ನವದೆಹಲಿಯಲ್ಲಿನ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ನೋಡಲು ಬಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರ ವರ್ತನೆಗೆ ಸಿಂಗ್ ಅವರ ಪುತ್ರಿ ದಮನ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಸಿಂಗ್ ಅವರ ಆರೋಗ್ಯ ವಿಚಾರಿಸಲು ಗುರುವಾರ ಏಮ್ಸ್ಗೆ ಬಂದಿದ್ದ ಮಾಂಡವಿಯ ಅವರು ಕುಟುಂಬದ ಅನುಮತಿಗೆ ವಿರುದ್ಧವಾಗಿ ಫೋಟೋಗ್ರಾಫರ್ನನ್ನು ಕೊಠಡಿಯ ಒಳಗೆ ಕರೆದುಕೊಂಡು ಹೋದರು” ಎಂದು ದಮನ್ ಹೇಳಿದ್ದಾರೆ.
ದಮನ್ ಅವರು ‘ದಿಪ್ರಿಂಟ್’ ಜಾಲತಾಣಕ್ಕೆ ಹೇಳಿಕೆ ನೀಡಿದ್ದು, “ಸಚಿವರೊಂದಿಗೆ ಫೋಟೋಗ್ರಾಫರ್ ಕೂಡ ಕೊಠಡಿಯೊಳಗೆ ಪ್ರವೇಶಿಸಿದ್ದರಿಂದ ನಮ್ಮ ತಾಯಿ ಬೇಸರಗೊಂಡಿದ್ದರು. ಕೊಠಡಿಯನ್ನು ಬಿಟ್ಟು ಹೊರಹೋಗುವಂತೆ ಕೇಳಿಕೊಂಡರೂ ನಮ್ಮ ತಾಯಿಯ ಕೋರಿಕೆಯನ್ನು ಅವರು ಸ್ವೀಕರಿಸಲೇ ಇಲ್ಲ” ಎಂದಿದ್ದಾರೆ.
“ಆಕೆ ತುಂಬಾ ನೊಂದುಕೊಂಡಿದ್ದಾಳೆ. ಅತ್ಯಂತ ಕಠಿಣ ಸಂದರ್ಭದಲ್ಲಿ ನಮ್ಮ ಪೋಷಕರಿದ್ದಾರೆ. ಅವರು ಹಿರಿಯ ಜೀವಗಳು. ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ” ಎಂದು ದಮನ್ ಹೇಳಿಕೆ ನೀಡಿದ್ದಾರೆ.
ಮಾಂಡವಿಯ ಅವರ ಪ್ರತಿಕ್ರಿಯೆಗೆ ವಾಟ್ಸ್ಆಪ್, ಇಮೇಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿರುವುದಾಗಿ ದಿಪ್ರಿಂಟ್ ಹೇಳಿದ್ದು, “ಈ ಸುದ್ದಿ ಪ್ರಕಟವಾಗುವವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದಿದೆ.
“ನಮ್ಮ ತಂದೆಯು ಡೆಂಗ್ಯೂನಿಂದ ಬಳಲುತ್ತಿದ್ದಾರೆ. ಅವರ ರೋಗ ನಿರೋಧಕಶಕ್ತಿಯೂ ಕುಂದಿದೆ. ಹೀಗಾಗಿ ಅವರನ್ನು ಭೇಟಿ ಮಾಡಲು ಯಾರಿಗೂ ನಮ್ಮ ಪೋಷಕರು ಅವಕಾಶ ನೀಡುತ್ತಿಲ್ಲ” ಎಂದು ದಮನ್ ತಿಳಿಸಿದ್ದಾರೆ. ದೆಹಲಿಯಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿದ್ದಾಗ ಏಪ್ರಿಲ್ ತಿಂಗಳಲ್ಲಿ ಡಾ.ಸಿಂಗ್ ಸೋಂಕಿಗೆ ಒಳಗಾಗಿ, ಬಳಿಕ ಚೇತರಿಸಿಕೊಂಡಿದ್ದರು.
“ಆರೋಗ್ಯ ಸಚಿವರು ಭೇಟಿ ನೀಡಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದು ಸ್ವಾಗತಾರ್ಹ ಸಂಗತಿ” ಎಂದಿರುವ ದಮನ್, “ಆ ಸಮಯದಲ್ಲಿ ನನ್ನ ಹೆತ್ತವರು ಛಾಯಾಚಿತ್ರ ತೆಗೆಯುವ ಸ್ಥಿತಿಯಲ್ಲಿರಲಿಲ್ಲ” ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ( Manmohan Singh ) ಅವರಿಗೆ ಜ್ವರ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸುಧಾರಿಸಲೆಂದು ಹಲವು ರಾಜಕೀಯ ನಾಯಕರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿರಿ: ಛತ್ತೀಸ್ಗಢ: ಭಕ್ತರ ಮೇಲೆ ಹರಿದ ಕಾರು, 4 ಸಾವು, 20ಕ್ಕೂ ಹೆಚ್ಚು ಮಂದಿ ಗಂಭೀರ
ದುರ್ಬಲ ವ್ಯಕ್ತಿತ್ವ ಮತ್ತು ಹೀನ ಪ್ರೊಪಗ್ಯಾಂಡ ಆಸೆ ಇರುವವರು ಮಾತ್ರ ಆಸ್ಪತ್ರೆಗೆ ಬಂದು ಹಾಗೆ ಮಾಡಬಹುದು. ನಮ್ಮ ಜನರು ಇಂತಹವರಿಗೂ ಅಧಿಕಾರ ಕೊಡುತ್ತಿರುವುದು ಇನ್ನೂ ಹೆಚ್ಚಿನ ಸಾರ್ವಜನಿಕ ಕೆಡುಕಿಗೆ ಕಾರಣವಾಗುತ್ತದೆ.