Homeಕರ್ನಾಟಕಮಹಾರಾಷ್ಟ್ರಕ್ಕೂ ಕಾಲಿಟ್ಟ ಲಂಪಿ ವೈರಸ್‌; ಜಾನುವಾರುಗಳ ಸರಣಿ ಸಾವು; ಎಚ್ಚೆತ್ತುಕೊಂಡಿದೆಯೇ ಕರ್ನಾಟಕ ಸರ್ಕಾರ?

ಮಹಾರಾಷ್ಟ್ರಕ್ಕೂ ಕಾಲಿಟ್ಟ ಲಂಪಿ ವೈರಸ್‌; ಜಾನುವಾರುಗಳ ಸರಣಿ ಸಾವು; ಎಚ್ಚೆತ್ತುಕೊಂಡಿದೆಯೇ ಕರ್ನಾಟಕ ಸರ್ಕಾರ?

- Advertisement -
- Advertisement -

ಮಹಾರಾಷ್ಟ್ರದಲ್ಲಿ ಲಂಪಿ ವೈರಸ್‌ನಿಂದ 126 ಜಾನುವಾರುಗಳು ಸಾವನ್ನಪ್ಪಿವೆ. ಇಲ್ಲಿನ 25 ಜಿಲ್ಲೆಗಳು ಸೋಂಕಿಗೆ ಒಳಗಾಗಿವೆ ಎಂದು ರಾಜ್ಯದ ಪಶುಸಂಗೋಪನಾ ಇಲಾಖೆ ಶನಿವಾರ ಮಾಹಿತಿ ನೀಡಿದೆ.

“ಜಲಗಾಂವ್ ಜಿಲ್ಲೆಯಲ್ಲಿ 47, ಅಹ್ಮದ್‌ನಗರ ಜಿಲ್ಲೆಯಲ್ಲಿ 21, ಧುಲೆಯಲ್ಲಿ 2, ಅಕೋಲಾದಲ್ಲಿ 18, ಪುಣೆಯಲ್ಲಿ 14, ಲಾತೂರ್‌ನಲ್ಲಿ 2, ಸತಾರಾದಲ್ಲಿ 6, ಬುಲ್ಧಾನದಲ್ಲಿ 5, ಅಮರಾವತಿಯಲ್ಲಿ 7, ಸಾಂಗ್ಲಿ, ವಾಶಿಮ್‌, ಜಲ್ನಾ ಮತ್ತು ನಾಗ್ಪುರ ಜಿಲ್ಲೆಯಲ್ಲಿ ಒಂದೊಂದು ಪ್ರಕರಣ ಸೇರಿದಂತೆ ಒಟ್ಟು 126 ಸೋಂಕಿತ ಪ್ರಾಣಿಗಳು ಸಾವನ್ನಪ್ಪಿವೆ” ಎಂದು ಪ್ರಕಟಣೆ ತಿಳಿಸಿದೆ.

ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ವೇಗವಾಗಿ ಹರಡುತ್ತಿದ್ದರೂ, ಇದು ಪ್ರಾಣಿಗಳಿಂದ ಅಥವಾ ಹಸುವಿನ ಹಾಲಿನ ಮೂಲಕ ಮನುಷ್ಯರಿಗೆ ಹರಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಹಾರಾಷ್ಟ್ರ ರಾಜ್ಯದಾದ್ಯಂತ ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ವೇಗವಾಗಿ ಹರಡುತ್ತಿದೆ. ಇದು ಹಸುವಿನ ಚರ್ಮದ ವೈರಲ್ ಕಾಯಿಲೆಯಾಗಿದೆ. ಈ ರೋಗವು ಪ್ರಾಣಿಗಳಿಂದ ಅಥವಾ ಹಸುವಿನ ಹಾಲಿನಿಂದ ಮನುಷ್ಯರಿಗೆ ಹರಡುವುದಿಲ್ಲ” ಎಂದು ಮಹಾರಾಷ್ಟ್ರ ಪಶುಸಂಗೋಪನಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಸರಕಾರದ ಪರವಾಗಿ ಐಎಎಸ್‌ ಅಧಿಕಾರಿ ಸಚೀಂದ್ರ ಪ್ರತಾಪ್‌ ಸಿಂಗ್‌ ಮನವಿ ಮಾಡಿದ್ದು, “ರೋಗವು ಹಸು, ರಾಸುಗಳಿಗೆ ಮಾತ್ರ ಹರಡಿದ್ದು, ಝೂನೋಟಿಕ್ ಆಗಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.

ಪರಿಸ್ಥಿತಿಯನ್ನು ಎದುರಿಸಲು ಮಾಡಲಾಗುತ್ತಿರುವ ವ್ಯವಸ್ಥೆಗಳ ಬಗ್ಗೆ ಅವರು ಮತ್ತಷ್ಟು ಮಾಹಿತಿ ನೀಡಿದ್ದಾರೆ. ಪಶುಸಂಗೋಪನಾ ಇಲಾಖೆ ಪ್ರಕಾರ, ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಖರೀದಿಸಲು ಪ್ರತಿ ಜಿಲ್ಲೆಗೆ ₹ 1 ಕೋಟಿ ರೂ ನೀಡಲಾಗುತ್ತಿದೆ. ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ (MAFSU) ವ್ಯಾಕ್ಸಿನೇಟರ್‌ಗಳು ಮತ್ತು ಇಂಟರ್ನ್‌ಗಳಿಗೆ ಪ್ರತಿ ಲಸಿಕೆಗೆ ₹ 3 ಗೌರವಧನವನ್ನೂ ನೀಡಲಾಗುತ್ತಿದೆ.

“ಸರ್ಕಾರಿ ಪಶುವೈದ್ಯಾಧಿಕಾರಿಗಳು ಮತ್ತು ಖಾಸಗಿ ವೈದ್ಯರು ಎಂಎಎಫ್‌ಎಸ್‌ಯು ಚಿಕಿತ್ಸಾ ಕಾರ್ಯಸೂಚಿಯಂತೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಲ್ಲಿನ ಯಾವುದೇ ರೋಗಲಕ್ಷಣಗಳ ಬಗ್ಗೆ ಹತ್ತಿರದ ಸರ್ಕಾರಿ ಜಾನುವಾರು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಬೇಕು” ಎಂದು ಸೂಚಿಸಲಾಗಿದೆ.

ಇದನ್ನೂ ಓದಿರಿ: ನೆರೆರಾಜ್ಯಗಳಲ್ಲಿಯೂ ಹೈನುಗಾರಿಕೆ ಬಿಕ್ಕಟ್ಟಿನಲ್ಲಿ…

ಪಶುಸಂಗೋಪನಾ ಇಲಾಖೆಯ ಆಯುಕ್ತರು ಪ್ರತಿಕ್ರಿಯೆ ನೀಡಿದ್ದು, “ಪ್ರಾಣಿಗಳಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕೆಂದು ‘ಪ್ರಾಣಿಗಳ ಅಧಿನಿಯಮ, 2009’ರ ಪ್ರಕಾರ ನಿರ್ದೇಶಿಸಲಾಗಿದೆ” ಎಂದಿದ್ದಾರೆ.

ನೊಣಗಳು, ಸೊಳ್ಳೆಗಳು, ಉಣ್ಣಿಗಳ ಮೂಲಕ ರೋಗ ಹರಡುವುದರಿಂದ ಕೀಟನಾಶಕಗಳ ಸಿಂಪಡಣೆ ಮಾಡುವಂತೆ ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆಯು ಗ್ರಾಮ-ಪಂಚಾಯತ್‌ಗಳಿಗೆ ಆದೇಶಿಸಿದೆ.

ತಿಂಗಳ ಹಿಂದೆಯೇ ಕಾಣಿಸಿಕೊಂಡಿತ್ತು ಲಂಪಿ ಹಾವಳಿ

ಆಗಸ್ಟ್ ತಿಂಗಳಲ್ಲಿಯೇ ಲಂಪಿ ವೈರಸ್‌ ಹಾವಳಿ ಕಾಣಿಸಿಕೊಂಡಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ತಗುಲಿರುವ ಕುರಿತು ವರದಿಯಾಗಿದ್ದವು.

“ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಂಟು ರಾಜ್ಯಗಳಲ್ಲಿ 7,300 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಸೋಂಕನ್ನು ತಡೆಗಟ್ಟಲು ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಆಗಸ್ಟ್‌ 21ರಂದು ‘ದಿ ಹಿಂದೂ’ ವರದಿ ಮಾಡಿತ್ತು.

ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ಜಾನುವಾರುಗಳನ್ನು ಬಾಧಿಸುವ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದೆ. ಈ ವೈರಸ್‌ನಿಂದಾಗಿ ಜಾನುವಾರುಗಳು ಜ್ವರಕ್ಕೆ ತುತ್ತಾಗುತ್ತವೆ. ಚರ್ಮದ ಮೇಲೆ ಗಂಟುಗಳು ಮೂಡುತ್ತವೆ.

ಎಲ್‌ಎಸ್‌ಡಿ ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯ ಮತ್ತು ಯುರೋಪ್‌ ದೇಶಗಳಲ್ಲಿ ಏಕಾಏಕಿ ಹರಡಿತು. ನಂತರ ಏಷ್ಯಕ್ಕೆ ಕಾಲಿಟ್ಟಿತು. ಜುಲೈ 2019ರಲ್ಲಿ ಬಾಂಗ್ಲಾದೇಶದಲ್ಲಿ ಈ ರೋಗವು ಪತ್ತೆಯಾಗಿತ್ತು.

2019ರಲ್ಲಿ ಭಾರತದಲ್ಲಿಯೂ ಎಲ್‌ಎಸ್‌ಡಿ ವರದಿಯಾಗಿತ್ತು. ಪೂರ್ವ ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಎಲ್ಎಸ್‌ಡಿ ಮೊದಲ ಪ್ರಕರಣ ವರದಿಯಾಯಿತು. ಆದರೆ ಈ ವರ್ಷ ಪಶ್ಚಿಮ ಮತ್ತು ಉತ್ತರ ರಾಜ್ಯಗಳಲ್ಲಿ, ಅಂಡಮಾನ್ ನಿಕೋಬಾರ್‌ನಲ್ಲಿ ಈ ರೋಗ ವರದಿಯಾಗಿದೆ ಎಂದು ‘ದಿ ಹಿಂದೂ’ ವರದಿ ತಿಳಿಸಿತ್ತು.

“ಮೊದಲಿಗೆ ಗುಜರಾತ್‌ನಲ್ಲಿ ಎಲ್‌ಎಸ್‌ಡಿ ವರದಿಯಾಗಿದೆ. ಇದು ಈಗ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹರಡಿದೆ. ಇದುವರೆಗೆ 1.85 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಬಾಧಿತವಾಗಿವೆ. ಜುಲೈನಲ್ಲಿ ರೋಗ ಹರಡಿದ ನಂತರ 7,300ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ” ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದರು.

ಪಂಜಾಬ್‌ನಲ್ಲಿ ಇದುವರೆಗೆ ಸುಮಾರು 74,325 ಜಾನುವಾರುಗಳು ಬಾಧಿತವಾಗಿದ್ದರೆ, ಗುಜರಾತ್‌ನಲ್ಲಿ 58,546, ರಾಜಸ್ಥಾನದಲ್ಲಿ 43,962, ಜಮ್ಮು ಮತ್ತು ಕಾಶ್ಮೀರದಲ್ಲಿ 6,385, ಉತ್ತರಾಖಂಡದಲ್ಲಿ 1,300, ಹಿಮಾಚಲ ಪ್ರದೇಶದಲ್ಲಿ 532, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ 260 ಜಾನುವಾರುಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದರು.

ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗೆ (ಆಗಸ್ಟ್‌ವರೆಗೆ) 7,300 ಜಾನುವಾರುಗಳು ಸಾವನ್ನಪ್ಪಿವೆ. ಪಂಜಾಬ್‌ನಲ್ಲಿ 3,359, ರಾಜಸ್ಥಾನದಲ್ಲಿ 2,111, ಗುಜರಾತ್‌ನಲ್ಲಿ 1,679, ಜಮ್ಮು ಮತ್ತು ಕಾಶ್ಮೀರದಲ್ಲಿ 62, ಹಿಮಾಚಲ ಪ್ರದೇಶದಲ್ಲಿ 38, ಉತ್ತರಾಖಂಡದಲ್ಲಿ 36 ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ 29 ಪ್ರಾಣಿಗಳು ಸಾವನ್ನಪ್ಪಿವೆ. ಹರಿಯಾಣದಲ್ಲೂ ಎಲ್‌ಎಸ್‌ಡಿ ಸೋಂಕಿನ ವರದಿಗಳಿವೆ.

ಕರ್ನಾಟಕದಲ್ಲಿ ಮುಂಜಾಗ್ರತೆ ವಹಿಸಲಾಗಿದೆಯೇ?

“ಕರ್ನಾಟಕದಲ್ಲಿ ಎಲ್‌ಎಸ್‌ಡಿ ಸೋಂಕಿಗೆ ಸಂಬಂಧಿಸಿದಂತೆ ಯಾವುದಾದರೂ ಕ್ರಮ ಜರುಗಿಸಲಾಗಿದೆಯೇ?” ಎಂಬ ಪ್ರಶ್ನೆ ಮೂಡಿದೆ. ರಾಜ್ಯದ ಪರಿಸ್ಥಿತಿಯ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಮೈಸೂರು ಜಿಲ್ಲೆಯ ವೈದ್ಯಾಧಿಕಾರಿ ಡಾ.ಮಹೇಶ್‌ಕುಮಾರ್‌, “ಸಾಮಾನ್ಯವಾಗಿ ಈ ರೀತಿಯ ಪ್ರಕರಣಗಳು ವರದಿಯಾದಾಗ, ಗಡಿ ಜಿಲ್ಲೆಗಳಲ್ಲಿ, ಚೆಕ್‌ ಪೋಸ್ಟ್‌ಗಳಲ್ಲಿ ಎಚ್ಚರ ವಹಿಸಲಾಗುತ್ತದೆ. ಯಾವುದೇ ಜಾನುವಾರು ಗಡಿ ದಾಟದಂತೆ ನೋಡಿಕೊಳ್ಳಲಾಗುತ್ತದೆ. ಕೋವಿಡ್‌ ಹರಡಿದ ಸಂದರ್ಭದಲ್ಲಿ ಈ ಸೋಂಕು ಕಾಣಿಸಿಕೊಂಡಿತು. ಮುಂಜಾಗ್ರತೆ ಅಗತ್ಯವಿದೆ. ಸೋಂಕಿನ ಲಕ್ಷಣಗಳು ಕಂಡ ತಕ್ಷಣ ವೈದ್ಯರಿಗೆ ತಿಳಿಸಬೇಕು” ಎಂದು ರೈತರಿಗೆ ಮನವಿ ಮಾಡಿದರು.

“ಜಾನುವಾರುಗಳಿಗೆ ಕಾಯಿಲೆಗಳು ಬಂದಾಗ ರೈತರು ಕೆಲವೊಮ್ಮೆ ನಾಟಿ ಔಷಧಿ ಕೊಡಿಸಿ, ಮೂರ್ನಾಲ್ಕು ದಿನಗಳ ನಂತರ ನಮ್ಮ ಬಳಿ ಬರುತ್ತಾರೆ. ಎಲ್‌ಎಸ್‌ಡಿ ಸೋಂಕಿಗೆ ನಿರ್ದಿಷ್ಟ ವಾಕ್ಸಿನ್‌ ನಮ್ಮಲ್ಲಿ ಲಭ್ಯವಾಗಿಲ್ಲ. ಆದರೆ ಈಗ ನೀಡಲಾಗುತ್ತಿರುವ ವಾಕ್ಸಿನ್‌, ಈ ಕಾಯಿಲೆಗೆ ಕೊಂಚ ಹತ್ತಿರದ ಸಂಬಂಧ ಹೊಂದಿರುವ ಲಸಿಕೆಯಾಗಿದೆ. ಈ ಲಸಿಕೆಯನ್ನು ನೀಡುವ ಮೂಲಕವೂ ಒಂದಿಷ್ಟು ಸೋಂಕು ತಡೆಗಟ್ಟಲಾಗುತ್ತಿದೆ. ಆರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಿದರೆ ಜಾನುವಾರುಗಳು ಗುಣಮುಖವಾಗಬಹುದು” ಎಂದರು.

ಇದನ್ನೂ ಓದಿರಿ: ಗೋವು ಸಾಕಣೆಯ ಗೋಳು ಕೇಳುವವರ್‍ಯಾರು? ಇದು ಹೈನುಗಾರಿಕೆಯ ಕಥೆ-ವ್ಯಥೆ!

ಪಶುವೈದ್ಯಾಧಿಕಾರಿ ಟಿ.ಎಸ್.ರಮಾನಂದ್ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಬೇರೆ ದೇಶಗಳಲ್ಲಿ ವಾಕ್ಸಿನ್ ಅಭಿವೃದ್ಧಿಪಡಿಸಿದ್ದಾರೆ. ಮೇಕೆಗೆ ತಗುಲುವ ಪೋಕ್ಸ್‌ ವೈರಾಣುವಿಗೆ ಸಂಬಂಧಿಸಿದಂತೆ ನೀಡುವ ಲಸಿಕೆಯನ್ನು ನಮ್ಮಲ್ಲಿ ಕೆಲವು ಕಡೆ ಬಳಸುತ್ತಿದ್ದಾರೆ. ಎಲ್‌ಎಸ್‌ಡಿ ಹದಿನೈದು ದಿನ ಹರಡಿ ನಂತರ ಕಡಿಮೆಯಾಗುತ್ತದೆ. ಆದರೆ ಜಾನುವಾರುಗಳು ಸಾಯುತ್ತಿರುವುದು ನಮ್ಮ ದುರ್ದೈವ” ಎಂದು ವಿಷಾದಿಸಿದರು.

“ರೈತರು ಎಚ್ಚರಿಕೆ ವಹಿಸಬೇಕು. ಯಾವುದಾದರೂ ಒಂದು ಜಾನುವಾರಿಗೆ ಈ ಕಾಯಿಲೆ ಕಾಣಿಸಿಕೊಂಡ ತಕ್ಷಣ ಐಸೊಲೇಷನ್‌ ಮಾಡಬೇಕು. ಆರೋಗ್ಯವಂತ ಜಾನುವಾರುಗಳನ್ನು ಬೇರೆಡೆ ಇರಿಸಿಬೇಕು. ಕೊಟ್ಟಿಗೆಯನ್ನು ಶುಚಿಗೊಳಿಸಬೇಕು” ಎಂದು ಸಲಹೆ ನೀಡಿದರು.

“ನಮ್ಮ ವೈದ್ಯರು ನೀಡುವ ಮಾಹಿತಿ ಪ್ರಕಾರ ಜಾಗೃತಿ ಮೂಡಿಸುವ ಕೆಲಸಗಳಾಗುತ್ತಿವೆ. ಸೋಂಕು ಕಾಣಿಸಿಕೊಂಡ ಜಾನುವಾರುಗಳನ್ನು ಬೇರೆಡೆ ಇರಿಸಲು ಸೂಚನೆಗಳನ್ನು ನೀಡುತ್ತಿದ್ದಾರೆ” ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...