ಕೊರೊನಾ ಬಿಕ್ಕಟ್ಟು ಮತ್ತು ಮುಂದಿನ ಪರಿಣಾಮಗಳ ಕುರಿತು ಯೋಚಿಸದೆ ಜಾರಿಗೊಳಿಸಿದ ಲಾಕ್ಡೌನ್ನಿಂದಾಗಿ ಬಸವಳಿದಿರುವ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ಇಲಾಖೆ ಮುಂದಾಗಿದೆ. “ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲಾಗುವುದು” ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ಯೋಜನೆಯನ್ನು ಮೊದಲಿಗೆ ಬೆಂಗಳೂರಿನಲ್ಲಿ ಜಾರಿಗೊಳಿಸಲು ಚಿಂತಿಸಲಾಗಿದೆ. ಕಟ್ಟಡ ಕಾರ್ಮಿಕರು ತಮ್ಮ ನಿವಾಸದಿಂದ ತಾವು ಕೆಲಸ ಮಾಡುವ ಸ್ಥಳಕ್ಕೆ ತೆರಳಲು ದಿನನಿತ್ಯ 100 ರೂ. ಅಧಿಕ ಹಣವನ್ನು ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದಾರೆ. ಹೀಗಾಗಿ ಅವರ ಗಳಿಕೆಯ ಒಂದು ದೊಡ್ಡ ಭಾಗ ಪ್ರಯಾಣಕ್ಕೆ ಖರ್ಚಾಗುತ್ತಿದೆ. ಹೀಗಾಗಿ, ಅವರಿಗೆ ನೆರವು ನೀಡಲು ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನೋಂದಾಯಿತ ಕಾರ್ಮಿಕರು ಕೆಲಸದ ಸ್ಥಳಗಳಿಗೆ ತೆರಳಲು ಇದು ನೆರವಾಗುತ್ತದೆ. ಶೀಘ್ರವೇ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಜೊತೆಗೆ ಚರ್ಚೆ ನಡೆಯುತ್ತಿದೆ. ಯೋಜನೆಯ ವ್ಯಾಪ್ತಿ, ದೂರದ ಮಿತಿ ಮೊದಲಾದವುಗಳ ಬಗ್ಗೆ ಚರ್ಚಿಸಿ ಶೀಘ್ರವೇ ಉಚಿತ ಪಾಸ್ ಕಾರ್ಮಿಕರ ಕೈ ಸೇರುವಂತೆ ಮಾಡಲಾಗುತ್ತದೆ ಎಂದು ಅವರ ಹೇಳಿದ್ದಾರೆ.
ಬಸ್ ಪಾಸ್ ಪಡೆಯುವುದು ಹೇಗೆ?
ಯೋಜನೆ ಜಾರಿಗೆ ಬಂದ ನಂತರ, ಬೆಂಗಳೂರಿನ ಬಸ್ ಡಿಪೋಗಳಲ್ಲಿ ಪಾಸ್ಗಳನ್ನು ವಿತರಿಸಲಾಗುತ್ತದೆ. ಕೆಳಗಿನ ದಾಖಲೆಗಳೊಂದಿಗೆ ಡಿಪೋ ವ್ಯವಸ್ಥಾಪಕರನ್ನು ಸಂಪರ್ಕಿಸಿ ಪಾಸ್ ಪಡೆದುಕೊಳ್ಳಬಹುದು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ ನೊಂದಾಯಿಸಿರಬೇಕು. ಮಂಡಳಿಯ ಗುರುತಿನ ಚೀಟಿ, ಎರಡು ಸ್ಟ್ಯಾಂಪ್ ಸೈಜ್ ಫೋಟೋ, ಆಧಾರ್ ಕಾರ್ಡ್ ಪ್ರತಿ ನೀಡಬೇಕು.
ಇದನ್ನೂ ಓದಿ: ಕಾದಂಬರಿ, ರಂಗಕೃತಿಗೆ ಎಡಪಂಥೀಯ ಧೋರಣೆ ಆಧಾರ: ಮೈಮ್ ರಮೇಶ್