Homeಮುಖಪುಟ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

- Advertisement -
- Advertisement -

ಭಾರತೀಯ ಸಿನಿಮಾ ಉದ್ದಿಮೆಯಲ್ಲಿ ಹಿಂದಿ ಚಿತ್ರರಂಗ ಬಿಟ್ಟರೆ ಹೆಚ್ಚು ವಹಿವಾಟು ಇರುವುದು ತೆಲುಗು ಸಿನಿಮಾಗಳಿಗೆ. ಒಂದು ಕಾಲಕ್ಕೆ ಭಾರತದಲ್ಲೇ ಅತಿಹೆಚ್ಚು ಚಿತ್ರಮಂದಿರಗಳನ್ನು ಹೊಂದಿದ ರಾಜ್ಯ ಆಂಧ್ರಪ್ರದೇಶ. ಸಿನಿಮಾ ನಾಯಕನಟರನ್ನು ತೀವ್ರತೆಯಲ್ಲಿ ಅಭಿಮಾನಿಸುವುದು ಕೂಡ ಇದೇ ತೆಲುಗು ಸಿನಿಮಾ ರಂಗದಲ್ಲಿ. ಇಷ್ಟು ಮಾತ್ರವಾಗಿದ್ದರೆ ಹೆಚ್ಚು ಅಪಾಯವಿಲ್ಲ, ಆದರೆ ಈ ಅಭಿಮಾನ ಜಾತಿ ಆಧಾರಿತವಾಗಿರುವುದು ಕೂಡ ತೆಲುಗು ಸಿನಿಮಾರಂಗ ಸಮಾಜದ ಸ್ವಾಸ್ಥ್ಯವನ್ನು ಇನ್ನಷ್ಟು ಹದಗೆಡಿಸಿದೆ. ತಮ್ಮ ಜಾತಿಯ ನಾಯಕನ ನಟನ ಸಿನಿಮಾ ಯಶಸ್ಸುಗಳಿಸಬೇಕು ಎಂದು ಅಭಿಮಾನಿಗಳು ಅವರ ಸಿನಿಮಾಗಳನ್ನು ವಿಜೃಂಭಿಸುವ ಉದಾಹರಣೆಗಳು ಕೂಡ ಚರ್ಚೆಯಾಗಿದೆ. ಅಲ್ಲದೆ ತೆಲುಗು ಚಿತ್ರರಂಗ ಕುಟುಂಬ ಸದಸ್ಯರಿಂದ
ಆವರಿಸಿಕೊಂಡಿರುವುದು ಕೂಡ ಸಮಸ್ಯೆಯನ್ನು ಬಿಗಡಾಯಿಸಿ, ಪಿತ್ರಾರ್ಜಿತ ಜಹಾಗೀರುದಾರಿಕೆಯನ್ನಾಗಿಸಿದೆ. ಇನ್ನು ಹಲವು ಸಿನಿಮಾಗಳಲ್ಲಿ ಚಿತ್ರಿತವಾಗುವ ಕಥೆಗಳು ಕೂಡ ಇದೇ ಪಾಳೆಗಾರಿಕೆ ಮನಸ್ಥಿತಿಯವೇ. ಈ ರೀತಿಯ ಪಾಳೆಗಾರಿಕೆ ಮನಸ್ಥಿತಿಯನ್ನು ಕೇವಲ ಸಿನಿಮಾದಲ್ಲಷ್ಟೇ ಅಲ್ಲ ಸಿನಿಮಾ ನಾಯಕ ನಟರ ಸಾರ್ವಜನಿಕ ನಡವಳಿಕೆಯಲ್ಲಿ ಪ್ರತಿಬಿಂಬವಾಗುವುದನ್ನು ಕೂಡ ಕಾಣಬಹುದು.

ಈ ಪರಿಯಾಗಿ ಬಹುತೇಕ ಜಡ್ಡುಗಟ್ಟಿದ ಫ್ಯೂಡಲ್ ತೆಲುಗು ಚಿತ್ರ ರಂಗದಲ್ಲಿ ಶೇಖರ್ ಕಮ್ಮುಲ ತಮ್ಮ ’ಲವ್ ಸ್ಟೋರಿ’ ಸಿನಿಮಾ ಮೂಲಕ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಹೊಸ ಕಣ್ಣೋಟವೊಂದನ್ನು ನೀಡಿದ್ದಾರೆ. ಇದು ಆಶ್ಚರ್ಯಕ್ಕಿಂತ ಖುಷಿಯ ಸಂಗತಿ. ಈ ಹಿಂದೆ ಸುಕುಮಾರ್ ನಿರ್ದೇಶಿಸಿದ ’ರಂಗಸ್ಥಳಂ’ ಸಿನಿಮಾದಲ್ಲಿ ಜಾತಿ ಕುರಿತಾದ ವಿಷಯವನ್ನು ಡೀಲ್ ಮಾಡಿದ್ದರಾದರೂ, ಅದು ಜಾತಿ ಕುರಿತಾದ ಅಸಮಾನತೆ, ದಬ್ಬಾಳಿಕೆಯ, ಕ್ರೌರ್ಯ ಇಂತಹ ಮೂಲಭೂತ ಸಂಗತಿಗಳು ಸಮುದಾಯದ ಹಿನ್ನಲೆಯಲ್ಲಿ ಪ್ರೇಕ್ಷಕನಿಗೆ ದಾಟಿದ್ದಕ್ಕಿಂತ, ವ್ಯಕ್ತಿಯೊಬ್ಬನ ಖಾಸಗಿ ಪ್ರತೀಕಾರವಾಗಿ ಸಿಕ್ಕಿತ್ತು.

ಲವ್ ಸ್ಟೋರಿ

ಲವ್ ಸ್ಟೋರಿ ಸಿನಿಮಾದಲ್ಲಿ ಎರಡು ಸಂಗತಿಗಳನ್ನು ಸಮಾನಾಂತರವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಒಂದು ನಮ್ಮ ಸಮಾಜದಲ್ಲಿರುವ ಜಾತಿ ವ್ಯವಸ್ಥೆ. ಮತ್ತೊಂದು ಫ್ಯೂಡಲ್ ಜಾತಿಯ ಪುರುಷ ಪ್ರಧಾನ ಕೌಟಂಬಿಕ ವ್ಯವಸ್ಥೆ ಒಳಗೆ ಹೆಣ್ಣಿನ ಬಗೆಗಿನ ದೃಷ್ಟಿಕೋನ. ದಲಿತ ಸಮುದಾಯದ ರೇವಂತ್ ಕಥಾನಾಯಕ, ಫ್ಯೂಡಲ್ ಸಮುದಾಯದ ಮೊನಿಕಾ ನಾಯಕಿ, ಕಥಾನಾಯಕನ ತಾಯಿ ಮನಮ್ಮ ಮತ್ತು ಕಥಾನಾಯಕಿಯ ಚಿಕ್ಕಪ್ಪ ನರಸಿಂಹಂ. ಈ ನಾಲ್ಕು ಪ್ರಧಾನ ಪಾತ್ರಗಳು. ಗಂಡನನ್ನು ಕಳೆದುಕೊಂಡ ಮನಮ್ಮ ಜಾತಿ ಅವಮಾನಗಳಿಂದ ಬೇಸತ್ತು ತನ್ನದೇ ಒಂದು ತುಂಡು ಭೂಮಿ ಹೊಂದುವುದು ಮತ್ತು ಆ ಮೂಲಕ ತನ್ನ ಅಸ್ತಿತ್ವ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳುವುದನ್ನು ಛಲಬಿಡದೆ ಸಾಧಿಸಿದ್ದಾಳೆ.

ತನ್ನ ಮಗನಿಗೆ ಬಾಲ್ಯದಿಂದಲೂ ಈ ಜಾತಿ ತಾರತಮ್ಯದ ಸೂಕ್ಷ್ಮಗಳು ಹೇಗಿರುತ್ತವೆ ಅನ್ನೋದನ್ನ ಹೇಳುತ್ತಿರುತ್ತಾಳೆ. ಈ ನಾಲ್ಕರಲ್ಲಿ ಮಾನಮ್ಮನದು ಬಹಳ ಗಟ್ಟಿಯಾದ ಮತ್ತು ವೈಚಾರಿಕವಾಗಿ ಸ್ಪಷ್ಟತೆ ಇರುವ ಪಾತ್ರ. ಅದೇ ರೀತಿ ಮಗ ರೇವಂತ್ ತನ್ನದೇ ಒಂದು ಸ್ವ ಉದ್ಯೋಗ/ಉದ್ಯಮದಿಂದ ಜೀವನ ರೂಪಿಸಿಕೊಳ್ಳಲು ಹಳ್ಳಿಯಿಂದ ನಗರಕ್ಕೆ ಬಂದು ಹೆಣಗುತ್ತಿದ್ದಾನೆ. ಕಥಾನಾಯಕಿ ಕೂಡ ತನ್ನ ಚಿಕ್ಕಪ್ಪನ ಯಜಮಾನಿಕೆಯಿಂದ ಬೇಸತ್ತು ಸ್ವಂತ ಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಲು ನಗರಕ್ಕೆ ಬಂದಿದ್ದಾಳೆ. ಇನ್ನು ಇವಳ ಚಿಕ್ಕಪ್ಪ ಹಳ್ಳಿಯಲ್ಲಿ ಬಡವರ ಜಮೀನನ್ನು ಕಬ್ಜ ಮಾಡುವುದು, ತನ್ನದೇ ಅಣ್ಣನ ಕುಡಿತದ ಚಟವನ್ನು ಮೂದಲಿಸಿ, ಅದೇ ಕಾರಣಕ್ಕೆ ಕುಟುಂಬದ ಮೇಲೆ ಯಜಮಾನಿಕೆ ಸಾಧಿಸುವುದನ್ನು ಮಾಡುತ್ತಿರುತ್ತಾನೆ. ಮೊನಿಕ ನಗರಕ್ಕೆ ಬಂದರೂ ಇವನು ಬೆಂಬಿಡದ ಭೂತದಂತೆ ಕಾಡುತ್ತಿರುತ್ತಾನೆ.

ನಿರ್ದೇಶಕ ಶೇಖರ್ ಸಿನಿಮಾದಲ್ಲಿ ಹೇಳಬೇಕಂದಿರುವ ಆಶಯ ಮೆಚ್ಚುವಂತದ್ದು. ಆದರೆ ಅದನ್ನು ಕಟ್ಟಿಕೊಡುವಲ್ಲಿ ಕೆಲವು ಕಡೆ ಎಡವಿ ನಿರೂಪಣೆ ದುರ್ಬಲವಾಗಿದೆ. ತಮ್ಮ ಅಲೋಚನೆಗೆ ಪೂರಕವಾಗಿ ದೃಶ್ಯಗಳನ್ನು ಒಟ್ಟು ಬಂಧದಲ್ಲಿ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಪಾತ್ರಗಳಲ್ಲಿ ಕನ್ಸಿಸ್ಟಿನ್ಸಿ ಕೂಡ ಕಾಣೆಯಾಗಿದೆ.

ಸಿನಿಮಾದ ಕೊನೆಗೆ ಕಥಾನಾಯಕನನ್ನು ರೆಬಲ್ ಮಾಡುವ ಸಲುವಾಗಿ ಮಾನಮ್ಮನ ಪಾತ್ರ ಇದ್ದಕ್ಕಿಂದ್ದಂತೆ ದುರ್ಬಲವಾಗಿಬಿಡುತ್ತದೆ. ಇನ್ನು ನಗರದಲ್ಲಿಯೂ ಇರುವ ಜಾತಿ ತಾರತಮ್ಯವನ್ನು ಕಟ್ಟಿಕೊಡುವ ಬಹಳ ದೊಡ್ಡ ಅವಕಾಶವನ್ನು ನಿರ್ದೇಶಕ ಕೈಚೆಲ್ಲಿದ್ದಾರೆ. ಸಿನಿಮಾದ ಮೊದಲಾರ್ಧ ನಾಯಕ ಮತ್ತು ನಾಯಕಿ ನಡುವೆ ಉಂಟಾಗುವ ಸ್ನೇಹ, ಆನಂತರ ಅದು ಪ್ರೀತಿಯಾಗಿ ಬೆಳಯುವುದಕ್ಕಷ್ಟೇ ಮೀಸಲಾಗಿದೆ. ಸಿನಿಮಾದ ಪ್ರಾರಂಭದಲ್ಲಿ ಮಾನಮ್ಮ ತನ್ನ ಮಗನಿಗೆ ಜಾತಿ ತಾರತಮ್ಯದ ಕುರಿತು ಹೇಳುವ ಮಾತುಗಳು ನಿರೂಪಣೆಯಲ್ಲಿ ವ್ಯಕ್ತವಾಗಿದ್ದು ಬಿಟ್ಟರೆ, ಮಧ್ಯಂತರದವರೆಗೂ ಆ ತಾರತಮ್ಯವನ್ನು ಕಟ್ಟಿಕೊಡುವ ದೃಶ್ಯಗಳು ಬರುವುದೇ ಇಲ್ಲ. ಮಧ್ಯಂತರದ ನಂತರ, ನಾಯಕ ಮತ್ತು ನಾಯಕಿ ನಡೆಸುವ ಡ್ಯಾನ್ಸ್ ಕ್ಲಾಸ್‌ನಲ್ಲಿ ಕಲಿಯುತ್ತಿರುವ ಮೇಲ್ಜಾತಿ/ಶ್ರೀಮಂತ ಹುಡುಗಿ ಮತ್ತು ತಳ ಸಮುದಾಯದ/ಬಡ ಹುಡುಗನ ನಡುವಿನ ಪ್ರೀತಿ ಮರ್ಯಾದಾ ಹತ್ಯೆಯಲ್ಲಿ ಕೊನೆಯಾಗುವ ದೃಶ್ಯದೊಂದಿಗೆ ಕಥೆ ಒಂದಷ್ಟು ತೀವ್ರತೆ ಪಡೆಯುತ್ತದೆ. ನಾಯಕ ತನ್ನ ತಾಯಿಗೆ ಈ ವಿಚಾರ ತಿಳಿಸಿದಾಗ ತಾಯಿ ಮಾನಮ್ಮಳಿಗೆ ತನ್ನ ಮಗನ ಪ್ರೀತಿಗಿಂತ ತನ್ನ ಸ್ವಾಭಿಮಾನ ಮುಖ್ಯವಾಗುತ್ತದೆ. ಮಗನ ಭವಿಷ್ಯಕ್ಕಾಗಿ ತಾನು ಪೈಸೆಪೈಸೆ ಕೂಡಿಸಿ ಕೊಂಡುಕೊಂಡ ಜಮೀನನ್ನು ಮಾರುವ ಮಾನಮ್ಮ, ಈ ವಿಚಾರದಲ್ಲಿ ಮಾತ್ರ ಮಗನಿಗೆ ಷರತ್ತೊಂದನ್ನು ವಿಧಿಸುತ್ತಾಳೆ. ನಿನ್ನ ಪ್ರೀತಿಸಿದ ಹುಡುಗಿ ಮನೆಯವರು ನನ್ನ ಜಾತಿ ಪರಿಗಣಿಸದೆ ಸಮಾನವಾಗಿ ಸ್ವೀಕರಿಸಿದ್ದಾದರೆ ನಾನು ಈ ಮದುವೆಗೆ ಸಿದ್ಧ ಎಂದು ಹೇಳುತ್ತಾಳೆ. ಈ ಪ್ರಯತ್ನಕ್ಕೆ ಮುಂದಾಗುವ ನಾಯಕ ಸೋಲುತ್ತಾನೆ.

ಶೇಖರ್ ಕಮ್ಮುಲ, ಫ್ಯೂಡಲ್ ಜಾತಿಯ ಕುಟುಂಬದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಕಟ್ಟಿಕೊಟ್ಟಷ್ಟು ತೀವ್ರವಾಗಿ ಜಾತಿ ತಾರತಮ್ಯವನ್ನು ಕಟ್ಟಿಕೊಟ್ಟಿಲ್ಲ ಎಂಬ ಭಾವನೆ ಕೂಡ ಕೊನೆಗೆ ಉಳಿದುಕೊಳ್ಳುತ್ತದೆ. (ಕಥಾ ನಾಯಕಿ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ಅವರ ಜನಪ್ರಿಯತೆಯ ಕಾರಣಕ್ಕೂ ಇದು ಇರಬಹುದು). ಆದರೆ ತೆಲುಗು ಸಿನಿಮಾರಂಗದಲ್ಲಿ ಇಷ್ಟಾದರೂ ಚರ್ಚೆಮಾಡುವ ಮಾನವೀಯ ನೆಲೆಯಲ್ಲಿ ಚಲನಚಿತ್ರ ನಿರ್ದೇಶಿಸುವವರು ಇದ್ದಾರಲ್ಲ ಅನ್ನುವ ಕಾರಣಕ್ಕೆ ಶೇಖರ್ ಕಮ್ಮುಲ ಅಭಿನಂದನೀಯ.

ನಟಿಸುವ ಪಾತ್ರಕ್ಕೆ ಜೀವ ತುಂಬುವ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ದಕ್ಷಿಣ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾಗಿದ್ದು ಮಲೆಯಾಳಂ ಭಾಷೆಯ ’ಪ್ರೇಮಂ’ ಸಿನಿಮಾ ಮೂಲಕ. ’ಮಲರ್’ ಪಾತ್ರದಲ್ಲಿ ಅಷ್ಟು ಸಹಜವಾಗಿ ನಟಿಸಿದ ಸಾಯಿ ಪಲ್ಲವಿ ಇವತ್ತಿಗೂ ಸಿನಿಮಾ ಪ್ರೇಕ್ಷಕರಿಗೆ ’ಮಲರ್’. ತಾವು ನಟಿಸಿದ ಸರಿಸುಮಾರು ಎಲ್ಲ ಸಿನಿಮಾಗಳಲ್ಲಿ ಕಥಾ ನಾಯಕನ ಪಾತ್ರಕ್ಕಿಂತ ಸಾಯಿ ಪಲ್ಲವಿ ನಟಿಸಿದ ಪಾತ್ರ ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತದೆ. ಲವ್ ಸ್ಟೋರಿ ಸಿನಿಮಾದಲ್ಲಿಯೂ ಹಲವು ಕೊರತೆಗಳಿದ್ದರೂ, ಸಾಯಿ ಪಲ್ಲವಿ ತೆರೆಯ ಮೇಲೆ ಕಾಣಿಸುವ ದೃಶ್ಯಗಳಿಂದ ಈ ಕೊರತೆಗಳನ್ನು ಮರೆಯುವಂತೆ ಪ್ರೇಕ್ಷಕನನ್ನು ತನ್ನ ನಟನೆಯೆಡಗೆ ಎಳೆದುಕೊಳ್ಳುತ್ತಾರೆ.

ನಿರ್ದೇಶಕ ಶೇಖರ್ ಕಮ್ಮುಲ

ದ್ರಾವಿಡ ಭಾಷೆಗಳ ಬಗ್ಗೆ ಓದುವಾಗ ತೆಲುಗು ಭಾಷೆಯಲ್ಲಿ ಸ್ತ್ರೀವಾಚಕಗಳನ್ನು ಹೇಗೆ ಸಂಬೋಧಿಸಲಾಗುತ್ತದೆ ಎಂಬುದು ಸೋಜಿಕವೆನಿಸಿತ್ತು. ಸ್ತ್ರೀವಾಚಕಗಳನ್ನು ’ಅದಿ’, ’ಇದಿ’ (ಅದು, ಇದು) ಎಂದು ವಸ್ತುಗಳ ರೀತಿ ಸಂಬೋಧಿಸಲಾಗುತ್ತದೆ (ಕರ್ನಾಟಕದಲ್ಲಿಯೂ ಈ ಬಳಕೆಯನ್ನು ಹಲವೆಡೆ ಕಾಣಬಹುದು). ತೆಲುಗು ಸಮಾಜಕ್ಕೆ
ಇದನ್ನು ಸಾಮಾನ್ಯೀಕರಿಸಲು ನನ್ನ ಅಧ್ಯಯನದ ಕೊರತೆಯಿದ್ದರೂ, ತೆಲುಗು ಸಿನಿಮಾ ಮತ್ತು ತೆಲುಗು ಸಿನಿಮಾರಂಗ ನಿಸ್ಸಂಶಯವಾಗಿ ಪುರುಷಪ್ರಧಾನವಾದದ್ದು ಎನ್ನಬಹುದು (ಕನ್ನಡ ಚಿತ್ರರಂಗವನ್ನೂ ಸೇರಿದಂತೆ, ಬಹುತೇಕ ಭಾರತೀಯ ಚಿತ್ರರಂಗಗಳಿಗೂ ಇದು ಅನ್ವಯಿಸುತ್ತದೆ). ಇಲ್ಲಿ ಕಥಾನಾಯಕಿ ಪಾತ್ರ ಸೃಷ್ಟಿ ಮಾಡೋದೇ ಕಥಾನಾಯಕನ ಹಿರೋಹಿಸಂನ್ನು ವಿಜೃಂಭಿಸುವುದಕ್ಕೆ. ಇದಕ್ಕೆ ಉದಾಹರಣೆಗಳು ದಂಡಿಯಾಗಿ ಸಿಗುತ್ತವೆ. ಬಹುಸಂಖ್ಯಾತ ಪ್ರಧಾನಧಾರೆಯ ತೆಲುಗು ಸಿನಿಮಾಗಳನ್ನು ಗಮನಿಸಿದರೆ ಒಂದು ಗಟ್ಟಿಯಾದ ಮಹಿಳಾ ಪಾತ್ರ ಸಿಗುವುದೂ ಕಷ್ಟ. ಹೆಣ್ಣು ಪಾತ್ರಗಳಿಗೆ ಅಲ್ಲಿ ಹೆಚ್ಚು ಸ್ಪೇಸ್ ಇಲ್ಲವೇ ಇಲ್ಲ.

ಶೇಖರ್ ಕಮ್ಮುಲ ಸಿನಿಮಾಗಳು ಇದಕ್ಕೆ ಅಪವಾದ ಎನ್ನಬಹುದು. ತಮ್ಮ ಮೊದಲ ಸಿನಿಮಾ ’ಆನಂದ್’ನಿಂದ ’ಗೋದಾವರಿ’, ’ಹ್ಯಾಪಿಡೇಸ್’, ’ಲೀಡರ್’, ’ಫಿದಾ’ ಈ ಎಲ್ಲಾ ಸಿನಿಮಾಗಳಲ್ಲೂ ಸಾಂಪ್ರದಾಯಿಕ ಗಂಡು ನೋಟವನ್ನು ಪ್ರಶ್ನೆ ಮಾಡಿದ, ಹೆಣ್ಣಿನ ಸ್ವತಂತ್ರ ಅಲೋಚನೆಗೆ ಒತ್ತಾಸೆಯಾದ ಮತ್ತು ಅಂತಹ ಪಾತ್ರಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದನ್ನು ಕಾಣಬಹುದು. ಸಾಯಿ ಪಲ್ಲವಿ ನಟಿಸಿದ ’ಫಿದಾ’ದಲ್ಲಿ ಕಥಾ ನಾಯಕಿ ಮದುವೆ ಆದ ಮೇಲೆ ಗಂಡನ ಮನೆಗೆ ಏಕೆ ಹೋಗಬೇಕು, ಅವಳು ತನ್ನ ಹೆತ್ತವರ ಬಳಿ ಇರುವುದು ಅನಿವಾರ್ಯ ಅದಾಗ ಗಂಡನೇ ನನ್ನ ಬಳಿ ಏಕೆ ಬಂದಿರಬಾರದು ಎಂದು ಪ್ರಶ್ನಿಸುತ್ತಾಳೆ. ಶೇಖರ್ ಕಮ್ಮುಲ ಸಿನಿಮಾಗಳನ್ನ ಸ್ತ್ರೀವಾದದ ಆಳವಾದ ವಿಮರ್ಶೆಗೆ ಒಳಪಡಿಸಿದರೆ ಅಲ್ಲೂ ಸಾಕಷ್ಟು ಕೊರತೆಗಳು. ಮೇಲ್ಪದರದ ಗ್ರಹಿಕೆಗಳು, ಪೂರ್ವಗ್ರಹಗಳು ಎಲ್ಲವೂ ಬಹಳಷ್ಟು ಸಿಗುತ್ತವೆ. ಉದಾಹರಣೆಗೆ ಲವ್ ಸ್ಟೋರಿ ಸಿನಿಮಾವನ್ನೆ ನೋಡುವುದಾದರೆ, ತನ್ನ ಮನೆಯವರ ವಿರೋಧದಿಂದ ದುಡಿಯಲು ನಗರಕ್ಕೆ ಹೋಗುವ ನಾಯಕಿ ಸಂಪಾದಿಸಿದ ಹಣವನ್ನು ನೀಡುವುದು ಕುಡುಕ ಮತ್ತು ಬೇಜವ್ದಾರಿ ತಂದೆಗೆ. ಕಥಾ ನಾಯಕಿಗೆ ಯಾವ ಯಜಮಾನಿಕೆಯಿಂದ ಉಸಿರುಗಟ್ಟಿರುತ್ತದೊ ಅದೇ ಯಜಮಾನಿಕೆಯನ್ನು ಪೋಷಿಸುತ್ತದೆ ಈ ದೃಶ್ಯ. ಈ ತರಹದ ದೃಶ್ಯಗಳು ಶೇಖರ್ ಅವರ ಎಲ್ಲಾ ಸಿನಿಮಾಗಳಲ್ಲೂ ಸಾಮಾನ್ಯವಾಗಿ ಇರುತ್ತವೆ. ಆದರೆ, ಬಹಳ ನೇರಾನೇರ ಪುರುಷ ಯಜಮಾನಿಕೆ ಮತ್ತು Misogynyಗಳನ್ನು ಸಮಾಜದ ಮೌಲ್ಯಗಳು ಎಂದು ಪ್ರದರ್ಶನ ಮಾಡುವ ತೆಲುಗು ಸಿನಿಮಾಗಳ ನಡುವೆ ಶೇಖರ್ ಮಾನವೀಯವಾಗಿ ಕಾಣಿಸುತ್ತಾರೆ.

ತಮಿಳು ಚಿತ್ರರಂಗದಲ್ಲಿ ಪ ರಂಜಿತ್, ಮಾರಿ ಸೆಲ್ವರಾಜ್‌ರಂತಹ ನಿರ್ದೇಶಕರು ಜಾತಿ ಶೋಷಣೆಯ ವಿಷಯಗಳ ಚಲನಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾದ ಉದಾಹರಣೆಗಳಿಂದ ಅಕ್ಕಪಕ್ಕದ ರಾಜ್ಯದಲ್ಲಿಯೂ ಹಲವು ನಿರ್ದೇಶಕರಿಗೆ ಇದು ಸ್ಫೂರ್ತಿಯಾಗಿರಬಹುದು. ಶೇಖರ್ ಲವ್ ಸ್ಟೋರಿಯತಂಹ ಸಿನಿಮಾಗಳನ್ನು ಹೆಚ್ಚೆಚ್ಚು ಮಾಡಲಿ. ಅವುಗಳು ಇನ್ನಷ್ಟು ಆಳವಾದ ಅಧ್ಯಯನಗಳಿಂದ, ಒಳನೋಟಗಳಿಂದ ಕೂಡಿ, ದೃಶ್ಯ ಮಾಧ್ಯಮದ ಸಾಧ್ಯತೆಯನ್ನು ಹೆಚ್ಚು ದುಡಿಸಿಕೊಂಡು ಇನ್ನಷ್ಟು ತೀವ್ರವಾಗಿ ಬೆಳ್ಳಿಪರದೆ ಮೇಲೆ ಪ್ರದರ್ಶನಗೊಳ್ಳಲಿ, ಇವು ತೆಲುಗು ಸಿನಿಮಾ ಇಂಡಸ್ಟ್ರಿಗೆ ಮಾದರಿಯಾಗಲಿ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...