ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾರ್ವಜನಿಕವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ ಬೆನ್ನಲೇ ಈ ಕುರಿತು ಯಾವುದೇ ಪ್ರತಿಕ್ರಿಯೇ ನೀಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ. ಜೊತೆಗೆ ಈ ವಿಷಯವನ್ನು ಬಿಸಿಸಿಐ ನಿಭಾಯಿಸುತ್ತದೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ಟಿ 20 ನಾಯಕತ್ವವನ್ನು ತ್ಯಜಿಸುವ ಉದ್ದೇಶವನ್ನು ಸ್ಪಷ್ಟಪಡಿಸಿದಾಗ, ಅವರನ್ನು ಯಾರೂ ಕೂಡ ಟಿ 20 ನಾಯಕರಾಗಿ ಉಳಿಯುವಂತೆ ಕೇಳಿರಲಿಲ್ಲ ಎಂದು ಹೇಳಿದ್ದರು.
ಕೊಹ್ಲಿಯವರ ಈ ಹೇಳಿಕೆಯು ಕೆಲವು ದಿನಗಳ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದ ಹೇಳಿಗೆ ವ್ಯತಿರಿಕ್ತವಾಗಿತ್ತು. ಗಂಗೂಲಿ ಅವರು ಈ ಸ್ಥಾನವನ್ನು ತೊರೆಯದಂತೆ ಕೊಹ್ಲಿಗೆ ಮನವಿ ಮಾಡಲಾಗಿತ್ತು ಎಂದು ಹೇಳಿದ್ದರು.
ಇದನ್ನೂ ಓದಿ: ಮುಗಿದ ವಿರಾಟ್ ಕೊಹ್ಲಿ ಯುಗ; ಟೀಂ ಇಂಡಿಯಾ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾ!
“ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ., ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ನಾವು ಇದನ್ನು ನಿಭಾಯಿಸುತ್ತೇವೆ, ಬಿಸಿಸಿಐ ಇದನ್ನು ನೋಡಿಕೊಳ್ಳುತ್ತದೆ” ಎಂದು ಗುರುವಾರ ಸೌರವ್ ಗಂಗೂಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, “ನಾನು T20 ನಾಯಕತ್ವವನ್ನು ತೊರೆದಾಗ, ನಾನು ಮೊದಲು BCCI ಅನ್ನು ಸಂಪರ್ಕಿಸಿದೆ. ನನ್ನ ನಿರ್ಧಾರವನ್ನು ಅವರಿಗೆ ತಿಳಿಸಿದ್ದೆ. ನಾನು ಟಿ 20 ನಾಯಕತ್ವವನ್ನು ಏಕೆ ತೊರೆಯಲು ಬಯಸುತ್ತಿದ್ದೇನೆ ಎಂಬುದರ ಕಾರಣಗಳನ್ನು ನೀಡಿದ್ದೇನೆ. ಅವರು ನನ್ನ ಮಾತನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಲಾಯಿತು. ಆದರೆ, ‘ನೀವು ಟಿ 20 ನಾಯಕತ್ವವನ್ನು ತೊರೆಯಬೇಡಿ’ ಎಂದು ನನಗೆ ಒಮ್ಮೆಯೂ ಯಾರು ಹೇಳಲಿಲ್ಲ” ಎಂದು ಹೇಳಿದ್ದರು.