪರಿಕರಗಳೂ ಇಲ್ಲ, ತಾನು ನಡೆದು ಸವೆಸಬೇಕಾದ ದಾರಿ ಬಲು ದೂರ. ಇನ್ನೂ ಕೇಳಬೇಕಾದ ನಿಸರ್ಗದ ಸಹಜ ಚೆಲುವಿನ ದನಿಗಳು, ಅದು ನೀಡುವ ಎಲ್ಲ ಬಗೆಯ ಅನುಭವಗಳು, ಕೇಳದ ಮಾತುಗಳು ಬಹಳ ಇವೆ. ಸಿಕ್ಕ ಮಾನವ ದಿವ್ಯಾನುಭವವನ್ನೇ ಕವಣೆ*ಯನ್ನಾಗಿ ಮಾಡಿಕೊಳ್ಳಬೇಕು’ ಎಂದು ಅರಿತಿದ್ದರೆ ಆತನ ಅನುಭವದ ಗಂಟಿನ ಬುತ್ತಿ ಮುಂದಿನವರ ನಾಲಗೆಗೆ ತುಸು ರುಚಿಯನ್ನು, ಕಣ್ಣಗೆ ಪಸೆಯನ್ನು, ಒಡಲಿಗೆ ತಣ್ಣಗಿನ ಭಾವವನ್ನು ಕಾಲಿಗೆ ಕಸುವನ್ನು ನೀಡುತ್ತವೆ.
ಇಷ್ಟೂ ಮಾತುಗಳನ್ನು ಬರೆಯುತ್ತಿರುವುದು ನನಗಿಂತ ಕಿರಿಯರಾದ ಆದರೆ ವಿನಯ, ಸಂಯಮ, ಅಪಾರ ಸಹನೆಗಳನ್ನು ಹೊಂದಿ ಹೆಜ್ಜೆ ಇಡುತ್ತಿರುವ ದಿಗಂಬರ ಸವಣ ಎ.ಎಸ್. ಪ್ರಭಾಕರ ಅವರಿಗಾಗಿ. ಮೇಲಿನ ಮಾತುಗಳಿಗೆ ಸಮರ್ಥನೆಯಂತೆ ಅವರ ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕದ ಪ್ರಬಂಧಗಳು ರೂಪುಗೊಂಡಿವೆ. ಅಲ್ಲಿ ಹೆಮ್ಮರವಾಗುವ ಬೀಜದ ಮಾತುಗಳು ಅಡಗಿವೆ.
ಈ ಭಾನುವಾರ ಬಿಡುಗಡೆಯಾಗಿರುವ ಅವರ ಈ ಪುಸ್ತಕ ಕೊಂಡು ಓದಿ. ಪ್ರಭಾಕರ ಅವರ ಬರಿಗಾಲಿನ ಹೆಜ್ಜೆ ಬಹುದೂರ ಸಾಗಲಿ. ಅಂತಹ ಸಾಮರ್ಥ್ಯ ಅವರಿಗಿದೆ.
(ಇದೇ ಮಾತುಗಳನ್ನು ನನಗಿಂತ ವಯಸ್ಸಿನಲ್ಲಿಯಷ್ಟೇ ಚಿಕ್ಕವರಾದ ಸುರೇಶ ನಾಗಲಮಡಿಕೆ, ಅರುಣ್ ಜೋಳದಕೂಡ್ಲಿಗಿ, ಸುಧಾಕರ ದೇವಾಡಿಗ, ಆರಡಿ ಮಲ್ಲಯ್ಯ ಕಟ್ಟೇರ, ರಂಗನಾಥ ಕಂಟನಕುಂಟೆ, ವಿನಯ ನಂದೀಹಾಳ ಮತ್ತು ಅಂಥ ಯುವ ಸಂಶೋಧರ ಬಗ್ಗೆಯೂ ಹೇಳಬಹುದು.)
*
ಕವಣೆ: ಕ್ಲಾದ್ ಲೆವಿ ಸ್ಟ್ರಾಸ್ ಇದನ್ನು ಬ್ರಿಕೊಲೆಜ್ ಎನ್ನುತ್ತಾನೆ. ಗ್ರಾಹ್ಯ ಮಾನವ ಅನುಭವದಲ್ಲಿ ಕೈಗೆ ದೊರಕಿದ್ದನ್ನೇ ಸತತ ಪರಿಶ್ರಮದ ಮೂಲಕ ಪಳಗಿಸಿ, ತಾನೇ ಮಾಡುತ್ತ, ಮಾಡುತ್ತ ಕಲಿಯುವ ಅಥವ ಪರಿಕರವೊಂದನ್ನು ರೂಪಿಸಿಕೊಳ್ಳುವ ಪ್ರಕ್ರಿಯೆ.
- ಕೇಶವ ಮಳಗಿ
ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ
ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
ಲೇಖಕರು- ಡಾ.ಎ.ಎಸ್.ಪ್ರಭಾಕರ್
ಬೆಲೆ- 250/-
ಗೂಗಲ್ ಪೆ- 9880302817
ಆನ್ಲೈನ್ ಮೂಲಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಚಹರೆಗಳೆಂದರೆ ಗಾಯಗಳೂ ಹೌದು’ ಒಂದು ಸಕಾಲಿಕ ಮೌಲಿಕ ಕೃತಿ – ನಾ ದಿವಾಕರ


