ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕ ಭಾಗದ ಜನತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ಈಗ ಬೆಂಗಳೂರಿನಲ್ಲಿ ರೈತರು ನಡೆಸಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಮಹಾರಾಷ್ಟ್ರದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಮಹಾರಾಷ್ಟ್ರಕ್ಕೆ ನೀರು ಬಿಡುವ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೆ ಕರ್ನಾಟಕದ ಅಣೆಕಟ್ಟೆಗಳಿಂದ ಇಲ್ಲಿಗೆ ನೀರು ಬಿಡಲಾಗುವುದು ಎಂದು ಸಿಎಂ ಯಡಿಯೂರಪ್ಪ ನಿನ್ನೆ ಚುನಾವಣಾ ಪ್ರಚಾರದಲ್ಲಿ ಹೇಳಿದ್ದು ವಿವಾದಕ್ಕೆ ಒಳಗಾಗಿತ್ತು.
ಮಹಾರಾಷ್ಟ್ರಕ್ಕೆ ತುಬ್ಸಿ ಏತ ನೀರಾವರಿ ಯೋಜನೆ ಮೂಲಕ ಬೋರ್ಚಿ ನದಿಗೆ ನೀರು ಬಿಡುವುದಾಗಿ ಹೇಳಿದ್ದ ಮಾತನ್ನು ಕಲಬುರ್ಗಿಯಲ್ಲಿ ಸಿಎಂ ಬಿಎಸ್ ವೈ ಸಮರ್ಥಿಸಿಕೊಂಡರು. ಮಹಾರಾಷ್ಟ್ರಕ್ಕೆ ನೀರು ಬಿಡುವುದು ರಾಜಕೀಯ ಗಿಮಿಕ್ ಅಲ್ಲ. ಬೇಸಿಗೆಯಲ್ಲಿ ಕೃಷ್ಣಾ, ಭೀಮಾ ನದಿಗೆ 4 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಅದಕ್ಕೆ ಪ್ರತಿಯಾಗಿ ತುಬ್ಸಿ ಏತ ನೀರಾವರಿ ಮೂಲಕ ಬೋರ್ಚಿ ನದಿಗೆ 4 ಟಿಎಂಸಿ ನೀರು ಬಿಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
‘ನಾನು ಚುನಾವಣಾ ಪ್ರಚಾರದ ವೇಳೆ ನೀಡಿರುವ ಹೇಳಿಕೆ ರಾಜಕೀಯವಲ್ಲ. ಚುನಾವಣಾ ಗಿಮಿಕ್ ಮಾಡಿ ಜೀವನದಲ್ಲೇ ಗೊತ್ತಿಲ್ಲ. ನೀರು ಬಿಡುವ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಚರ್ಚಿಸಲಾಗಿದೆ. ಉಭಯ ರಾಜ್ಯಗಳು ದಾಯಾದಿಗಳಲ್ಲ. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಹೇಳಿದರು.
ಇನ್ನು ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಗೃಹಸಚಿವ ಬಸವರಾಜ್ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ ಚುನಾವಣೆಗೆ ಸಂಬಂಧಿಸಿದ್ದಲ್ಲ. ಅನೇಕ ವರ್ಷಗಳವರೆಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದು ಕೊಟ್ಟು-ಪಡೆಯುವ ಪ್ರಕ್ರಿಯೆ. ಕೇಳಿದ್ದ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.