Homeಮುಖಪುಟ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

- Advertisement -
- Advertisement -

ಭಾರತೀಯ ಸಿನಿಮಾ ಉದ್ದಿಮೆಯಲ್ಲಿ ಹಿಂದಿ ಚಿತ್ರರಂಗ ಬಿಟ್ಟರೆ ಹೆಚ್ಚು ವಹಿವಾಟು ಇರುವುದು ತೆಲುಗು ಸಿನಿಮಾಗಳಿಗೆ. ಒಂದು ಕಾಲಕ್ಕೆ ಭಾರತದಲ್ಲೇ ಅತಿಹೆಚ್ಚು ಚಿತ್ರಮಂದಿರಗಳನ್ನು ಹೊಂದಿದ ರಾಜ್ಯ ಆಂಧ್ರಪ್ರದೇಶ. ಸಿನಿಮಾ ನಾಯಕನಟರನ್ನು ತೀವ್ರತೆಯಲ್ಲಿ ಅಭಿಮಾನಿಸುವುದು ಕೂಡ ಇದೇ ತೆಲುಗು ಸಿನಿಮಾ ರಂಗದಲ್ಲಿ. ಇಷ್ಟು ಮಾತ್ರವಾಗಿದ್ದರೆ ಹೆಚ್ಚು ಅಪಾಯವಿಲ್ಲ, ಆದರೆ ಈ ಅಭಿಮಾನ ಜಾತಿ ಆಧಾರಿತವಾಗಿರುವುದು ಕೂಡ ತೆಲುಗು ಸಿನಿಮಾರಂಗ ಸಮಾಜದ ಸ್ವಾಸ್ಥ್ಯವನ್ನು ಇನ್ನಷ್ಟು ಹದಗೆಡಿಸಿದೆ. ತಮ್ಮ ಜಾತಿಯ ನಾಯಕನ ನಟನ ಸಿನಿಮಾ ಯಶಸ್ಸುಗಳಿಸಬೇಕು ಎಂದು ಅಭಿಮಾನಿಗಳು ಅವರ ಸಿನಿಮಾಗಳನ್ನು ವಿಜೃಂಭಿಸುವ ಉದಾಹರಣೆಗಳು ಕೂಡ ಚರ್ಚೆಯಾಗಿದೆ. ಅಲ್ಲದೆ ತೆಲುಗು ಚಿತ್ರರಂಗ ಕುಟುಂಬ ಸದಸ್ಯರಿಂದ
ಆವರಿಸಿಕೊಂಡಿರುವುದು ಕೂಡ ಸಮಸ್ಯೆಯನ್ನು ಬಿಗಡಾಯಿಸಿ, ಪಿತ್ರಾರ್ಜಿತ ಜಹಾಗೀರುದಾರಿಕೆಯನ್ನಾಗಿಸಿದೆ. ಇನ್ನು ಹಲವು ಸಿನಿಮಾಗಳಲ್ಲಿ ಚಿತ್ರಿತವಾಗುವ ಕಥೆಗಳು ಕೂಡ ಇದೇ ಪಾಳೆಗಾರಿಕೆ ಮನಸ್ಥಿತಿಯವೇ. ಈ ರೀತಿಯ ಪಾಳೆಗಾರಿಕೆ ಮನಸ್ಥಿತಿಯನ್ನು ಕೇವಲ ಸಿನಿಮಾದಲ್ಲಷ್ಟೇ ಅಲ್ಲ ಸಿನಿಮಾ ನಾಯಕ ನಟರ ಸಾರ್ವಜನಿಕ ನಡವಳಿಕೆಯಲ್ಲಿ ಪ್ರತಿಬಿಂಬವಾಗುವುದನ್ನು ಕೂಡ ಕಾಣಬಹುದು.

ಈ ಪರಿಯಾಗಿ ಬಹುತೇಕ ಜಡ್ಡುಗಟ್ಟಿದ ಫ್ಯೂಡಲ್ ತೆಲುಗು ಚಿತ್ರ ರಂಗದಲ್ಲಿ ಶೇಖರ್ ಕಮ್ಮುಲ ತಮ್ಮ ’ಲವ್ ಸ್ಟೋರಿ’ ಸಿನಿಮಾ ಮೂಲಕ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಹೊಸ ಕಣ್ಣೋಟವೊಂದನ್ನು ನೀಡಿದ್ದಾರೆ. ಇದು ಆಶ್ಚರ್ಯಕ್ಕಿಂತ ಖುಷಿಯ ಸಂಗತಿ. ಈ ಹಿಂದೆ ಸುಕುಮಾರ್ ನಿರ್ದೇಶಿಸಿದ ’ರಂಗಸ್ಥಳಂ’ ಸಿನಿಮಾದಲ್ಲಿ ಜಾತಿ ಕುರಿತಾದ ವಿಷಯವನ್ನು ಡೀಲ್ ಮಾಡಿದ್ದರಾದರೂ, ಅದು ಜಾತಿ ಕುರಿತಾದ ಅಸಮಾನತೆ, ದಬ್ಬಾಳಿಕೆಯ, ಕ್ರೌರ್ಯ ಇಂತಹ ಮೂಲಭೂತ ಸಂಗತಿಗಳು ಸಮುದಾಯದ ಹಿನ್ನಲೆಯಲ್ಲಿ ಪ್ರೇಕ್ಷಕನಿಗೆ ದಾಟಿದ್ದಕ್ಕಿಂತ, ವ್ಯಕ್ತಿಯೊಬ್ಬನ ಖಾಸಗಿ ಪ್ರತೀಕಾರವಾಗಿ ಸಿಕ್ಕಿತ್ತು.

ಲವ್ ಸ್ಟೋರಿ

ಲವ್ ಸ್ಟೋರಿ ಸಿನಿಮಾದಲ್ಲಿ ಎರಡು ಸಂಗತಿಗಳನ್ನು ಸಮಾನಾಂತರವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಒಂದು ನಮ್ಮ ಸಮಾಜದಲ್ಲಿರುವ ಜಾತಿ ವ್ಯವಸ್ಥೆ. ಮತ್ತೊಂದು ಫ್ಯೂಡಲ್ ಜಾತಿಯ ಪುರುಷ ಪ್ರಧಾನ ಕೌಟಂಬಿಕ ವ್ಯವಸ್ಥೆ ಒಳಗೆ ಹೆಣ್ಣಿನ ಬಗೆಗಿನ ದೃಷ್ಟಿಕೋನ. ದಲಿತ ಸಮುದಾಯದ ರೇವಂತ್ ಕಥಾನಾಯಕ, ಫ್ಯೂಡಲ್ ಸಮುದಾಯದ ಮೊನಿಕಾ ನಾಯಕಿ, ಕಥಾನಾಯಕನ ತಾಯಿ ಮನಮ್ಮ ಮತ್ತು ಕಥಾನಾಯಕಿಯ ಚಿಕ್ಕಪ್ಪ ನರಸಿಂಹಂ. ಈ ನಾಲ್ಕು ಪ್ರಧಾನ ಪಾತ್ರಗಳು. ಗಂಡನನ್ನು ಕಳೆದುಕೊಂಡ ಮನಮ್ಮ ಜಾತಿ ಅವಮಾನಗಳಿಂದ ಬೇಸತ್ತು ತನ್ನದೇ ಒಂದು ತುಂಡು ಭೂಮಿ ಹೊಂದುವುದು ಮತ್ತು ಆ ಮೂಲಕ ತನ್ನ ಅಸ್ತಿತ್ವ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳುವುದನ್ನು ಛಲಬಿಡದೆ ಸಾಧಿಸಿದ್ದಾಳೆ.

ತನ್ನ ಮಗನಿಗೆ ಬಾಲ್ಯದಿಂದಲೂ ಈ ಜಾತಿ ತಾರತಮ್ಯದ ಸೂಕ್ಷ್ಮಗಳು ಹೇಗಿರುತ್ತವೆ ಅನ್ನೋದನ್ನ ಹೇಳುತ್ತಿರುತ್ತಾಳೆ. ಈ ನಾಲ್ಕರಲ್ಲಿ ಮಾನಮ್ಮನದು ಬಹಳ ಗಟ್ಟಿಯಾದ ಮತ್ತು ವೈಚಾರಿಕವಾಗಿ ಸ್ಪಷ್ಟತೆ ಇರುವ ಪಾತ್ರ. ಅದೇ ರೀತಿ ಮಗ ರೇವಂತ್ ತನ್ನದೇ ಒಂದು ಸ್ವ ಉದ್ಯೋಗ/ಉದ್ಯಮದಿಂದ ಜೀವನ ರೂಪಿಸಿಕೊಳ್ಳಲು ಹಳ್ಳಿಯಿಂದ ನಗರಕ್ಕೆ ಬಂದು ಹೆಣಗುತ್ತಿದ್ದಾನೆ. ಕಥಾನಾಯಕಿ ಕೂಡ ತನ್ನ ಚಿಕ್ಕಪ್ಪನ ಯಜಮಾನಿಕೆಯಿಂದ ಬೇಸತ್ತು ಸ್ವಂತ ಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಲು ನಗರಕ್ಕೆ ಬಂದಿದ್ದಾಳೆ. ಇನ್ನು ಇವಳ ಚಿಕ್ಕಪ್ಪ ಹಳ್ಳಿಯಲ್ಲಿ ಬಡವರ ಜಮೀನನ್ನು ಕಬ್ಜ ಮಾಡುವುದು, ತನ್ನದೇ ಅಣ್ಣನ ಕುಡಿತದ ಚಟವನ್ನು ಮೂದಲಿಸಿ, ಅದೇ ಕಾರಣಕ್ಕೆ ಕುಟುಂಬದ ಮೇಲೆ ಯಜಮಾನಿಕೆ ಸಾಧಿಸುವುದನ್ನು ಮಾಡುತ್ತಿರುತ್ತಾನೆ. ಮೊನಿಕ ನಗರಕ್ಕೆ ಬಂದರೂ ಇವನು ಬೆಂಬಿಡದ ಭೂತದಂತೆ ಕಾಡುತ್ತಿರುತ್ತಾನೆ.

ನಿರ್ದೇಶಕ ಶೇಖರ್ ಸಿನಿಮಾದಲ್ಲಿ ಹೇಳಬೇಕಂದಿರುವ ಆಶಯ ಮೆಚ್ಚುವಂತದ್ದು. ಆದರೆ ಅದನ್ನು ಕಟ್ಟಿಕೊಡುವಲ್ಲಿ ಕೆಲವು ಕಡೆ ಎಡವಿ ನಿರೂಪಣೆ ದುರ್ಬಲವಾಗಿದೆ. ತಮ್ಮ ಅಲೋಚನೆಗೆ ಪೂರಕವಾಗಿ ದೃಶ್ಯಗಳನ್ನು ಒಟ್ಟು ಬಂಧದಲ್ಲಿ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಪಾತ್ರಗಳಲ್ಲಿ ಕನ್ಸಿಸ್ಟಿನ್ಸಿ ಕೂಡ ಕಾಣೆಯಾಗಿದೆ.

ಸಿನಿಮಾದ ಕೊನೆಗೆ ಕಥಾನಾಯಕನನ್ನು ರೆಬಲ್ ಮಾಡುವ ಸಲುವಾಗಿ ಮಾನಮ್ಮನ ಪಾತ್ರ ಇದ್ದಕ್ಕಿಂದ್ದಂತೆ ದುರ್ಬಲವಾಗಿಬಿಡುತ್ತದೆ. ಇನ್ನು ನಗರದಲ್ಲಿಯೂ ಇರುವ ಜಾತಿ ತಾರತಮ್ಯವನ್ನು ಕಟ್ಟಿಕೊಡುವ ಬಹಳ ದೊಡ್ಡ ಅವಕಾಶವನ್ನು ನಿರ್ದೇಶಕ ಕೈಚೆಲ್ಲಿದ್ದಾರೆ. ಸಿನಿಮಾದ ಮೊದಲಾರ್ಧ ನಾಯಕ ಮತ್ತು ನಾಯಕಿ ನಡುವೆ ಉಂಟಾಗುವ ಸ್ನೇಹ, ಆನಂತರ ಅದು ಪ್ರೀತಿಯಾಗಿ ಬೆಳಯುವುದಕ್ಕಷ್ಟೇ ಮೀಸಲಾಗಿದೆ. ಸಿನಿಮಾದ ಪ್ರಾರಂಭದಲ್ಲಿ ಮಾನಮ್ಮ ತನ್ನ ಮಗನಿಗೆ ಜಾತಿ ತಾರತಮ್ಯದ ಕುರಿತು ಹೇಳುವ ಮಾತುಗಳು ನಿರೂಪಣೆಯಲ್ಲಿ ವ್ಯಕ್ತವಾಗಿದ್ದು ಬಿಟ್ಟರೆ, ಮಧ್ಯಂತರದವರೆಗೂ ಆ ತಾರತಮ್ಯವನ್ನು ಕಟ್ಟಿಕೊಡುವ ದೃಶ್ಯಗಳು ಬರುವುದೇ ಇಲ್ಲ. ಮಧ್ಯಂತರದ ನಂತರ, ನಾಯಕ ಮತ್ತು ನಾಯಕಿ ನಡೆಸುವ ಡ್ಯಾನ್ಸ್ ಕ್ಲಾಸ್‌ನಲ್ಲಿ ಕಲಿಯುತ್ತಿರುವ ಮೇಲ್ಜಾತಿ/ಶ್ರೀಮಂತ ಹುಡುಗಿ ಮತ್ತು ತಳ ಸಮುದಾಯದ/ಬಡ ಹುಡುಗನ ನಡುವಿನ ಪ್ರೀತಿ ಮರ್ಯಾದಾ ಹತ್ಯೆಯಲ್ಲಿ ಕೊನೆಯಾಗುವ ದೃಶ್ಯದೊಂದಿಗೆ ಕಥೆ ಒಂದಷ್ಟು ತೀವ್ರತೆ ಪಡೆಯುತ್ತದೆ. ನಾಯಕ ತನ್ನ ತಾಯಿಗೆ ಈ ವಿಚಾರ ತಿಳಿಸಿದಾಗ ತಾಯಿ ಮಾನಮ್ಮಳಿಗೆ ತನ್ನ ಮಗನ ಪ್ರೀತಿಗಿಂತ ತನ್ನ ಸ್ವಾಭಿಮಾನ ಮುಖ್ಯವಾಗುತ್ತದೆ. ಮಗನ ಭವಿಷ್ಯಕ್ಕಾಗಿ ತಾನು ಪೈಸೆಪೈಸೆ ಕೂಡಿಸಿ ಕೊಂಡುಕೊಂಡ ಜಮೀನನ್ನು ಮಾರುವ ಮಾನಮ್ಮ, ಈ ವಿಚಾರದಲ್ಲಿ ಮಾತ್ರ ಮಗನಿಗೆ ಷರತ್ತೊಂದನ್ನು ವಿಧಿಸುತ್ತಾಳೆ. ನಿನ್ನ ಪ್ರೀತಿಸಿದ ಹುಡುಗಿ ಮನೆಯವರು ನನ್ನ ಜಾತಿ ಪರಿಗಣಿಸದೆ ಸಮಾನವಾಗಿ ಸ್ವೀಕರಿಸಿದ್ದಾದರೆ ನಾನು ಈ ಮದುವೆಗೆ ಸಿದ್ಧ ಎಂದು ಹೇಳುತ್ತಾಳೆ. ಈ ಪ್ರಯತ್ನಕ್ಕೆ ಮುಂದಾಗುವ ನಾಯಕ ಸೋಲುತ್ತಾನೆ.

ಶೇಖರ್ ಕಮ್ಮುಲ, ಫ್ಯೂಡಲ್ ಜಾತಿಯ ಕುಟುಂಬದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಕಟ್ಟಿಕೊಟ್ಟಷ್ಟು ತೀವ್ರವಾಗಿ ಜಾತಿ ತಾರತಮ್ಯವನ್ನು ಕಟ್ಟಿಕೊಟ್ಟಿಲ್ಲ ಎಂಬ ಭಾವನೆ ಕೂಡ ಕೊನೆಗೆ ಉಳಿದುಕೊಳ್ಳುತ್ತದೆ. (ಕಥಾ ನಾಯಕಿ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ಅವರ ಜನಪ್ರಿಯತೆಯ ಕಾರಣಕ್ಕೂ ಇದು ಇರಬಹುದು). ಆದರೆ ತೆಲುಗು ಸಿನಿಮಾರಂಗದಲ್ಲಿ ಇಷ್ಟಾದರೂ ಚರ್ಚೆಮಾಡುವ ಮಾನವೀಯ ನೆಲೆಯಲ್ಲಿ ಚಲನಚಿತ್ರ ನಿರ್ದೇಶಿಸುವವರು ಇದ್ದಾರಲ್ಲ ಅನ್ನುವ ಕಾರಣಕ್ಕೆ ಶೇಖರ್ ಕಮ್ಮುಲ ಅಭಿನಂದನೀಯ.

ನಟಿಸುವ ಪಾತ್ರಕ್ಕೆ ಜೀವ ತುಂಬುವ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ದಕ್ಷಿಣ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾಗಿದ್ದು ಮಲೆಯಾಳಂ ಭಾಷೆಯ ’ಪ್ರೇಮಂ’ ಸಿನಿಮಾ ಮೂಲಕ. ’ಮಲರ್’ ಪಾತ್ರದಲ್ಲಿ ಅಷ್ಟು ಸಹಜವಾಗಿ ನಟಿಸಿದ ಸಾಯಿ ಪಲ್ಲವಿ ಇವತ್ತಿಗೂ ಸಿನಿಮಾ ಪ್ರೇಕ್ಷಕರಿಗೆ ’ಮಲರ್’. ತಾವು ನಟಿಸಿದ ಸರಿಸುಮಾರು ಎಲ್ಲ ಸಿನಿಮಾಗಳಲ್ಲಿ ಕಥಾ ನಾಯಕನ ಪಾತ್ರಕ್ಕಿಂತ ಸಾಯಿ ಪಲ್ಲವಿ ನಟಿಸಿದ ಪಾತ್ರ ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತದೆ. ಲವ್ ಸ್ಟೋರಿ ಸಿನಿಮಾದಲ್ಲಿಯೂ ಹಲವು ಕೊರತೆಗಳಿದ್ದರೂ, ಸಾಯಿ ಪಲ್ಲವಿ ತೆರೆಯ ಮೇಲೆ ಕಾಣಿಸುವ ದೃಶ್ಯಗಳಿಂದ ಈ ಕೊರತೆಗಳನ್ನು ಮರೆಯುವಂತೆ ಪ್ರೇಕ್ಷಕನನ್ನು ತನ್ನ ನಟನೆಯೆಡಗೆ ಎಳೆದುಕೊಳ್ಳುತ್ತಾರೆ.

ನಿರ್ದೇಶಕ ಶೇಖರ್ ಕಮ್ಮುಲ

ದ್ರಾವಿಡ ಭಾಷೆಗಳ ಬಗ್ಗೆ ಓದುವಾಗ ತೆಲುಗು ಭಾಷೆಯಲ್ಲಿ ಸ್ತ್ರೀವಾಚಕಗಳನ್ನು ಹೇಗೆ ಸಂಬೋಧಿಸಲಾಗುತ್ತದೆ ಎಂಬುದು ಸೋಜಿಕವೆನಿಸಿತ್ತು. ಸ್ತ್ರೀವಾಚಕಗಳನ್ನು ’ಅದಿ’, ’ಇದಿ’ (ಅದು, ಇದು) ಎಂದು ವಸ್ತುಗಳ ರೀತಿ ಸಂಬೋಧಿಸಲಾಗುತ್ತದೆ (ಕರ್ನಾಟಕದಲ್ಲಿಯೂ ಈ ಬಳಕೆಯನ್ನು ಹಲವೆಡೆ ಕಾಣಬಹುದು). ತೆಲುಗು ಸಮಾಜಕ್ಕೆ
ಇದನ್ನು ಸಾಮಾನ್ಯೀಕರಿಸಲು ನನ್ನ ಅಧ್ಯಯನದ ಕೊರತೆಯಿದ್ದರೂ, ತೆಲುಗು ಸಿನಿಮಾ ಮತ್ತು ತೆಲುಗು ಸಿನಿಮಾರಂಗ ನಿಸ್ಸಂಶಯವಾಗಿ ಪುರುಷಪ್ರಧಾನವಾದದ್ದು ಎನ್ನಬಹುದು (ಕನ್ನಡ ಚಿತ್ರರಂಗವನ್ನೂ ಸೇರಿದಂತೆ, ಬಹುತೇಕ ಭಾರತೀಯ ಚಿತ್ರರಂಗಗಳಿಗೂ ಇದು ಅನ್ವಯಿಸುತ್ತದೆ). ಇಲ್ಲಿ ಕಥಾನಾಯಕಿ ಪಾತ್ರ ಸೃಷ್ಟಿ ಮಾಡೋದೇ ಕಥಾನಾಯಕನ ಹಿರೋಹಿಸಂನ್ನು ವಿಜೃಂಭಿಸುವುದಕ್ಕೆ. ಇದಕ್ಕೆ ಉದಾಹರಣೆಗಳು ದಂಡಿಯಾಗಿ ಸಿಗುತ್ತವೆ. ಬಹುಸಂಖ್ಯಾತ ಪ್ರಧಾನಧಾರೆಯ ತೆಲುಗು ಸಿನಿಮಾಗಳನ್ನು ಗಮನಿಸಿದರೆ ಒಂದು ಗಟ್ಟಿಯಾದ ಮಹಿಳಾ ಪಾತ್ರ ಸಿಗುವುದೂ ಕಷ್ಟ. ಹೆಣ್ಣು ಪಾತ್ರಗಳಿಗೆ ಅಲ್ಲಿ ಹೆಚ್ಚು ಸ್ಪೇಸ್ ಇಲ್ಲವೇ ಇಲ್ಲ.

ಶೇಖರ್ ಕಮ್ಮುಲ ಸಿನಿಮಾಗಳು ಇದಕ್ಕೆ ಅಪವಾದ ಎನ್ನಬಹುದು. ತಮ್ಮ ಮೊದಲ ಸಿನಿಮಾ ’ಆನಂದ್’ನಿಂದ ’ಗೋದಾವರಿ’, ’ಹ್ಯಾಪಿಡೇಸ್’, ’ಲೀಡರ್’, ’ಫಿದಾ’ ಈ ಎಲ್ಲಾ ಸಿನಿಮಾಗಳಲ್ಲೂ ಸಾಂಪ್ರದಾಯಿಕ ಗಂಡು ನೋಟವನ್ನು ಪ್ರಶ್ನೆ ಮಾಡಿದ, ಹೆಣ್ಣಿನ ಸ್ವತಂತ್ರ ಅಲೋಚನೆಗೆ ಒತ್ತಾಸೆಯಾದ ಮತ್ತು ಅಂತಹ ಪಾತ್ರಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದನ್ನು ಕಾಣಬಹುದು. ಸಾಯಿ ಪಲ್ಲವಿ ನಟಿಸಿದ ’ಫಿದಾ’ದಲ್ಲಿ ಕಥಾ ನಾಯಕಿ ಮದುವೆ ಆದ ಮೇಲೆ ಗಂಡನ ಮನೆಗೆ ಏಕೆ ಹೋಗಬೇಕು, ಅವಳು ತನ್ನ ಹೆತ್ತವರ ಬಳಿ ಇರುವುದು ಅನಿವಾರ್ಯ ಅದಾಗ ಗಂಡನೇ ನನ್ನ ಬಳಿ ಏಕೆ ಬಂದಿರಬಾರದು ಎಂದು ಪ್ರಶ್ನಿಸುತ್ತಾಳೆ. ಶೇಖರ್ ಕಮ್ಮುಲ ಸಿನಿಮಾಗಳನ್ನ ಸ್ತ್ರೀವಾದದ ಆಳವಾದ ವಿಮರ್ಶೆಗೆ ಒಳಪಡಿಸಿದರೆ ಅಲ್ಲೂ ಸಾಕಷ್ಟು ಕೊರತೆಗಳು. ಮೇಲ್ಪದರದ ಗ್ರಹಿಕೆಗಳು, ಪೂರ್ವಗ್ರಹಗಳು ಎಲ್ಲವೂ ಬಹಳಷ್ಟು ಸಿಗುತ್ತವೆ. ಉದಾಹರಣೆಗೆ ಲವ್ ಸ್ಟೋರಿ ಸಿನಿಮಾವನ್ನೆ ನೋಡುವುದಾದರೆ, ತನ್ನ ಮನೆಯವರ ವಿರೋಧದಿಂದ ದುಡಿಯಲು ನಗರಕ್ಕೆ ಹೋಗುವ ನಾಯಕಿ ಸಂಪಾದಿಸಿದ ಹಣವನ್ನು ನೀಡುವುದು ಕುಡುಕ ಮತ್ತು ಬೇಜವ್ದಾರಿ ತಂದೆಗೆ. ಕಥಾ ನಾಯಕಿಗೆ ಯಾವ ಯಜಮಾನಿಕೆಯಿಂದ ಉಸಿರುಗಟ್ಟಿರುತ್ತದೊ ಅದೇ ಯಜಮಾನಿಕೆಯನ್ನು ಪೋಷಿಸುತ್ತದೆ ಈ ದೃಶ್ಯ. ಈ ತರಹದ ದೃಶ್ಯಗಳು ಶೇಖರ್ ಅವರ ಎಲ್ಲಾ ಸಿನಿಮಾಗಳಲ್ಲೂ ಸಾಮಾನ್ಯವಾಗಿ ಇರುತ್ತವೆ. ಆದರೆ, ಬಹಳ ನೇರಾನೇರ ಪುರುಷ ಯಜಮಾನಿಕೆ ಮತ್ತು Misogynyಗಳನ್ನು ಸಮಾಜದ ಮೌಲ್ಯಗಳು ಎಂದು ಪ್ರದರ್ಶನ ಮಾಡುವ ತೆಲುಗು ಸಿನಿಮಾಗಳ ನಡುವೆ ಶೇಖರ್ ಮಾನವೀಯವಾಗಿ ಕಾಣಿಸುತ್ತಾರೆ.

ತಮಿಳು ಚಿತ್ರರಂಗದಲ್ಲಿ ಪ ರಂಜಿತ್, ಮಾರಿ ಸೆಲ್ವರಾಜ್‌ರಂತಹ ನಿರ್ದೇಶಕರು ಜಾತಿ ಶೋಷಣೆಯ ವಿಷಯಗಳ ಚಲನಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾದ ಉದಾಹರಣೆಗಳಿಂದ ಅಕ್ಕಪಕ್ಕದ ರಾಜ್ಯದಲ್ಲಿಯೂ ಹಲವು ನಿರ್ದೇಶಕರಿಗೆ ಇದು ಸ್ಫೂರ್ತಿಯಾಗಿರಬಹುದು. ಶೇಖರ್ ಲವ್ ಸ್ಟೋರಿಯತಂಹ ಸಿನಿಮಾಗಳನ್ನು ಹೆಚ್ಚೆಚ್ಚು ಮಾಡಲಿ. ಅವುಗಳು ಇನ್ನಷ್ಟು ಆಳವಾದ ಅಧ್ಯಯನಗಳಿಂದ, ಒಳನೋಟಗಳಿಂದ ಕೂಡಿ, ದೃಶ್ಯ ಮಾಧ್ಯಮದ ಸಾಧ್ಯತೆಯನ್ನು ಹೆಚ್ಚು ದುಡಿಸಿಕೊಂಡು ಇನ್ನಷ್ಟು ತೀವ್ರವಾಗಿ ಬೆಳ್ಳಿಪರದೆ ಮೇಲೆ ಪ್ರದರ್ಶನಗೊಳ್ಳಲಿ, ಇವು ತೆಲುಗು ಸಿನಿಮಾ ಇಂಡಸ್ಟ್ರಿಗೆ ಮಾದರಿಯಾಗಲಿ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...