ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್ಪಿಜಿ ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ ಇಲ್ಲ, ಎಲ್ಪಿಜಿ ಒದಗಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಲೇ ಬಂದಿರುವ ಸರ್ಕಾರಗಳು ಸಹ ಸಮಸ್ಯೆಯನ್ನು ಮುಚ್ಚಿಡುವಲ್ಲಿ ಸೋತಿವೆ.
ಇದೀಗ ಮುಂದಿನ ಏಳರಿಂದ ಹತ್ತು ದಿನಗಳವರೆಗೆ ವಿದ್ಯುತ್ ಅಥವಾ ಇಂಡಕ್ಷನ್ ಸ್ಟೌವ್ಗಳನ್ನು ಬಳಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಎಲ್ಪಿಜಿ ಕೊರತೆ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಮುನಿಯಪ್ಪ, ಹೋಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ಗಳನ್ನು ಪೂರೈಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. “ಆಸ್ಪತ್ರೆಗಳು ಮತ್ತು ಹಾಸ್ಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ಗಳನ್ನು ಆದ್ಯತೆಯ ಮೇರೆಗೆ ವಿತರಿಸಲಾಗುತ್ತಿದೆ. ಅವರ ಮೆನುವನ್ನು ನಿರ್ಬಂಧಿಸಲು ನಾವು ಅವರನ್ನು ಕೇಳಿದ್ದೇವೆ. ತೈಲ ಕಂಪನಿಗಳು ತಮ್ಮ ಸ್ಟಾಕ್ ಸೀಮಿತವಾಗಿದೆ ಎಂದು ನಮಗೆ ತಿಳಿಸಿವೆ” ಎಂದು ಸಚಿವರು ಹೇಳಿದ್ದಾರೆ.
ಅನಿಲ ತುಂಬಿದ ಎರಡು ಹಡಗುಗಳು ಭಾರತಕ್ಕೆ ಬಂದಿವೆ ಎಂದು ಒಪ್ಪಿಕೊಂಡ ಮುನಿಯಪ್ಪ, ಹಾರ್ಮುಜ್ ಜಲಸಂಧಿಯಲ್ಲಿ ಇನ್ನೂ 10-12 ಹಡಗುಗಳು ಸಿಕ್ಕಿಹಾಕಿಕೊಂಡಿವೆ ಎಂದು ಹೇಳಿದ್ದಾರೆ “ಅವು ನಮ್ಮ ತೀರವನ್ನು ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ, ನಾವು ನಮ್ಮಲ್ಲಿರುವದನ್ನು ನಿಭಾಯಿಸಬೇಕು” ಎಂದು ಮನವಿ ಮಾಡಿದ್ದಾರೆ.
ಆಟೋ ಎಲ್ಪಿಜಿ ಕುರಿತ ಕಳವಳಗಳಿಗೆ ಪ್ರತಿಕ್ರಿಯಿಸಿದ ಮುನಿಯಪ್ಪ, ಇಂಧನದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳನ್ನು ಕೇಳಲಾಗಿದೆ ಎಂದು ಹೇಳಿದ್ದಾರೆ.


