Homeಅಂಕಣಗಳುಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

- Advertisement -
- Advertisement -

| ಕೆ.ಪಿ ಸುರೇಶ್ |

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ. ಬರೆದಿದ್ದು ನೋಡಿ ಶೀಟ್ ಎತ್ತಿದರೆ ಖಾಲಿ ಶೀಟ್!!

ಈ ದೇಶದ ಯಾವ ಸಮಸ್ಯೆಯನ್ನೂ ಬಿಡದೇ ಅದರ ಪರಿಹಾರಕ್ಕೆ ತನ್ನಲ್ಲಿ ಮೂಲಿಕೆ ಇದೆ ಎಂಬಂತೆ ಪ್ರಣಾಳಿಕೆಯ ಆರಂಭದಲ್ಲಿ ಹೇಳಲಾಗಿದೆ. ಕೆಲವು ವಿವರ ನೋಡಿ:
ರಕ್ಷಣಾ ವಿಷಯದಲ್ಲಿ ಸ್ವಾವಲಂಬಿ ಆಗಲು ಎಕೆ 203ನ್ನು ನಮ್ಮ ದೇಶದಲ್ಲೇ ತಯಾರು ಮಾಡುತ್ತಿದ್ದೇವೆ ಎಂಬ ಹೇಳಿಕೆ ಇದೆ. ಇದರ ಹಿಂದೆ ರಾಫೇಲ್ ಯವಾರದ ವ್ಯಂಗ್ಯ ಹಲ್ಲು ಕಿರಿದರೆ ಮೋದಿಯ ತಪ್ಪೆಂದು ಹೇಳಬೇಡಿ!! ಮಾತು ವೈಯ್ಯಾರವಾಗುವುದು ಹೀಗೆ.
ರೈತರಿಗೆ ಒಂದು ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಎನ್ನಲಾಗಿದೆ. ಅದರ ಜೊತೆಗೆ ‘ಅಸಲು ಕಟ್ಟಿದರೆ’ ಎಂಬ ಕುಂಟು ಪಂಕ್ತಿ..

2022ರ ಒಳಗೆ ಎಲ್ಲರಿಗೂ ಮನೆ, 2024ರ ಒಳಗೆ ಎಲ್ಲರಿಗೂ ನಲ್ಲಿ ನೀರು ಎಂಬ ಆಶ್ವಾಸನೆ ಇದೆ. ಇದೇ ಮೋದಿ ಸರ್ಕಾರ ಕುಡಿಯುವ ನೀರಿನ ಅನುದಾನಕ್ಕೆ ಕತ್ತರಿ ಹಾಕಿದ್ದು ಈ ಪ್ರಣಾಳಿಕೆಯಲ್ಲಿ ಇಲ್ಲ! ಮನೆ ಕಟ್ಟಿಸುವ ಪ್ರಗತಿ ಉತ್ತರದ ಭಾರತದ ರಾಜ್ಯಗಳಲ್ಲಿ ಶೇ.10ರಷ್ಟೂ ಪ್ರಗತಿಯಾಗಿಲ್ಲ ಎಂಬ ವರದಿ ಇತ್ತೀಚೆಗೆ ಬಂದಿತ್ತು. ಅದು ಈ ಪ್ರಣಾಳಿಕೆಯಲ್ಲಿ ಇಲ್ಲ!!

ಸಾವಯವ ಕೃಷಿಗೆ ಒತ್ತು ಎಂಬಲ್ಲಿ ಇಕೋ ಟೂರಿಸಂ ಮೂಲಕ ರೈತರ ಆದಾಯ ವೃದ್ಧಿಗೆ ಕ್ರಮ ಎಂಬ ವಾಕ್ಯ ಇದೆ. ಮಜಾ ಎಂದರೆ ಇದು ಹತ್ತು ವರ್ಷ ಹಿಂದಿನ ಕಾರ್ಯಕ್ರಮ. ಕರ್ನಾಟಕದ ಸಾವಯವ ಮಿಷನ್ ಮೂಲಕ ಇದನ್ನು ಜಾರಿ ಮಾಡುವ ಯತ್ನ ನಡೆದಿತ್ತು. ಮೋದಿ ಮತ್ತೆ ಯುಪಿಎ ಕಾರ್ಯಕ್ರಮವನ್ನು ಕದ್ದು ಹೆಸರು ಅಳಿಸಿ ಮಾರುವ ಯತ್ನ ಮುಂದುವರೆಸಿರುವುದಕ್ಕೆ ಇದು ಒಂದು ಉದಾಹರಣೆ.

ಪ್ರಣಾಳಿಕೆಯ ಆಷಾಡಭೂತಿತನ ಮುಖಕ್ಕೆ ರಾಚುವುದು ‘ಪಾರದರ್ಶಕ ಆರ್ಥಿಕತೆ ‘ ಎಂಬ ಸೆಕ್ಷನ್ನಿನಲ್ಲಿ. ಬೇನಾಮಿ ಆಸ್ತಿ ಮೇಲೆ ಪ್ರಹಾರ ಮಾಡುತ್ತೇವೆ, ಓಡಿ ಹೋಗಿರುವ ಆರ್ಥಿಕ ಅಪರಾಧಿಗಳನ್ನು ವಾಪಾಸು ತರಿಸುತ್ತೇವೆ’ ಎಂಬ ಆಶ್ವಾಸನೆ ಬೇರೆ ಇದೆ. ನೋಟು ರದ್ಧತಿ ಆದಾಗಲೇ ಐನೂರು ಕೋಟಿ ವೆಚ್ಚ ಮಾಡಿದ ರೆಡ್ಡಿಯಂಥವರು ದೇಶ ಬಿಟ್ಟು ಓಡಿ ಹೊಗುವ ಅಗತ್ಯವೇ ಇಲ್ಲದಷ್ಟು ನಿರಾಮಯವಾಗಿದ್ದಾರೆ. ಸಾಕಲ್ಲ!!

ಮುಖ್ಯತಃ ಗ್ರಾಮೀಣ, ಆದಿವಾಸಿ ಬದುಕು ಹಸನು ಮಾಡುವ ಕಾರ್ಯಕ್ರಮಗಳೆಲ್ಲಾ ಕೇವಲ ಹೇಳಿಕೆಯ ಮಟ್ಟದಲ್ಲಿವೆ. ತೋರಿಸಿರುವ ಗುರಿಯೂ ಪುಗಸಟ್ಟೆ ಕಿವಿಗೆ ಹೂವು.

ಅದೇ ಮೂಲ ಸಂರಚನೆ ಅಭಿವೃದ್ಧಿಗೆ 100 ಲಕ್ಷ ಕೋಟಿ ಮುಂದಿನ ವರ್ಷಗಳಲ್ಲಿ ಮೀಸಲಿಡಲಾಗುವುದು ಎನ್ನುತ್ತದೆ ಈ ಪ್ರಣಾಳಿಕೆ. ಕೋಟಿ ಕೋಟಿಗೆ ಎಷ್ಟು ಸೊನ್ನೆ ಅಂತ ಸ್ವತಃ ಮೋದಿಯವರಲ್ಲಿ ಕೇಳಬೇಕೇನೋ. ಭಾರತ ಸರ್ಕಾರದ ಆದಾಯ 25 ಲಕ್ಷ ಕೋಟಿ. ಅದರಲ್ಲೂ ಒಂದು ಭಾಗ ಸಾಲ!! ಅಂಥಾದ್ದರಲ್ಲಿ 100 ಲಕ್ಷ ಕೋಟಿ ಅಂತ ಹೇಳಲು ಯಮಗುಂಡಿಗೆ ಬೇಕು.

1.5 ಲಕ್ಷ ಆರೊಗ್ಯ ಕೇಂದ್ರಗಳನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಾಪಿಸಲಾಗುವುದು ಎನ್ನುವ ಈ ಪ್ರಣಾಳಿಕೆ ಈ ವರೆಗೆ ಕೇವಲ 17 ಸಾವಿರ ಇಂಥಾ ಕೇಂದ್ರಗಳನ್ನು ಸ್ಥಾಪಿಸಿರುವುದನ್ನೂ ದಾಖಲಿಸಿದೆ. ಅಂದರೆ ಈ ಟ್ರಾಕ್ ರೆಕಾರ್ಡ್ ಹೊಂದಿರುವ ಸರ್ಕಾರ ಇನ್ನು ಮುಂದೆ ಪ್ರತಿ ವರ್ಷ 30 ಸಾವಿರ ಇಂಥಾ ಕೇಂದ್ರ ಸ್ಥಾಪಿಸುವ ಭರವಸೆಯನ್ನು ನಾವು ನಂಬಬೇಕು.

ಭಾರತದಲ್ಲಿ ವರ್ಷಕ್ಕೆ 25 ಲಕ್ಷ ಜನ ಕ್ಷಯ ರೋಗಕ್ಕೆ ತುತ್ತಾಗಿ 3 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲೇ ಇದು ಅತ್ಯಂತ ಹೆಚ್ಚು. ಈಗ ಪ್ರಣಾಳಿಕೆ 2015ರ ಒಳಗೆ ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಹೇಳಿದೆ. ಹೇಗೆಂದು ಕೇಳುವಂತಿಲ್ಲ!!

ಯುಪಿಎ ಕಾರ್ಯಕ್ರಮವನ್ನು ಕಾಪಿಚೀಟಿ ಮಾಡುವ ಚಾಳಿ ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣದಲ್ಲಿ ಜ್ಞಾನ ಪ್ರಸರಣಕ್ಕೆ ಅನುವಾದ ಮಿಷನ್ ಒಂದನ್ನು ಸ್ಥಾಪಿಸಲಾಗುವುದು ಎಂದು ಈ ಪ್ರಣಾಳಿಕೆ ಹೇಳಿದೆ. ಮೂಲತಃ ಏನನ್ನೂ ಈ ಭಾಜಪ ಮಂದಿ ಓದಿರುವ ದಾಖಲೆ ಇಲ್ಲದ ಕಾರಣ ಇದು ಸ್ವಾಗತಾರ್ಹ. ಆದರೆ ಈ ಮಿಷನ್ ಈಗಾಗಲೇ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿ ವರ್ಷಗಳೇ ಕಳೆದಿವೆ.

ಉದ್ಯೋಗ ಸೃಷ್ಟಿ ಬಗ್ಗೆ ಎರಡೇ ವಾಕ್ಯದಲ್ಲಿ ಕೌಶಲ್ಯ ವೃದ್ಧಿ ಬಗ್ಗೆ ನಿವಾಳಿಸಿ ಉದ್ಯಮಪತಿಗಳಿಗೆ ಸಾಲ ಯೋಜನೆ ವಿಸ್ತರಿಸಲಾಗುವುದು ಎನ್ನುತ್ತೆ ಈ ಪ್ರಣಾಳಿಕೆ. ಅದಕ್ಕೆ ಅಡಿಗೆರೆಯಾಗಿ ಮುದ್ರಾ ಯೋಜನೆಯಲ್ಲಿ 17 ಕೋಟಿ ಮಂದಿ ಸಾಲ ಪಡೆದಿದ್ದಾರೆ ಎನ್ನುತ್ತೆ. ಇದೇ ರೀತಿ ಮುಂದುವರಿದರೆ ಇನ್ನೈದು ವರ್ಷದಲ್ಲಿ ನೂರು ಕೋಟಿ ಮಂದಿ ಉದ್ಯಮಪತಿಗಳಾಗುವುದು ಖಚಿತ. ಅಲ್ಲಿಗೆ ಬಡತನ ನಿರ್ಮೂಲನವಾದಂತೆ.

ಜನಕಲ್ಯಾಣದ ಕಾಳಜಿ ಕುರಿತಂತೆ ಮೋದಿಯ ಅಸೀಮ ಉಡಾಫೆ ಕಾಣಿಸುವುದು ಅಪೌಷ್ಟಿಕತೆಯ ನಿವಾರಣೆಯ ಘೋಷಣೆಯಲ್ಲಿ. ಈ ದೇಶದ ಅರ್ಧಕ್ಕರ್ಧ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕಾಲಕಾಲದ ಅಧ್ಯಯನಗಳು ಹೇಳುತ್ತಲೇ ಬಂದಿವೆ. ಈ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಇರ ಪ್ರಮಾಣವನ್ನು ಶೇ.10ರಷ್ಟು ಇಳಿಸಲಾಗುವುದು ಎಂಬ ಬರೋಬ್ಬರಿ ಹೇಳಿಕೆ ಇದೆ. ಇದರಿಂದಾಚೆ ಮಾತಾಡಲು ಏನೂ ಇಲ್ಲ!!

ರಾಮಮಂದಿರದಿಂದ ಹಿಡಿದು ನೂರಾರು ‘ಕಟ್ಟುವ ಮಾಡುವ’ ಮಾತುಗಳಿವೆ. ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವ ಪ್ರಮೇಯ ಇಲ್ಲ ಅನ್ನಿಸುತ್ತೆ . ಯಾಕೆಂದರೆ ಸ್ವತಃ ಭಾಜಪಕ್ಕೇ ಈ ಬಗ್ಗೆ ನಂಬಿಕೆ ಇದ್ದಂತಿಲ್ಲ!!
ಇಡೀ ಪ್ರಣಾಳಿಕೆಯ ಕಳಶಪ್ರಾಯ ವಾಕ್ಯವೆಂದರೆ ಭ್ರಷ್ಟಾಚಾರ ಮುಕ್ತ ಭಾರತ ಎಂಬ ವಾಕ್ಯ!! ಕರ್ನಾಟಕದ ಆಪರೇಷನ್ ಕಮಲ, ಪಂಕಜಾ ಮುಂದೆಯವರ ಹಗರಣಗಳೆಲ್ಲಾ ಇದರಡಿ ಬರುವುದಿಲ್ಲ!!

ಗಮನಿಸಬೇಕಾದ್ದು ಈ ಪ್ರಣಾಳಿಕೆಯ ಒಳ ವಿವರಗಳನ್ನಲ್ಲ. ಪ್ರಣಾಲಿಕೆಯ ಮುಖ ಪುಟವನ್ನು ಗಮನಿಸಿದರೆ ಭಾಜಪ ತಲುಪಿರುವ ರಸಾತಳ ಗೊತ್ತಾಗುತ್ತದೆ. ಗಡದ್ದಾಗಿ ಪೋಸು ಕೊಟ್ಟಿರುವ ಮೋದಿ ಬಿಟ್ಟರೆ ಇನ್ನೇನು ಇಲ್ಲ! ಕಾಮ್ ಚೋರ್ ಪಕ್ಷವೊಂದು ಢಾಳಾಗಿ ಸಾಧನೆಯ ಸುಳ್ಳುಗಳನ್ನು ಕಣ್ಣು ಕೋರೈಸುವಂತೆ ಬಿತ್ತರಿಸುತ್ತಾ ಇರುವುದೇ ತನ್ನ ಕುಸಿದ ಆತ್ಮವಿಶ್ವಾಸದ ಕುರುಹು. ಈ ಪ್ರಣಾಳಿಕೆ ಅದರ ತಪ್ಪೊಪ್ಪಿಗೆಯಂತೆ ಇದೆ.

ಈ ಪ್ರಣಾಳಿಕೆಯನ್ನು ಹಾಳೆಯ ಎರಡೂ ಬದಿ ಮುದ್ರಿಸಿರುವ ಬಗ್ಗೆ ನನ್ನ ಆಕ್ಷೇಪ ಇದೆ. ಒಂದೇ ಪುಟ ಮುದ್ರಿಸಿದ್ದರೆ ನೋಟ್ ಬುಕ್ಕಾಗಿ ಬಳಸಬಹುದಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...