Homeಕರ್ನಾಟಕಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

ಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

- Advertisement -
- Advertisement -

ಹಿರಿಯ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರು, ಬಳ್ಳಾರಿಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಯ ಅರಣ್ಯ ಗುತ್ತಿಗೆಗಾಗಿ ಕುದುರೆಮುಖ ಐರನ್ ಓರ್ ಕಂಪನಿ ನಿಯಮಿತ (KIOCL) ಮುಂದಿಟ್ಟಿರುವ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ದೇವದಾರಿ ಗಣಿ ದಕ್ಕಿಸಿಕೊಳ್ಳಲು, KIOCL ಈ ಹಿಂದೆ ಕುದುರೆಮುಖದಲ್ಲಿ ಮಾಡಿದ ನಷ್ಟದ ಪರಿಹಾರವಾಗಿ ತನ್ನ ಮಾಲೀಕತ್ವದ 114.3 ಹೆಕ್ಟೇರ್ ಭೂಮಿ ಮತ್ತು ಅಲ್ಲಿನ ನಿರ್ಮಾಣಗಳನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವುದಾಗಿ ಹೇಳಿದೆ. ಇದು ಒಂದು ಕಡೆ ಅರಣ್ಯ ಇಲಾಖೆಯ ಬೇಡಿಕೆಗೆ ಮಣಿದಂತೆ ಕಂಡರೂ, ಈ ನಿರ್ಧಾರವು ತೀವ್ರ ಅನಾಹುತಗಳಿಗೆ ಕಾರಣವಾಗಲಿದೆ ಎಂದು ವಿಠಲ್ ಹೆಗಡೆಯವರು ಎಚ್ಚರಿಸಿದ್ದಾರೆ.

ಪ್ರಮುಖ ವಿರೋಧದ ಕಾರಣಗಳು

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಕಂಪನಿಯ ಭೂಮಿಯನ್ನು ಅರಣ್ಯಕ್ಕೆ ಹಸ್ತಾಂತರಿಸುವುದರಿಂದ ಎರಡು ಪ್ರಮುಖ ಅಪಾಯಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದ್ದಾರೆ. ಒಂದು, ಸುತ್ತಮುತ್ತಲಿನ ಜನರಿಗೆ ತೀವ್ರ ತೊಂದರೆಯಾಗುತ್ತದೆ, ಅವರ ಬದುಕು ಅತಂತ್ರವಾಗುತ್ತದೆ. ಇನ್ನೊಂದು, ಸ್ವತಃ ಕಂಪನಿಯೇ ತನ್ನ ಭವಿಷ್ಯಕ್ಕೆ ತಾನೇ ಸಂಚಕಾರ ತಂದುಕೊಳ್ಳುತ್ತದೆ. ದೇವದಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ರಾಜ್ಯದ ಅರಣ್ಯ ಇಲಾಖೆ ಮತ್ತು KIOCL ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಮಣಿದಿರುವ KIOCL, ಈ ಮೂಲಕ ದೇವದಾರಿ ಗಣಿಯ ಅರಣ್ಯ ಗುತ್ತಿಗೆ ಪಡೆಯಲು ಯತ್ನಿಸುತ್ತಿದೆ.

ಲಕ್ಯಾ ಅಣೆಕಟ್ಟಿನ ದುರಂತ ಇತಿಹಾಸ

KIOCL ಭಾರತ ಸರ್ಕಾರದ ಒಂದು ಸಾರ್ವಜನಿಕ ಉದ್ಯಮವಾಗಿದ್ದು, 1976 ರಲ್ಲಿ ಸ್ಥಾಪನೆಯಾಗಿತ್ತು. ಕುದುರೆಮುಖದಲ್ಲಿ ಗಣಿಗಾರಿಕೆ ಪ್ರಾರಂಭವಾದಾಗ, ಅಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಹೂಳು (tailings ಅಥವಾ slurry) ನೈಸರ್ಗಿಕ ಜಲಮೂಲಗಳಿಗೆ ಸೇರಿ ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಲಕ್ಯಾ ಹೊಳೆಗೆ ಅಡ್ಡಲಾಗಿ ಒಂದು ದೊಡ್ಡ ಅಣೆಕಟ್ಟನ್ನು 1994ರಲ್ಲಿ ನಿರ್ಮಿಸಲಾಯಿತು. ಆದರೆ, ಗಣಿಗಾರಿಕೆ ಮುಂದುವರೆದಂತೆ ಉತ್ಪತ್ತಿಯಾಗುವ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಾ ಹೋಯಿತು.

ಆರಂಭದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಸಾಮರ್ಥ್ಯ ಕಡಿಮೆಯಾದಾಗ, KIOCL ಕಂಪನಿಯು ಅರಣ್ಯ ಇಲಾಖೆಯ ಅನುಮತಿಯಿಲ್ಲದೆ, 1991 ಮತ್ತು 1994ರ ನಡುವೆ ಅಣೆಕಟ್ಟಿನ ಎತ್ತರವನ್ನು ಅಕ್ರಮವಾಗಿ ಹೆಚ್ಚಿಸಿತು. ಇದರಿಂದಾಗಿ, ಅಣೆಕಟ್ಟಿನ ಸುತ್ತಮುತ್ತಲಿನ ಸುಮಾರು 840 ಎಕರೆಗಳಷ್ಟು ಅರಣ್ಯ ಪ್ರದೇಶವು ಮುಳುಗಡೆಯಾಯಿತು. ಈ ಅಕ್ರಮ ಕಾರ್ಯಕ್ಕೆ ಕಂಪನಿಯು ನಂತರ ಪರಿಸರ ಸಂರಕ್ಷಣಾ ಕಾನೂನುಗಳ ಉಲ್ಲಂಘನೆಗಾಗಿ ದಂಡವನ್ನು ಎದುರಿಸಬೇಕಾಯಿತು. ಈ ಪರಿಸರ ನಷ್ಟವನ್ನು ತುಂಬಿಕೊಡುತ್ತೇನೆ ಎಂದು ಕಂಪೆನಿಯು ಈಗ ಹೇಳಿದ್ದು, ಸಂಡೂರಿನಲ್ಲಿ ಗಣಿಗಾರಿಕೆ ಆರಂಭಿಸಲು ಇದು ತೊಡಕಾಗಿರುವುದರಿಂದ ಈ ಮಾರ್ಗವನ್ನು ಕಂಡುಕೊಂಡಿದೆ. ವಿಠಲ್ ಹೆಗಡೆಯವರ ಪ್ರಕಾರ, ಈ ನಡೆ ತೀರಾ ಅಪಾಯಕಾರಿ.

ಅನ್ಯಾಯದ ನಿದರ್ಶನ

ಹಿರಿಯ ಹೋರಾಟಗಾರರು ತಮ್ಮ ಹಳೆಯ ಹೋರಾಟದ ನೆನಪುಗಳನ್ನು ಕೆದಕುತ್ತಾ, ಒಂದು ಕಾಲದಲ್ಲಿ, ತಮ್ಮ ಜೀವನೋಪಾಯಕ್ಕಾಗಿ ಕಾಡನ್ನು ಒತ್ತುವರಿ ಮಾಡಿದ್ದ ಗುರುವ ಬಿನ್ ದೊಂಬಯ್ಯ ಎಂಬ ಸ್ಥಳೀಯರಿಗೆ ಅರಣ್ಯ ಇಲಾಖೆ 49 ಲಕ್ಷ ರೂಪಾಯಿ ದಂಡ ವಿಧಿಸಿತ್ತು ಎಂಬುದನ್ನು ಉಲ್ಲೇಖಿಸಿದರು. “ಹಾಗಾದರೆ, ಇಷ್ಟು ಬೃಹತ್ ಪ್ರಮಾಣದಲ್ಲಿ ಅರಣ್ಯ ಮುಳುಗಡೆ ಮಾಡಲು ಕಾರಣವಾದ KIOCL ಗೆ ಎಷ್ಟು ದಂಡವೆಂದು ನಾವು ಆಗಿನ ಹೋರಾಟದಲ್ಲಿ ಪ್ರಶ್ನಿಸಿದ್ದೇವೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಜನರ ಬದುಕಿಗೆ ಸಂಚಕಾರ

ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕೆಗೂ ಮೊದಲು ಅಲ್ಲಿ ವಾಸವಿದ್ದ ಸುಮಾರು 79 ಮೂಲನಿವಾಸಿ ಕುಟುಂಬಗಳನ್ನು ಪಕ್ಕದ ಜಂಬಳ ಎಂಬಲ್ಲಿಗೆ ಸ್ಥಳಾಂತರಿಸಲಾಗಿತ್ತು. ಗಣಿಗಾರಿಕೆ ಪ್ರದೇಶದಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಲಾಗಿತ್ತು. ಕಂಪನಿಯು 2005ರಲ್ಲಿ ಹಲವು ಹೋರಾಟಗಳ ನಂತರ ಮುಚ್ಚಲ್ಪಟ್ಟಿದ್ದರೂ, ಅಲ್ಲಿ ಉಳಿದಿದ್ದ ಕಾರ್ಮಿಕರು ಮತ್ತು ಸ್ಥಳಾಂತರಗೊಂಡ ಜನರು ಈ ಆಸ್ಪತ್ರೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸಿದ್ದರು. ಈ ಜಾಗವನ್ನು ಕಂಪನಿಯು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಇಷ್ಟು ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿ ಅವರ ಬದುಕು ಮತ್ತಷ್ಟು ಕಷ್ಟಕ್ಕೆ ಸಿಲುಕುತ್ತದೆ ಎಂದು ಹೆಗಡೆಯವರು ಕಳವಳ ವ್ಯಕ್ತಪಡಿಸಿದರು.

ದಶಕಗಳ ಹೋರಾಟದ ನೆನಪುಗಳು

ಕುದುರೆಮುಖ ಗಣಿಗಾರಿಕೆಯಿಂದ ತುಂಗಾ ಮತ್ತು ಭದ್ರಾ ನದಿಗಳ ಮೂಲಗಳು ಬತ್ತಿ ಹೋಗುತ್ತವೆ ಎಂದು ಪರಿಸರವಾದಿಗಳು ದಶಕಗಳ ಕಾಲ ಹೋರಾಟ ನಡೆಸಿದರು. ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟವು ತುಂಗಾಭದ್ರ ಹರಿಯುವ ಎಂಟು ಜಿಲ್ಲೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ, ಕುದುರೆಮುಖ ಗಣಿಗಾರಿಕೆಯು ತುಂಗಾ ಮೂಲದ ಗಂಗಡಿಕಲ್ಲು, ಭದ್ರನದಿಯ ನಲ್ಲಿಬಿಡಿಗೆ ವಿಸ್ತರಿಸಬಾರದೆಂದು ಯಶಸ್ವಿ ಹೊರಾಟ ನಡೆಸಿತ್ತು. ಈ ರೀತಿಯ ಹಲವು ಧರಣಿ, ಪ್ರತಿಭಟನೆಗಳು, ಲಾಠಿಜಾರ್ಜ್‌ಗಳು, ಬಹಳ ಮುಖ್ಯವಾಗಿ ದಾವಣಗೆರೆಯಲ್ಲಿ 10 ಸಾವಿರದಷ್ಟು ಜನರು ಸೇರಿದ ಸಮಾವೇಶಗಳನ್ನು ನಡೆಸಲಾಯಿತು. ಈ ಎಲ್ಲಾ ಹೋರಾಟಗಳ ಕಾರಣದಿಂದ ಕರ್ನಾಟಕ ಸರಕಾರವು ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆಯನ್ನು ನೀಡಿತು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಈ ಮೊದಲೇ ದಾವೆ ಹೂಡಲಾಗಿತ್ತು. ಜನರ ಪ್ರತಿಭಟನೆಯ ಕಾರಣ ನೀಡಿದ ರಾಜ್ಯ ಸರಕಾರದ ಹೇಳಿಕೆಯಿಂದಾಗಿ ಸುಪ್ರೀಂ ಕೋರ್ಟ್ ಕುದುರೆಮುಖ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ತೀರ್ಪು ನೀಡಿ, 2005ರ ಡಿಸೆಂಬರ್ 31ರ ವೇಳೆಗೆ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶಿಸಿತು.

ಹೋರಾಟಗಾರರ ಭವಿಷ್ಯದ ಪ್ರಸ್ತಾವನೆಗಳು

ಈ ಹೋರಾಟದ ಸಂದರ್ಭದಲ್ಲಿ ನಾವು ಸರ್ಕಾರಕ್ಕೆ ಕೆಲವು ಪ್ರಸ್ತಾವನೆಗಳನ್ನು ಇಟ್ಟಿದ್ದೆವು ಎಂದು ವಿಠಲ್ ಹೆಗಡೆಯವರು ನೆನಪಿಸಿಕೊಂಡರು. ಗಣಿಗಾರಿಕೆ ನಿಲ್ಲಿಸಿ, ಕಂಪನಿಯ ಜಾಗವನ್ನು ಈ ಹಿಂದೆ ಸ್ಥಳಾಂತರ ಮಾಡಲಾಗಿದ್ದ 79 ಕುಟುಂಬಗಳಿಗೆ (1300 ಜನ) ಹಂಚಬೇಕು; ಪರಿಸರ ಸಂರಕ್ಷಣಾ ಯೋಜನೆಯನ್ನು ಪ್ರಾರಂಭಿಸಿ ಇವರಿಗೆ ಉದ್ಯೋಗ ನೀಡಬೇಕು; ಮತ್ತು ಬೆಲೆ ಬಾಳುವ ಕಂಪನಿಯ ಕಟ್ಟಡಗಳನ್ನು ಬಳಸಿಕೊಂಡು ಸುಸಜ್ಜಿತ ಆಸ್ಪತ್ರೆ ಮತ್ತು ಅರಣ್ಯ ವಿಶ್ವವಿದ್ಯಾಲಯವನ್ನು ನಿರ್ಮಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದರು. ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಒಂದು ಒಳ್ಳೆಯ ಅಸ್ಪತ್ರೆಯಿಲ್ಲದ ಕಾರಣ ಇಲ್ಲಿ ಸುಸಜ್ಜಿತ ಅಸ್ಪತ್ರೆಯನ್ನು ನಿರ್ಮಿಸಬಹುದು. ಈ ಪ್ರಸ್ತಾವನೆಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು, ಈಗ ಕಂಪನಿಯ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು. ಈಗಲೂ ಕೂಡ ಈ ಜಾಗವನ್ನು ಅರಣ್ಯ ಇಲಾಖೆಗೆ ಕೊಡದೆ ಮೇಲಿನ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ವಿಠಲ ಹೆಗಡೆಯವರು ಹೇಳುತ್ತಾರೆ.

ಲಕ್ಯಾ ಅಣೆಕಟ್ಟು: ಪರಿಸರ ಟೈಮ್ ಬಾಂಬ್

ಕುದುರೆಮುಖದ ಗಣಿ ಚಟುವಟಿಕೆಗಳನ್ನು 2006ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸ್ಥಗಿತಗೊಳಿಸಿದ ನಂತರ, KIOCL ತನ್ನ ಮಂಗಳೂರು ಸ್ಥಾವರದಲ್ಲಿ ಕಬ್ಬಿಣದ ಉಂಡೆಗಳು ಮತ್ತು ಪಿಗ್ ಐರನ್ ಉತ್ಪಾದನೆಯನ್ನು ಮುಂದುವರೆಸಿದೆ. ಈ ಮಂಗಳೂರಿನ ಸ್ಥಾವರಕ್ಕೆ ಲಕ್ಯಾ ಅಣೆಕಟ್ಟಿನಿಂದ ಪೈಪ್ ಮೂಲಕ ನೀರು ಹೋಗುತ್ತಿದೆ. ಕಂಪನಿಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದರೆ, ಅಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಮತ್ತು ಚಟುವಟಿಕೆಗಳು ನಿಷಿದ್ಧವಾಗುತ್ತವೆ. ಇದರರ್ಥ ನೀರು ಸರಬರಾಜು ನಿಲ್ಲುತ್ತದೆ. ಇದು ದೊಡ್ಡ ಸಮಸ್ಯೆಗೆ ಎಡೆಮಾಡಿಕೊಡುತ್ತದೆ ಮತ್ತು ಕಂಪನಿಯ ಕಾರ್ಯಾಚರಣೆಗೆ ಭಾರಿ ನಷ್ಟ ಉಂಟುಮಾಡುತ್ತದೆ.

ಇದಕ್ಕಿಂತಲೂ ಗಂಭೀರವಾದ ಮತ್ತೊಂದು ಅಪಾಯವೆಂದರೆ ಲಕ್ಯಾ ಅಣೆಕಟ್ಟು. ಕುದುರೆಮುಖ ಕಂಪನಿಯ ಮಂಗಳೂರು ಸ್ಥಾವರಕ್ಕೆ ಈ ಲಕ್ಯಾ ಡ್ಯಾಂನಿಂದ ನೀರು ಹೋಗುವುದು ಸ್ಥಗಿತಗೊಂಡರೆ ಹೆಚ್ಚುವರಿ ನೀರು ಈ ಡ್ಯಾಂ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಮೊದಲೇ ಗಣಿಗಾರಿಕೆಯ ಹೂಳಿನಿಂದ ತುಂಬಿಕೊಂಡಿರುವ ಲಕ್ಯಾ ಡ್ಯಾಂನ ಹೆಚ್ಚುವರಿ ನೀರನ್ನು ನಿರಂತರವಾಗಿ ನಿರ್ವಹಿಸದಿದ್ದರೆ, ಅದು ಒಡೆದು ಹೋಗುವ ಸಾಧ್ಯತೆ ಸಾಕಷ್ಟು ಇರುತ್ತದೆ. ಮಣ್ಣಿನಲ್ಲಿ ನಿರ್ಮಿಸಿದ ಲಕ್ಯಾ ಡ್ಯಾಂ ಒಡೆದು ಹೋದರೆ, “ಇಕೋ ಟೈಮ್ ಬಾಂಬ್” ಆಗಿರುವ ಈ ಡ್ಯಾಂ ಸಿಡಿದು, ಕಿಲೋಮೀಟರ್‌ಗಟ್ಟಲೆ ಈ ಹೂಳು ತುಂಬಿಕೊಂಡು ಭದ್ರಾ ನದಿ ಮೂಲವೇ ಬತ್ತಿಹೋಗುತ್ತದೆ. ಇದು ರಾಜ್ಯಕ್ಕೆ ಭಾರಿ ನಷ್ಟ ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು.

ದೇವದಾರಿ ಗಣಿ: ತಾತ್ಕಾಲಿಕ ಪರಿಹಾರಕ್ಕೆ ವಿರೋಧ

ಗಣಿ ಮುಚ್ಚಿದ ನಂತರ ಈ ಪ್ರದೇಶವು ತನ್ನ ಮೂಲ ಅರಣ್ಯ ಪರಿಸರಕ್ಕೆ ಮರಳಲು ಪ್ರಾರಂಭಿಸಿದೆ. ಆದರೆ, ಲಕ್ಯಾ ಅಣೆಕಟ್ಟು ಮತ್ತು ಅದರ ಸುತ್ತಮುತ್ತಲಿನ ಹೂಳಿನ ಕೊಳ ಇಂದಿಗೂ ಕಳವಳಕ್ಕೆ ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ, ದೇವದಾರಿ ಗಣಿ ಗುತ್ತಿಗೆಗಾಗಿ KIOCL ಮಾಡುತ್ತಿರುವ ಈ ಪ್ರಸ್ತಾವನೆ ತಾತ್ಕಾಲಿಕ ಪರಿಹಾರವಾಗಿ ಕಂಡರೂ, ಇದು ಭವಿಷ್ಯದಲ್ಲಿ ದೊಡ್ಡ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವಿಠಲ್ ಹೆಗಡೆಯವರು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು ಅರಣ್ಯ ಹಾನಿಗೆ ಪರಿಹಾರ ನೀಡುವ ಬದಲಿಗೆ, ಇನ್ನೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರ ದೃಷ್ಟಿಕೋನ ಸಾರುತ್ತದೆ.

ನುಸುಳುಕೋರರೆಂಬ ಆರೋಪ: 36 ಜನರನ್ನು ಬಾಂಗ್ಲಾದೇಶದ ಗಡಿಗೆ ತಳ್ಳಿದ ಅಸ್ಸಾಂ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...