Homeಮುಖಪುಟರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಜಸ್ಟಿಸ್‌ ಅರುಣ್‌ ಮಿಶ್ರಾ ನೇಮಕ

ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಜಸ್ಟಿಸ್‌ ಅರುಣ್‌ ಮಿಶ್ರಾ ನೇಮಕ

ಎಸ್‌ಸಿ ಎಸ್ಟಿ ವರ್ಗದಿಂದ ಅಧ್ಯಕ್ಷ ಅಥವಾ ಸದಸ್ಯರು ಯಾಕಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

- Advertisement -
- Advertisement -

ಸುಪ್ರೀಂ ಕೋರ್ಟ್‌ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್‌ ಅರುಣ್‌ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಜಸ್ಟಿಸ್‌ ಅರುಣ ಮಿಶ್ರಾ 2020ರ ಸೆಪ್ಟೆಂಬರ್‌ 3 ರಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗಿದ್ದರು.

ಜಸ್ಟಿಸ್‌ ಅರುಣ್‌ ಮಿಶ್ರಾ 2014 ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಈ ಹಿಂದೆ ಅವರು ರಾಜಸ್ಥಾನ ಮತ್ತು ಕಲ್ಕತ್ತಾ ಹೈಕೋರ್ಟ್‌ ಗಳ ಮುಖ್ಯನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ಜಸ್ಟಿಸ್‌ ಮಿಶ್ರಾ ಅವರ ಈಗಿನ ಹೊಸ ಹುದ್ದೆಯ ಅಧಿಕಾರಾವಧಿಯು 5 ವರ್ಷದ್ದಾಗಿದು 2026 ರಲ್ಲಿ ನಿವೃತ್ತರಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಸಭೆಯ ಉಪಾಧ್ಯಕ್ಷ ಹರಿವಂಶ, ಲೋಕಸಭೆ ಸ್ಪೀಕರ್‌ ಓಮ್‌ ಬಿರ್ಲಾ ರಾಜ್ಯ ಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡ ಉನ್ನತ ಸಮಿತಿಯು ಅರುಣ್‌ ಮಿಶ್ರಾ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಜಸ್ಟಿಸ್‌ ಅರುಣ್‌ ಮಿಶ್ರಾ ಆಯ್ಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಯಾರಾದರೂ ಎಸ್‌ಸಿ, ಎಸ್ಟಿ ಸಮುದಾಯದಿಂದ ಬಂದವರನ್ನು ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ. ಅಥವಾ ಎಸ್‌ಸಿ ಸ್ಟಿ ಸಮುದಾಯದವರೊಬ್ಬರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ ನೇಮಿಸುವಂತೆ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಮನವಿ ಮಾಡಿದ್ದಾರೆ. ದೇಶದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಇತ್ತೀಚಿನ ವರ್ಷಗಳಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆ ಸಂಬಂಧ ಹೆಚ್ಚು ಹೆಚ್ಚು ಪ್ರಕರಣಗಳು ಮಾನವ ಹಕ್ಕು ಆಯೋಗದ ಮುಂದೆ ಬರುತ್ತಿವೆ ಹಾಗಾಗಿ ಎಸ್‌ಸಿ ಎಸ್ಟಿ ಸಮುದಾಯದವರು ಆಯೋಗದಲ್ಲಿದ್ದರೆ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂಲಗಳು ಹೇಳುವಂತೆ ಮಲ್ಲಿಕಾರ್ಜುನ ಖರ್ಗೆಯವರು ಸಮಿತಿಯ ಸಭೆಗೂ ಮೊದಲು ಪ್ರಧಾನಿಯವರಿಗೆ ಈ ಸಂಬಂಧ ಪತ್ರವನ್ನು ಬರೆದಿದ್ದಾರೆ. ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಅಥವಾ ನಿಯಮಾವಳಿಗಳು ಎಸ್‌ಸಿ ಎಸ್ಟಿ ವರ್ಗದವರನ್ನು ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡಿ ಎಂದು ಹೇಳುವುದಿಲ್ಲ ಎಂಬ ಒಂದೇ ಕಾರಣಕ್ಕೆ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಎಸ್‌ಸಿ ಎಸ್ಟಿ ಸಮುದಾಯದವರೊಬ್ಬರನ್ನು ಆಯೋಗಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡಿ ಎಂದು ಖರ್ಗೆಯವರು ತಮ್ಮ ಪತ್ರದಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರಧಾನಿಯವರಲ್ಲಿ ಮನವಿ ಮಾಡಿದ್ದರು.

ಕಳೆದ ಡಿಸೆಂಬರ್‌ ನಲ್ಲಿ ಮಾಜಿ ಸಿಜೆಐ ಹೆಚ್‌ ಎಲ್‌ ದತ್ತು ಅವರ ನಿವೃತಿಯ ನಂತರ 6 ತಿಂಗಳುಗಳಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಹುದ್ದೆ ಖಾಲಿಯಾಗಿಯೇ ಉಳಿದಿತ್ತು. ಜೊತೆಗೆ ಆಯೋಗದ ಸದಸ್ಯರ ಹುದ್ದೆಗಳು ದೀರ್ಘಾವಧಿಯಿಂದ ತೆರವಾಗಿಯೇ ಉಳಿದಿವೆ. ಹಿಂದೆ ಮಾರ್ಚ್‌ ನಲ್ಲಿ ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಮತ್ತು ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಜಸ್ಟಿಸ್‌ ಪ್ರಫುಲ್ಲ ಪಂತ್‌ ರಾಷ್ಟ್ರೀಯ ಆಯೋಗದಲ್ಲಿ ಖಾಲಿಯಾಗಿಯೇ ಉಳಿದಿರುವ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.

ರಾಜ್ಯ ಮಾನವ ಹಕ್ಕುಗಳ ಆಯೋಗಗಳೂ ಕೂಡ ಸದಸ್ಯರು ಮತ್ತು ಅಧ್ಯಕ್ಷರಿಲ್ಲದೇ ಸ್ಥಗಿತ ಗೊಂಡಿವೆ. ಈ ವಿಷಯವನ್ನು ಜಸ್ಟಿಸ್‌ ಪ್ರಫುಲ್ಲ ಪಂತ್‌ ಅತ್ಯಂತ ಕಳವಳಕಾರಿ ಅಂಶ ಎಂದು ಮಾರ್ಚ್‌ ನಲ್ಲಿ ಹೇಳಿಕೆ ನೀಡಿದ್ದರು. ಅನೇಕ ರಾಜ್ಯಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಳು ಅಧ್ಯಕ್ಷರು ಮತ್ತು ಅಗತ್ಯ ಸಂಖ್ಯೆಯ ಸದಸ್ಯರಿಲ್ಲದೇ ಕಾರ್ಯಾಚರಣೆಯನ್ನು ನಿಲ್ಲಿಸಿವೆ. ಉದಾಹರಣೆಗೆ ಮಹರಾಷ್ಟ್ರದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ 2018 ರಿಂದ ಈಚೆಗೆ ಪೂರ್ಣಾವಧಿಯ ಅಧ್ಯಕ್ಷರ ನೇಮಕವಾಗಿಲ್ಲ. ಇದರಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಹೆಚ್ಚು ಹೆಚ್ಚು ಪ್ರಕರಣಗಳು ಹೈಕೋರ್ಟ್‌ ಮೆಟ್ಟಿಲೇರವಂತಾಗಿದೆ. ಮಹರಾಷ್ಟ್ರದ ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಕೊರತೆಯಿಂದ ಕಳೆದ ವರ್ಷ ಕೋವಿಡ್‌ ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯು ಉದ್ಭವಿಸಿತು. ಮಹರಾಷ್ಟ್ರವಲ್ಲದೇ ಇನ್ನೂ ಅನೇಕ ರಾಜ್ಯಗಳಲ್ಲಿ ಸದಸ್ಯರ ಮತ್ತು ಅಧ್ಯಕ್ಷರ ಅನುಪಸ್ಥಿತಿಯಿಂದ ಮಾನವಹಕ್ಕು ಆಯೋಗದ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.


ಇದನ್ನೂ ಓದಿ: ದೇವೇಗೌಡರು ಪ್ರಧಾನಿಯಾಗಿ 25 ವ‍ರ್ಷದ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯ ಸ್ಥಿತಿಗತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...