Homeಬಹುಜನ ಭಾರತಬಹುಜನ ಭಾರತ; ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

ಬಹುಜನ ಭಾರತ; ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

- Advertisement -
- Advertisement -

’ವಿಶ್ವಗುರು’ವಿನ ಸ್ಥಾನಕ್ಕೆ ಏರಿರುವ ಭರತ ಖಂಡದಲ್ಲಿ ಮನುಷ್ಯರ ಮಲವನ್ನು ಬಳಿದು ಹೊತ್ತು ಸಾಗಿಸುವ ಮನುಷ್ಯರ ಸಂಖ್ಯೆ 58,098 ಎಂದು ಕೇಂದ್ರ ಸರ್ಕಾರ ಮೊನ್ನೆ ರಾಜ್ಯಸಭೆಯಲ್ಲಿ ಸಾರಿದೆ..

ಮಲ ಬಳಿವ ಮಾನವರು ಕೇವಲ 58 ಸಾವಿರವೇನು ಎಂದು ಸರ್ಕಾರ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಆದರೆ ಮಾನವ ಮಲ ಬಳಿಯುವ ’ದಲಿತ ದರಿದ್ರರ’ ಕಷ್ಟ ಕಣ್ಣೀರು ಸಂಕಟ ಅವಮಾನಗಳ ಅಂದಾಜು ಸರ್ಕಾರಗಳಿಗೂ ಇಲ್ಲ, ಸಮಾಜಕ್ಕೂ ಇಲ್ಲ. ಇವುಗಳ ಆತ್ಮಸಾಕ್ಷಿಯ ಅವಸಾನವಾಗಿ ಶತಮಾನಗಳೇ ಉರುಳಿಹೋಗಿವೆ! ಒಳಗೆ ಅಂತರಾತ್ಮವೇ ಇಲ್ಲದೆ ಹೋದಾಗ ಬರಿದೇ ಎದೆಯ ಮೇಲೆ ಕೈಯಿರಿಸಿಕೊಳ್ಳುವ ಬೂಟಾಟಿಕೆಯಿಂದ ಫಲವೇನು?

ಕಸವನ್ನೂ ಮಲವನ್ನೂ ಬಳಿಯುವವರ ಉದ್ಯೋಗಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ ಇದೆ. ಈ ಮೀಸಲಾತಿಯ ಫಲಾನುಭವಿಗಳು ದಲಿತರು. ಮೀಸಲಾತಿ ವಿರೋಧಿಗಳ್ಯಾರೂ ಈ ಮೀಸಲಾತಿಯನ್ನು ಪ್ರಶ್ನಿಸುವುದಿಲ್ಲ. ವರ್ಷಗಳ ಹಿಂದೆ ಅಹಮದಾಬಾದಿನ ಸ್ವಯಂಸೇವಾಸಂಸ್ಥೆಯೊಂದು ಸಫಾಯಿ ಕರ್ಮಚಾರಿಗಳ ನೇಮಕಕ್ಕೆ ಹೊರಡಿಸಿದ ಜಾಹೀರಾತು ಐತಿಹಾಸಿಕ ಕಟುಸತ್ಯಕ್ಕೆ ಕನ್ನಡಿ ಹಿಡಿದಿತ್ತು. ಬ್ರಾಹ್ಮಣ, ಕ್ಷತ್ರಿಯ, ಪಟೇಲ್, ಜೈನ, ವಣಿಯ, ಪಾರ್ಸಿ, ಸೈಯದ್, ಪಠಾಣ ಹಾಗೂ ಸಿರಿಯನ್ ಕ್ರೈಸ್ತ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಜಾಹೀರಾತಿಗೆ ಮೇಲ್ಜಾತಿಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ಜಾಹೀರಾತನ್ನು ವಾಪಸು ಪಡೆಯಬೇಕಾಯಿತು. ಮಲದ ಕೂಪದಲ್ಲಿ ಮುಳುಗೆದ್ದು ಏದುಸಿರು ಬಿಡುತ್ತಿರುವ ಪೀಳಿಗೆಗಳ ಬಿಡುಗಡೆಯ ಚಡಪಡಿಕೆಗೆ ಕುರುಡಾಗಿ, ಕಿವುಡಾಗಿ, ನಾಲಗೆ ಸತ್ತಂತೆ ನಟಿಸಿದ ಆರೋಪವನ್ನು ಸಂಸತ್ತು, ಸಮಾಜ, ನ್ಯಾಯಾಲಯಗಳು, ಸಮೂಹ ಮಾಧ್ಯಮಗಳು, ಕಡೆಗೆ ದಲಿತ ಆಂದೋಲನಗಳು ಸುಲಭವಾಗಿ ಕೊಡವಿಕೊಳ್ಳಲು ಬರುವುದಿಲ್ಲ.

ಮಲ ಬಳಿದು ಸಾಗಿಸುವ ಅಮಾನವೀಯ ಪದ್ಧತಿಯನ್ನು ಭಾರತದಲ್ಲಿ ನಿಷೇಧಿಸಿ 28 ವರ್ಷಗಳಾಯಿತು. ಆದರೂ ದೇಶದಲ್ಲಿ ಮಲ ಬಳಿದು ಸಾಗಿಸುವ ಮಾನವರು ಈಗಲೂ ಇದ್ದಾರೆ ಮತ್ತು ಅವರ ಸಂಖ್ಯೆ ಹತ್ತು ಲಕ್ಷಕ್ಕಿಂತ ಹೆಚ್ಚೇ ವಿನಾ ಸರ್ಕಾರ ಹೇಳುವಂತೆ ಕೇವಲ 58 ಸಾವಿರ ಅಲ್ಲ.

2011ರ ಜನಗಣತಿಯ ಹೊತ್ತಿಗೆಯನ್ನು ತೆರೆದರೆ ಸಾಕು. ಮನುಷ್ಯನ ಮಲವನ್ನು ಮತ್ತೊಬ್ಬ ಮನುಷ್ಯ ಕೈಯಾರೆ ಬಳಿದು ಹೊತ್ತು ಸಾಗಿಸುವ ಅಮಾನವೀಯತೆ ಗಹಗಹಿಸುತ್ತದೆ. ವಾಸ್ತವವನ್ನು ಮರೆಮಾಚಿ ತುಳಿದಿಟ್ಟು ತಿಪ್ಪೆ ಸಾರಿಸಿ ರಂಗೋಲೆ ಹಾಕುವ ಸರ್ಕಾರಿ ವರದಿಯಲ್ಲೇ ಈ ಪೀಡೆ ಕೇಕೆ ಹಾಕುತ್ತಿದೆ.. ಇನ್ನು ಬಚ್ಚಿಡಲಾಗದ ಸತ್ಯದ ವಾಸ್ತವ ರೂಪ ಎಷ್ಟು ಘೋರವಿದ್ದೀತು? ಒಣ ಪಾಯಿಖಾನೆಗಳಾಗಲೀ, ತೆರೆದ ಚರಂಡಿಗಳೇ ಇರಲಿ ಅವುಗಳು ತಮಗೆ ತಾವೇ ಸ್ವಚ್ಛ ಆಗುವುದಿಲ್ಲವಲ್ಲ? ಯಂತ್ರಗಳೂ ಇಲ್ಲದಿರುವಾಗ ಮನುಷ್ಯರು ತಾನೇ ಸ್ವಚ್ಛ ಮಾಡಬೇಕು? ಹಾಗಿದ್ದರೆ ಆ ಮನುಷ್ಯರನ್ನು ಮಾನವ ಮಲವನ್ನು ಬಳಿಯುವವರೆಂದು ಕರೆಯದೆ ಬೇರೆ ಯಾವ ಹೆಸರಿನಿಂದ ಕರೆಯಲು ಬಂದೀತು? ಸತ್ತ ದನಗಳು, ನಾಯಿಗಳನ್ನು ಎತ್ತಿ ಹಾಕುವವರಿದ್ದಾರಲ್ಲ ಅವರು ಯಾರು? ಅವರನ್ನು ಯಾವ ಲೆಕ್ಕಕ್ಕೆ ಸೇರಿಸಲಾಗಿದೆ ಮತ್ತು ಅವರನ್ನು ಯಾವ ಹೆಸರಿಟ್ಟು ಕರೆಯಲಾಗುತ್ತಿದೆಯೆಂದು ತಿಳಿಸುವ ಕೃಪೆ ಮಾಡಬೇಕು ಸರ್ಕಾರ. ಮಲ ಬಳಿವವರು ಎಷ್ಟು ಮಂದಿ ಎಂದು ಗುರುತಿಸದೆ ಹೋದರೆ ಅವರ ಮರುವಸತಿಗೆ ಕ್ರಮ ಕೈಗೊಳ್ಳುವುದೆಂತು?


ಮಲಬಳಿಯಲು ಮನುಷ್ಯರನ್ನು ನೇಮಕ ಮಾಡಿಕೊಳ್ಳುವುದನ್ನು ಮತ್ತು ಒಣಪಾಯಿಖಾನೆಗಳ ನಿರ್ಮಾಣವನ್ನು ನಿಷೇಧಿಸುವ ಕಾಯಿದೆ ಜಾರಿಯಾದದ್ದು 1993ರಲ್ಲಿ. ಈ ಕಾಯಿದೆಯ ದೋಷಗಳನ್ನು ಅರಿತುಕೊಂಡು ಸೆಪ್ಟಿಕ್ ಟ್ಯಾಂಕುಗಳನ್ನು, ತೆರೆದ ಚರಂಡಿಗಳನ್ನು ಹಾಗೂ ರೇಲ್ವೇ ಹಳಿಗಳನ್ನು ಈ ಕಾಯಿದೆಯ ವ್ಯಾಪ್ತಿಗೆ ತರುವ ತಿದ್ದುಪಡಿ ತಂದದ್ದು 2013ರಲ್ಲಿ. ಹಾಗೆಂದು ಮಲದ ಗುಂಡಿಗಳಿಗೆ ಮನುಷ್ಯರನ್ನು ಇಳಿಸುವ ಮತ್ತು ಅವರ ಪ್ರಾಣಗಳನ್ನು ಬಲಿ ತೆಗೆದುಕೊಳ್ಳುವ ಕ್ರೌರ್ಯ ಈಗಲೂ ನಿಂತಿಲ್ಲ.

ಮನುಷ್ಯರೇ ಪ್ರತ್ಯಕ್ಷವಾಗಿ ಕೈಯಿಂದ ಬಾಚಿ ಹೊತ್ತು ಸಾಗಿಸಬೇಕಿರುವ ಒಣ ಪಾಯಿಖಾನೆಗಳು (ನೀರಿನ ಒತ್ತಡದಿಂದ ಗುಂಡಿಯೊಳಕ್ಕೆ ತಳ್ಳುವ ವ್ವವಸ್ಥೆ ಇಲ್ಲದ ಪಾಯಿಖಾನೆಗಳು) ಈಗಲೂ ಭಾರತದಲ್ಲಿವೆ. ಜನಗಣತಿಯಲ್ಲಿ ಅದುಮಿಟ್ಟ ಅಂಕಿಅಂಶಗಳ ಪ್ರಕಾರವೇ ಇವುಗಳ ಸಂಖ್ಯೆ 26 ಲಕ್ಷ. ಇನ್ನು ಒಳಚರಂಡಿ ವ್ಯವಸ್ಥೆಗೆ ಜೋಡಣೆ ಆಗದೆ ನೇರವಾಗಿ ತೆರೆದ ಚರಂಡಿಗಳಿಗೆ ಮಾನವ ಮಲವನ್ನು ಹರಿಸುವ ಕಚ್ಚಾ ಪಾಯಿಖಾನೆಗಳು ಎಂಟು ಕೋಟಿ ಎಂಬತ್ತೆರಡು ಲಕ್ಷದ ಇನ್ನೂರ ಎಪ್ಪತ್ತೊಂದು.. 80ರಷ್ಟು ಒಣ ಪಾಯಿಖಾನೆಗಳು ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು-ಕಾಶ್ಮೀರದಲ್ಲಿವೆ ಎನ್ನುತ್ತದೆ ರೀಹ್ಯಾಬಿಲಿಟೇಷನ್ ರೀಸರ್ಚ್ ಇನಿಶಿಯೇಟಿವ್ ಎಂಬ ಸಂಸ್ಥೆಯ ಅಂಕಿಅಂಶ. ಈ ಅಂಕಿಅಂಶ-ಅಧ್ಯಯನವೂ ಪರಿಪೂರ್ಣ ಅಲ್ಲ. ನಗರಗಳಾಚೆಗಿನ ಜನವಸತಿಗಳ ಲೆಕ್ಕ ಇವುಗಳಲ್ಲಿ ಸೇರಿಲ್ಲ. ಈ ಸಮೀಕ್ಷೆ ಕೂಡ ಕೇವಲ 194 ನಗರಗಳಿಗೆ ಸೀಮಿತವಾದದ್ದು. ಹೀಗಾಗಿ ದೇಶದಲ್ಲಿ ಮನುಷ್ಯ ಮಲವನ್ನು ಬಳಿಯುವ ಮನುಷ್ಯರ ಸಂಖ್ಯೆ ಖಚಿತವಾಗಿ ತಿಳಿಯಬೇಕಾದರೂ ಹೇಗೆ?

ಭಾರತೀಯ ರೇಲ್ವೆ ಮನುಷ್ಯರಿಂದ ಮಲ ಬಳಿಸುವ ಮತ್ತೊಂದು ಮಹಾ ಅಪರಾಧಿ. ಆರು ವರ್ಷಗಳಷ್ಟು ಹಳೆಯ ಅಂಕಿಅಂಶಗಳ ಪ್ರಕಾರವೇ 12 ಸಾವಿರ ರೈಲುಗಾಡಿಗಳ 59,279 ಪ್ಯಾಸೆಂಜರ್ ಕೋಚುಗಳ ಪಾಯಿಖಾನೆಗಳ ಮಲ ಸೀದಾ ಹಳಿಗಳ ಮೇಲೆ ಬೀಳುತ್ತಲಿತ್ತು. ಬಳಿಯುವವರನ್ನು ಗುತ್ತಿಗೆದಾರನ ಮೂಲಕ ನೇಮಿಸಿಕೊಂಡಿದೆ. ತನ್ನ ದಾಖಲೆ ದಸ್ತಾವೇಜುಗಳಲ್ಲಿ ಮಲ ಬಳಿಯುವವರು ಇಲ್ಲ ಎಂದು ಜಾಣ ಸಮಜಾಯಿಷಿ ನೀಡುತ್ತದೆ.

ಈ ಮಲ ಬಳಿಸುವ ಈ ಅಮಾನುಷತೆಯನ್ನು ಶಿಕ್ಷಾರ್ಹ ಅಪರಾಧ ಎಂದು ನಿಷೇಧಿಸಿದ್ದು 1993ರಲ್ಲಿ. 1993ರಿಂದ ಇಲ್ಲಿಯತನಕ ಈ ಕಾಯಿದೆಯ ಅಡಿಯಲ್ಲಿ ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಿರುವ ಉದಾಹರಣೆಗಳಾದರೂ ಎಷ್ಟಿವೆ? ಮಲ ಬಳಿವವರ ಮರುವಸತಿಗಾಗಿ ತಲಾ 40 ಸಾವಿರ ರುಪಾಯಿಯ ನಗದು ನೆರವು, ಅವರು ಮತ್ತು ಅವರ ಕುಟುಂಬದವರಿಗೆ ಕೌಶಲ್ಯ ತರಬೇತಿಗಾಗಿ ತಲಾ ಮಾಸಿಕ 3000 ರುಪಾಯಿಯ ಸ್ಟೈಫೆಂಡ್, ಇವರ ಪೈಕಿ ಸ್ವಉದ್ಯೋಗಕ್ಕೆಂದು ಸಾಲ ಪಡೆದವರಿಗೆ ಐದು ಲಕ್ಷ ರುಪಾಯಿಯ ಸಬ್ಸಿಡಿ, ಮಲ ಬಳಿವವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಭಾರತ ಯೋಜನೆಯ ಅಡಿಯಲ್ಲಿ ಆರೋಗ್ಯ ವಿಮೆ ನೀಡಲಾಗುತ್ತಿದೆ. ಅವರನ್ನು ನಡೆಸಿಕೊಂಡಿರುವ ಪರಿಗೆ ಅವರು ಅನುಭವಿಸಿದ ನೋವು ಅವಮಾನ ಸಂಕಟಗಳಿಗೆ ಈ ಪರಿಹಾರ ಸಾಕೇನು?

ದುರಂತದೊಳಗಿನ ದುರಂತವೆಂದರೆ ಇವರ ಪೈಕಿ ನೂರಕ್ಕೆ 98ರಷ್ಟು ಮಂದಿ ಹೆಣ್ಣುಮಕ್ಕಳೇ. ಮನುವಾದಿ ಮೇಲ್ಜಾತಿಗಳ ’ನಾಗರಿಕ’ರ ಪಾಲಿಗೆ ಇವರೆಲ್ಲ ಮುಟ್ಟಿಸಿಕೊಳ್ಳಬಾರದವರು. ಮನೆ ತುಂಬಿಸಿಕೊಳ್ಳುವ ಹೊಸ ಸೊಸೆಗೆ ಎಲ್ಲಕ್ಕಿಂತ ಮೊದಲು ತನ್ನ ಯಜಮಾನಿಕೆ ಹಿಸ್ಸೆ ನೀಡುತ್ತಾಳೆ ಅತ್ತೆ. ತಾನು ಕೈಯಾರೆ ಬಾಚಿ ನಂತರ ತಲೆ ಮೇಲೆ ಹೊತ್ತು ಸಾಗಿಸಿ ಸ್ವಚ್ಛ ಮಾಡುವ ಪಾಯಿಖಾನೆಗಳು ಎಂಬ ಪೂರ್ವಾರ್ಜಿತ ಆಸ್ತಿಯನ್ನು ಹಂಚಿಕೊಡುತ್ತಾಳೆ. ಮಲ ಬಾಚುವ ತಗಡಿನ ಚೌಕಗಳು, ಬುಟ್ಟಿ ಹಾಗೂ ಪೊರಕೆಯನ್ನು ಕೈಗಿರಿಸುತ್ತಾಳೆ.

ನಸುಕು ಹರಿಯುವ ಮೊದಲೇ ಮೇಲು ಜಾತಿಗಳವರ ಕೇರಿಗಳ ಒಣ ಪಾಯಿಖಾನೆಗಳ ಮಲ ಬಾಚಲು ತೆರಳುವ ಹೆಣ್ಣುಮಕ್ಕಳು ತಿಂಗಳಿಗೆ ಸಾವಿರ, ಎರಡು ಸಾವಿರ ರುಪಾಯಿ ಗಳಿಸಿದರೆ ಅದೇ ಅಷ್ಟೈಶ್ವರ್ಯ. ದಿನಬಿಟ್ಟು ದಿನ ಮಲ ಬಳಿಸಿಕೊಳ್ಳುವವರು ಎಸೆಯುವ ಹಳಸಿದ ತಂಗಳು ಕೂಳು. ಆಗಾಗ ಬಿಸುಡುವ ಹಳೆಯ ಹರಕು ಹಚ್ಚಡ. ಹಲವು ಬಗೆಯ ಚರ್ಮರೋಗಗಳು, ಕ್ಷಯರೋಗ, ತಲೆಶೂಲೆ, ನಿರಂತರ ವಾಕರಿಕೆ, ಹುಣ್ಣು ಹೊಪ್ಪಳೆಗಳು, ಇವರ ಪಾಲಿಗೆ ಮುಫತ್ತು ಬಳುವಳಿಗಳು. ಹೆರುವ ವಯಸ್ಸಿನ ಹಲವರು ಗರ್ಭಪಾತಕ್ಕೆ ಈಡಾದ ಮತ್ತು ಅಂಗವಿಕಲ ಕೂಸುಗಳನ್ನು ಹೆಡೆದಿರುವ ಉದಾಹರಣೆಗಳು ಹೇರಳ.

ಎಷ್ಟು ಸಲ ಜಳಕ ಮಾಡಿದರೇನಂತೆ? ಮೈ ಮನಸ್ಸಿನ ಅಣುಅಣುವಿನಿಂದ ಮಲದ ಗಬ್ಬುನಾಥವೇ ಹೊಮ್ಮುವ ಭಾವ ಹಗಲಿರುಳೂ. ಕಾಲಮೇಲೆ ಕೀತುಕೊಂಡ ಕಪ್ಪು ಹಳದಿ ಬೊಬ್ಬೆಗಳು. ಔಷಧಿಗೆ ಕಾಸಿಲ್ಲ. ಬೆಳ್ಳಂಬೆಳಿಗ್ಗೆ ಖಾಲಿ ಹೊಟ್ಟೇಲಿ ಮಲ ಬಳಿಯಲು ಹೋಗುತ್ತಾರೆ ಈ ಹೆಣ್ಣುಮಕ್ಕಳು. ವಾಪಸು ಬರೋ ಹೊತ್ತಿಗೆ ವಾಂತಿ ವಾಕರಿಕೆ. ತಿನ್ನಬೇಕು ಅನ್ಸಲ್ಲ. ಮಲದ ಮೇಲೆ ಕುಳಿತು ಹಾರುವ ನೊಣಗಳು ಕೀಟಗಳು ಅವರ ಮೈಯ ಮೇಲೆ, ಉಣ್ಣುವ ಅನ್ನದ ಮೇಲೆ… ಎಲ್ಲೆಂದರಲ್ಲಿ ಕಂಡು ಕಾಡುತ್ತವಂತೆ.

ಪ್ರಯಾಗರಾಜದ ತ್ರಿವೇಣಿ ಸಂಗಮದ ತಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಸ-ಹೇಸಿಗೆ ಬಳಿದ ಕರ್ಮಚಾರಿಗಳ ಪಾದಗಳನ್ನು ಕೈಮುಟ್ಟಿ ತೊಳೆದು ಇನ್ನೂ ಎರಡು ವರ್ಷಗಳು ತುಂಬಿಲ್ಲ. ಶುಭ್ರವಸ್ತ್ರದಿಂದ ಒರೆಸಿ ಕೃತಜ್ಞತೆ ಸಲ್ಲಿಸಿದರು. ವಿನಮ್ರತೆ- ಕೃತಜ್ಞತೆಯೇ ಮೋದಿ ರೂಪದಲ್ಲಿ ಮೈದಳೆದ ದೃಶ್ಯಾವಳಿ. ದೇಶ ನಿಬ್ಬೆರಗಾಗಿ ನೋಡಿದೆ. ಅಭಿಮಾನಿಗಳು-ಭಕ್ತರು ತಮ್ಮ ಕಣ್ಮಣಿಯನ್ನು ಕೊಂಡಾಡಿದ್ದಾರೆ. ಮಹಾಮಾನವ ಎಂದು ಉದ್ಗರಿಸಿದ್ದರು.

Photo Courtesy: Deccan Herald

ಮೊದಲೇ ಉಜ್ಜಿ ತೊಳೆದಿದ್ದ ಸ್ವಚ್ಛ ಪಾದಗಳನ್ನು ತೊಳೆವ ಬದಲು ಮಲದ ಗುಂಡಿಗಳಲ್ಲಿ ಮೂಗಿನ ಮಟ್ಟ ಮುಳುಗಿದವರನ್ನು ಹಿಡಿದೆತ್ತಿ ಅವರ ಮೈ ತೊಳೆಯಬೇಕಿತ್ತು. ಇನ್ನು ಇಳಿಯಲು ಬಿಡೆನು ಎಂದು ಸಾರಬೇಕಿತ್ತು. ಮಲದ ಗುಂಡಿಗಳಲ್ಲಿ ವಿಷಾನಿಲ ಕುಡಿದು ಸಂಭವಿಸುವ ಸಾವಿರ ಸಾವಿರ ಸಾವುಗಳಿಗೆ ಪೂರ್ಣವಿರಾಮ ಹಾಕುವುದಾಗಿ ಪಣತೊಡಬೇಕಿತ್ತು. ಒಣಪಾಯಿಖಾನೆಗಳನ್ನು ಒಡೆದುಹಾಕಲು, ಅಂತಹ ಪಾಯಿಖಾನೆಯೊಂದನ್ನು ಸಾಂಕೇತಿಕವಾಗಿ ಒಡೆಯಲು ಹಾರೆ-ಗುದ್ದಲಿ-ಪಿಕಾಸಿಯನ್ನು ಕೈಗೆ ಎತ್ತಿಕೊಳ್ಳಬೇಕಿತ್ತು.

’ತೊಳೆದುಕೊಳ್ಳಬೇಕಾದದ್ದು ನಿಮ್ಮ ಮಿದುಳನ್ನೇ ವಿನಾ ನಮ್ಮ ಪಾದಗಳನ್ನಲ್ಲ ಪ್ರಧಾನಿಯವರೇ. ನೀವು ಮಾಡಿರುವುದು ಅತಿ ದೊಡ್ಡ ಅಪಮಾನ. 1.6ಲಕ್ಷ ಮಹಿಳೆಯರಿಂದ ಹೇಲು ಬಾಚಿಸಲಾಗುತ್ತಿದೆ. ಐದು ವರ್ಷಗಳಲ್ಲಿ ಚಕಾರ ಎತ್ತಿಲ್ಲ ನೀವು. ಎಂತಹ ನಾಚಿಕೆಗೇಡು’ ಎಂದು ಬೆಜವಾಡ ವಿಲ್ಸನ್ ಸಿಡಿನುಡಿಗಳನ್ನು ಆಡಿದ್ದರು.

ಈ ಬಡಪಾಯಿಗಳಿಗೆ ಮೋದಿಯವರು ಹುಸಿ ದೈವತ್ವ ಕರುಣಿಸಿದ್ದು ಇದೇ ಮೊದಲೇನೂ ಅಲ್ಲ. “ಸಮಾಜದ ಸಂತೋಷಕ್ಕಾಗಿ ದೇವರೇ ವಹಿಸಿದ ಕೆಲಸವಿದು ಎಂದು ಸಫಾಯಿ ಕರ್ಮಚಾರಿಗಳಿಗೆ ಯಾವುದೋ ಒಂದು ಹಂತದಲ್ಲಿ ಜ್ಞಾನೋದಯ ಆಗಿರಬೇಕು. ಶತಮಾನಗಳ ಆಂತರಿಕ ಆಧ್ಯಾತ್ಮಿಕ ಚಟುವಟಿಕೆಯಿದು. ಬೇರೆ ಕೆಲಸ ಮಾಡುವ ಆಯ್ಕೆ- ಅವಕಾಶ ಅವರ (ಸಫಾಯಿ ಕರ್ಮಚಾರಿಗಳ) ಪೂರ್ವಜರಿಗೆ ಇರಲಿಲ್ಲವೆಂದು ನಂಬುವುದು ಕಷ್ಟ” ಎಂದು ಮೋದಿಯವರು 2007ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಹೇಳಿದ ಮಾತುಗಳು ’ಕರ್ಮಯೋಗಿ’ ಹೆಸರಿನ ಪುಸ್ತಕದಲ್ಲಿ ಅಚ್ಚಾಗಿ ಅಜರಾಮರ ಆಗಿವೆ.

“…ರೇಷ್ಮೆ ಹುಳ ಗೂಡು ಕಟ್ಟುತ್ತೆ. ಆ ಹುಳಗಳ ಬೇಯಿಸಿ ಗೂಡಿನ ನೂಲನ್ನು ಮಡಿ ಬಟ್ಟೆಗಾಗಿ ಬಳಸಲಾಗುತ್ತದೆ. ನಗರದ ಮಡಿ ಸ್ವಚ್ಛತೆಗಾಗಿ ಪೌರಕಾರ್ಮಿಕರು ಬೇಯಿಸಲ್ಪಡುತ್ತಿದ್ದಾರೆ…” ಎಂಬ ದೇವನೂರ ಮಹಾದೇವರ ಮಾತಿನ ಆಯಸ್ಸು ಕೊನೆಯಾಗುವುದು ಎಂದಿಗೆ?


ಇದನ್ನೂ ಓದಿ: Manual Scavenging: ಮಲದ ಗುಂಡಿ ಸ್ವಚ್ಛಗೊಳಿಸುವವರಲ್ಲಿ 73.31% ಪರಿಶಿಷ್ಟ ಜಾತಿಯವರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...