Homeಕರ್ನಾಟಕಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

ಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

- Advertisement -
- Advertisement -

ಹಿರಿಯ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರು, ಬಳ್ಳಾರಿಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಯ ಅರಣ್ಯ ಗುತ್ತಿಗೆಗಾಗಿ ಕುದುರೆಮುಖ ಐರನ್ ಓರ್ ಕಂಪನಿ ನಿಯಮಿತ (KIOCL) ಮುಂದಿಟ್ಟಿರುವ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ದೇವದಾರಿ ಗಣಿ ದಕ್ಕಿಸಿಕೊಳ್ಳಲು, KIOCL ಈ ಹಿಂದೆ ಕುದುರೆಮುಖದಲ್ಲಿ ಮಾಡಿದ ನಷ್ಟದ ಪರಿಹಾರವಾಗಿ ತನ್ನ ಮಾಲೀಕತ್ವದ 114.3 ಹೆಕ್ಟೇರ್ ಭೂಮಿ ಮತ್ತು ಅಲ್ಲಿನ ನಿರ್ಮಾಣಗಳನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವುದಾಗಿ ಹೇಳಿದೆ. ಇದು ಒಂದು ಕಡೆ ಅರಣ್ಯ ಇಲಾಖೆಯ ಬೇಡಿಕೆಗೆ ಮಣಿದಂತೆ ಕಂಡರೂ, ಈ ನಿರ್ಧಾರವು ತೀವ್ರ ಅನಾಹುತಗಳಿಗೆ ಕಾರಣವಾಗಲಿದೆ ಎಂದು ವಿಠಲ್ ಹೆಗಡೆಯವರು ಎಚ್ಚರಿಸಿದ್ದಾರೆ.

ಪ್ರಮುಖ ವಿರೋಧದ ಕಾರಣಗಳು

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಕಂಪನಿಯ ಭೂಮಿಯನ್ನು ಅರಣ್ಯಕ್ಕೆ ಹಸ್ತಾಂತರಿಸುವುದರಿಂದ ಎರಡು ಪ್ರಮುಖ ಅಪಾಯಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದ್ದಾರೆ. ಒಂದು, ಸುತ್ತಮುತ್ತಲಿನ ಜನರಿಗೆ ತೀವ್ರ ತೊಂದರೆಯಾಗುತ್ತದೆ, ಅವರ ಬದುಕು ಅತಂತ್ರವಾಗುತ್ತದೆ. ಇನ್ನೊಂದು, ಸ್ವತಃ ಕಂಪನಿಯೇ ತನ್ನ ಭವಿಷ್ಯಕ್ಕೆ ತಾನೇ ಸಂಚಕಾರ ತಂದುಕೊಳ್ಳುತ್ತದೆ. ದೇವದಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ರಾಜ್ಯದ ಅರಣ್ಯ ಇಲಾಖೆ ಮತ್ತು KIOCL ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಮಣಿದಿರುವ KIOCL, ಈ ಮೂಲಕ ದೇವದಾರಿ ಗಣಿಯ ಅರಣ್ಯ ಗುತ್ತಿಗೆ ಪಡೆಯಲು ಯತ್ನಿಸುತ್ತಿದೆ.

ಲಕ್ಯಾ ಅಣೆಕಟ್ಟಿನ ದುರಂತ ಇತಿಹಾಸ

KIOCL ಭಾರತ ಸರ್ಕಾರದ ಒಂದು ಸಾರ್ವಜನಿಕ ಉದ್ಯಮವಾಗಿದ್ದು, 1976 ರಲ್ಲಿ ಸ್ಥಾಪನೆಯಾಗಿತ್ತು. ಕುದುರೆಮುಖದಲ್ಲಿ ಗಣಿಗಾರಿಕೆ ಪ್ರಾರಂಭವಾದಾಗ, ಅಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಹೂಳು (tailings ಅಥವಾ slurry) ನೈಸರ್ಗಿಕ ಜಲಮೂಲಗಳಿಗೆ ಸೇರಿ ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಲಕ್ಯಾ ಹೊಳೆಗೆ ಅಡ್ಡಲಾಗಿ ಒಂದು ದೊಡ್ಡ ಅಣೆಕಟ್ಟನ್ನು 1994ರಲ್ಲಿ ನಿರ್ಮಿಸಲಾಯಿತು. ಆದರೆ, ಗಣಿಗಾರಿಕೆ ಮುಂದುವರೆದಂತೆ ಉತ್ಪತ್ತಿಯಾಗುವ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಾ ಹೋಯಿತು.

ಆರಂಭದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಸಾಮರ್ಥ್ಯ ಕಡಿಮೆಯಾದಾಗ, KIOCL ಕಂಪನಿಯು ಅರಣ್ಯ ಇಲಾಖೆಯ ಅನುಮತಿಯಿಲ್ಲದೆ, 1991 ಮತ್ತು 1994ರ ನಡುವೆ ಅಣೆಕಟ್ಟಿನ ಎತ್ತರವನ್ನು ಅಕ್ರಮವಾಗಿ ಹೆಚ್ಚಿಸಿತು. ಇದರಿಂದಾಗಿ, ಅಣೆಕಟ್ಟಿನ ಸುತ್ತಮುತ್ತಲಿನ ಸುಮಾರು 840 ಎಕರೆಗಳಷ್ಟು ಅರಣ್ಯ ಪ್ರದೇಶವು ಮುಳುಗಡೆಯಾಯಿತು. ಈ ಅಕ್ರಮ ಕಾರ್ಯಕ್ಕೆ ಕಂಪನಿಯು ನಂತರ ಪರಿಸರ ಸಂರಕ್ಷಣಾ ಕಾನೂನುಗಳ ಉಲ್ಲಂಘನೆಗಾಗಿ ದಂಡವನ್ನು ಎದುರಿಸಬೇಕಾಯಿತು. ಈ ಪರಿಸರ ನಷ್ಟವನ್ನು ತುಂಬಿಕೊಡುತ್ತೇನೆ ಎಂದು ಕಂಪೆನಿಯು ಈಗ ಹೇಳಿದ್ದು, ಸಂಡೂರಿನಲ್ಲಿ ಗಣಿಗಾರಿಕೆ ಆರಂಭಿಸಲು ಇದು ತೊಡಕಾಗಿರುವುದರಿಂದ ಈ ಮಾರ್ಗವನ್ನು ಕಂಡುಕೊಂಡಿದೆ. ವಿಠಲ್ ಹೆಗಡೆಯವರ ಪ್ರಕಾರ, ಈ ನಡೆ ತೀರಾ ಅಪಾಯಕಾರಿ.

ಅನ್ಯಾಯದ ನಿದರ್ಶನ

ಹಿರಿಯ ಹೋರಾಟಗಾರರು ತಮ್ಮ ಹಳೆಯ ಹೋರಾಟದ ನೆನಪುಗಳನ್ನು ಕೆದಕುತ್ತಾ, ಒಂದು ಕಾಲದಲ್ಲಿ, ತಮ್ಮ ಜೀವನೋಪಾಯಕ್ಕಾಗಿ ಕಾಡನ್ನು ಒತ್ತುವರಿ ಮಾಡಿದ್ದ ಗುರುವ ಬಿನ್ ದೊಂಬಯ್ಯ ಎಂಬ ಸ್ಥಳೀಯರಿಗೆ ಅರಣ್ಯ ಇಲಾಖೆ 49 ಲಕ್ಷ ರೂಪಾಯಿ ದಂಡ ವಿಧಿಸಿತ್ತು ಎಂಬುದನ್ನು ಉಲ್ಲೇಖಿಸಿದರು. “ಹಾಗಾದರೆ, ಇಷ್ಟು ಬೃಹತ್ ಪ್ರಮಾಣದಲ್ಲಿ ಅರಣ್ಯ ಮುಳುಗಡೆ ಮಾಡಲು ಕಾರಣವಾದ KIOCL ಗೆ ಎಷ್ಟು ದಂಡವೆಂದು ನಾವು ಆಗಿನ ಹೋರಾಟದಲ್ಲಿ ಪ್ರಶ್ನಿಸಿದ್ದೇವೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಜನರ ಬದುಕಿಗೆ ಸಂಚಕಾರ

ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕೆಗೂ ಮೊದಲು ಅಲ್ಲಿ ವಾಸವಿದ್ದ ಸುಮಾರು 79 ಮೂಲನಿವಾಸಿ ಕುಟುಂಬಗಳನ್ನು ಪಕ್ಕದ ಜಂಬಳ ಎಂಬಲ್ಲಿಗೆ ಸ್ಥಳಾಂತರಿಸಲಾಗಿತ್ತು. ಗಣಿಗಾರಿಕೆ ಪ್ರದೇಶದಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಲಾಗಿತ್ತು. ಕಂಪನಿಯು 2005ರಲ್ಲಿ ಹಲವು ಹೋರಾಟಗಳ ನಂತರ ಮುಚ್ಚಲ್ಪಟ್ಟಿದ್ದರೂ, ಅಲ್ಲಿ ಉಳಿದಿದ್ದ ಕಾರ್ಮಿಕರು ಮತ್ತು ಸ್ಥಳಾಂತರಗೊಂಡ ಜನರು ಈ ಆಸ್ಪತ್ರೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸಿದ್ದರು. ಈ ಜಾಗವನ್ನು ಕಂಪನಿಯು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಇಷ್ಟು ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿ ಅವರ ಬದುಕು ಮತ್ತಷ್ಟು ಕಷ್ಟಕ್ಕೆ ಸಿಲುಕುತ್ತದೆ ಎಂದು ಹೆಗಡೆಯವರು ಕಳವಳ ವ್ಯಕ್ತಪಡಿಸಿದರು.

ದಶಕಗಳ ಹೋರಾಟದ ನೆನಪುಗಳು

ಕುದುರೆಮುಖ ಗಣಿಗಾರಿಕೆಯಿಂದ ತುಂಗಾ ಮತ್ತು ಭದ್ರಾ ನದಿಗಳ ಮೂಲಗಳು ಬತ್ತಿ ಹೋಗುತ್ತವೆ ಎಂದು ಪರಿಸರವಾದಿಗಳು ದಶಕಗಳ ಕಾಲ ಹೋರಾಟ ನಡೆಸಿದರು. ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟವು ತುಂಗಾಭದ್ರ ಹರಿಯುವ ಎಂಟು ಜಿಲ್ಲೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ, ಕುದುರೆಮುಖ ಗಣಿಗಾರಿಕೆಯು ತುಂಗಾ ಮೂಲದ ಗಂಗಡಿಕಲ್ಲು, ಭದ್ರನದಿಯ ನಲ್ಲಿಬಿಡಿಗೆ ವಿಸ್ತರಿಸಬಾರದೆಂದು ಯಶಸ್ವಿ ಹೊರಾಟ ನಡೆಸಿತ್ತು. ಈ ರೀತಿಯ ಹಲವು ಧರಣಿ, ಪ್ರತಿಭಟನೆಗಳು, ಲಾಠಿಜಾರ್ಜ್‌ಗಳು, ಬಹಳ ಮುಖ್ಯವಾಗಿ ದಾವಣಗೆರೆಯಲ್ಲಿ 10 ಸಾವಿರದಷ್ಟು ಜನರು ಸೇರಿದ ಸಮಾವೇಶಗಳನ್ನು ನಡೆಸಲಾಯಿತು. ಈ ಎಲ್ಲಾ ಹೋರಾಟಗಳ ಕಾರಣದಿಂದ ಕರ್ನಾಟಕ ಸರಕಾರವು ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆಯನ್ನು ನೀಡಿತು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಈ ಮೊದಲೇ ದಾವೆ ಹೂಡಲಾಗಿತ್ತು. ಜನರ ಪ್ರತಿಭಟನೆಯ ಕಾರಣ ನೀಡಿದ ರಾಜ್ಯ ಸರಕಾರದ ಹೇಳಿಕೆಯಿಂದಾಗಿ ಸುಪ್ರೀಂ ಕೋರ್ಟ್ ಕುದುರೆಮುಖ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ತೀರ್ಪು ನೀಡಿ, 2005ರ ಡಿಸೆಂಬರ್ 31ರ ವೇಳೆಗೆ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶಿಸಿತು.

ಹೋರಾಟಗಾರರ ಭವಿಷ್ಯದ ಪ್ರಸ್ತಾವನೆಗಳು

ಈ ಹೋರಾಟದ ಸಂದರ್ಭದಲ್ಲಿ ನಾವು ಸರ್ಕಾರಕ್ಕೆ ಕೆಲವು ಪ್ರಸ್ತಾವನೆಗಳನ್ನು ಇಟ್ಟಿದ್ದೆವು ಎಂದು ವಿಠಲ್ ಹೆಗಡೆಯವರು ನೆನಪಿಸಿಕೊಂಡರು. ಗಣಿಗಾರಿಕೆ ನಿಲ್ಲಿಸಿ, ಕಂಪನಿಯ ಜಾಗವನ್ನು ಈ ಹಿಂದೆ ಸ್ಥಳಾಂತರ ಮಾಡಲಾಗಿದ್ದ 79 ಕುಟುಂಬಗಳಿಗೆ (1300 ಜನ) ಹಂಚಬೇಕು; ಪರಿಸರ ಸಂರಕ್ಷಣಾ ಯೋಜನೆಯನ್ನು ಪ್ರಾರಂಭಿಸಿ ಇವರಿಗೆ ಉದ್ಯೋಗ ನೀಡಬೇಕು; ಮತ್ತು ಬೆಲೆ ಬಾಳುವ ಕಂಪನಿಯ ಕಟ್ಟಡಗಳನ್ನು ಬಳಸಿಕೊಂಡು ಸುಸಜ್ಜಿತ ಆಸ್ಪತ್ರೆ ಮತ್ತು ಅರಣ್ಯ ವಿಶ್ವವಿದ್ಯಾಲಯವನ್ನು ನಿರ್ಮಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದರು. ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಒಂದು ಒಳ್ಳೆಯ ಅಸ್ಪತ್ರೆಯಿಲ್ಲದ ಕಾರಣ ಇಲ್ಲಿ ಸುಸಜ್ಜಿತ ಅಸ್ಪತ್ರೆಯನ್ನು ನಿರ್ಮಿಸಬಹುದು. ಈ ಪ್ರಸ್ತಾವನೆಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು, ಈಗ ಕಂಪನಿಯ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು. ಈಗಲೂ ಕೂಡ ಈ ಜಾಗವನ್ನು ಅರಣ್ಯ ಇಲಾಖೆಗೆ ಕೊಡದೆ ಮೇಲಿನ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ವಿಠಲ ಹೆಗಡೆಯವರು ಹೇಳುತ್ತಾರೆ.

ಲಕ್ಯಾ ಅಣೆಕಟ್ಟು: ಪರಿಸರ ಟೈಮ್ ಬಾಂಬ್

ಕುದುರೆಮುಖದ ಗಣಿ ಚಟುವಟಿಕೆಗಳನ್ನು 2006ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸ್ಥಗಿತಗೊಳಿಸಿದ ನಂತರ, KIOCL ತನ್ನ ಮಂಗಳೂರು ಸ್ಥಾವರದಲ್ಲಿ ಕಬ್ಬಿಣದ ಉಂಡೆಗಳು ಮತ್ತು ಪಿಗ್ ಐರನ್ ಉತ್ಪಾದನೆಯನ್ನು ಮುಂದುವರೆಸಿದೆ. ಈ ಮಂಗಳೂರಿನ ಸ್ಥಾವರಕ್ಕೆ ಲಕ್ಯಾ ಅಣೆಕಟ್ಟಿನಿಂದ ಪೈಪ್ ಮೂಲಕ ನೀರು ಹೋಗುತ್ತಿದೆ. ಕಂಪನಿಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದರೆ, ಅಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಮತ್ತು ಚಟುವಟಿಕೆಗಳು ನಿಷಿದ್ಧವಾಗುತ್ತವೆ. ಇದರರ್ಥ ನೀರು ಸರಬರಾಜು ನಿಲ್ಲುತ್ತದೆ. ಇದು ದೊಡ್ಡ ಸಮಸ್ಯೆಗೆ ಎಡೆಮಾಡಿಕೊಡುತ್ತದೆ ಮತ್ತು ಕಂಪನಿಯ ಕಾರ್ಯಾಚರಣೆಗೆ ಭಾರಿ ನಷ್ಟ ಉಂಟುಮಾಡುತ್ತದೆ.

ಇದಕ್ಕಿಂತಲೂ ಗಂಭೀರವಾದ ಮತ್ತೊಂದು ಅಪಾಯವೆಂದರೆ ಲಕ್ಯಾ ಅಣೆಕಟ್ಟು. ಕುದುರೆಮುಖ ಕಂಪನಿಯ ಮಂಗಳೂರು ಸ್ಥಾವರಕ್ಕೆ ಈ ಲಕ್ಯಾ ಡ್ಯಾಂನಿಂದ ನೀರು ಹೋಗುವುದು ಸ್ಥಗಿತಗೊಂಡರೆ ಹೆಚ್ಚುವರಿ ನೀರು ಈ ಡ್ಯಾಂ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಮೊದಲೇ ಗಣಿಗಾರಿಕೆಯ ಹೂಳಿನಿಂದ ತುಂಬಿಕೊಂಡಿರುವ ಲಕ್ಯಾ ಡ್ಯಾಂನ ಹೆಚ್ಚುವರಿ ನೀರನ್ನು ನಿರಂತರವಾಗಿ ನಿರ್ವಹಿಸದಿದ್ದರೆ, ಅದು ಒಡೆದು ಹೋಗುವ ಸಾಧ್ಯತೆ ಸಾಕಷ್ಟು ಇರುತ್ತದೆ. ಮಣ್ಣಿನಲ್ಲಿ ನಿರ್ಮಿಸಿದ ಲಕ್ಯಾ ಡ್ಯಾಂ ಒಡೆದು ಹೋದರೆ, “ಇಕೋ ಟೈಮ್ ಬಾಂಬ್” ಆಗಿರುವ ಈ ಡ್ಯಾಂ ಸಿಡಿದು, ಕಿಲೋಮೀಟರ್‌ಗಟ್ಟಲೆ ಈ ಹೂಳು ತುಂಬಿಕೊಂಡು ಭದ್ರಾ ನದಿ ಮೂಲವೇ ಬತ್ತಿಹೋಗುತ್ತದೆ. ಇದು ರಾಜ್ಯಕ್ಕೆ ಭಾರಿ ನಷ್ಟ ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು.

ದೇವದಾರಿ ಗಣಿ: ತಾತ್ಕಾಲಿಕ ಪರಿಹಾರಕ್ಕೆ ವಿರೋಧ

ಗಣಿ ಮುಚ್ಚಿದ ನಂತರ ಈ ಪ್ರದೇಶವು ತನ್ನ ಮೂಲ ಅರಣ್ಯ ಪರಿಸರಕ್ಕೆ ಮರಳಲು ಪ್ರಾರಂಭಿಸಿದೆ. ಆದರೆ, ಲಕ್ಯಾ ಅಣೆಕಟ್ಟು ಮತ್ತು ಅದರ ಸುತ್ತಮುತ್ತಲಿನ ಹೂಳಿನ ಕೊಳ ಇಂದಿಗೂ ಕಳವಳಕ್ಕೆ ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ, ದೇವದಾರಿ ಗಣಿ ಗುತ್ತಿಗೆಗಾಗಿ KIOCL ಮಾಡುತ್ತಿರುವ ಈ ಪ್ರಸ್ತಾವನೆ ತಾತ್ಕಾಲಿಕ ಪರಿಹಾರವಾಗಿ ಕಂಡರೂ, ಇದು ಭವಿಷ್ಯದಲ್ಲಿ ದೊಡ್ಡ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವಿಠಲ್ ಹೆಗಡೆಯವರು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು ಅರಣ್ಯ ಹಾನಿಗೆ ಪರಿಹಾರ ನೀಡುವ ಬದಲಿಗೆ, ಇನ್ನೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರ ದೃಷ್ಟಿಕೋನ ಸಾರುತ್ತದೆ.

ನುಸುಳುಕೋರರೆಂಬ ಆರೋಪ: 36 ಜನರನ್ನು ಬಾಂಗ್ಲಾದೇಶದ ಗಡಿಗೆ ತಳ್ಳಿದ ಅಸ್ಸಾಂ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...