Homeಮುಖಪುಟ2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

- Advertisement -
- Advertisement -

ಬೆಳಗಿನ ಜಾವದ ಐದು ಗಂಟೆಯ ಚುಮುಚುಮು ಚಳಿಗೆ ತಲೆಗೊಂದು ಟೋಪಿ ಹಾಕಿಕೊಂಡು ರನ್ನಿಂಗ್‌ಗೆ ಹೊರಟಾಗ, ನಮಗೆ ಅಪರಿಚಿತವೆನ್ನಬಹುದಾದ, ಉತ್ತರ ಕರ್ನಾಟಕದ ಊರಿನಲ್ಲಿ ಹೆಣ್ಣುಮಗಳೊಬ್ಬಳು ಆಗಷ್ಟೇ ಸ್ನಾನ ಮುಗಿಸಿ, ನೆತ್ತಿಯ ಮೇಲಿನ ನೀರು ಆರುವ ಮುನ್ನವೇ, ಒದ್ದೆ ಮುದ್ದೆ ಕೂದಲನ್ನು ಟವಲಿನಲ್ಲಿ ಸುತ್ತಿಕೊಂಡು, ಗುಡಿಸಿ ಸಾರಿಸಿದ ನೆಲಕ್ಕೆ ರಂಗೋಲಿಯ ಚುಕ್ಕಿಯನ್ನಿಡುವುದನ್ನು ನೋಡಿದಾಗ ಮೂಡಿದ ಮನಸ್ಸಿನ ಭಾವ; ಉಳಿದುಕೊಂಡಿದ್ದ ಟೆಂಟ್ ಹೌಸ್‌ನಿಂದ ಸೂರ್ಯ ಹುಟ್ಟುವ ಮುನ್ನವೇ ಹೊರಬಂದು ಚಳಿಗೆ ಮುಖವೊಡ್ಡಿ ಕಾಲಾಡಿಸುತ್ತಿದ್ದಾಗ, ಹಿಮಾಲಯದ ತಪ್ಪಲಿನ ಕಾರ್ಗಿಲ್‌ನ ಹೊರವಲಯದ ಜನರಿಲ್ಲದ ತಾಣದಲ್ಲಿ, ಕುರಿಕಾಯುವ ಅಲೆಮಾರಿ ಸಮುದಾಯದ ವೃದ್ಧರೊಬ್ಬರು ಹರಿಯುವ ತೊರೆಯ ಪಕ್ಕದಲ್ಲಿ ಕಲ್ಲು ಜೋಡಿಸಿ ಒಲೆ ಹೂಡಿ ಚಹಾ ಕಾಯಿಸಿ “ಸರ್‌ದೀ ಮೆ ಚಾಯ್ ಬಹೊತ್ ಸುಕೂನ್ ದೇತಾ ಹೈ ಬಿಟಿಯಾ, ಪೀವೋ” (ಚಳಿಯಲ್ಲಿ ಚಹಾ ಕುಡಿಯೋದು ಬಹಳ ನೆಮ್ಮದಿ ಕೊಡುತ್ತೆ ಮಗಳೇ, ಕುಡಿ.) ಎಂದು ಟೀ ನೀಡಿ ನಕ್ಕಾಗ ಮೂಡಿದ ಮನಸ್ಸಿನ ಭಾವ; ಇವೆರಡೂ ಭಾವಗಳಿಗೆ ಇದ್ದ ಸಾಮ್ಯತೆಯೆಂದರೆ ಅವರ ’ಬದುಕು’ ಎನ್ನಬಹುದೇನೊ.

ಬದುಕಿನ ಏರಿಳಿತಗಳ ನಡುವೆ ನಾನಾ ತರಹದ ಅನುಭವಗಳಿಗೆ, ನೋವು ನಲಿವುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ತೆರೆದಿಟ್ಟುಕೊಂಡು ನಿರಂತರವಾಗಿ ಸಾಗುತ್ತಲೇ ಇರುವಾಗ ನಾನು ಕೇಳಿಕೊಳ್ಳುವ ಮುಖ್ಯ ಪ್ರಶ್ನೆ ಈ ’ಬದುಕು’ ಎಂದರೆ ಏನು? ಬದುಕುವುದು ಎಂದರೆ ಹೇಗಿರಬೇಕು? ಈ ಪ್ರಶ್ನೆಗಳನ್ನು ಬಹುಶಃ ನನ್ನಂತೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ. ಸರಿಯುತ್ತಿರುವ ವರುಷದ ಕೊನೆಯಲ್ಲಿ ನಿಂತು ಬದಲಾಗುವ ಕ್ಯಾಲೆಂಡರಿನೊಂದಿಗೆ ಹೊಸದಿನಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾವು ನಮಗೆ ಮತ್ತೆಮತ್ತೆ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಗಳಿವು. ಇತ್ತೀಚಿನ ದಿನಗಳಲ್ಲಿ ಕೋವಿಡ್‌ನಂತಹ ಕಷ್ಟದ ದಿನಗಳನ್ನು ಸವೆಸಿ, ಬದುಕುಳಿದು, ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಡಿರುವವರಿಂದ ಹಿಡಿದು ಬರೀ ಆರ್ಥಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯದಲ್ಲೂ ಜರ್ಜರಿತರಾಗಿ, ಬದುಕುಳಿದಿರುವುದೇ ವರವೆಂದು ಜೀವಿಸುತ್ತಿರುವವರೂ, ಈಗ ಹಿಂತಿರುಗಿ ನೋಡಿ ನಕ್ಕಿದ್ದೆಲ್ಲ, ಸಂಭ್ರಮಿಸಿದ್ದೆಲ್ಲಿ, ಎಡವಿದ್ದೆಲ್ಲಿ ಹಾಗೂ ನಿಜವಾಗಿಯೂ ಬದುಕನ್ನು ಬದುಕಿದ್ದೆಲ್ಲಿ ಎನ್ನುವುದನ್ನು ಕೇಳಿಕೊಳ್ಳಲೇಬೇಕಿದೆ.

ಈ ಸಮಗ್ರ ಬದುಕಿಗೊಂದು ಇಂಥದ್ದೇ ಎಂಬ ಒಂದು ಚೌಕಟ್ಟಿಲ್ಲದಿದ್ದರೂ ಬುದ್ಧ ಹೇಳಿದ ’ಆಸೆಯೇ ದುಃಖಕ್ಕೆ ಮೂಲ’, ಬಸವಣ್ಣನೆಂದ ’ಕಾಯಕವೇ ಕೈಲಾಸ’, ಓಶೋ ಹೇಳಿದ ’ಬದುಕನ್ನು ಜೀವಿಸು’ ಅನ್ನುವ ಮಾತುಗಳನ್ನು ಜೋಡಿಸಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಹೇಗೆ ಕಣ್ಣು, ಮೂಗು, ಕೈ, ಕಾಲು ಹಾಗೂ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯವಾಗಿರುವುದು ಇಡೀ ದೇಹಕ್ಕೆ ಅವಶ್ಯಕವೋ ಹಾಗೆಯೇ ಮನಸ್ಸಿನ ಆರೋಗ್ಯಕ್ಕೆ ನಮ್ಮ ಆಲೋಚನೆಗಳು, ಅವುಗಳ ಗಟ್ಟಿತನ, ಒಳನೋಟ, ಹೊರನೋಟ, ಆಂತರಿಕ ಶುದ್ಧಿ ಎಲ್ಲವೂ ಮುಖ್ಯವಾಗುತ್ತವೆ. ಹೀಗೆ ಅವೆರಡೂ ಒಂದರ ಕೈ ಇನ್ನೊಂದು ಹಿಡಿದು, ಬೆಂಬಿಡದ ಸಂಗಾತಿಯಂತೆ ನಡೆಯಬೇಕಾಗುತ್ತದೆ. ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಒಂದಕ್ಕೊಂದು ಜೊತೆಯಾಗಿ ಸಾಗಿದಾಗಲಷ್ಟೇ ಈ ಬದುಕನ್ನು ಜೀವಿಸಲು ಸಹನೀಯವಾಗುವುದು.

ಪ್ರತಿದಿನ ಮನುಷ್ಯನ ಮೆದುಳು ಸುಮಾರು 70,000 ಆಲೋಚನೆಗಳನ್ನು ಮಂಥನ ಮಾಡುತ್ತದಂತೆ. ಇವುಗಳಲ್ಲಿ ಖುಷಿ ಕೊಡುವುದೊಂದಿಷ್ಟಿದ್ದರೆ, ಚಿಂತೆಗೆ ಹಚ್ಚುವುದು ಒಂದಿಷ್ಟು. ಇವುಗಳಲ್ಲಿನ ಅನೇಕ ಆಲೋಚನೆಗಳಿಗೆ ನಾವಿರುವ ಸಾಮಾಜಿಕ ಪರಿಸರ, ಮನೆಯ ವಾತಾವರಣ, ಬದುಕುವ ರೀತಿ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸುಸ್ಥಿತಿ ಎಲ್ಲವೂ ಕಾರಣವಾಗಿರುತ್ತದೆ. ಹಾಗಾಗಿ ಈ ಸಮಗ್ರ ಬದುಕಿಗೆ ನಾವು ಆಲೋಚಿಸುವ ದಿಕ್ಕು ಸರಿದಾರಿಯಲ್ಲಿರುವುದು ಬಹಳ ಮುಖ್ಯ. ಇದ್ಯಾಕೆ ಮುಖ್ಯವಾಗುತ್ತದೆಂದರೆ, ನಮ್ಮ ಆಲೋಚನೆಗಳು ನಮ್ಮ ಸುತ್ತಲಿನ ಪರಿಸರವನ್ನು ಹಾಳು ಮಾಡುವ ಅಥವಾ ಸುಂದರಗೊಳಿಸುವ ಮೊದಲು, ಅವು ನಮ್ಮೊಳಗಿಂದಲೇ ತಮ್ಮ ಕೆಲಸವನ್ನು ಶುರುಮಾಡುತ್ತವೆ.

ಇನ್ನು ಇದರೊಂದಿಗೆ ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾದ ವಿಚಾರ. ದೈಹಿಕ ಆರೋಗ್ಯವೆಂದರೆ ಅಂಗಡಿಯಲ್ಲಿ ಕಾಸಿಗೆ ಸಿಗುವ ವಸ್ತುವಲ್ಲ ಅಥವಾ ಯಾವುದೇ ವಸ್ತುವನ್ನು ಬಳಸಿ ಸಂಪೂರ್ಣ ಆರೋಗ್ಯ ಪಡೆಯಲೂ ಸಾಧ್ಯವಿಲ್ಲ. ನಾನಾಗಲೇ ಹೇಳಿದಂತೆ, ರಂಗೋಲಿಗೆ ಚುಕ್ಕಿ ಇಟ್ಟ ಹೆಣ್ಣು ಮತ್ತು ಚಳಿಗೆ ಮೈ ಒಡ್ಡಿ ಚಹಾ ಕಾಯಿಸುವ ವೃದ್ಧನಲ್ಲಿ ಕಾಣಿಸಿದ್ದು ಒಂದು ಶಿಸ್ತುಬದ್ಧ ಜೀವನ. ಸೂರ್ಯನ ಜೊತೆಜೊತೆಗೆ ಎದ್ದು ಮನಸ್ಸಿಗೆ ಮುದ ನೀಡುವ ಹಾಗೂ ಉಲ್ಲಸಿತಗೊಳಿಸುವ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನದ ಸಮಯಕ್ಕೊಂದು ನಕ್ಷೆ ರೂಪಿಸಿಕೊಂಡು, ತೊಡಕುಗಳನ್ನು ಮೀರಿ ಅಂದುಕೊಂಡ ಕೆಲಸಗಳನ್ನು ಮುಗಿಸಿ, ಆರೋಗ್ಯಕರ ಗುಣಮಟ್ಟದ ಸಮಯ ಕಳೆದು, ಸಂಭ್ರಮದ ಮತ್ತು ಸಂತೃಪ್ತಿಯ ಬದುಕು ಬದುಕುವುದೇ ನಿಜವಾದ ಆರೋಗ್ಯಕರ ಜೀವನ. ಈ ತರದ ಬದುಕು ಬದುಕಲು ಶಿಸ್ತಿರಬೇಕು, ಶ್ರದ್ಧೆಯಿರಬೇಕು; ಹೀಗೇ ಬದುಕುತ್ತೇವೆನ್ನುವ ಹಠವಿರಬೇಕು. ಆಸೆ, ಆಕಾಂಕ್ಷೆ, ಖರ್ಚುವೆಚ್ಚಗಳಲ್ಲಿ ಹಿಡಿತವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಲೋಚನೆಯ ದಿಕ್ಕು ಸರಿಯಾಗಿರಬೇಕು. ಮನಸ್ಸಿನ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ನೇರವಾದ ಸಂಬಂಧವಿರುವುದರಿಂದ ಬದುಕುವ ಧಾವಂತದಲ್ಲಿ ಮನಸ್ಸಿಗೂ ದೇಹಕ್ಕೂ ಕೊಂಡಿ ತ್ರಾಸದಾಯಕವಾಗಿರಬಾರದು. ನಮ್ಮೊಳಗಿನ, ನಮ್ಮವರ ಬಗೆಗಿನ, ನಮ್ಮ ಸುತ್ತಮುತ್ತಲಿನ ಸಮಾಜದ ಬಗೆಗಿನ ನಮ್ಮ ಆಲೋಚನೆ ಪ್ರಬುದ್ಧತೆಯಿಂದ ಮತ್ತು ಕಾಳಜಿಯಿಂದ ಕೂಡಿರಬೇಕಾಗುತ್ತದೆ. ಅಂದರೆ ಒಂದು ಸ್ವಸ್ಥ ಬದುಕಿನ ಕನಸು ಕಾಣಲು ನಮ್ಮ ಸುತ್ತಲಿನ ಪರಿಸರವೂ ಸ್ವಸ್ಥವಾಗಿರುವುದು ಮುಖ್ಯ. ಅಲ್ಲಿ ದ್ವೇಷ, ಅಸೂಯೆ, ಅಸಹ್ಯ, ಅಪಹಾಸ್ಯ, ಅನಿಷ್ಟ ಆಚರಣೆ, ಅಂಧಶ್ರದ್ಧೆಗಳಿಗೆ ಜಾಗ ಕೊಡದೆ ಒಬ್ಬರಿಗೊಬ್ಬರು ಹೆಗಲಾಗಿ, ನೊಗವಾಗಿ, ಆಸರೆಯಾಗಿ ಬದುಕಲು ಯೋಗ್ಯವಾದಂತಹ ವಾತಾವರಣ ನಿರ್ಮಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಆಗಲೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ಮಾನಸಿಕ ಆರೋಗ್ಯ ಸಿದ್ಧಿಸಿಕೊಂಡರೆ ದೈಹಿಕ ಆರೋಗ್ಯದೆಡೆಗೆ ಗಮನ ನೀಡುವುದು ಕಷ್ಟದ ಕೆಲಸವೇನಲ್ಲ. ಈ ಪ್ರೀತಿ ಒಂದು ರೀತಿಯ ಔಷಧಿ. ಪ್ರೀತಿ ಮನೆಯೊಳಗೆ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಅದೇ ಪ್ರೀತಿಯನ್ನು ನಾವು ಬದುಕುವ ಪರಿಸರದೆಡೆಗೆ ಹಂಚಿದಾಗ ಆ ನೆಮ್ಮದಿಯೂ ಮನೆಯ ಹೊರಗೆ ಪಸರಿಸುತ್ತದೆ. ಹೀಗೊಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆಚ್ಚೇನೂ ಕಷ್ಟ ಪಡುವುದು ಬೇಕಿಲ್ಲ; ಹೆಚ್ಚುಹೆಚ್ಚು ಸ್ವಸ್ಥ ಮನಸ್ಸುಗಳ ಇದ್ದರದೇ ಸಾಕು. ಅಂತದೊಂದು ಸ್ವಸ್ಥ ಮನಸ್ಸು ಬೆಳೆಸಿಕೊಂಡು ನೋಡಲು ಸಾಧ್ಯವಾದರೆ, ಸುತ್ತಲಿನ ಕಲ್ಲು ಕೋಟೆಯೂ ನಕ್ಕಂತೆ ಭಾಸವಾಗುತ್ತದೆ.

ಅಂದಹಾಗೆ ಬರಲಿರುವ ದಿನಗಳಿಗಾಗಿ ಒಂದಿಷ್ಟು ಪ್ರತಿಜ್ಞೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಮುಖ್ಯವಾದವುಗಳು ಬೆಳಿಗ್ಗೆ ಬೇಗ ಏಳುವುದು, ಒಂದಿಷ್ಟು ವ್ಯಾಯಾಮ, ಒಳ್ಳೆಯ ಊಟ, ಒಳ್ಳೆಯ ನಿದ್ದೆ, ದೇಹ ದಣಿಯುವಷ್ಟು ಕೆಲಸ, ಒಂದಿಷ್ಟು ಸಮಯ ತಮ್ಮವರಿಗಾಗಿ ನೀಡುವುದು; ಇವಿಷ್ಟೂ ದೇಹದ ಆರೋಗ್ಯಕ್ಕಾದರೆ, ಮನಸ್ಸಿನ ಆರೋಗ್ಯಕ್ಕಾಗಿ ಒಂದಿಷ್ಟು ಓದು, ಅನಗತ್ಯ ಹಾಗೂ ಕೆಟ್ಟ ’ಕಾರ್ಯಕ್ರಮಗಳು-ಮನಸ್ಥಿತಿಯ ಜನರು-ಕೆಲಸ’ಗಳಿಂದ ದೂರವಿರುವುದು, ಪ್ರೀತಿ ಕೊಡಲಾಗದಿದ್ದರೂ ದ್ವೇಷ ಹಂಚದಿರುವುದು, ಸಮುದಾಯ ಕೇಂದ್ರಿತವಲ್ಲದ ಅನಗತ್ಯವಾದ ವಾದ ವಿವಾದಗಳಿಂದ ದೂರವಿರುವುದು ಹಾಗೂ ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಒಂದು ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಕಿಂಚಿತ್ತಾದರೂ ಭಾಗಿಯಾಗುವುದು; ಇವಿಷ್ಟು ನಾವು ಕೈಗೊಳ್ಳಲೇಬೇಕಾದ ಪ್ರತಿಜ್ಞೆಗಳು. ಈ ಮಾನಸಿಕ ಸಿದ್ಧತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ನಮ್ಮ ಮುಂದಿರುವ ಅನೇಕ ಸಾಮಾಜಿಕ ಒತ್ತಡಗಳನ್ನು, ಅಂತಹ ಒತ್ತಡಗಳನ್ನು ಹೆಚ್ಚಿಸುವ ಮಾಧ್ಯಮಗಳನ್ನು ಮೀರಿ ಸ್ವಸ್ಥ ಬದುಕನ್ನು ಕಟ್ಟಕೊಳ್ಳುತ್ತಾ 2023ರಲ್ಲಿ ಮುಂದುವರಿಯೋಣ. ಅಷ್ಟಕ್ಕೂ, ಇದಕ್ಕೇ ಅಲ್ವೇ ಸಮಗ್ರ ಬದುಕು ಅಥವಾ Holistic Living ಅನ್ನುವುದು!

ಪಲ್ಲವಿ ಇಡೂರು

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...