Homeಕರ್ನಾಟಕಕಾದಂಬರಿ, ರಂಗಕೃತಿಗೆ ಎಡಪಂಥೀಯ ಧೋರಣೆ ಆಧಾರ: ಮೈಮ್‌ ರಮೇಶ್

ಕಾದಂಬರಿ, ರಂಗಕೃತಿಗೆ ಎಡಪಂಥೀಯ ಧೋರಣೆ ಆಧಾರ: ಮೈಮ್‌ ರಮೇಶ್

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ರಂಗಾಯಣದ ನಿವೃತ್ತ ಕಲಾವಿದ, ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರಿಂದ ರಂಗಪಾಠ

- Advertisement -
- Advertisement -

ವಿವಾದಗಳಿಂದಲೇ ಸದಾ ಚರ್ಚೆಯಲ್ಲಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ರಂಗಾಯಣದ ನಿವೃತ್ತ ಕಲಾವಿದ, ಹಿರಿಯ ರಂಗಕರ್ಮಿ ಮೈಮ್‌ ರಮೇಶ್‌ ರಂಗಪಾಠ ಮಾಡಿದ್ದಾರೆ.

ಎಡಪಂಥೀಯರ ಕುರಿತು ವಾಗ್ದಾಳಿ ನಡೆಸುತ್ತಿರುವ ಅಡ್ಡಂಡ ಸಿ.ಕಾರ್ಯಪ್ಪ ಅವರ ವರ್ತನೆಯನ್ನು ಖಂಡಿಸಿ ಬಹಿರಂಗ ಪತ್ರ ಬರೆದಿರುವ ಅವರು, “ಕಾದಂಬರಿ ಮತ್ತು ರಂಗಕೃತಿ ಎರಡೂ ಜಾಗತಿಕವಾಗಿ ಚಾಲ್ತಿಯಲ್ಲಿರುವ ಎಡಪಂಥೀಯ ಧೋರಣೆಯನ್ನು ಆಧರಿಸಿವೆ” ಎಂದು ತಿಳಿಸಿದ್ದಾರೆ.

ಪತ್ರದ ಪೂರ್ಣ ಪಠ್ಯ:

ಮಾನ್ಯರೇ,

ಕಳೆದ ಕೆಲವು ದಿನಗಳಿಂದ ಮೈಸೂರು ರಂಗಾಯಣದ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರಿಂದಾಗಿ ‘ರಂಗಾಯಣ ಮೈಸೂರು’ ವಿವಾದಗಳ ಕಗ್ಗಾಡಿನಲ್ಲಿ ಸಿಕ್ಕಿಬಿದ್ದಿದೆ. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ.

ನಾನು ಬಿ.ವಿ.ಕಾರಂತರು ರಂಗಾಯಣವನ್ನು ಆರಂಭಿಸಿದಾಗಲೇ ನಟನಾಗಿ, ಕೆಲಸಗಾರನಾಗಿ, ನಿರಂತರವಾಗಿ ತೊಡಗಿಸಿಕೊಂಡು ನಿವೃತ್ತನಾದವನು. ನಾನು ರಂಗಾಯಣದ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಅವರಲ್ಲಿ ಯಾರೂ ರಂಗಭೂಮಿಯ ಶಕ್ತಿಗೆ, ಸಾಧ್ಯತೆಗಳಿಗೆ ವಿರೋಧವೆನಿಸುವ ಕೆಲಸ ಮಾಡಿದ ಉದಾಹರಣೆ ಇಲ್ಲ. ಆದರೆ ಒಬ್ಬ ನಟನಾಗಿ, ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮಾನ್ಯ ಅಡ್ಡಂಡ ಕಾರ್ಯಪ್ಪನವರು ಬಂದ ಬಳಿಕ ತಾನು ಹೇಳಿದ್ದೇ ಮಾತು, ತಾನು ಹೇಳಿದಂತೆಯೇ ಆಗಬೇಕು. ಇತ್ಯಾದಿಯಾಗಿ ಹೇಳುತ್ತಾ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ.

ಅವರು ಯಾವುದೇ ಪಕ್ಷದ ಸಂಘಟನೆಯ ಕಾರ್ಯಕರ್ತನಾಗಿರಲಿ. ಒಂದು ಸಾರ್ವಜನಿಕ ಸಂಸ್ಥೆಯ ನೇತೃತ್ವ ವಹಿಸಿದ ಬಳಿಕ ಪ್ರಜಾಪ್ರಭುತ್ವ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಂಗಭೂಮಿಯ ಕಾಯಕವನ್ನು ನಿರ್ವಹಿಸಬೇಕು. ಇದು ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರ ಜವಾಬ್ದಾರಿ.

ಸಂಸ್ಥೆಯ ಜವಾಬ್ದಾರಿ ಸ್ವೀಕರಿಸಿದ ಬಳಿಕ ಅವರು ನಡೆಸಿದ ಎಲ್ಲ ಚಟುವಟಿಕೆಗಳು, ಮಾತುಗಳು, ವಿಡಿಯೋಗಳು ಅವರು ಅಂತರಂಗದಲ್ಲಿ ಎಂತಹ ವ್ಯಕ್ತಿತ್ವವುಳ್ಳವರು ಎಂಬುದನ್ನು ಬಹಿರಂಗಗೊಳಿಸಿವೆ. ಅವರು ಉಳಿದವರನ್ನು ನಿಂದಿಸುವ ರಭಸದಲ್ಲಿ ಮುಖ್ಯವಾಗಿ ಎಡಪಂಥೀಯರನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ನಾಡಿನಲ್ಲಿ ಹೆಸರು ಮಾಡಿರುವ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರನ್ನು ಮತ್ತು ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿಯವರನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಒಪ್ಪಿಗೆ ಇದೆಯೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ “ಕಾದಂಬರಿ ಮತ್ತು ರಂಗಕೃತಿ ಎರಡೂ ಜಾಗತಿಕವಾಗಿ ಚಾಲ್ತಿಯಲ್ಲಿರುವ ಎಡಪಂಥೀಯ ಧೋರಣೆಯನ್ನು ಆಧರಿಸಿ” ಎಂದು ಅವರಿಗೆ ತಿಳಿಯದೇ ಹೋಗುತ್ತದೆ.

ರಂಗಭೂಮಿ ಒಬ್ಬನದ್ದಲ್ಲ. ಅದು ಸಮೂಹ ಸೃಷ್ಟಿ. ನಟ ನಟಿಯರು, ನಿರ್ದೇಶಕರು ಮತ್ತು ಪ್ರೇಕ್ಷಕರು ಒಟ್ಟಾಗಿ ನಡೆಸುವ ಸಂವಹನ ಸಂಸ್ಕೃತಿ. ಅವರು ಎಷ್ಟೇ ಸಮರ್ಥನೆ ಮಾಡಿದರೂ ಪ್ರೇಕ್ಷಕರು ಮತ್ತು ಸಾರ್ವಜನಿಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವುದರಿಂದ ಮಾನ್ಯ ಕಾರ್ಯಪ್ಪನವರು ತಮ್ಮಿಂದಾಗುತ್ತಿರುವ ತಪ್ಪು ಹೇಳಿಕೆಗಳನ್ನು ಧೋರಣೆಗಳನ್ನು ಗುರುತಿಸಿಕೊಳ್ಳಬೇಕು. ಅವರಿಗೆ ಒದಗಿರುವ ಗೌರವದ ನಿರ್ದೇಶಕನ ಸ್ಥಾನ ಮತ್ತು ಅವಕಾಶವನ್ನು ಸದುಪಯೋಗಗೊಳಿಸಬೇಕು. ಈ ಅವಕಾಶ ತಾತ್ಕಾಲಿಕವಾದದ್ದು, ರಂಗಭೂಮಿ ಯಾವತ್ತೂ ಜೀವಂತವಾಗಿ ಉಳಿಯುತ್ತದೆ. ಅದನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ಸರ್ವಾಧಿಕಾರಿ ನಿಲುವುಗಳನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ, ವಿರೋಧಿಸುತ್ತಾರೆ, ಪ್ರತಿಭಟಿಸುತ್ತಾರೆ. ಇದು ಅವರೇ ಘೋಷಿಸಿಕೊಳ್ಳುವ ಸಂಸ್ಥೆ, ಪಕ್ಷ, ಸರಕಾರದವರು ಕೂಡಾ ಒಪ್ಪಿಕೊಳ್ಳಲಾರದ ವಿಚಾರವಾಗಿದೆ. ಆ ಸಂಸ್ಥೆಗಳವರೇ ಅಡ್ಡಂಡ ಕಾರ್ಯಪ್ಪನವರನ್ನು ತಮ್ಮ ಪಕ್ಷ, ಸಂಸ್ಥೆ ವಿರೋಧಿ ಧೋರಣೆಗಳಿಗಾಗಿ ದೂರ ತಳ್ಳುತ್ತಾರೆ, ತಿಳಿದಿರಲಿ.

ಮೈಮ್ ರಮೇಶ,
ರಂಗನಿರ್ದೇಶಕ, ನಿವೃತ್ತ ರಂಗಾಯಣ ಕಲಾವಿದ, ಮೈಸೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...