ಲಿಂಗತ್ವ ಅಲ್ಪಸಂಖ್ಯಾತರ ದಿಟ್ಟ ದನಿ ‘ಅಕ್ಕಯ್ ಪದ್ಮಶಾಲಿ’ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾಂಗ್ರೆಸ್ ನಾಯಕರು ನೇಮಿಸಿದ್ದಾರೆ. ಈ ರೀತಿಯ ರಾಜಕೀಯ ಸ್ಥಾನವಮಾನವನ್ನು ಪಡೆದ ಮೊದಲ ಲಿಂಗತ್ವ ಅಲ್ಪಸಂಖ್ಯಾತರಾಗಿಯೂ ‘ಅಕ್ಕಯ್’ ಗುರುತಿಸಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಅಕ್ಕಯ್ ಪದ್ಮಶಾಲಿ ಅವರನ್ನು ‘ನಾ ನಾಯಕಿ’ ಕಾರ್ಯಕ್ರಮದ ರಾಜ್ಯ ಸಂಚಾಲಕರನ್ನಾಗಿ ನೇಮಿಸಿದ್ದರು. ಈಗ ಮತ್ತೊಂದು ಗುರುತರ ಜವಾಬ್ದಾರಿಯನ್ನು ಅಕ್ಕಯ್ ಅವರಿಗೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ನೀಡಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅಕ್ಕಯ್ ಅವರು, ತಮ್ಮ ಮುಂದಿನ ಗುರಿ ಹಾಗೂ ಉದ್ದೇಶಗಳನ್ನು ಹಂಚಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾನು ಲಿಂಗತ್ವ ಅಲ್ಪಸಂಖ್ಯಾತಳು. ಸಾಮಾಜಿಕ, ರಾಜಕೀಯ ಹಕ್ಕುಗಳ ಹೋರಾಟಗಾರ್ತಿಯಾಗಿ ಹಲವು ಸವಾಲುಗಳು ನನ್ನ ಮುಂದಿವೆ. ಇಂದು ಜಾತಿ, ಧರ್ಮ, ವರ್ಗ, ಜನಾಂಗೀಯ ಆಧಾರದಲ್ಲಿ, ತಿನ್ನುವ ಆಹಾರದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಅಸಹಿಷ್ಣುತೆಯ ಕಾಲದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಸಮಾಜದ ಎಲ್ಲ ಶೋಷಿತರ ಪರ ಹೋರಾಟ ಮುಂದುವರಿಸುತ್ತೇನೆ” ಎಂದರು.
“ಇತರ ಪಕ್ಷಗಳಿಗಿಂತ ಮೊದಲಿಗೆ ಕಾಂಗ್ರೆಸ್, ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳು” ಎಂದ ಅವರು, “ಶೋಷಿತರಲ್ಲೇ ಶೋಷಿತರಾದ ನಮ್ಮನ್ನು ಕಂಡರೆ ಸಮಾಜದಲ್ಲಿ ತಾತ್ಸಾರದ ಮನೋಭಾವ ಇದೆ, ಮಹಿಳಾ ವಿರೋಧಿ ನೀತಿಗಳು ದೇಶದಲ್ಲಿವೆ. ಅದರ ವಿರುದ್ಧ ಹೋರಾಟಬೇಕಿದೆ” ಎಂದು ತಿಳಿಸಿದರು.
“ಮಹಿಳೆಯರಿಗೆ ಶೇ. 33ರಷ್ಟು ರಾಜಕೀಯ ಸ್ಥಾನಮಾನ ಅನುಷ್ಠಾನವಾಗಿಲ್ಲ. ಆದರೆ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಡಿ.ಕೆ.ಶಿವಕುಮಾರ್ ಅವರು ‘ನಾ ನಾಯಕಿ’ ಕಾರ್ಯಕ್ರಮ ಆರಂಭಿಸಿದರು. ಅವರ ಕನಸು ನನಸು ಮಾಡುವತ್ತ ಗಮನ ಹರಿಸಿದ್ದೇನೆ. ‘ನಾ ನಾಯಕಿ’ ಕಾರ್ಯಕ್ರಮಕ್ಕೆ ರಾಜ್ಯ ಸಂಯೋಜಕಿಯನ್ನಾಗಿ ನೇಮಿಸಲಾಗಿತ್ತು. ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರೂ ಸಮಾನರೆಂಬ ಸಿದ್ಧಾಂತ ಕಾಂಗ್ರೆಸ್ನದ್ದು. ಇದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದು ಹೇಳಿದರು.
“ದೇಶದಲ್ಲಿ ಅಸಹಿಷ್ಣುತೆ ಇದೆ. ಮಹಿಳೆಯ ಹಿಜಾಬ್, ರೈತ ವಿರೋಧಿ ಕಾಯ್ದೆಗಳು, ಹೆಣ್ಣುಮಕ್ಕಳ ಶಿಕ್ಷಣ, ಮದುವೆ, ಮಕ್ಕಳ ಸಾಗಾಣಿಕೆ, ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ದನಿ ಎತ್ತಬೇಕಿದೆ. ಪಕ್ಷದ ಮೂಲಕ ಏನೆಲ್ಲ ಬದಲಾವಣೆ ತರಲು ಸಾಧ್ಯವಾಗುತ್ತದೆಯೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ” ಎನ್ನುತ್ತಾರೆ ಅಕ್ಕಯ್.
“ನಮ್ಮಂಥ ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆಡೆ ಜಾಗವಿಲ್ಲ. ರಾಜಕೀಯಕ್ಕಾಗಿ ಈ ಮಾತು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ನೀಡಿದ ಬೆಂಬಲವನ್ನು ಅನುಭವಿಸಿ ಹೇಳುತ್ತಿದ್ದಾರೆ. ನಮ್ಮ ಸಮುದಾಯದ ರಾಜಕೀಯದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಆದರೆ ನಮಗೂ ರಾಜಕೀಯ ಸ್ಥಾನವಿದೆ ಎಂದು ತೋರಿಸಿಕೊಟ್ಟವರು ಡಿ.ಕೆ.ಶಿವಕುಮಾರ್. ಹೀಗಾಗಿ ಯುವಕರು, ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು, ವಿಶೇಷ ಚೇತನರು, ಲೈಂಗಿಕ ಕಾರ್ಮಿಕರು- ಎಲ್ಲರನ್ನೂ ಒಟ್ಟಿಗೆ ತರುವ ಕೆಲಸ ಮಾಡುತ್ತೇನೆ” ಎಂದು ತಮ್ಮ ಗುರಿಯನ್ನು ಹಂಚಿಕೊಂಡರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ನೀಡಿರುವ ಆದ್ಯತೆಯನ್ನು ಸ್ಮರಿಸಿದ ಅವರು, “ಇಂದಿರಾ ಗಾಂಧಿಯಮ್ಮನ ಫೋಟೋವನ್ನು ಸಮುದಾಯದ ಪ್ರತಿ ಮನೆಯಲ್ಲೂ ಕಾಣಬಹುದು” ಎಂದರು.
“ಇಂದಿರಾ ಗಾಂಧಿಯವರು ಮನೆ ಇಲ್ಲದವರಿಗೆ ಮನೆ ಕೊಟ್ಟರು. ಟ್ರೈನ್ನಲ್ಲಿ ಉಚಿತವಾಗಿ ಓಡಾಡುವ ಅವಕಾಶ ನೀಡಿದರು. ಇಂದಿರಾ ಗಾಂಧಿಯಮ್ಮನನ್ನು ಲೈಂಗಿಕ ಅಲ್ಪಸಂಖ್ಯಾತರು ಸದಾ ನೆನೆಯುತ್ತಾರೆ” ಎಂದು ತಮ್ಮ ಹೋರಾಟದ ಬದುಕನ್ನು ಮೆಲುಕು ಹಾಕಿದರು.
ಇದನ್ನೂ ಓದಿರಿ: ರಾಮ ದೇವರಲ್ಲ, ಕಥೆಯಲ್ಲಿನ ಕಾಲ್ಪನಿಕ ಪಾತ್ರವಷ್ಟೆ: ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಜಿ
“ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ನಮ್ಮನ್ನು ಅಪರಾಧೀಕರಣಗೊಳಿಸಿತ್ತು. ಈ ಸಮುದಾಯದ ಪರವಾಗಿ ನಿಲ್ಲುವ ನಿರ್ಧಾರವನ್ನು 2005ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷ ಮಾಡಿತು. 2009ನೇ ಇಸವಿಯಲ್ಲಿ ದೆಹಲಿ ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದಾಗ ಕಾಂಗ್ರೆಸ್ ಪಕ್ಷ ನೇರವಾಗಿ ನಮ್ಮ ಸಮುದಾಯಕ್ಕೆ ಸಹಕಾರ ನೀಡಿತು. ಬೇರೆ ಯಾವುದೇ ಪಕ್ಷ ನಮ್ಮೊಂದಿಗೆ ಬಂದು ನಿಲ್ಲಲಿಲ್ಲ. ಸ್ವಲ್ಪ ಸಮಯದ ನಂತರ ಸಿಪಿಐ, ಸಿಪಿಎಂ ಹಾಗೂ ಜೆಡಿಎಸ್ ಬೆಂಬಲ ನೀಡಿದವು. ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಸಹಾಯವನ್ನು ನೆನೆಯುತ್ತೇನೆ. ಸದಾ ನಮ್ಮೊಂದಿಗಿದ್ದ ಪಕ್ಷ, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಿರುವುದು ಮಹತ್ತರ ಬೆಳವಣಿಗೆ” ಎಂದು ಅಭಿಪ್ರಾಯಪಡುತ್ತಾರೆ ಅಕ್ಕಯ್.