ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ‘ಈದಿನ.ಕಾಂ’ ಸಂಸ್ಥೆಯು ಚುನಾವಣಾಪೂರ್ವ ಮೆಗಾ ಸರ್ವೇಯನ್ನು ನಡೆಸಿದ್ದು, “ಬೊಮ್ಮಾಯಿ ಸರ್ಕಾರ ಮುಂದುವರಿಯಬಾರದು ಎಂದು 67% ಜನರು ಅಭಿಪ್ರಾಯ ತಾಳಿದ್ದಾರೆ” ಎಂದು ತಿಳಿಸಿದೆ.
ಈಗಾಗಲೇ ಹಂತಹಂತವಾಗಿ ಸಮೀಕ್ಷೆಯ ವಿವರಗಳನ್ನು ಪ್ರಕಟಿಸುತ್ತಿದ್ದು, “ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎಂಬ ಮಾಹಿತಿಯನ್ನು ಗುರುವಾರ (ಏಪ್ರಿಲ್ 26) ಪ್ರಕಟಿಸಲಾಗುವುದು” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿದೆ.
ಈ ಕುರಿತು ಸಮೀಕ್ಷೆಯ ಯೋಜನಾ ಮುಖ್ಯಸ್ಥರಾದ ಡಾ.ಎಚ್.ವಿ.ವಾಸು ಮತ್ತು ‘ಈದಿನ’ ಸಂಪಾದಕರಾದ ಬಸವರಾಜು ಮೇಗಲಕೇರಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಚುನಾವಣಾ ವಿವರಗಳೇನು?
“ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು, ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ ವಿಶಿಷ್ಟ ಮಾಧ್ಯಮ ಪ್ರಯತ್ನವೇ ಈದಿನ.ಕಾಮ್. ಕಳೆದ ಒಂದು ವರ್ಷದಿಂದ ಈ ಪ್ರಯೋಗವು ಹಂತಹಂತವಾಗಿ ಅನಾವರಣಗೊಳ್ಳುತ್ತಿವೆ. ಡಿಜಿಟಲ್ ಮಾಧ್ಯಮಗಳು ಪ್ರತ್ಯೇಕ ದ್ವೀಪಗಳಾಗಿ ಕಾರ್ಯನಿರ್ವಹಿಸುವ ಬದಲು, ಪ್ರಜಾತಂತ್ರದ ಹಿತದೃಷ್ಟಿಯಿಂದ ಪರಸ್ಪರ ಪೂರಕವಾಗಿ ಒಂದು ನೆಟ್ವರ್ಕ್ ಆಗಿ ಕೆಲಸ ಮಾಡಬೇಕೆಂದು ಈದಿನ.ಕಾಮ್ ನಂಬುತ್ತದೆ.”
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯ ವಿವರಗಳನ್ನು ಈಗಾಗಲೇ www.eedina.com ವೆಬ್ಸೈಟಿನಲ್ಲಿ ಏಪ್ರಿಲ್ 22ರಿಂದ ಪ್ರಕಟಿಸಲಾಗುತ್ತಿದೆ. ಕರ್ನಾಟಕದಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಇರುವುದನ್ನು ಈ ಸಮೀಕ್ಷೆ ತೋರಿಸುತ್ತಿದೆ, ನಾಳೆ ಅಂದರೆ ಏಪ್ರಿಲ್ 27ರಂದು ಯಾವ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ ಎಂಬ ವಿವರವನ್ನು ಪ್ರಕಟಿಸಲಿದ್ದೇವೆ.
ಸಮೀಕ್ಷೆಯಲ್ಲಿ ಹೊರಬಂದಿರುವ ಸಂಗತಿಗಳು
1. ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ.
ಈ ಅಭಿಪ್ರಾಯ ಹೊಂದಿರುವವರಲ್ಲಿ ಶೇ.67ರಷ್ಟು ಜನ ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ಕೊಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಮ್ಮೆ ಅವಕಾಶ ಕೊಡಬಹುದೆಂಬ ಅನಿಸಿಕೆ ಹೊಂದಿದ್ದಾರೆ.
2. ಬಸವರಾಜ ಬೊಮ್ಮಾಯಿಯವರ ಸರ್ಕಾರವೇ ಇತ್ತೀಚಿನ ಸರ್ಕಾರಗಳಲ್ಲಿ ಅತ್ಯಂತ ಭ್ರಷ್ಟ ಸರ್ಕಾರವೆಂಬ ಅನಿಸಿಕೆ ಜನರಲ್ಲಿದೆ. 33% ಜನರು ಈ ಸರ್ಕಾರ ಅತ್ಯಂತ ಭ್ರಷ್ಟ ಎಂದರೆ, 14% ಜನರು ಯಡಿಯೂರಪ್ಪನವರ ಸರ್ಕಾರವನ್ನೂ 12% ಜನರು ಸಿದ್ದರಾಮಯ್ಯನವರ ಸರ್ಕಾರವನ್ನೂ, 8% ಜನರು ಕುಮಾರಸ್ವಾಮಿಯವರ ಸರ್ಕಾರವನ್ನು ಅತ್ಯಂತ ಭ್ರಷ್ಟವೆಂದು ಹೇಳಿದ್ದಾರೆ.
3. ಮತದಾನವನ್ನು ಪ್ರಭಾವಿಸುವ ಅಂಶಗಳಾಗಿ ಜನರು ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗಗಳನ್ನು ಮೊದಲ ಮೂರು ಸಂಗತಿಗಳಾಗಿ ಗುರುತಿಸಿದ್ದಾರೆ.
4. ರಾಜ್ಯ ಬಿಜೆಪಿ ಸರ್ಕಾರದ್ದೇ ಆದ ಯಾವ ಯೋಜನೆಗಳೂ ಜನರಿಗೆ ನೆನಪಿಲ್ಲ. ಮೂರನೇ ಒಂದು ಭಾಗ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದೇ ಗೊತ್ತಿಲ್ಲ. ಮೂರನೇ ಒಂದು ಭಾಗ ಜನರಿಗೆ ಕಾಂಗ್ರೆಸ್ ಗ್ಯಾರಂಟಿಗಳೂ ಗೊತ್ತಿಲ್ಲ; ಗೊತ್ತಿರುವವರಲ್ಲಿ ಅರ್ಧ ಜನಕ್ಕೆ ಅದನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವಿಲ್ಲ.
5. ಸರ್ಕಾರಕ್ಕೆ ಇದ್ದಷ್ಟು ಆಡಳಿತ ವಿರೋಧಿ ಅಲೆ ಶಾಸಕರಿಗಿಲ್ಲ. ಆದರೆ ಹಾಲಿ ಶಾಸಕರ ಪೈಕಿ ಹೆಚ್ಚಿನ ವಿರೋಧ ಬಿಜೆಪಿ ಶಾಸಕರಿಗಿದೆ.
ಸಮೀಕ್ಷೆಯ ವಿಶಿಷ್ಟ ಅಂಶಗಳು
1. ಇದು ಈ ಚುನಾವಣೆಗೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ: 41,169 ಮತದಾರರನ್ನು ಇದರಲ್ಲಿ ಮಾತಾಡಿಸಲಾಗಿದೆ (Very big sample size).
2. (Scientific random sampling) ಯಾವುದೇ ಪೂರ್ವಗ್ರಹ ಕೆಲಸ ಮಾಡದ ರೀತಿಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತಗಟ್ಟೆಗಳಲ್ಲಿ ಮತ್ತು ಪ್ರತಿ ಮತಗಟ್ಟೆಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತದಾರರ ಪಟ್ಟಿಯಲ್ಲಿರುವವರ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.
3. ಸಮೀಕ್ಷೆಯನ್ನು ಬಹುತೇಕ ರಾಜ್ಯದಾದ್ಯಂತ ಇರುವ ನಾಗರಿಕ ಪತ್ರಕರ್ತರು (ಮೀಡಿಯಾ ಜರ್ನಲಿಸ್ಟ್) ನಡೆಸಿರುತ್ತಾರೆ.
4. ಇದು ದೂರವಾಣಿ ಮೂಲಕ ನಡೆದ ಸಮೀಕ್ಷೆ ಅಲ್ಲ. ಮತದಾರರನ್ನು ಅವರವರ ಮನೆಗಳಲ್ಲೇ ಮಾತನಾಡಿಸಲಾದ ಮುಖಾಮುಖಿ ಸಮೀಕ್ಷೆ.
5. ನಮ್ಮ ಡೇಟಾ ಪರಿಶೀಲನೆಯ ಪ್ರಕ್ರಿಯೆ ಮುಗಿದ ನಂತರ ಸಂಶೋಧನೆ ಮಾಡಬಯಸುವ ವಿಶ್ವವಿದ್ಯಾಲಯಗಳು ಕೇಳಿದರೆ ಅವರಿಗೆ ಸಂಪೂರ್ಣ ಡೇಟಾ ಕೊಡಲಾಗುವುದು.
6. ಇಂದು (ಏಪ್ರಿಲ್ 26) ನಾವು ವಿವಿಧ ಪಕ್ಷಗಳು, ಸಮುದಾಯಗಳು ಮತ್ತು ಪ್ರದೇಶವಾರು ಪಡೆಯಬಹುದಾದ ಮತಗಳ ಅಂದಾಜು ನೀಡುತ್ತೇವೆ.
7. ನಾಳೆ (ಏಪ್ರಿಲ್ 27) ಸೀಟು ಹಂಚಿಕೆಯ ವಿವರಗಳನ್ನು ನೀಡಲಿದ್ದೇವೆ.
ಇಂತಹ ಸಮೀಕ್ಷೆಗಳ ಅಂತಿಮ ಫಲಿತಾಂಶ ಮತ್ತು ಅಂಕಿ-ಸಂಖ್ಯೆಗಳು ಮಾತ್ರವಲ್ಲದೇ, ಅಳವಡಿಸಿದ ವಿಧಾನ ಹಾಗೂ ಪೂರ್ಣ ದತ್ತಾಂಶಗಳೂ ಸಹಾ ಮುಕ್ತವಾಗಿರಬೇಕು ಎಂದು ಈದಿನ.ಕಾಮ್ ನಂಬುತ್ತದೆ. ಸುಮಾರು 23 ವಿವಿಧ ಅಂಶಗಳನ್ನು (Variable) ಬಳಸಿರುವ ಈ ಸಮೀಕ್ಷೆಯು ಸಂಶೋಧನಾರ್ಥಿಗಳಿಗೆ ಅಪಾರ ಪ್ರಮಾಣದ ವಿವರಗಳನ್ನು ಒದಗಿಸುತ್ತವೆ. ಹಾಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಅಥವಾ ಇನ್ನಿತರ ವಿಭಾಗಗಳ ಸಂಶೋಧನಾ ಕೇಂದ್ರಗಳಿಗೆ ಅದನ್ನು ನೀಡಲಾಗುತ್ತದೆ.
ಸೀಟು ಹಂಚಿಕೆಯ ವಿವರಗಳನ್ನು ಏಪ್ರಿಲ್ 27 ರಂದು ಪ್ರಸ್ತುತಪಡಿಸಲಾಗುತ್ತದೆ. ಅದೇ ಸಮಯದಲ್ಲಿ ಪ್ರಕಟಿಸಲು ಆಸಕ್ತಿ ತೋರುವ ಇತರ ಮಾಧ್ಯಮ ಸಂಸ್ಥೆಗಳೊಂದಿಗೆ ಈ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.
Seems like correct assessment.