ಸಾಮಾಜಿಕ ಕಾರ್ಯಕರ್ತೆ ಮೇದಾ ಪಾಟ್ಕರ್ ಅವರು ಜನವರಿ 14ರಂದು (ನಾಳೆ) ಬೆಂಗಳೂರಿಗೆ ಬರಲಿದ್ದು, ಐಟಿಐ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಮೇದಾ ಪಾಟ್ಕರ್ ಅವರು ಆದಿವಾಸಿ, ದಲಿತ, ರೈತ ಮತ್ತು ಕಾರ್ಮಿಕ ಚಳವಳಿಗಳ ದಿಟ್ಟ ದನಿ. ನರ್ಮದಾ ಬಚಾವೋ ಆಂದೋಲನ ಮತ್ತು ನ್ಯಾಷನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ ಸಂಸ್ಥಾಪಕರೂ ಹೌದು. ಮೇಧಾ ಪಾಟ್ಕರ್ ಅವರು ಸತತವಾಗಿ ಕಾರ್ಮಿಕರ ಹೋರಾಟಗಳಿಗೆ ಬೆಂಬಲವನ್ನು ಸೂಚಿಸುತ್ತಿದ್ದು, ಅವರು ಐಟಿಐ ಕಾರ್ಮಿಕರನ್ನು ಭೇಟಿ ಮಾಡಿ ಕಾರ್ಮಿಕರ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಲಿದ್ದಾರೆ.
ಕಾನೂನು ಬಾಹಿರವಾಗಿ ವಜಾಗೊಳಿಸಿರುವ ಕುರಿತು ಐಟಿಐ ಕಾರ್ಮಿಕರು 45ನೇ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಕಾರ್ಮಿಕರೊಂದಿಗೆ ತಮ್ಮ ಬೆಂಬಲ ಸೂಚಿಸಲು ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಆಗಮಿಸಲಿದ್ದಾರೆ ಎಂದು ಎಐಸಿಸಿಟಿಯು ತಿಳಿಸಿದೆ.
1ನೇ ಡಿಸೆಂಬರ್ 2021ರಂದು, ಬೆಂಗಳೂರಿನಲ್ಲಿರುವ ಭಾರತದ ಮೊದಲ ಸಾರ್ವಜನಿಕ ವಲಯದ ಉದ್ಯಮವಾದ ಐಟಿಐ ಲಿಮಿಟೆಡ್ನಲ್ಲಿ 5-30 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 80 ಕಾರ್ಮಿಕರಿಗೆ, ಕಾರ್ಮಿಕ ಸಂಘಟನೆ ಕಟ್ಟಿ ತಮ್ಮ ಕಾನೂನು ಬದ್ಧ ಹಕ್ಕುಗಳಿಗೆ ಒತ್ತಾಯ ಮಾಡಿದ್ದರೆಂಬ ಒಂದೇ ಒಂದು ಕಾರಣಕ್ಕೆ ಐಟಿಐ ಆಡಳಿತ ಮಂಡಳಿಯು ಕೆಲಸ ನಿರಾಕರಿಸಿದೆ.
ಐಟಿಐ ಲಿಮಿಟೆಡ್ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ, ಸಂವಹನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಮುಖ್ಯವಾದ ಹಲವಾರು ಸೂಕ್ಷ್ಮ ಮತ್ತು ರಕ್ಷಣಾ ಸಂಬಂಧಿತ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಮಿಕರು ಈ ಯೋಜನೆಗಳಲ್ಲಿ ವಿವಿಧ ಸಾಧನಗಳ ಉತ್ಪಾದನೆ, ಸಂಶೋಧನೆ, ಅಭಿವೃದ್ಧಿ ಮತ್ತು ಸ್ಥಾಪನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಗಡಿಗಳಿಗೂ ಆನ್-ಸೈಟ್ ರಕ್ಷಣಾ ಕಾರ್ಯಯೋಜನೆಗಳಿಗಾಗಿ ಕಳುಹಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ 3,000 ವೆಂಟಿಲೇಟರ್ಗಳು ಮತ್ತು ಫೇಸ್ಶೀಲ್ಡ್ ಉತ್ಪಾದನೆಯಲ್ಲಿ ಈ ಕಾರ್ಮಿಕರು ಭಾಗಿಯಾಗಿದ್ದರು.
ಸುದೀರ್ಘ ವರ್ಷಗಳ ಸೇವೆಯ ಹೊರತಾಗಿಯೂ, ಕಾರ್ಮಿಕರನ್ನು “ಗುತ್ತಿಗೆ ಕಾರ್ಮಿಕರು” ಎಂದು ಬಿಂಬಿಸಲಾಗಿದೆ. ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ. ಅವರಲ್ಲಿ ಹೆಚ್ಚಿನವರು ದಲಿತರು ಮತ್ತು ಮಹಿಳೆಯರಾಗಿದ್ದಾರೆ. ಕಾರ್ಮಿಕ ಇಲಾಖೆಯು ನಡೆಸಿದ ಸಂಧಾನ ಪ್ರಕ್ರಿಯೆಯಲ್ಲಿ, ಪ್ರಾದೇಶಿಕ ಕಾರ್ಮಿಕ ಆಯುಕ್ತರು, ಕಾರ್ಮಿಕರಿಗೆ ಮತ್ತೆ ಕೆಲಸ ನೀಡುವಂತೆ ಐಟಿಐ ಲಿಮಿಟೆಡ್ನ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ಆದರೆ ಕಾರ್ಮಿಕರು ಸಂಘಟನೆ ಕಟ್ಟಿ, ಆ ಸಂಘಟನೆಯ ಮೂಲಕ ತಮ್ಮನ್ನು ಖಾಯಂಗೊಳಿಸುವಂತೆ, ಮಾನವೀಯ ಕೆಲಸದ ವಾತಾವರಣಕ್ಕಾಗಿ ಕಾನೂನು ಹೋರಾಟವನ್ನು ಮಾಡುತ್ತಿರುವುದನ್ನು ಸಹಿಸಿಕೊಳ್ಳಲಾಗದ ಆಡಳಿತ ಮಂಡಳಿಯು, ಕಾರ್ಮಿಕ ಆಯುಕ್ತರ ಸೂಚನೆಯನ್ನು ಪಾಲಿಸಲು ವಿಫಲವಾಗಿದೆ ಎಂದು ಕಾರ್ಮಿಕ ಮುಖಂಡರು ದೂರಿದ್ದಾರೆ.
ಮೇಕೆದಾಟು ಉಳಿವಿಗಾಗಿ ಪತ್ರಿಕಾಗೋಷ್ಠಿ: ಮೇಕೆದಾಟು ಯೋಜನೆಯನ್ನ ಕೈಬಿಟ್ಟು ಮೇಕೆದಾಟು ಪರಿಸರವನ್ನು ಉಳಿಸುವಂತೆ ಒತ್ತಾಯಿಸಿ ಕರ್ನಾಟಕ ನೆಲಜಲ ಪರಿಸರ ಸಂರಕ್ಷಣಾ ಸಮಿತಿ ಜ.14ರಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಮೇದಾ ಪಾಟ್ಕರ್ ಪಾಲ್ಗೊಳ್ಳಲಿದ್ದಾರೆ. ನಟ ಚೇತನ್ ಅಹಿಂಸಾ, ಪರಿಸರ ಪತ್ರಕರ್ತರಾದ ನಾಗೇಶ್ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿರಿ: ರಾಜಸ್ಥಾನದಲ್ಲಿ ಬುದ್ಧಿಮಾಂದ್ಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ