Homeಮುಖಪುಟ2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

- Advertisement -
- Advertisement -

ಬೆಳಗಿನ ಜಾವದ ಐದು ಗಂಟೆಯ ಚುಮುಚುಮು ಚಳಿಗೆ ತಲೆಗೊಂದು ಟೋಪಿ ಹಾಕಿಕೊಂಡು ರನ್ನಿಂಗ್‌ಗೆ ಹೊರಟಾಗ, ನಮಗೆ ಅಪರಿಚಿತವೆನ್ನಬಹುದಾದ, ಉತ್ತರ ಕರ್ನಾಟಕದ ಊರಿನಲ್ಲಿ ಹೆಣ್ಣುಮಗಳೊಬ್ಬಳು ಆಗಷ್ಟೇ ಸ್ನಾನ ಮುಗಿಸಿ, ನೆತ್ತಿಯ ಮೇಲಿನ ನೀರು ಆರುವ ಮುನ್ನವೇ, ಒದ್ದೆ ಮುದ್ದೆ ಕೂದಲನ್ನು ಟವಲಿನಲ್ಲಿ ಸುತ್ತಿಕೊಂಡು, ಗುಡಿಸಿ ಸಾರಿಸಿದ ನೆಲಕ್ಕೆ ರಂಗೋಲಿಯ ಚುಕ್ಕಿಯನ್ನಿಡುವುದನ್ನು ನೋಡಿದಾಗ ಮೂಡಿದ ಮನಸ್ಸಿನ ಭಾವ; ಉಳಿದುಕೊಂಡಿದ್ದ ಟೆಂಟ್ ಹೌಸ್‌ನಿಂದ ಸೂರ್ಯ ಹುಟ್ಟುವ ಮುನ್ನವೇ ಹೊರಬಂದು ಚಳಿಗೆ ಮುಖವೊಡ್ಡಿ ಕಾಲಾಡಿಸುತ್ತಿದ್ದಾಗ, ಹಿಮಾಲಯದ ತಪ್ಪಲಿನ ಕಾರ್ಗಿಲ್‌ನ ಹೊರವಲಯದ ಜನರಿಲ್ಲದ ತಾಣದಲ್ಲಿ, ಕುರಿಕಾಯುವ ಅಲೆಮಾರಿ ಸಮುದಾಯದ ವೃದ್ಧರೊಬ್ಬರು ಹರಿಯುವ ತೊರೆಯ ಪಕ್ಕದಲ್ಲಿ ಕಲ್ಲು ಜೋಡಿಸಿ ಒಲೆ ಹೂಡಿ ಚಹಾ ಕಾಯಿಸಿ “ಸರ್‌ದೀ ಮೆ ಚಾಯ್ ಬಹೊತ್ ಸುಕೂನ್ ದೇತಾ ಹೈ ಬಿಟಿಯಾ, ಪೀವೋ” (ಚಳಿಯಲ್ಲಿ ಚಹಾ ಕುಡಿಯೋದು ಬಹಳ ನೆಮ್ಮದಿ ಕೊಡುತ್ತೆ ಮಗಳೇ, ಕುಡಿ.) ಎಂದು ಟೀ ನೀಡಿ ನಕ್ಕಾಗ ಮೂಡಿದ ಮನಸ್ಸಿನ ಭಾವ; ಇವೆರಡೂ ಭಾವಗಳಿಗೆ ಇದ್ದ ಸಾಮ್ಯತೆಯೆಂದರೆ ಅವರ ’ಬದುಕು’ ಎನ್ನಬಹುದೇನೊ.

ಬದುಕಿನ ಏರಿಳಿತಗಳ ನಡುವೆ ನಾನಾ ತರಹದ ಅನುಭವಗಳಿಗೆ, ನೋವು ನಲಿವುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ತೆರೆದಿಟ್ಟುಕೊಂಡು ನಿರಂತರವಾಗಿ ಸಾಗುತ್ತಲೇ ಇರುವಾಗ ನಾನು ಕೇಳಿಕೊಳ್ಳುವ ಮುಖ್ಯ ಪ್ರಶ್ನೆ ಈ ’ಬದುಕು’ ಎಂದರೆ ಏನು? ಬದುಕುವುದು ಎಂದರೆ ಹೇಗಿರಬೇಕು? ಈ ಪ್ರಶ್ನೆಗಳನ್ನು ಬಹುಶಃ ನನ್ನಂತೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ. ಸರಿಯುತ್ತಿರುವ ವರುಷದ ಕೊನೆಯಲ್ಲಿ ನಿಂತು ಬದಲಾಗುವ ಕ್ಯಾಲೆಂಡರಿನೊಂದಿಗೆ ಹೊಸದಿನಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾವು ನಮಗೆ ಮತ್ತೆಮತ್ತೆ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಗಳಿವು. ಇತ್ತೀಚಿನ ದಿನಗಳಲ್ಲಿ ಕೋವಿಡ್‌ನಂತಹ ಕಷ್ಟದ ದಿನಗಳನ್ನು ಸವೆಸಿ, ಬದುಕುಳಿದು, ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಡಿರುವವರಿಂದ ಹಿಡಿದು ಬರೀ ಆರ್ಥಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯದಲ್ಲೂ ಜರ್ಜರಿತರಾಗಿ, ಬದುಕುಳಿದಿರುವುದೇ ವರವೆಂದು ಜೀವಿಸುತ್ತಿರುವವರೂ, ಈಗ ಹಿಂತಿರುಗಿ ನೋಡಿ ನಕ್ಕಿದ್ದೆಲ್ಲ, ಸಂಭ್ರಮಿಸಿದ್ದೆಲ್ಲಿ, ಎಡವಿದ್ದೆಲ್ಲಿ ಹಾಗೂ ನಿಜವಾಗಿಯೂ ಬದುಕನ್ನು ಬದುಕಿದ್ದೆಲ್ಲಿ ಎನ್ನುವುದನ್ನು ಕೇಳಿಕೊಳ್ಳಲೇಬೇಕಿದೆ.

ಈ ಸಮಗ್ರ ಬದುಕಿಗೊಂದು ಇಂಥದ್ದೇ ಎಂಬ ಒಂದು ಚೌಕಟ್ಟಿಲ್ಲದಿದ್ದರೂ ಬುದ್ಧ ಹೇಳಿದ ’ಆಸೆಯೇ ದುಃಖಕ್ಕೆ ಮೂಲ’, ಬಸವಣ್ಣನೆಂದ ’ಕಾಯಕವೇ ಕೈಲಾಸ’, ಓಶೋ ಹೇಳಿದ ’ಬದುಕನ್ನು ಜೀವಿಸು’ ಅನ್ನುವ ಮಾತುಗಳನ್ನು ಜೋಡಿಸಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಹೇಗೆ ಕಣ್ಣು, ಮೂಗು, ಕೈ, ಕಾಲು ಹಾಗೂ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯವಾಗಿರುವುದು ಇಡೀ ದೇಹಕ್ಕೆ ಅವಶ್ಯಕವೋ ಹಾಗೆಯೇ ಮನಸ್ಸಿನ ಆರೋಗ್ಯಕ್ಕೆ ನಮ್ಮ ಆಲೋಚನೆಗಳು, ಅವುಗಳ ಗಟ್ಟಿತನ, ಒಳನೋಟ, ಹೊರನೋಟ, ಆಂತರಿಕ ಶುದ್ಧಿ ಎಲ್ಲವೂ ಮುಖ್ಯವಾಗುತ್ತವೆ. ಹೀಗೆ ಅವೆರಡೂ ಒಂದರ ಕೈ ಇನ್ನೊಂದು ಹಿಡಿದು, ಬೆಂಬಿಡದ ಸಂಗಾತಿಯಂತೆ ನಡೆಯಬೇಕಾಗುತ್ತದೆ. ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಒಂದಕ್ಕೊಂದು ಜೊತೆಯಾಗಿ ಸಾಗಿದಾಗಲಷ್ಟೇ ಈ ಬದುಕನ್ನು ಜೀವಿಸಲು ಸಹನೀಯವಾಗುವುದು.

ಪ್ರತಿದಿನ ಮನುಷ್ಯನ ಮೆದುಳು ಸುಮಾರು 70,000 ಆಲೋಚನೆಗಳನ್ನು ಮಂಥನ ಮಾಡುತ್ತದಂತೆ. ಇವುಗಳಲ್ಲಿ ಖುಷಿ ಕೊಡುವುದೊಂದಿಷ್ಟಿದ್ದರೆ, ಚಿಂತೆಗೆ ಹಚ್ಚುವುದು ಒಂದಿಷ್ಟು. ಇವುಗಳಲ್ಲಿನ ಅನೇಕ ಆಲೋಚನೆಗಳಿಗೆ ನಾವಿರುವ ಸಾಮಾಜಿಕ ಪರಿಸರ, ಮನೆಯ ವಾತಾವರಣ, ಬದುಕುವ ರೀತಿ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸುಸ್ಥಿತಿ ಎಲ್ಲವೂ ಕಾರಣವಾಗಿರುತ್ತದೆ. ಹಾಗಾಗಿ ಈ ಸಮಗ್ರ ಬದುಕಿಗೆ ನಾವು ಆಲೋಚಿಸುವ ದಿಕ್ಕು ಸರಿದಾರಿಯಲ್ಲಿರುವುದು ಬಹಳ ಮುಖ್ಯ. ಇದ್ಯಾಕೆ ಮುಖ್ಯವಾಗುತ್ತದೆಂದರೆ, ನಮ್ಮ ಆಲೋಚನೆಗಳು ನಮ್ಮ ಸುತ್ತಲಿನ ಪರಿಸರವನ್ನು ಹಾಳು ಮಾಡುವ ಅಥವಾ ಸುಂದರಗೊಳಿಸುವ ಮೊದಲು, ಅವು ನಮ್ಮೊಳಗಿಂದಲೇ ತಮ್ಮ ಕೆಲಸವನ್ನು ಶುರುಮಾಡುತ್ತವೆ.

ಇನ್ನು ಇದರೊಂದಿಗೆ ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾದ ವಿಚಾರ. ದೈಹಿಕ ಆರೋಗ್ಯವೆಂದರೆ ಅಂಗಡಿಯಲ್ಲಿ ಕಾಸಿಗೆ ಸಿಗುವ ವಸ್ತುವಲ್ಲ ಅಥವಾ ಯಾವುದೇ ವಸ್ತುವನ್ನು ಬಳಸಿ ಸಂಪೂರ್ಣ ಆರೋಗ್ಯ ಪಡೆಯಲೂ ಸಾಧ್ಯವಿಲ್ಲ. ನಾನಾಗಲೇ ಹೇಳಿದಂತೆ, ರಂಗೋಲಿಗೆ ಚುಕ್ಕಿ ಇಟ್ಟ ಹೆಣ್ಣು ಮತ್ತು ಚಳಿಗೆ ಮೈ ಒಡ್ಡಿ ಚಹಾ ಕಾಯಿಸುವ ವೃದ್ಧನಲ್ಲಿ ಕಾಣಿಸಿದ್ದು ಒಂದು ಶಿಸ್ತುಬದ್ಧ ಜೀವನ. ಸೂರ್ಯನ ಜೊತೆಜೊತೆಗೆ ಎದ್ದು ಮನಸ್ಸಿಗೆ ಮುದ ನೀಡುವ ಹಾಗೂ ಉಲ್ಲಸಿತಗೊಳಿಸುವ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನದ ಸಮಯಕ್ಕೊಂದು ನಕ್ಷೆ ರೂಪಿಸಿಕೊಂಡು, ತೊಡಕುಗಳನ್ನು ಮೀರಿ ಅಂದುಕೊಂಡ ಕೆಲಸಗಳನ್ನು ಮುಗಿಸಿ, ಆರೋಗ್ಯಕರ ಗುಣಮಟ್ಟದ ಸಮಯ ಕಳೆದು, ಸಂಭ್ರಮದ ಮತ್ತು ಸಂತೃಪ್ತಿಯ ಬದುಕು ಬದುಕುವುದೇ ನಿಜವಾದ ಆರೋಗ್ಯಕರ ಜೀವನ. ಈ ತರದ ಬದುಕು ಬದುಕಲು ಶಿಸ್ತಿರಬೇಕು, ಶ್ರದ್ಧೆಯಿರಬೇಕು; ಹೀಗೇ ಬದುಕುತ್ತೇವೆನ್ನುವ ಹಠವಿರಬೇಕು. ಆಸೆ, ಆಕಾಂಕ್ಷೆ, ಖರ್ಚುವೆಚ್ಚಗಳಲ್ಲಿ ಹಿಡಿತವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಲೋಚನೆಯ ದಿಕ್ಕು ಸರಿಯಾಗಿರಬೇಕು. ಮನಸ್ಸಿನ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ನೇರವಾದ ಸಂಬಂಧವಿರುವುದರಿಂದ ಬದುಕುವ ಧಾವಂತದಲ್ಲಿ ಮನಸ್ಸಿಗೂ ದೇಹಕ್ಕೂ ಕೊಂಡಿ ತ್ರಾಸದಾಯಕವಾಗಿರಬಾರದು. ನಮ್ಮೊಳಗಿನ, ನಮ್ಮವರ ಬಗೆಗಿನ, ನಮ್ಮ ಸುತ್ತಮುತ್ತಲಿನ ಸಮಾಜದ ಬಗೆಗಿನ ನಮ್ಮ ಆಲೋಚನೆ ಪ್ರಬುದ್ಧತೆಯಿಂದ ಮತ್ತು ಕಾಳಜಿಯಿಂದ ಕೂಡಿರಬೇಕಾಗುತ್ತದೆ. ಅಂದರೆ ಒಂದು ಸ್ವಸ್ಥ ಬದುಕಿನ ಕನಸು ಕಾಣಲು ನಮ್ಮ ಸುತ್ತಲಿನ ಪರಿಸರವೂ ಸ್ವಸ್ಥವಾಗಿರುವುದು ಮುಖ್ಯ. ಅಲ್ಲಿ ದ್ವೇಷ, ಅಸೂಯೆ, ಅಸಹ್ಯ, ಅಪಹಾಸ್ಯ, ಅನಿಷ್ಟ ಆಚರಣೆ, ಅಂಧಶ್ರದ್ಧೆಗಳಿಗೆ ಜಾಗ ಕೊಡದೆ ಒಬ್ಬರಿಗೊಬ್ಬರು ಹೆಗಲಾಗಿ, ನೊಗವಾಗಿ, ಆಸರೆಯಾಗಿ ಬದುಕಲು ಯೋಗ್ಯವಾದಂತಹ ವಾತಾವರಣ ನಿರ್ಮಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಆಗಲೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ಮಾನಸಿಕ ಆರೋಗ್ಯ ಸಿದ್ಧಿಸಿಕೊಂಡರೆ ದೈಹಿಕ ಆರೋಗ್ಯದೆಡೆಗೆ ಗಮನ ನೀಡುವುದು ಕಷ್ಟದ ಕೆಲಸವೇನಲ್ಲ. ಈ ಪ್ರೀತಿ ಒಂದು ರೀತಿಯ ಔಷಧಿ. ಪ್ರೀತಿ ಮನೆಯೊಳಗೆ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಅದೇ ಪ್ರೀತಿಯನ್ನು ನಾವು ಬದುಕುವ ಪರಿಸರದೆಡೆಗೆ ಹಂಚಿದಾಗ ಆ ನೆಮ್ಮದಿಯೂ ಮನೆಯ ಹೊರಗೆ ಪಸರಿಸುತ್ತದೆ. ಹೀಗೊಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆಚ್ಚೇನೂ ಕಷ್ಟ ಪಡುವುದು ಬೇಕಿಲ್ಲ; ಹೆಚ್ಚುಹೆಚ್ಚು ಸ್ವಸ್ಥ ಮನಸ್ಸುಗಳ ಇದ್ದರದೇ ಸಾಕು. ಅಂತದೊಂದು ಸ್ವಸ್ಥ ಮನಸ್ಸು ಬೆಳೆಸಿಕೊಂಡು ನೋಡಲು ಸಾಧ್ಯವಾದರೆ, ಸುತ್ತಲಿನ ಕಲ್ಲು ಕೋಟೆಯೂ ನಕ್ಕಂತೆ ಭಾಸವಾಗುತ್ತದೆ.

ಅಂದಹಾಗೆ ಬರಲಿರುವ ದಿನಗಳಿಗಾಗಿ ಒಂದಿಷ್ಟು ಪ್ರತಿಜ್ಞೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಮುಖ್ಯವಾದವುಗಳು ಬೆಳಿಗ್ಗೆ ಬೇಗ ಏಳುವುದು, ಒಂದಿಷ್ಟು ವ್ಯಾಯಾಮ, ಒಳ್ಳೆಯ ಊಟ, ಒಳ್ಳೆಯ ನಿದ್ದೆ, ದೇಹ ದಣಿಯುವಷ್ಟು ಕೆಲಸ, ಒಂದಿಷ್ಟು ಸಮಯ ತಮ್ಮವರಿಗಾಗಿ ನೀಡುವುದು; ಇವಿಷ್ಟೂ ದೇಹದ ಆರೋಗ್ಯಕ್ಕಾದರೆ, ಮನಸ್ಸಿನ ಆರೋಗ್ಯಕ್ಕಾಗಿ ಒಂದಿಷ್ಟು ಓದು, ಅನಗತ್ಯ ಹಾಗೂ ಕೆಟ್ಟ ’ಕಾರ್ಯಕ್ರಮಗಳು-ಮನಸ್ಥಿತಿಯ ಜನರು-ಕೆಲಸ’ಗಳಿಂದ ದೂರವಿರುವುದು, ಪ್ರೀತಿ ಕೊಡಲಾಗದಿದ್ದರೂ ದ್ವೇಷ ಹಂಚದಿರುವುದು, ಸಮುದಾಯ ಕೇಂದ್ರಿತವಲ್ಲದ ಅನಗತ್ಯವಾದ ವಾದ ವಿವಾದಗಳಿಂದ ದೂರವಿರುವುದು ಹಾಗೂ ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಒಂದು ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಕಿಂಚಿತ್ತಾದರೂ ಭಾಗಿಯಾಗುವುದು; ಇವಿಷ್ಟು ನಾವು ಕೈಗೊಳ್ಳಲೇಬೇಕಾದ ಪ್ರತಿಜ್ಞೆಗಳು. ಈ ಮಾನಸಿಕ ಸಿದ್ಧತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ನಮ್ಮ ಮುಂದಿರುವ ಅನೇಕ ಸಾಮಾಜಿಕ ಒತ್ತಡಗಳನ್ನು, ಅಂತಹ ಒತ್ತಡಗಳನ್ನು ಹೆಚ್ಚಿಸುವ ಮಾಧ್ಯಮಗಳನ್ನು ಮೀರಿ ಸ್ವಸ್ಥ ಬದುಕನ್ನು ಕಟ್ಟಕೊಳ್ಳುತ್ತಾ 2023ರಲ್ಲಿ ಮುಂದುವರಿಯೋಣ. ಅಷ್ಟಕ್ಕೂ, ಇದಕ್ಕೇ ಅಲ್ವೇ ಸಮಗ್ರ ಬದುಕು ಅಥವಾ Holistic Living ಅನ್ನುವುದು!

ಪಲ್ಲವಿ ಇಡೂರು

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’: ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ದ್ವೇಷ ಭಾಷಣಕ್ಕೆ ವ್ಯಾಪಕ ಆಕ್ರೋಶ

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು...

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...