ರೈತ ಪ್ರತಿಭಟನೆ ಕುರಿತು ಟ್ವಿಟರ್ನಲ್ಲಿ ವಾಕ್ಸಮರ ನಡೆಸುತ್ತಿದ್ದ ಪಂಜಾಬಿ ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತೆ ವಾಕ್ಸಮರಕ್ಕೆ ಇಳಿದಿದ್ದಾರೆ. ದಿಲ್ಜಿತ್ ತಾನು ‘ಖಲಿಸ್ತಾನಿಯಲ್ಲ’ ಎಂದು ಸಾಬೀತುಪಡಿಸಲಿ ಎಂದು ಕಂಗನಾ ಸವಾಲು ಹಾಕಿದ್ದಾರೆ.
“ನೀವು ಖಲಿಸ್ತಾನಿಯಲ್ಲ ಎಂದು ಒಮ್ಮೆ ಹೇಳಬೇಕೆಂದು ನಾನು ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದೆ. ಆದರೆ ಅವರು ಅದಕ್ಕೆ ಉತ್ತರಿಸಲಿಲ್ಲ. ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ, ಅವರಿಗೆ ಖಲಿಸ್ತಾನ್ ಬಗ್ಗೆ ಕನಸನ್ನು ಬಿತ್ತಲಾಗುತ್ತಿದೆ” ಎಂದು ಕಂಗನಾ ಹೇಳಿದ್ದಾರೆ.
ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಅವರೊಂದಿಗಿನ ಸಂದರ್ಶನದಲ್ಲಿ ಕಂಗನಾ ಹಲವಾರು ಹೇಳಿಕೆಗಳನ್ನು ನೀಡಿದ್ದು, ಗ್ರೇಟಾ ಥನ್ಬರ್ಗ್ ಅವರು ತಪ್ಪಾಗಿ ಹಂಚಿಕೊಂಡಿದ್ದಾರೆಂದು ಹೇಳಲಾದ ‘ಪ್ರತಿಭಟನಾ ಟೂಲ್ಕಿಟ್’ ಅನ್ನು ಕೂಡಾ ಉಲ್ಲೇಖಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ: ಹೋರಾಟನಿರತ ರೈತರ ಸ್ಪೆಟರ್, ಹೊದಿಕೆಗಾಗಿ 1 ಕೋಟಿ ರೂ. ದೇಣಿಗೆ ನೀಡಿದ ಗಾಯಕ ದಿಲ್ಜಿತ್ ದೋಸಂಜ್
“ನಾವು ಯುವಕರನ್ನು ರಚನಾತ್ಮಕವಾಗಿ ತೊಡಗಿಸುವಂತಾಗಬೇಕೆ ಹೊರತು ರಾಷ್ಟ್ರದ ಹೊರೆಯಾಗಿಸಬಾರದು. ಟಿಕ್ಟಾಕ್ನಂತೆಯೇ ಟ್ವಿಟರ್ಗೆ ಕೂಡಾ ನಿಷೇಧ ಹೇರಬೇಕು. ಈ ದೇಶವನ್ನು ಕಮ್ಯುನಿಸ್ಟ್ ಕೊಳಕುನಿಂದ ಸ್ವಚ್ಛಗೊಳಿಸಬೇಕು” ಎಂದು ಕಂಗನಾ ಹೇಳಿದ್ದಾರೆ.
ನಾನು ಧ್ವನಿ ಎತ್ತಿದರ ಪರಿಣಾಮವಾಗಿ ಕಷ್ಟಕ್ಕೆ ಒಳಗಾಗಿದ್ದೇನೆ ಎಂದಿರುವ ಕಂಗನಾ, “ನನ್ನ ಮನೆಯನ್ನು ಒಡೆಯಲಾಗಿದೆ, ಅದು ಇನ್ನೂ ಹಾಗೆ ಇದೆ. ಇದರಿಂದಾಗಿ ನಾನು 10-15 ಕೋಟಿ ರೂ. ನಷ್ಟವನ್ನು ಅನುಭವಿಸಿದೆ. ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ, ಕನಿಷ್ಠ 6-7 ವಕೀಲರು ಆ ಪ್ರಕರಣಗಳನ್ನು ನಿರ್ವಹಿಸುತ್ತಿದ್ದಾರೆ. ದೇಶದ್ರೋಹದ ಹೊರತಾಗಿ ನನ್ನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ” ಎಂದು ಹೇಳಿದ್ದಾರೆ.
“ಜಾವೇದ್ ಅಖ್ತರ್ ಅವರು ಚಿತ್ರರಂಗದಿಂದ ನನಗೆ ಸಮನ್ಸ್ ಕಳುಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ನಾನೇನು ನಾಯಕಿಯಲ್ಲ, ನನಗೆ ಏನೂ ಇಲ್ಲ. ಅವರ ಅಧಿಕೃತ ಹ್ಯಾಂಡಲ್ಗಳು ಇಡೀ ದಿನ ನನ್ನನ್ನು ಟ್ರೋಲ್ ಮಾಡುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ ರಿಹಾನ್ನಾ: ಗೌರವಾರ್ಥವಾಗಿ ಹಾಡು ಸಮರ್ಪಿಸಿದ ದಿಲ್ಜಿತ್!