ಸರ್ಕಾರಿ ಯೂಟ್ಯೂಬ್ ಚಾನೆಲ್ನಲ್ಲಿ ಆಗುತ್ತಿದ್ದ ನೇರಪ್ರಸಾರವನ್ನು ಬಳಸಿ ಲೈವ್ ನೀಡಿದ ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ಅನ್ನು ಗೂಗಲ್ ಸಂಸ್ಥೆ ಗುರುವಾರ ಅಮಾನತು ಮಾಡಿದೆ.
ಹಕ್ಕುಸ್ವಾಮ್ಯ ಉಲ್ಲಂಘನೆ ಎಂದು ಆರೋಪಿಸಿರುವ ಗೂಗಲ್, ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್ (youtube.com/varthabharatinews) ಮೇಲೆ ಒಂದು ವಾರ ಕಾಲ ನಿರ್ಬಂಧ ಹೇರಿದೆ.
ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾದ ‘ವಾರ್ತಾಭಾರತಿ’ ಕಳೆದ ಇಪ್ಪತ್ತು ವರ್ಷಗಳಿಂದ ಪ್ರಕಟವಾಗುತ್ತಿದೆ. ವಾರ್ತಾ ಭಾರತಿಯ ಯೂಟ್ಯೂಬ್ ಚಾನೆಲ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ವೀಕ್ಷಕರನ್ನು ಸೆಳೆಯುತ್ತಿದೆ.
“ಏಳು ದಿನಗಳವರೆಗೆ ಚಾನೆಲ್ನಲ್ಲಿ ಯಾವುದೇ ವಿಷಯವನ್ನು ಅಪ್ಲೋಡ್ ಮಾಡದಂತೆ ಅಥವಾ ಲೈವ್ ಸ್ಟ್ರೀಮ್ ಮಾಡದಂತೆ ನಿರ್ಬಂಧಿಸಲಾಗಿದೆ” ಎಂದು ‘ವಾರ್ತಾಭಾರತಿ’ ಇಂಗ್ಲಿಷ್ ಜಾಲತಾಣ ವರದಿ ಮಾಡಿದೆ.
ಸಾಮಾನ್ಯವಾಗಿ ಎಲ್ಲ ಮಾಧ್ಯಮಗಳು ಬಳಸುವ ರೀತಿಯಲ್ಲಿಯೇ ‘ಪ್ರಧಾನಮಂತ್ರಿ’ ಯೂಟ್ಯೂಬ್ ಚಾನೆಲ್ನಿಂದ ಕನೆಕ್ಷನ್ ಪಡೆದು, ದೆಹಲಿಯ ಕರ್ತವ್ಯ ಪಥದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ‘ವಾರ್ತಾ ಭಾರತಿ’ ಲೈವ್ ಸ್ಟ್ರೀಮ್ ಮಾಡಿತ್ತು ಎಂದು ವರದಿ ತಿಳಿಸಿದೆ.
ನಿರ್ಬಂಧ ಹೇರಿರುವ ಸಂಬಂಧ ವಾರ್ತಾಭಾರತಿ ಮಾಧ್ಯಮವು ಸಲ್ಲಿಸಿದ ಮೇಲ್ಮನವಿಯನ್ನೂ ಗೂಗಲ್ ತಿರಸ್ಕರಿಸಿದೆ.
ಸರ್ಕಾರದಿಂದ ಲೈವ್ ಆಗಿದ್ದಾಗ ಅದನ್ನು ಬಳಸಿಕೊಂಡು ಮಾಧ್ಯಮಗಳು ಸಾಮಾನ್ಯವಾಗಿ ನೇರಪ್ರಸಾರ ಮಾಡುತ್ತವೆ ಎಂದು ‘ವಾರ್ತಾಭಾರತಿ’ ತನ್ನ ಮನವಿಯಲ್ಲಿ ಉಲ್ಲೇಖಿಸಿದೆ.
ಪ್ರಮುಖ ರಾಷ್ಟ್ರೀಯ ಹಬ್ಬಗಳು ಮತ್ತು ಆಚರಣೆಗಳ ನೇರ ಪ್ರಸಾರವನ್ನು ನೀಡಲು ಮಾಧ್ಯಮ ಸಂಸ್ಥೆಗಳು ಸರ್ಕಾರಿ ಚಾನೆಲ್ಗಳ ಪ್ರಸಾರಗಳನ್ನು ಬಳಸಿಕೊಳ್ಳುವುದು ಚಾಲ್ತಿಯಲ್ಲಿದೆ. ಗುರುವಾರ ಕೂಡ, ವಿವಿಧ ಪ್ರಾದೇಶಿಕ ಭಾಷೆಗಳ ಹಲವು ಯೂಟ್ಯೂಬ್ ಚಾನೆಲ್ಗಳು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ಅನ್ನು ಲೈವ್ ಸ್ಟ್ರೀಮ್ ಮಾಡಲು ಸರ್ಕಾರಿ ಯೂಟ್ಯೂಬ್ ಚಾನೆಲ್ಗಳನ್ನು ಬಳಸಿಕೊಂಡಿವೆ. ಆದಾಗ್ಯೂ ಗೂಗಲ್ ವಾರ್ತಾಭಾರತಿಯ ಮನವಿಯನ್ನು ತಿರಸ್ಕರಿಸಿದೆ. ಅಮಾನತು ಮತ್ತು ನಿರ್ಬಂಧ ಸರಿ ಎಂದಿದೆ.
‘ವಾರ್ತಾಭಾರತಿ’ಯ ಯೂಟ್ಯೂಬ್ ಚಾನೆಲ್ 2.1 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಸುದ್ದಿ ಮತ್ತು ವಿಶ್ಲೇಷಣೆಗೆ ಹೆಸರಾದ ಪ್ರಖ್ಯಾತ ಯೂಟ್ಯೂಬ್ ಚಾನೆಲ್ ಕೂಡ ಇದಾಗಿದೆ.