“ಲಸಿಕೆ ವಿಚಾರದಲ್ಲಿ ಸರ್ಕಾರ ತನ್ನ ಸಲಹೆಗಾರರಾದ ಗಗನ್ ದೀಪ್ ಕಾಂಗ್ ಅವರ ಮಾತು ಕೇಳಿದರೆ ಸಾಕು, ಪರಿಣಾಮಕಾಯಾಗಿ ಲಸಿಕೆ ವಿತರಣೆ ಮಾಡಬಹುದು. ಆದರೆ ಸರ್ಕಾರ ತನ್ನ ಸಲಹೆಗಾರರ ಮಾತನ್ನು ಒಪ್ಪಲು ಸಿದ್ಧವಿದೆಯೇ?” ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ ಷ ಡಿ.ಕೆ. ಶಿವಕುಮಾರು ಪ್ರಶ್ನಿಸಿದ್ದಾರೆ.
ಕಾಂಗ್ ಅವರು ಖ್ಯಾತ ವೈರಾಣು ತಜ್ಞರಾಗಿದ್ದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ವೈರಾಣು ವಿಜ್ಞಾನ. ವಿಭಾಗದ ಪ್ರೊಫೆಸರ್ ಆಗಿದ್ದಾರೆ. ಕಳೆದ ತಿಂಗಳು ರಾಜ್ಯ ಸರ್ಕಾರ ಇವರನ್ನು ಲಸಿಕೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು.
“ಕಾಂಗ್ ಅವರ ನೇಮಕವಾದಾಗ ಸರ್ಕಾರ ಕಡೆಗೂ ವಿಜ್ಞಾನಿಗಳ ಸಲಹೆ ಪಡೆಯಲು ಮುಂದಾಗಿದೆ ಎಂದು ಭಾವಿಸಿದ್ದೆವು. ಆದರೆ ಸಲಹೆಗಾರರ ಅಭಿಪ್ರಾಯಕ್ಕೂ ಸರ್ಕಾರದ ನಿರ್ಧಾರಗಳಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೇವಲ ಪ್ರಚಾರಕ್ಕೆ ಮಾತ್ರ ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಸಂಕಷ್ಟ – ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮಿ. ಸೈಕಲ್ ಪ್ರಯಾಣ
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ ಅವರು ಕೊರೊನಾ ನಿರ್ವಹಣೆ ವಿಚಾರವಾಗಿ ವ್ಯಕ್ತಪಡಿಸಿರುವ 10 ಅಂಶಗಳನ್ನು ಡಿ.ಕೆ. ಶಿವಕುಮಾರ್ ಅವರು ಉಲ್ಲೇಖಿಸಿದ್ದು, ಕಾಂಗ್ ಅವರ ಅಭಿಪ್ರಾಯಗಳನ್ನು ಸರ್ಕಾರ ಪರಿಗಣಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
“ಲಸಿಕೆ ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮಾಡಬೇಕೇ ಹೊರತು, ರಾಜ್ಯ ಸರ್ಕಾರವಲ್ಲ ಎಂದು ಸಲಹೆಗಾರರು ಅಭಿಪ್ರಾಯಪಟ್ಟಿದ್ದು, ಇದನ್ನು ಸರ್ಕಾರ ಒಪ್ಪುತ್ತದೆಯೇ? ಕೇಂದ್ರ ಸರಕಾರವು ಜಾಗತಿಕ ಕಂಪನಿಗಳಿಂದ ಲಸಿಕೆ ಖರೀದಿಯಲ್ಲಿ ವಿಳಂಬ ಮಾಡಿದೆ ಎಂಬುದನ್ನಾದರೂ ಸರ್ಕಾರ ಒಪ್ಪಿಕೊಳ್ಳುತ್ತದೆಯೇ?
ಕಾಂಗ್ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ‘ಇಡೀ ವಿಶ್ವ ಮುಂದಿನ ಒಂದು ವರ್ಷದಲ್ಲಿ ಎದುರಾಗುವ ಸವಾಲು ಎದುರಿಸಲು ಲಸಿಕೆ ಖರೀದಿ ಮಾಡುತ್ತಿದೆ. ಆದರೆ ನಮಗೆ ಮಾರುಕಟ್ಟೆಯಲ್ಲಿ ಸದ್ಯದ ಬೇಡಿಕೆಯಷ್ಟು ಮಾತ್ರ ಲಸಿಕೆ ಲಭ್ಯವಾಗುತ್ತಿದೆ. ಹೀಗಾಗಿ ನಾವು ಹೆಚ್ಚಿನ ಪ್ರಮಾಣದ ಲಸಿಕೆ ಖರೀದಿಸಬೇಕು’ ಎಂದಿದ್ದಾರೆ” ಎಂದು ಡಿಕೆಶಿ ಉಲ್ಲೇಖಿಸಿದ್ದಾರೆ.
“ಅಲ್ಲದೆ, ಕಾಂಗ್ ಅವರು ಜಾಗತಿಕ ಟೆಂಡರ್ ಅನ್ನು ಸಂಪನ್ಮೂಲದ ವ್ಯರ್ಥ ಎಂದು ಹೇಳಿರುವ ದಾಖಲೆಗಳಿವೆ. ಹಾಗಾದರೆ ಕರ್ನಾಟಕ ಸರ್ಕಾರವು ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ನಿರ್ಧಾರದಲ್ಲಿ ಸಲಹೆಗಾರರ ಅಭಿಪ್ರಾಯವನ್ನು ಪರಿಗಣಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಾಗತಿಕ ಟೆಂಡರ್ ಮೂಲಕ ಎಷ್ಟು ಪ್ರಮಾಣದ ಲಸಿಕೆಯನ್ನು, ಯಾವಾಗ ಖರೀದಿ ಮಾಡಲಿದೆ ಎಂಬ ಮಾಹಿತಿ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ವಿವಿಗಳಲ್ಲಿ ಯೋಗಿ ಆದಿತ್ಯನಾಥ್, ಬಾಬಾ ರಾಮದೇವ್ ಕುರಿತು ಪಠ್ಯ!
“ಕೇಂದ್ರ ಸರ್ಕಾರ ಈ ವರ್ಷ ಡಿಸೆಂಬರ್ ವೇಳೆಗೆ 2 ಕೋಟಿ ಡೋಸ್ ಲಸಿಕೆ ಖರೀದಿ ಮಾಡುವುದಾಗಿ ತಿಳಿಸಿದ್ದು, ಕಾಂಗ್ ಅವರು, ‘ಇದು ವಾಸ್ತವಾಂಶಕ್ಕೆ ದೂರವಾದದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಸಲಹೆಗಾರರ ಅಭಿಪ್ರಾಯವನ್ನು ಒಪ್ಪುತ್ತದೆಯೇ? ಹಾಗೂ ರಾಜ್ಯದಲ್ಲಿರುವ ಎಲ್ಲ ವಯಸ್ಕರಿಗೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಹಾಕಿಕೊಂಡಿರುವ ಕಾಲಮಿತಿಯ ಬಗ್ಗೆ ವಿವರ ನೀಡುತ್ತದೆಯೇ?” ಎಂದು ಕೇಳಿದ್ದಾರೆ.
“ಜನವರಿ ತಿಂಗಳಲ್ಲಿ ಕೋವ್ಯಾಕ್ಸಿನ್ ಅಂತಿಮ ಪರೀಕ್ಷೆ ವರದಿ ಪ್ರಕಟವಾಗುವ ಮುನ್ನವೇ ಅದರ ಬಳಕೆಗೆ ಅನುಮತಿ ನೀಡಿದ್ದನ್ನು ಡಾ. ಕಾಂಗ್ ಅವರು ಪ್ರಶ್ನಿಸಿದ್ದರು. ಜತೆಗೆ, ಕೋವ್ಯಾಕ್ಸಿನ್ ಅಂತಿಮ ಪರೀಕ್ಷಾ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ತನ್ನ ಸಲಹೆಗಾರರ ಅಭಿಪ್ರಾಯವನ್ನು ಬೆಂಬಲಿಸುತ್ತದೆಯೇ” ಎಂದು ಸರ್ಕಾರವನ್ನು ಅವರು ಕೇಳಿದ್ದಾರೆ.
“ದೇಶದಲ್ಲಿ ಎರಡನೇ ಅಲೆ ವಿಚಾರವಾಗಿ ಭಾರತ ಸರ್ಕಾರದ ನಿರ್ಲಕ್ಷ್ಯವನ್ನು ಡಾ.ಕಾಂಗ್ ಅವರು ಪ್ರಶ್ನಿಸಿದ್ದರು. ‘ಸೋಂಕು ಹೆಚ್ಚಳದ ಬಗ್ಗೆ ನಾವು ಆರಂಭದಲ್ಲೇ ಗಮನ ಹರಿಸಬೇಕಿತ್ತು. ಕಡೇ ಪಕ್ಷ ಮಾರ್ಚ್ ಆರಂಭದಲ್ಲಾದರೂ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ನಾವದನ್ನು ಮಾಡಲಿಲ್ಲ’ ಎಂದು ಹೇಳಿದ್ದಾರೆ” ಎಂದು ಡಿಕೆಶಿ ಹೇಳಿದ್ದಾರೆ.
“ಅವರನ್ನು ರಾಜ್ಯದ ಲಸಿಕೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡ ನಂತರವೂ ಸರ್ಕಾರ ಮಾರ್ಚ್ ತಿಂಗಳಲ್ಲಿ ಸೋಂಕು ಪ್ರಕರಣ ಹೆಚ್ಚಳದ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿತ್ತು ಎಂಬುದನ್ನು ಸರ್ಕಾರ ಒಪ್ಪಿಕೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಆತಂಕ: ಸಿಬಿಎಸ್ಇ 12 ನೇ ತರಗತಿ ಪರೀಕ್ಷೆ ರದ್ದು
“ಗಗನ್ ದೀಪ್ ಕಾಂಗ್ ಅವರು ಸಂದರ್ಶನವೊಂದರಲ್ಲಿ, ‘ನಾವು ಪ್ರಸ್ತುತ ರೀತಿಯಲ್ಲೇ ಸಾಗಿದರೆ ನಿರಂತರವಾಗಿ ಸೋಂಕು ಹರಡುತ್ತಾ ಹೋಗುತ್ತದೆ. ನಂತರ ಅದು ಅತ್ಯಂತ ಮಾರಕ ವೈರಾಣುವಾಗಿ ರೂಪುಗೊಳ್ಳಬಹುದು. ಆಗ ಪ್ರತಿ ವರ್ಷ ಒಂದು ಅಥವಾ ಎರಡು ಅಲೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಸಲಹೆಯನ್ನಾದರೂ ಕೇಳುತ್ತದೆಯೇ? ಮಂದಗತಿಯಲ್ಲಿ ಲಸಿಕೆ ಹಾಕುವ ಮೂಲಕ ಸೋಂಕು ಹರಡಲು ಅವಕಾಶ ಕಲ್ಪಿಸಲಾಗುತ್ತಿದೆಯೇ? ಅಥವಾ ಕೊರೊನಾವನ್ನು ಶಾಶ್ವತವಾಗಿ ಮಣಿಸಲು ಸಮೂಹ ಲಸಿಕೆ ಕಾರ್ಯಕ್ರಮದ ಬಗ್ಗೆ ಸರ್ಕಾರ ಏನಾದರೂ ಯೋಜನೆ ರೂಪಿಸಿದೆಯೇ?” ಎಂದು ಅವರು ಕೇಳಿದ್ದಾರೆ.
“ಅಂತಿಮವಾಗಿ ಡಾ. ಕಾಂಗ್ ಅವರು, ‘ಭಾರತ ಸರ್ಕಾರ ಸೋಂಕು ಪ್ರಕರಣ ಹಾಗೂ ಲಸಿಕೆ ಕುರಿತ ನೈಜ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಆಗ ಮಾತ್ರ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯ’ ಎಂದು ಹೇಳಿದ್ದಾರೆ. ‘ಕಳಪೆ ಅಂಕಿ-ಅಂಶಗಳಿಂದಾಗಿ ಭಾರತದಲ್ಲಿ ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ಅಳೆಯಲು ಸಾಧ್ಯವಾಗುತ್ತಿಲ್ಲ ಎಂದೂ ತಿಳಿಸಿದ್ದಾರೆ. ಭಾರತದಲ್ಲಿ ಲಸಿಕೆ ಸಾಮರ್ಥ್ಯದ ಬಗ್ಗೆ ಅಧ್ಯಯನ, ಸಮೀಕ್ಷೆ, ವೈಜ್ಞಾನಿಕ ವಿಶ್ಲೇಷಣೆ ನಡೆಸಬೇಕು’ ಎಂದು ಅವರು ತಿಳಿಸಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
“ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಬಿಜೆಪಿ ನಾಯಕರು ಕಾಳಸಂತೆಯಲ್ಲಿ ಲಸಿಕೆ ಮಾರಿಕೊಳ್ಳಲು ಅವಕಾಶ ನೀಡುವುದನ್ನು ಬಿಟ್ಟು, ಕೊರೊನಾ ನಿರ್ವಹಣೆ ವಿಚಾರದಲ್ಲಿ ಮೊದಲು ತನ್ನ ಸಲಹೆಗಾರರ ಮಾತನ್ನು ಕೇಳಬೇಕಿದೆ” ಎಂದು ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ, ಕಠಿಣ ಕಾಯ್ದೆ ರೂಪಿಸಲು IMA ಆಗ್ರಹ


