ನನಗೆ ರಾಮನಲ್ಲಿ ನಂಬಿಕೆಯಿಲ್ಲ. ರಾಮ ದೇವರಾಗಿರಲಿಲ್ಲ, ರಾಮ ಎಂಬುದು ತುಳಸಿದಾಸ್ ಮತ್ತು ವಾಲ್ಮೀಕಿಯವರು ಸಮಾಜಕ್ಕೆ ಸಂದೇಶ ನೀಡುವುದಕ್ಕಾಗಿ ಬರೆದ ಕಥೆಯಲ್ಲಿನ ಕಾಲ್ಪನಿಕ ಪಾತ್ರವಷ್ಟೆ ಎಂದು ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ರಚಿಸಿರುವ ಮಾಜಿ ಸಿಎಂ ಜಿತನ್ ರಾಮ್ ಮಾಂಜಿ ಹೇಳಿದ್ದಾರೆ.
ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ರವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕಥೆಯಲ್ಲಿ ಬರುವಂತೆ ರಾಮ ಶಬರಿ ಕಚ್ಚಿ ತಿಂದ ಹಣ್ಣನ್ನು ತಿನ್ನುತ್ತಾನೆ. ನೀವು ರಾಮನಲ್ಲಿ ನಂಬಿಕೆಯಿಟ್ಟಿದ್ದರೆ, ನಾವು ಕಚ್ಚಿದ ಹಣ್ಣು ತಿನ್ನುವುದು ಬೇಡ, ಕನಿಷ್ಟ ನಾವು ಮುಟ್ಟಿದ ಹಣ್ಣನಾದರೂ ತಿನ್ನುತ್ತೀರಾ? ಎಂದು ಮಾಂಜಿ ಪ್ರಶ್ನಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ದೇಶದಲ್ಲಿನ ಜಾತಿ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ತುಳಸಿದಾಸ್ ಮತ್ತು ವಾಲ್ಮೀಕಿಯವರು ರಾಮಾಯಣವನ್ನು ಬರೆದಿದ್ದು ಅದರಲ್ಲಿ ಹಲವಾರು ಒಳ್ಳೆಯ ಅಂಶಗಳಿವೆ. ಅವುಗಳನ್ನು ನಾವು ನಂಬುತ್ತೇವೆ. ತುಳಸಿದಾಸ್ ಮತ್ತು ವಾಲ್ಮೀಕಿಯವರನ್ನು ನಾನು ನಂಬುತ್ತೇನೆಯೇ ಹೊರತು ರಾಮನನ್ನಲ್ಲ ಎಂದು ಮಾಂಜಿ ಹೇಳಿದ್ದಾರೆ.
ಪ್ರಪಂಚದಲ್ಲಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ಜಾತಿಗಳಿವೆ. ಆದರೆ ನಮ್ಮಲ್ಲಿ ನೂರೆಂಟೆ ಜಾತಿಗಳನ್ನು ಮಾಡಿ ಬ್ರಾಹ್ಮಣರು ದಲಿತರ ವಿರುದ್ದ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಮನವಮಿ ಆಚರಣೆ ವೇಳೆ ಹಲವಾರು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಂಜಿಯವರ ಹೇಳಿಕೆಗಳು ಬಂದಿವೆ. ಅವರು ಹಿಂದುಸ್ತಾನ್ ಅವಾಂ ಮೊರ್ಚಾದ ಅಧ್ಯಕ್ಷರಾಗಿದ್ದು, ಪ್ರಸ್ತುತು ಬಿಹಾರದಲ್ಲಿನ ಎನ್ಡಿಎ ಸರ್ಕಾರದ ಭಾಗವಾಗಿದ್ದಾರೆ. ಅವರ ಮಗ ಸಂತೋಷ್ ಮಾಂಜಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ.
ಇದನ್ನೂ ಓದಿ: ಜಿತನ್ ರಾಮ್ ಮಾಂಜಿ ಯಾರು?
ಒಂದೆಡೆ ಬಿಜೆಪಿ ರಾಮನನ್ನು ಆರಾಧಿಸುತ್ತಿದ್ದು, ರಾಮನ ಹೆಸರಿನಲ್ಲಿ ಮತರಾಜಕೀಯವನ್ನು ಮಾಡುತ್ತಿದೆ. ಅದೇ ಸಂದರ್ಭದಲ್ಲಿ ಬಿಜೆಪಿಯ ಮಿತ್ರಪಕ್ಷದ ಅಧ್ಯಕ್ಷರು ರಾಮ ಎಂಬುದು ಕಾಲ್ಪನಿಕ ಪಾತ್ರ ಎಂದು ಹೇಳಿರುವುದು ವಿಪರ್ಯಾಸವಾಗಿದೆ.