ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಾ ವಿಷಯವಾಗಿದೆ.
ಹುಟ್ಟುಹಬ್ಬ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಬರುತ್ತಿದ್ದಾಗ ನಡೆದ ಈ ಘಟನೆಯ ಹಿಂದೆ ಸಂಚು ಅಡಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಉನೈಝ್ ಖಾನ್ ಎಂಬ ಬಾಲಕ ಕಾರಿನೊಳಗೆ ಇಟ್ಟಿದ್ದ ಪಿಸ್ತೂಲನ್ನು ಕೈಗೆತ್ತಿಕೊಂಡು, ಅದರಲ್ಲಿ ಆಟವಾಡಲು ಪ್ರಾರಂಭಿಸಿದಾಗ ಆಕಸ್ಮಿಕವಾಗಿ ಗುಂಡು ಹಾರಿದ್ದು. ಇದರಿಂದ ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗ್ತಿದೆ.
ಆದರೆ, ಆತನ ತಂದೆ ಆಕಸ್ಮಿಕ ಸಾವಿನ ವರದಿಯನ್ನು ತಳ್ಳಿ ಹಾಕಿದ್ದಾರೆ. ತನ್ನ ಮಗನನ್ನು ಆತನ ಸ್ನೇಹಿತರೇ ಮನೆಯಿಂದ ಹೊರಗೆ ಕರೆದೊಯ್ದು, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹುಟ್ಟುಹಬ್ಬದ ಪಾರ್ಟಿಗೆ ಹೋಗೋಣ ಎಂದು ನೆಪವೊಡ್ಡಿ ಉನೈಝ್ನನ್ನು ಆತನ ಸ್ನೇಹಿತರು ಮನೆಯಿಂದ ಕರೆದೊಯ್ದಿದ್ದರು. ಇದು ಆಕಸ್ಮಿಕವಲ್ಲ ಸಾವಲ್ಲ, ಸಂಚು ರೂಪಿಸಿ ನಡೆಸಿದ ಕೃತ್ಯ ಎಂದು ಉನೈಝ್ ತಂದೆ ಆರೋಪ ಮಾಡಿದ್ದಾರೆ.
ಆರಂಭದಲ್ಲಿ ಉನೈಝ್ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಎಂದು ಕುಟುಂಬಸ್ಥರಿಗೆ ಹೇಳಲಾಗಿತ್ತು. ಅವರು ಗಾಬರಿಯಿಂದ ಆಸ್ಪತ್ರೆಗೆ ಧಾವಿಸಿದಾಗ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿತ್ತು. ನಂತರ, ಆತ ಗುಂಡೇಟಿಗೆ ಬಲಿಯಾಗಿರುವ ವಿಚಾರ ಪೋಷಕರಿಗೆ ಗೊತ್ತಾಗಿದೆ ಎಂದು ಕೆಲ ವರದಿಗಳು ಹೇಳಿವೆ.
ಪ್ರಕರಣದ ತನಿಖೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನೊಳಗೆ ಲೋಡ್ ಮಾಡಲಾದ ಪಿಸ್ತೂಲ್ ಹೇಗೆ ಬಂತು ಮತ್ತು ಅದು ಯಾರ ಹೆಸರಿನಲ್ಲಿ ಪರವಾನಗಿ ಹೊಂದಿದೆ ಎಂಬುದನ್ನು ಪತ್ತೆಹಚ್ಚಲಾಗಿದೆ. ನಿರ್ಲಕ್ಷ್ಯತನದಿಂದ ಶಸ್ತ್ರಾಸ್ತ್ರವನ್ನು ಅಸುರಕ್ಷಿತವಾಗಿ ಬಿಟ್ಟಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ಎಂದು ಕುಟುಂಬಕ್ಕೆ ತಪ್ಪು ಮಾಹಿತಿ ನೀಡಿದ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಉನೈಝ್ ಅನ್ನು ಮನೆಯಿಂದ ಕರೆದೊಯ್ದಿದ್ದ ಆತನ ಸ್ನೇಹಿತರನ್ನು ಮತ್ತು ಪಾರ್ಟಿ ನಡೆದ ಸ್ಥಳದಲ್ಲಿದ್ದ ಕೆಲವು ವ್ಯಕ್ತಿಗಳನ್ನು ಈಗಾಗಲೇ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಿಸ್ತೂಲ್ ಪತ್ತೆಯಾದ ಕಾರಿನ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಶಸ್ತ್ರಾಸ್ತ್ರವನ್ನು ಸುರಕ್ಷಿತವಾಗಿ ಇಡದ ಕಾರಣಕ್ಕೆ ಇವರ ಮೇಲೆ ಗಂಭೀರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಪಾರ್ಟಿ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಯ ಸಮಯದಲ್ಲಿ ಅಲ್ಲಿ ಯಾರಿದ್ದರು ಎಂಬ ಪಟ್ಟಿಯನ್ನು ಸಿದ್ಧಪಡಿಸಿ ಬಂಧನ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದು ವರದಿಗಳು ವಿವರಿಸಿವೆ.


