ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರು ತಮ್ಮ ಮಾಜಿ ಮಿತ್ರಪಕ್ಷ ಬಿಜೆಪಿಯನ್ನು ಬುಧವಾರ ಟೀಕಿಸಿದ್ದು, “ಹಿಂದುತ್ವಕ್ಕಾಗಿ ಶಿವಸೇನೆಯ ಬದ್ಧತೆಯು ರಾಜಕೀಯ ಅಥವಾ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ, ಜನರ ಆಹಾರ, ಬಟ್ಟೆ ಮತ್ತು ವಸತಿಯನ್ನು ಖಚಿತಪಡಿಸುತ್ತದೆ” ಎಂದು ಹೇಳಿದ್ದಾರೆ.
ಸಂಜಯ್ ರಾವತ್ ಬುಧವಾರದಂದು ತಮ್ಮ ಹಿಂದುತ್ವದ ಕಾರ್ಡ್ ಬಳಸಿ, ತಮ್ಮ ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯು, ‘‘ಹಿಂದೂಗಳು ತಮ್ಮ ಮತವನ್ನು ಧರ್ಮದ ಹೆಸರಿನಲ್ಲಿ ಚಲಾಯಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ’’ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಒಕ್ಕೂಟವಿಲ್ಲ: ಶಿವಸೇನೆ ಮುಖಂಡ ಸಂಜಯ್ ರಾವತ್
“ಅಯೋಧ್ಯೆಯಲ್ಲಿ ಬಾಬರಿ ಧ್ವಂಸವಾಗುತ್ತಿದ್ದಾಗ ಇಂದು ಹಿಂದುತ್ವದ ಮತಬ್ಯಾಂಕ್ ಅನ್ನು ಪ್ರತಿಪಾದಿಸುವವರು ಓಡಿ ಹೋಗಿದ್ದರು. ಶಿವ ಸೇನೆಯ ಕಾರ್ಯಕರ್ತರು ಮತ್ತು ಬಾಳಾಸಾಹೇಬ್ ಠಾಕ್ರೆ ಅವರು ಹಿಂದೂಗಳ ಪರವಾಗಿ ದೃಢವಾಗಿ ನಿಂತಿದ್ದರು ಮತ್ತು ಬಾಬರಿಯನ್ನು ಧ್ವಂಸ ಮಾಡಿದ ಶಿವಸೇನೆ ಕಾರ್ಯಕರ್ತರ ಬಗ್ಗೆ ಹೆಮ್ಮೆಪಟ್ಟಿದ್ದರು” ಎಂದು ಸಂಜಯ್ ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಿಂದೂ ವೋಟ್ ಬ್ಯಾಂಕ್ ಸೃಷ್ಟಿಸಿದ ಮೊದಲ ವ್ಯಕ್ತಿ ಛತ್ರಪತಿ ಶಿವಾಜಿ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ಛತ್ರಪತಿ ಶಿವಾಜಿ ಮೊದಲ ಹಿಂದೂ ವೋಟ್ ಬ್ಯಾಂಕ್ ಅನ್ನು ಹುಟ್ಟುಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ದೇಶದಲ್ಲಿ ಮೊದಲ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು ಎಂದು ರಾವತ್ ಪ್ರತಿಪಾದಿಸಿದ್ದಾರೆ.
ಛತ್ರಪತಿ ಶಿವಾಜಿಯವರ ಬೋಧನೆಗಳನ್ನು ಬಾಳಾಸಾಹೇಬ್ ಠಾಕ್ರೆ ಹಾಗೂ ಅದಕ್ಕಿಂಲೂ ಮೊದಲು ಸಾವರ್ಕರ್ ಮಹಾರಾಷ್ಟ್ರದಲ್ಲಿ ಮತ್ತು ದೇಶಾದ್ಯಂತ ಪೋಷಿಸಿದರು ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ: 2024ಕ್ಕೆ ರಾವಣನನ್ನು ಸಂಪೂರ್ಣವಾಗಿ ಸುಡುತ್ತೇವೆ: ಶಿವಸೇನೆ ಸಂಸದ ಸಂಜಯ್ ರಾವತ್
ಬಾಳಾಸಾಹೇಬ್ ಠಾಕ್ರೆ ಅವರು ದೇಶದ ಹಿಂದೂಗಳು ಹಿಂದೂಗಳಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿದ್ದಾರೆ ಎಂದು ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹೇಳಿದ್ದರು ಎಂದು ರಾವತ್ ನೆನಪಿಸಿಕೊಂಡಿದ್ದಾರೆ.
ದೇಶದಲ್ಲಿ ಹಿಂದೂ ವೋಟ್ ಬ್ಯಾಂಕ್ ಅಸ್ತಿತ್ವದಲ್ಲಿದೆ ಮತ್ತು ಹಿಂದೂಗಳು ಧರ್ಮದ ಹೆಸರಿನಲ್ಲಿ ಮತ ಚಲಾಯಿಸುವುದನ್ನು ಖಾತ್ರಿಪಡಿಸಿಕೊಂಡರು ಎಂಬುದನ್ನು ಬಾಳಾಸಾಹೇಬ್ ಅವರು ಮೊದಲ ಬಾರಿಗೆ ತೋರಿಸಿಕೊಟ್ಟಿದ್ದಾರೆ ಎಂದು ಅಯೋಧ್ಯೆ ಧ್ವಂಸದ ನಂತರ ನಡೆದ ಮಹಾರಾಷ್ಟ್ರ ವಿಧಾನಸಭಾ ಉಪಚುನಾವಣೆಯನ್ನು ಉಲ್ಲೇಖಿಸಿ ರಾವತ್ ಹೇಳಿದ್ದಾರೆ.
ಹಿಂದುತ್ವದ ವಿಚಾರವಾಗಿ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಪ್ರತಿಪಾದಿಸಿದ ಶಿವಸೇನೆ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಆದರೆ, ಅಮಾನತು ವಿರುದ್ಧ ಹೋರಾಟ ನಡೆಸಿ ಗೆದ್ದಿದ್ದೇವೆ. ಯಾವುದೇ ಬಿಜೆಪಿ ಶಾಸಕರು ಇದೇ ರೀತಿಯ ಕ್ರಮವನ್ನು ಎದುರಿಸುತ್ತಿದ್ದಾರೆಂದು ನನಗೆ ನೆನಪಿಲ್ಲ ಎಂದು ರಾವತ್ ಹೇಳಿದ್ದಾರೆ.
“ನಮ್ಮ ಹಿಂದುತ್ವ ನಮಗೆ ಭಯಪಡುವುದನ್ನು ಕಲಿಸುವುದಿಲ್ಲ. ನಾವು ದೃಢವಾಗಿ ನಿಲ್ಲುತ್ತೇವೆ, ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ನಮ್ಮ ಹಿಂದುತ್ವ ಕೇವಲ ರಾಜಕೀಯ ಮತ್ತು ಚುನಾವಣೆಗಾಗಿ ಅಲ್ಲ, ಕೇವಲ ದೇವಸ್ಥಾನಗಳಿಗೆ ಸೀಮಿತವಲ್ಲ. ನಮ್ಮ ಹಿಂದುತ್ವವು ಜನರಿಗೆ ಆಹಾರ, ಬಟ್ಟೆ ಮತ್ತು ವಸತಿ ಸಿಗುವಂತೆ ನೋಡಿಕೊಳ್ಳುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೋವಾ ವಿಧಾನಸಭಾ ಚುನಾವಣೆ: 22 ಸ್ಥಾನಗಳಲ್ಲಿ ಸ್ಪರ್ಧಿಸಲಿರುವ ಶಿವಸೇನೆ