ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಹೇಳಿಕೆ ನೀಡಿದ್ದ ಹಾಸ್ಯನಟ ಕುನಾಲ್ ಕಾಮ್ರಾ ಅವರ ವಿವಾದಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನವಿ ಮುಂಬೈ ಮೂಲದ ಬ್ಯಾಂಕರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಇದಕ್ಕೆ ಕುನಾಲ್ ಅವರು ಪ್ರತಿಕ್ರಿಯಿಸಿ ತನ್ನಿಂದಾದ ತೊಂದರೆಗೆ ಬ್ಯಾಂಕರ್ ಬಳಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅದಾಗ್ಯೂ, ನಂತರ ಪೊಲೀಸರು ಬ್ಯಾಂಕರ್ಗೆ ಕರೆ ಮಾಡಿ ಅವರ ಉಪಸ್ಥಿತಿ ತಕ್ಷಣವೆ ಅಗತ್ಯವಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ. ಪೊಲೀಸರ ಕಾರಣಕ್ಕೆ ಬ್ಯಾಂಕರ್ ತನ್ನ ಪ್ರವಾಸವನ್ನು ರದ್ದು ಮಾಡಿದ್ದಾರೆ ಎಂಬ ಸುದ್ದಿಗೆ ಕುನಾಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ಅವರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದು, “ಭಾರತದಲ್ಲಿ ನೀವು ಎಲ್ಲಿ ಬೇಕಾದರೂ ನಿಮ್ಮ ಮುಂದಿನ ಪ್ರವಾಸವನ್ನು ನಿಗದಿಪಡಿಸಿ” ಎಂದು ಅವರು ಅದರ ಖರ್ಚು ತಾನು ಭರಿಸುವುದಾಗಿ ಪ್ರಸ್ತಾಪಿಸಿದ್ದಾರೆ.
ಪೊಲೀಸ್ ಸಮನ್ಸ್ ಕಾರಣಕ್ಕೆ ಬ್ಯಾಂಕರ್ ತಮ್ಮ ಪ್ರವಾಸವನ್ನು ಕಡಿತಗೊಳಿಸಬೇಕಾಯಿತು ಎಂದು ಹೇಳುವ ಮಾಧ್ಯಮ ವರದಿಯನ್ನು ಕುನಾಲ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಕುನಾಲ್ ಕಮ್ರಾ ಅವರ ಕಾರ್ಯಕ್ರಮಕ್ಕೆ ಹಾಜರಾದ ಪ್ರೇಕ್ಷಕರರಿಗೆ ತಮ್ಮ ಹೇಳಿಕೆಗಳನ್ನು ದಾಖಲಿಸಲು ಸಮನ್ಸ್ ನೀಡಲಾಗಿದೆ ಎಂಬ ವರದಿಗಳನ್ನು ಪೊಲೀಸರು ಮಂಗಳವಾರದಂದು ನಿರಾಕರಿಸಿದ್ದರು.
ಮಾರ್ಚ್ 29 ರಂದು ಬುಕ್ಮೈಶೋ ಅಪ್ಲಿಕೇಶನ್ ಮೂಲಕ ಕುನಾಲ್ ಅವರ ಕಾರ್ಯಕ್ರಮಕ್ಕೆ ಟಿಕೆಟ್ ಬುಕ್ ಮಾಡಿದ್ದ ಬ್ಯಾಂಕರ್ಗೆ ಅವರ ಮೊಬೈಲ್ ಫೋನ್ನಲ್ಲಿ ಸಮನ್ಸ್ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ಮಾರ್ಚ್ 28 ರಂದು ನೀಡಿದ ದೂರಿನ ಮೇರೆಗೆ ಖಾರ್ ಪೊಲೀಸ್ ಠಾಣೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಕ್ಕಾಗಿ ಕುನಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ಬಯಸಿದ್ದರಿಂದ ಬ್ಯಾಂಕರ್ಗೆ ಹಾಜರಿರುವಂತೆ ತಿಳಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಅವರಿಗೆ ನೋಟಿಸ್ ಕಳುಹಿಸುವ ಮೊದಲು, ತನಿಖಾಧಿಕಾರಿ ಬ್ಯಾಂಕರ್ಗೆ ಕರೆ ಮಾಡಿ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಕೇಳಿಕೊಂಡಿದ್ದರು ಎಂದು ಅಧಿಕಾರಿ ಹೇಳಿದ್ದರು ಎಂದು ವರದಿಯಾಗಿದೆ. ಆದರೆ ನಂತರ, ಪ್ರಕರಣದಲ್ಲಿನ ಕೆಲವು ಬೆಳವಣಿಗೆಗಳ ನಂತರ, ಪೊಲೀಸರು ಮತ್ತೆ ಬ್ಯಾಂಕರ್ಗೆ ಕರೆ ಮಾಡಿ ಅವರ ತಕ್ಷಣದ ಹಾಜರಾತಿ ಅಗತ್ಯವಿಲ್ಲ ಎಂದು ಹೇಳಿದ್ದರು. ಅದಾಗ್ಯೂ, ಅವರ ಹೇಳಿಕೆ ಅಗತ್ಯವಿದ್ದಾಗ ಅವರನ್ನು ಕರೆಯಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಪೊಲೀಸ್ ಸಮನ್ಸ್ನಿಂದಾಗಿ ಬ್ಯಾಂಕರ್ ತನ್ನ ಪ್ರವಾಸವನ್ನು ರದ್ದುಗೊಳಿಸಬೇಕಾಯಿತು ಎಂಬ ಮಾಧ್ಯಮ ವರದಿಗಳಿಗೆ ಕುನಾಲ್ ಪ್ರತಿಕ್ರಿಯಿಸಿದ್ದು, “ನನ್ನ ಕಾರ್ಯಕ್ರಮಕ್ಕೆ ಹಾಜರಾದ ಕಾರಣಕ್ಕೆ ನಿಮಗೆ ಉಂಟಾದ ಅನಾನುಕೂಲತೆಗೆ ನಾನು ತುಂಬಾ ವಿಷಾದಿಸುತ್ತೇನೆ. ದಯವಿಟ್ಟು ನನಗೆ ಇಮೇಲ್ ಮಾಡಿ. ನೀವು ಭಾರತದಲ್ಲಿ ಎಲ್ಲಿ ಬೇಕಾದರೂ ನಿಮ್ಮ ಮುಂದಿನ ರಜೆಯನ್ನು ನಿಗದಿಪಡಿಸಬಹುದು” ಎಂದು ಕಮ್ರಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತನ್ನ ಪ್ರವಾಸ ಮುಗಿಸಿ ಏಪ್ರಿಲ್ 6 ರಂದು ಹಿಂತಿರುಗಬೇಕಿದ್ದ ವ್ಯಕ್ತಿ ಪೊಲೀಸರ ಕಾರಣಕ್ಕೆ ಅದನ್ನು ಅರ್ಧದಲ್ಲೆ ಮೊಟಕುಗೊಳಿಸಿ ಸೋಮವಾರ ಮುಂಬೈಗೆ ಹಿಂತಿರುಗಬೇಕಾಯಿತು ಎಂದು ವರದಿಗಳು ಹೇಳಿವೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುಬಾಲ್ ಪ್ರದರ್ಶಿಸಿದ ವಿಡಂಬನಾತ್ಮಕ ಹಾಡಿನಿಂದಾಗಿ ಪ್ರಕರಣ ಭುಗಿಲೆದ್ದಿತ್ತು. ಈ ಹಾಡಿನಲ್ಲಿ ಕುನಾಲ್ ಅವರು ಉಪ ಮುಖ್ಯಮಂತ್ರಿ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಅವರನ್ನು ಗುರಿ ಮಾಡಿ ದೇಶದ್ರೋಹಿ ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಶಿವಸೇನೆ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಮಾರ್ಚ್ 28 ರಂದು ಮದ್ರಾಸ್ ಹೈಕೋರ್ಟ್ ಕುನಾಲ್ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತು.


