ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ರಾಜ್ಯಪಾಲ ಜಗದೀಪ್ ಧಂಕರ್ ಅವರ ಮೇಲೆ ವಾಗ್ದಾಳಿ ನಡೆಸಿದ್ದು, ಅವರನ್ನು “ಜೈನ ಹವಾಲಾ ಪ್ರಕರಣದ ಆರೋಪ ಪಟ್ಟಿಯಲ್ಲಿರುವ ಭ್ರಷ್ಟ ವ್ಯಕ್ತಿ” ಎಂದು ಕರೆದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಅವರ ಸ್ಥಾನದಿಂದ ಕಿತ್ತುಹಾಕಲು ಮೂರು ಪತ್ರಗಳನ್ನು ಬರೆದಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಅವರ ಸ್ಥಾನದಿಂದ ಕಿತ್ತು ಹಾಕಲು ನಾನು ಮೂರು ಪತ್ರಗಳನ್ನು ಬರೆದಿದ್ದೇನೆ. ಅವರು ಭ್ರಷ್ಟ ವ್ಯಕ್ತಿಯಾಗಿದ್ದು, ಅವರ ಹೆಸರು 1996 ರಲ್ಲಿ ಹವಾಲಾ ಜೈನ್ ಪ್ರಕರಣದ ಚಾರ್ಜ್ಶೀಟ್ನಲ್ಲಿತ್ತು” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ನಮ್ಮ ಸರ್ಕಾರವು ಭಾರಿ ಜನಾದೇಶವನ್ನು ಪಡೆದ ನಂತರವೂ ಅವರ ಆದೇಶ ಯಾಕೆ ಬೇಕು?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರಿಗೆ ಪ್ರತಿಷ್ಠಿತ ‘ಫುಕುವೋಕಾ ಗ್ರ್ಯಾಂಡ್ ಪ್ರಶಸ್ತಿ-2021’ ಘೋಷಣೆ
ಜೈನ ಡೈರೀಸ್ ಪ್ರಕರಣ ಎಂದೂ ಕರೆಯಲ್ಪಡುವ ಹವಾಲಾ ಹಗರಣವು 1990 ರ ದಶಕದ ಹವಾಲಾ ಹಗರಣವಾಗಿದ್ದು, ರಾಜಕಾರಣಿಗಳು ನಾಲ್ಕು ಹವಾಲಾ ದಲ್ಲಾಳಿಗಳ ಮೂಲಕ, ಅಂದರೆ ಜೈನ ಸಹೋದರರ ಮೂಲಕ ಹವಾಲ ಹಣ ಕಳುಹಿಸಿದ ಆರೋಪಗಳನ್ನು ಒಳಗೊಂಡಿತ್ತು. ಇದು ದೇಶದ ಕೆಲವು ಪ್ರಮುಖ ರಾಜಕಾರಣಿಗಳನ್ನು ಒಳಗೊಂಡ 18 ಮಿಲಿಯನ್ ಡಾಲರ್ನ ಹಗರಣವಾಗಿದೆ.
ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯಪಾಲ ಜಗದೀಪ್ ಧಂಕರ್ ನಡುವೆ ಸಂಘರ್ಷ ನಡೆಯುತ್ತಿದ್ದು, ರಾಜ್ಯಪಾಲರ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಟಿಎಂಸಿ ನಿರ್ಣಯ ಮಂಡಿಸಲು ಯೋಜಿಸುತ್ತಿದೆ ಎಂದು ಕಳೆದ ವಾರ ಮೂಲಗಳು ತಿಳಿಸಿತ್ತು. ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ಬ್ಯಾನರ್ಜಿ ಅವರು ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿದ್ದಾರೆ. ಜುಲೈ 2 ರಿಂದ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಸ್ಪೀಕರ್ ಬಿಮಾನ್ ಬ್ಯಾನರ್ಜಿ ಅವರು ಕಳೆದ ವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಂಸದೀಯ ವಿಷಯಗಳಲ್ಲಿ ರಾಜ್ಯಪಾಲ ಧಂಕರ್ ಅವರ ಅತಿಯಾದ ಹಸ್ತಕ್ಷೇಪ ಮತ್ತು ಅವರ ವಿಧಾನಸಭೆಯ ಕಾರ್ಯವೈಖರಿಯ ಬಗ್ಗೆ ದೂರು ನೀಡಿದ್ದರು.
ಇದನ್ನೂ ಓದಿ: ಲಕ್ಷದ್ವೀಪದ 100 ಮನೆಗಳ ಧ್ವಂಸಕ್ಕೆ ನೋಟಿಸ್: ಸಾರ್ವಜನಿಕರ ಆಕ್ರೋಶ