ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.
ಮೂವರು ಪಕ್ಷೇತರ ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಕಾಂಗ್ರೆಸ್ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಜೊತೆ ಮಂಗಳವಾರ ರೋಹ್ಟಕ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಘೋಷಣೆ ಮಾಡಿದ್ದಾರೆ.
“ನಾವು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದೇವೆ. ರೈತರಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಗೆ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಶಾಸಕ ಗೊಂಡರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್, “ಮೂವರು ಸ್ವತಂತ್ರ ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ.
“ಒಟ್ಟು 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ ಬಲ 88 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿ 40 ಸದಸ್ಯರನ್ನು ಹೊಂದಿದೆ. ಬಿಜೆಪಿ ಸರ್ಕಾರಕ್ಕೆ ಈ ಹಿಂದೆ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಶಾಸಕರು ಮತ್ತು ಸ್ವತಂತ್ರರ ಬೆಂಬಲ ಇತ್ತು. ಆದರೆ ಜೆಜೆಪಿ ಶಾಸಕರು ಈಗಾಗಲೇ ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ. ಈಗ ಸ್ವತಂತ್ರರು ಕೂಡ ಬೆಂಬಲಿಸುವುದಿಲ್ಲ ಎಂದಿದ್ದಾರೆ. ಹಾಗಾಗಿ, ನಯಾಬ್ ಸಿಂಗ್ ಸೈನಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದ್ದರಿಂದ ಸೈನಿ ಅವರಿಗೆ ಒಂದು ನಿಮಿಷವೂ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅರ್ಹತೆ ಇಲ್ಲ. ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಉದಯ್ ಭಾನ್ ಆಗ್ರಹಿಸಿದ್ದಾರೆ.
ಬಲಾ ಬಲ ಹೇಗಿದೆ?
ಹರಿಯಾಣ ವಿಧಾನಸಭೆಯ ಒಟ್ಟು ಸದಸ್ಯ ಬಲ 90. ಪ್ರಸ್ತುತ 88 ಶಾಸಕರಿದ್ದಾರೆ. ವಿಧಾನಸಭೆಯಲ್ಲಿ ಬಹುಮತಕ್ಕೆ 42 ಶಾಸಕರ ಬೆಂಬಲ ಬೇಕಿದೆ. ಪ್ರಸ್ತುತ ಬಿಜೆಪಿ ಶಾಸಕರು 40 ಮಂದಿಯಿದ್ದು, ಬಿಜೆಪಿಗೆ ಇಬ್ಬರು ಸ್ವತಂತ್ರ ಶಾಸಕರಾದ ಪೃಥ್ವಿಯ ನಯನ್ ಪಾಲ್ ರಾವತ್, ಬಾದ್ಶಾಪುರದ ರಾಕೇಶ್ ದೌಲ್ತಾಬಾದ್, ಹರಿಯಾಣ ಜನಹಿತ ಪಕ್ಷದ ಗೋಪಾಲ್ ಕಾಂಡಾ ಮತ್ತು ಜೆಜೆಪಿ ಪಕ್ಷದ ಓರ್ವ ಶಾಸಕನ ಬೆಂಬಲ ಇದೆ. ಈ ಮೂಲಕ ಬಿಜೆಪಿ 44 ಶಾಸಕರ ಬೆಂಬಲ ಹೊಂದಿದೆ.
ಅತ್ತ ಕಾಂಗ್ರೆಸ್, ಜೆಜೆಪಿ ಹಾಗೂ ಪಕ್ಷೇತರರ ಶಾಸಕರು ಸೇರಿ 44 ಮಂದಿ ಇದ್ದಾರೆ. ಹಾಗಾಗಿ, ಎರಡೂ ಕಡೆ ಬಹುಮತ ಇದ್ದು, ಒಂದೇ ರೀತಿ ಶಾಸಕರ ಬೆಂಬಲವೂ ಇದೆ. ಇದು ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ‘ಪೊಲೀಸರು ನಮಗೆ ಮತ ಹಾಕಲು ಬಿಡಲಿಲ್ಲ’: ಗಂಭೀರ ಆರೋಪ ಮಾಡಿದ ಸಂಭಾಲ್ನ ಮುಸ್ಲಿಂ ಮತದಾರರು