HomeUncategorizedಮಂಡ್ಯ: ತನ್ನ ತಲೆ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿರುವ ಜೆಡಿಎಸ್

ಮಂಡ್ಯ: ತನ್ನ ತಲೆ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿರುವ ಜೆಡಿಎಸ್

- Advertisement -
- Advertisement -

ಹೌದು ಕೆಲವರು ಎಡವಿ ತಮ್ಮ ಕಾಲ ಮೇಲೆ ತಾವೇ ಕಲ್ಲಾಕಿಕೊಂಡರೆ, ಮಂಡ್ಯದಲ್ಲಿ ಜೆಡಿಎಸ್‍ನವರು ತಮ್ಮ ತಲೆಯ ಮೇಲೆಯೇ ಕಲ್ಲಾಕಿಕೊಳ್ಳುತ್ತಿದ್ದಾರೆ. 8ಕ್ಕೆ 8 ತಮ್ಮದೇ ಪಕ್ಷದ ಎಂಎಲ್‍ಎಗಳನ್ನು ಹೊಂದಿದ್ದರೂ ಕೂಡ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಎದುರು ಗೆಲುವಿಗಾಗಿ ತಿಣುಕಾಡಬೇಕಾದ ಪರಿಸ್ಥಿತಿ ಬಂದಿರಲು ಸ್ವತಃ ಅವರೇ ಕಾರಣ. ದಿನಕ್ಕೊಂದರಂತೆ, ಬಾಯಿಗೆ ಬಂದಂತೆ ಅವರಾಡುತ್ತಿರುವ ಮಾತುಗಳು ಅವರನ್ನು ಸೋಲಿನ ದವಡೆಗೆ ನೂಕುತ್ತಿವೆ. ಇನ್ನೊಂದೆಡೆ ಹೆಚ್ಚಿಗೆ ಏನನ್ನೂ ಮಾತಾಡದೇ ಅನುಕಂಪದ ಅಲೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಸುಮಲತಾರವರು ಗೆಲುವಿನೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಸುಮಲತಾ ಆಂಧ್ರ ಗೌಡ್ತಿಯೇ ಹೊರತು ಒಕ್ಕಲಿಗರಲ್ಲ
ಇನ್ನೂ ಚುನಾವಣಾ ಕಾವು ಶುರುವಾಗಿರಲಿಲ್ಲ. ಸುಮಲತಾ ಅಂಬರೀಶ್ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿದ್ದರು. ಅಂತಹ ಸಂದರ್ಭದಲ್ಲಿ ಮಂಡ್ಯದ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ತಮ್ಮ ನಾಲಿಗೆ ಹರಿಬಿಟ್ಟರು. ಸುಮಲತಾ ಆಂಧ್ರ ಗೌಡ್ತಿಯೇ ಹೊರತು ಒಕ್ಕಲಿಗರಲ್ಲ ಎಂದು ಗುಡುಗಿಬಿಟ್ಟರು. ಅದಕ್ಕೆ ಜನ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಜಾತ್ಯಾತೀತ’ ಎಂದರೆ ಇದೇನಾ ಎಂದು ಪ್ರಶ್ನಿಸಿದರು. ಸುಮಲತಾ ಪ್ರತಿಕ್ರಿಯಿಸಲಿಲ್ಲವಾದರೂ ಅವರಿಗೆ ಒಳ್ಳೇಯದೆ ಆಯಿತು.

ಒಂದು ಲೋಟ ನೀರು ಸಹ ಕೊಡಲಿಲ್ಲ
ಕೆ.ಟಿ ಶ್ರೀಕಂಠೇಗೌಡ ಮಾಡಿದ್ದ ಎಡವಟ್ಟು ತಣ್ಣಗಾಗುವುದರೊಳಗೆ ಸಾರಿಗೆ ಸಚಿವ, ಮದ್ದೂರಿನ ಶಾಸಕ ಡಿ.ಸಿ ತಮ್ಮಣ್ಣ ಇನ್ನೊಂದು ಬಾಂಬ್ ಸಿಡಿಸಿದರು. ನಾವೆಲ್ಲರೂ ಅದೆಷ್ಟು ಬಾರಿ ಅಂಬರೀಶ್ ರವರ ಮನೆಗೆ ಹೋಗಿದ್ದೇವೆ. ನಮ್ಮನ್ನು ಮಾತಾಡಿಸುವುದಿರಲಿ ಒಂದು ಲೋಟ ನೀರು ಸಹ ಕೊಟ್ಟಿಲ್ಲ. ಇವರಿಗೆ ಮಂಡ್ಯದ ಜನರ ಬಗ್ಗೆ ಕಾಳಜಿ ಇದೆಯೇ? ಎಂದು ಹೇಳಿಕೆ ನೀಡಿದರು. ಇನ್ನೊಂದು ಸುತ್ತಿನ ಚರ್ಚೆ ಆರಂಭವಾಯಿತು. ಡಿಸಿ ತಮ್ಮಣ್ಣ ಮತ್ತು ಅಂಬರೀಶ್‍ರವರ ಜೊತೆಗೆ ಟೇಬಲ್ ನೀರಿನ ಬಾಟಲಿ ಇದ್ದ ಫೋಟೊ ಹಾಕಿ ತಮ್ಮಣ್ಣ ಸುಳ್ಳು ಹೇಳುತ್ತಿದ್ದಾರೆ ಎಂದು ಸುಮಲತಾ ಅಭಿಮಾನಿಗಳು ಟ್ರೋಲ್ ಮಾಡಿದರು.

ಗಂಡ ಸತ್ತು ತಿಂಗಳಾಗಿಲ್ಲ, ರಾಜಕೀಯ ಬೇಕಾ?
ಮಾರ್ಚ್ 08. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಸುಮಲತಾ ಅಂಬರೀಶ್ ಅನ್ನು ಟೀಕಿಸುವ ಭರದಲ್ಲಿ ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಚುನಾವಣೆಗೆ ಬೇಕಾಯ್ತಾ ಎಂದು ಜೆಡಿಎಸ್‍ನ ಎಚ್.ಡಿ.ರೇವಣ್ಣ ಹೇಳಿಬಿಟ್ಟರು. ಈ ಹಿಂದೆ ಗುಂಡ್ಲುಪೇಟೆ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ‘ಇನ್ನು ಗಂಡ ಸತ್ತು ಒಂದು ವಾರ ಆಗಿಲ್ಲ, ಆಗಲೇ ಅವರಿಗೆ ಗೂಟದ ಕಾರಿನ ಮೇಲೆ ಆಸೆ’ ಎಂದಿದ್ದರು ಮತ್ತು ಆ ಹೇಳಿಕೆಯಿಂದಲೇ ಅಲ್ಲಿ ಬಿಜೆಪಿ ಸೋತಿದ್ದನ್ನು ರೇವಣ್ಣ ಮರೆತುಬಿಟ್ಟಿದ್ದರು. ಈ ಹೇಳಿಕೆಯ ನಂತರ ರೇವಣ್ಣ ಸರಿಯಾಗಿ ಛೀಮಾರಿ ಹಾಕಿಸಿಕೊಂಡರು. ಮಹಿಳಾ ದಿನವೇ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು.

ನಿಖಿಲ್ ಎಲ್ಲಿದ್ದೀಯಪ್ಪ?
ಈ ವರ್ಷ ಕರ್ನಾಟಕದ ಸಾಮಾಜಿಕ ಜಾಲಾತಾಣದಲ್ಲಿ ಅತಿ ಹೆಚ್ಚು ವೈರಲ್ ಆದ, ಟ್ರೆಂಡ್ ಆದ ಮತ್ತು ಟ್ರೋಲ್ ಆದ ಹೇಳಿಕೆ ಎಂದರೆ ಅದು ‘ನಿಖಿಲ್ ಎಲ್ಲಿದ್ದೀಯಪ್ಪ’. ಜಾಗ್ವಾರ್ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ನಡೆಸಿದ್ದ ಈ ಹೈಡ್ರಾಮಾದ ವಿಡಿಯೋ ತುಣುಕೊಂದನ್ನು ಮಾರ್ಚ್ ತಿಂಗಳಲ್ಲಿ ಹರಿಬಿಟ್ಟ ಕಾರಣ ಅದು ಜೆಡಿಎಸ್ ಮತ್ತು ಕುಮಾರಸ್ವಾಮಿಗೆ ಸರಿಯಾಗಿಯೇ ಉಲ್ಟಾ ಹೊಡೆಯಿತು. ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ‘ಮಂಡ್ಯ ಜನರ ಮಧ್ಯೆ ಇದೀನಿ’ ಎಂದು ಹೇಳಿಸುವ ಕೆಲಸ ಹಿಂದೆಯೇ ಮಾಡಿದ್ದಾರೆಂದು ಅಪಹಾಸ್ಯಕ್ಕೊಳಗಾಯಿತು. ಇದರ ಕುರಿತಾಗಿ ಸಾವಿರಾರು ಮೀಮ್ಸ್‍ಗಳು, ಟ್ರೋಲ್ ವಿಡಿಯೋಗಳು ಹರಿದಾಡಿ ಜೆಡಿಎಸ್‍ಗೆ ದೊಡ್ಡ ಮುಜುಗರ ಉಂಟುಮಾಡಿತು.


ನಮ್ಮ ಕೈಯ್ಯಲ್ಲಿ ತನಿಖಾ ಸಂಸ್ಥೆಗಳಿವೆ, ಚಿತ್ರನಟರು ತೆಪ್ಪಗೆ ಮನೆಯಲ್ಲಿರಬೇಕು ಅಷ್ಟೆ.
ಕೆ.ಆರ್ ಪೇಟೆ ಶಾಸಕ ನಾರಾಯಣಗೌಡರ ಧಮಕಿ ಇದು. ಮಂಡ್ಯಗೆ ದರ್ಶನ್ ಮತ್ತು ಯಶ್ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರಕ್ಕೆ ಬಂದಾಗ ನೀಡಿದ ಈ ಹೇಳಿಕೆಗೆ ನಾರಾಯಣಗೌಡರಿಗೆ ಜನ ಸರಿಯಾಗಿಯೇ ಉಗಿದು ಉಪ್ಪಿನ ಕಾಯಿ ಹಾಕಿದರು. ದರ್ಶನ್ ಅಭಿಮಾನಿಗಳು ಕಿಡಿಕಾರಿದರು.

ಕಳ್ಳೆತ್ತುಗಳು
ಇದು ಸಿಎಂ ಕುಮಾರಸ್ವಾಮಿ ಆಡಿದ ಅಣಿಮುತ್ತುಗಳು. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ದರ್ಶನ್ ಮತ್ತು ಯಶ್ ಬಗ್ಗೆ ನೀಡಿದ ಈ ಹೇಳಿಕೆ ಅವರಿಗೆ ದೊಡ್ಡ ಶಾಪವಾಗಿ ಪರಿಣಮಿಸಿತು. ಇದರ ವಿರುದ್ಧ ಜೋಡೆತ್ತುಗಳು ಎಂಬ ಇನ್ನೊಂದು ಟ್ರೋಲ್ ಸಹ ಬಂತು. ಒಟ್ಟಿನಲ್ಲಿ ಕುಮಾರಸ್ವಾಮಿಗೆ ಹಿನ್ನಡೆಯಾಯಿತು.

ಸುಮಲತಾ ಎದುರಿಸಲು ಮೂವರು ಸುಮಲತಾರು ಕಣಕ್ಕೆ
ಎಲ್ಲಾ ಕಡೆ ನಡೆಯುವಂತೆ ಇಲ್ಲಿಯೂ ಕೂಡ ಸುಮಲತಾ ಅಂಬರೀಶ್ ವಿರುದ್ಧ ಸುಮಲತಾ ಹೆಸರಿನ ಇನ್ನು ಮೂವರನ್ನು ಕಣಕ್ಕೆ ಇಳಿಸಲಾಗಿದೆ. ಅದಲ್ಲದೇ ಕ್ರಮ ಸಂಖ್ಯೆ 19 ಸುಮಲತಾ ಎಂಬ ಪಕ್ಷೇತರ ಅಭ್ಯರ್ಥಿಗೆ ನೀಡಿದರೆ ಕ್ರಮ ಸಂಖ್ಯೆ 20 ಅನ್ನು ಸುಮಲತಾ ಅಂಬರೀಶ್‍ರವರಿಗೆ ನೀಡಲಾಗಿದೆ. ಇದು ಕೂಡ ಚುನಾವಣಾ ಆಯೋಗ ಮತ್ತು ಡಿಸಿ ಜೆಡಿಎಸ್ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದೆ. ಚೀಪ್ ಪಾಲಿಟಿಕ್ಸ್ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಬಲ್ ಕಟ್ ಎಂಬ ಮಾಮೂಲಿ ಕತೆ
ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸುವ ದಿನ ಕೇಬಲ್ ಕಟ್ ಮಾಡಲಾಗಿತ್ತು. ಅದೇ ರೀತಿ ಇನ್ನೊಂದು ದೊಡ್ಡ ಸಮಾವೇಶ ಏರ್ಪಡಿಸಿದ ದಿನವೂ ಕೂಡ ಕೇಬಲ್ ಇರಲಿಲ್ಲ. ಮುಖ್ಯಮಂತ್ರಿಯವರ ಪ್ರಭಾವ ಬಳಸಿ ಜೆಡಿಎಸ್ ನಾಯಕರು ಈ ರೀತಿ ಕೇಬಲ್ ಕಟ್ ಮಾಡಿಸುವ ಮೂಲಕ ಸುಮಲತಾರವರ ಪ್ರಚಾರ ಜನರಿಗೆ ತಲುಪದಂತೆ ತಡೆಯುತ್ತಿದ್ದಾರೆ ಎಂದು ಸುಮಲತಾ ಅಭಿಮಾನಿಗಳು ಪದೇ ಪದೇ ಆರೋಪ ಮಾಡುತ್ತಿದ್ದಾರೆ.

ಸುಮಲತಾಗೆ ಯಶ್ ಹಿರಿಮಗನೊ, ಕಿರಿಮಗನೋ? ಬಾಡಿಗೆ ಕಟ್ಟಲಾಗದವನು
ಇನ್ನು ಮುಂದಿನ ಸರದಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರದ್ದು. ಯಶ್ ವಿರುದ್ಧ ಕಿಡಿಕಾರಿರುವ ಅವರು ಸುಮಲತಾಗೆ ಯಶ್ ಹಿರಿಮಗನೊ, ಕಿರಿಮಗನೋ? ಬಾಡಿಗೆ ಕಟ್ಟಲಾಗದವನು ನಮ್ಮ ತಂದೆಯ ವಿರುದ್ಧ ಮಾತಾಡುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ. ಬಾಡಿಗೆ ಮನೆಯಲ್ಲಿರುವವರು ನಿಖಿಲ್‍ಗೆ ಓಟು ಹಾಕಲ್ಲ ಎಂದು ಕೆಲವರು ತಿರುಗೇಟು ನೀಡಿದ್ದಾರೆ.

ಎಚ್.ವಿಶ್ವನಾಥ್‍ರ ಬುದ್ಧಿಮಾತು ಕೇಳುವ ಸಾಧ್ಯತೆಯಿಲ್ಲ
ಇಂತಹ ಮಾತುಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯೇ ಇದೆ. ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‍ರು ಯಾವುದೇ ಕಾರಣಕ್ಕೂ ವಿರೋಧಿಗಳನ್ನು, ಅದರಲ್ಲೂ ಸುಮಲತಾರನ್ನು ಯಾರೂ ಟೀಕಿಸಬಾರದು ಎಂದು ಸೂಚಿಸಿದ್ದರು. ಅದಕ್ಕೆ ಯಾರೂ ಸೊಪ್ಪು ಹಾಕಿಲ್ಲ. ಇವೆಲ್ಲವೂ ಜೆಡಿಎಸ್‍ಗೆ ಕೌಂಟರ್ ಆಗುವ ಸಾಧ್ಯತೆಗಳಿವೆ. ತಮ್ಮ ಪಕ್ಷದ ಸಾಧನೆಗಳು, ಗೆದ್ದರೆ ನಾವು ಏನು ಮಾಡುತ್ತೇವೆ ಎಂಬುದನ್ನು ಮಾತಾಡಬೇಕು. ಆದರೆ ಅದನ್ನು ಬಿಟ್ಟು ಜೆಡಿಎಸ್‍ನವರು ಸುಖಾಸುಮ್ಮನೆ ವಿರೋಧಿಗಳನ್ನು ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡರೆ ಈಗಾಗಲೇ ಅನುಕಂಪದ ಅಲೆಯಲ್ಲಿ ಸುಮಲತಾರ ಪರ ಮತ್ತಷ್ಟು ಅಲೆ ಬೀಸಲಿದೆ. ಜನರ ಕೋಪವನ್ನು ಮತ್ತಷ್ಟು ಹೆಚ್ಚಿಸಲಿದೆ ಅಷ್ಟೇ.

ಆದರೆ ಮತ್ತೊಂದು ಕಡೆ ಸುಮಲತಾ ಅಂಬರೀಶ್ ತಾನಾಗಿಯೇ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿಲ್ಲ. ಪಕ್ಕಾ ರಾಜಕಾರಣಿಯ ಥರ ಅಳೆದು ತೂಗಿ ಮಾತಾಡುತ್ತಿದ್ದಾರೆ. ಇವೆಲ್ಲವೂ ಅವರಿಗೆ ಪ್ಲಸ್ ಪಾಯಿಂಟ್ ಆಗುತ್ತಿವೆ. ಜೆಡಿಎಸ್‍ನವರು ಹತಾಶೆಗೊಂಡವರ ಥರಹ ಹೇಳಿಕೆ ನೀಡುತ್ತಿರುವುದು ಸುಮಲತಾರವರಿಗೆ ಅನಾಯಸವಾಗಿ ಬೆಂಬಲ ತಂದುಕೊಡುತ್ತಿದೆ.
ಒಟ್ಟಿನಲ್ಲಿ ತಮ್ಮದೇ ಸಡಿಲ ಮಾತುಗಳಿಂದ, 8 ಎಂಎಲ್‍ಎಗಳು, ಮೂವರು ಎಂಎಲ್‍ಸಿಗಳು, ಜಿ.ಪಂ, ತಾಪಂಗಳು, ಪುರಸಭೆ ನಗರಸಭೆಗಳು ಎಲ್ಲವನ್ನೂ ತಮ್ಮದಾಗಿಸಿಕೊಂಡಿದ್ದರೂ ಎಂಪಿ ಗೆಲ್ಲಲಾಗದ ಅಪೂರ್ವ ಇತಿಹಾಸವನ್ನು ಮಂಡ್ಯದಲ್ಲಿ ಜೆಡಿಎಸ್ ಸೃಷ್ಟಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...