Homeಮುಖಪುಟಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು...

- Advertisement -
- Advertisement -

ನಮ್ಮ ಯೋಗಪ್ಪನವರನ್ನು ಕೊರೊನಾ ಬಲಿ ಪಡೆದಿದೆ. ಇದು ಕನ್ನಡ ಸಾಹಿತ್ಯಾಕ್ಕಾದ ದೊಡ್ಡ ನಷ್ಟ. ಏಕೆಂದರೆ, ಯೋಗಪ್ಪನವರು ಇನ್ನೂ ಮಹತ್ತರವಾದುದನ್ನು ಬರೆಯುವವರಿದ್ದರು. ಅವರು ಲಂಕೇಶರಿಗೆ ಪರಿಚಯವಾದುದ್ದೇ ತಮ್ಮ ಗಟ್ಟಿಯಾದ ಬರಹ ಮತ್ತು ಓದಿನ ಮುಖಾಂತರ. ಇಂಗ್ಲಿಷ್ ಸಾಹಿತ್ಯದ ಓದಿನ ವಿಷಯದಲ್ಲಿ ಪಾಂಡಿತ್ಯದ ಔನ್ನತ್ಯದಲ್ಲಿದ್ದ ಯೋಗಪ್ಪನವರು ನಮ್ಮಂತವರ ಜೊತೆಯೂ ಸಹಜವಾದ ಸ್ನೇಹದಿಂದಿದ್ದರು. ಅವರು ಲಂಕೇಶ್ ಜೊತೆ ಮಾತನಾಡುತ್ತ ಕುಳಿತಿದ್ದರೆ ನಾವು ಉಸಿರೆತ್ತದೆ ಸುಮ್ಮನೆ ಕೇಳಿಸಿಕೊಳ್ಳುವಂತಾಗುತ್ತಿತ್ತು.

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು. ಆಗಲೇ ಅವರ ಮನದಾಳದಲ್ಲಿ ಈ ಜಗತ್ತಿನ ರೂಪಕ ಲೇಖಕರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಸಂಕ್ಷಿಪ್ತವಾಗಿ ಕೊಡಬೇಕೆನ್ನಿಸಿರಬೇಕು. ಲಂಕೇಶ್ ಪತ್ರಿಕೆಯನ್ನ ನಿರಂತರ ಪ್ರಯೋಗಶೀಲತೆಗೆ ಗುರಿ ಮಾಡುತ್ತಿದ್ದರಿಂದ ಈ ಹಿಂದೆ ಎನ್.ಎಸ್ ಶಂಕರ್ ಕೈಲಿ ’ಚಂಚಲೆ’ ಮತ್ತು ನಟರಾಜ್ ಹುಳಿಯಾರ್‌ರಿಂದ ’ಬರೆವ ಬದುಕು’ ಅಂಕಣಗಳನ್ನು ಬರೆಸಿದ್ದರು. ಮಹಿಳಾ ಲೇಖಕಿಯರಿಂದ ’ನಿಮ್ಮಿ’ ಬರೆಸಿದ್ದರು. ಇವನ್ನೆಲ್ಲಾ ಶುರುಮಾಡಿ ಪತ್ರಿಕೆಯ ನೌಕರರಿಗೆ ಮುಂದುವರಿಸಲು ಬಿಡುತ್ತಿದ್ದರು.

ಹಾಗೆಯೇ ಯೋಗಪ್ಪನವರಿಂದ ಜಗತ್ತಿನ ವಿಸ್ಮಯಕಾರಿ ಲೇಖಕರ ಬಗೆಗಿನ ಸಂಗತಿಗಳನ್ನು ಬರೆಸುತ್ತಿದ್ದರು. ಪತ್ರಿಕೆಯ ಸಾಹಿತ್ಯ ಮತ್ತು ರಾಜಕಾರಣದ ಸಮತೂಕವನ್ನು ನಿಭಾಯಿಸುವುದರಲ್ಲಿ ಯೋಗಪ್ಪನವರ ಬರವಣಿಗೆ ಮಹತ್ವ ಪಡೆದುಕೊಂಡಿದ್ದವು.

ಅವರು ನನಗೆ ಅಷ್ಟಾಗಿ ಪರಿಚಯವಿಲ್ಲದ ಸಮಯದಲ್ಲಿ ಅವರ ಗೆಳೆಯನಂತಿದ್ದ ಉತ್ತರ ಕರ್ನಾಟಕದ ವರದಿಗಾರನೊಬ್ಬ ಲಂಕೇಶರಿಗೆ ಯೋಗಪ್ಪನವರ ವಿಷಯದಲ್ಲಿ ಚಾಡಿ ಹೇಳುತ್ತ ಕುಳಿತಿದ್ದ. ಅದನ್ನ ಕೇಳಿಸಿಕೊಂಡ ನಾನು ಇನ್ನು ಯೋಗಪ್ಪನವರು ಪತ್ರಿಕೆಯಿಂದ ಹೊರನಡೆದಂತೆಯೇ ಎಂದು ಭಾವಿಸಿದ್ದೆ. ಆದರೆ ಲಂಕೇಶ್ ಚಾಡಿ ಹೇಳಿದವನ ಮಾತನ್ನು ಪಕ್ಕಕ್ಕಿಟ್ಟು ಯೋಗಪ್ಪನವರನ್ನು ಗೌರವಿಸಿದ್ದರು. ಆಗೊಮ್ಮೆ ಪತ್ರಿಕೆ ಆಫೀಸಿನಲ್ಲಿ ಶರ್ಮರ ಕಾವ್ಯ ಕುರಿತ ಚರ್ಚೆಯಲ್ಲಿ ಯೋಗಪ್ಪನವರು ಶರ್ಮರ ಎದುರೇ ಅವರ ಕಾವ್ಯದ ಅಂತರಾಳವನ್ನು ಅನಾವರಣ ಮಾಡಿದ್ದರು. ಇದರಿಂದ ಕೆರಳಿದ ಶರ್ಮರು ಯೋಗ್ಯಪ್ಪನವರು ಎಂದು ವ್ಯಂಗ್ಯವಾಗಿ ಮೂದಲಿಸಿದ್ದರು. ಆದರೂ ಯೋಗಪ್ಪನವರು ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ತುಟಿಬಿರಿದರು. ಆಗ ನಟರಾಜ್ ಹುಳಿಯಾರ್ ಮತ್ತು ಲಂಕೇಶರು ಯೋಗಪ್ಪನವರ ವ್ಯಾಖ್ಯಾನವನ್ನು ಸಮರ್ಥಿಸಿಕೊಂಡಿದ್ದರು.

ಒಮ್ಮೆ ಪಶುಸಂಗೋಪನಾ ಸಚಿವರಾಗಿದ್ದ ಬಿ.ಬಿ ನಿಂಗಯ್ಯ ನನ್ನ ಗೆಳೆಯರಾದ ಕಾರಣಕ್ಕೆ ಆಫೀಸಿಗೆ ಕರೆದರು. ಹೋದಾಗ ಇಲ್ಲೆ ಊಟ ಮಾಡಿ ಎಂದರು. ಆಯ್ತು ಎಂದು ಊಟಕ್ಕೆ ಕುಳಿತಾಗ ನಿಂಗಯ್ಯನವರಿಗೆ ಪಿ.ಎಸ್ ಆಗಿದ್ದ ಯೋಗಪ್ಪನವರು ವಿಧೇಯ ಪರಿಚಾರಕನಂತೆ ಊಟ ಬಡಿಸಿದ್ದು ನಾನು ಮರೆಯಲಾಗದ ಮುಜುಗರಕ್ಕೆ ಈಡುಮಾಡಿತ್ತು. ಆದರೆ ಯೋಗಪ್ಪನವರಿಗೆ ಏನೂ ಅನ್ನಿಸಿರಲಿಲ್ಲ ಬದಲಿಗೆ ಗೆಳೆಯನಿಗೆ ಆತಿಥ್ಯ ನೀಡಿದ ಖುಷಿಯಲ್ಲಿದ್ದರು.

ಅವರು ಪಿ.ಎಸ್‌ ಆಗಿ ಕೆಲಸ ಮಾಡಿದ ಮಂತ್ರಿಗಳು ನೆನೆಸಿಕೊಳ್ಳುವಂತಹ ಅಧಿಕಾರಿಯಾಗಿದ್ದರು. ಅವರು ಉದಾಸಿ ಬಳಿಯಿದ್ದಾಗ ನಾನೊಮ್ಮೆ ಹೋಗಿದ್ದೆ. ನನ್ನನ್ನು ಉದಾಸಿಗೆ ಪರಿಚಯಿಸಿದ್ದನ್ನು ನೋಡಿ ದಂಗು ಬಡಿದಿದ್ದೆ. ಏಕೆಂದರೆ, ನನ್ನ ಕಟ್ಟೆಪುರಾಣವನ್ನು ಆ ರೂಪದಲ್ಲಿ ಉದಾಸಿಗೆ ವಿವರಿಸಿದ್ದರು. ಉದಾಸಿ ಕೂಡ ಎಂ.ಪಿ ಪ್ರಕಾಶರ ಒಡನಾಡಿಯಾದ್ದರಿಂದ ಯೋಗಪ್ಪನವರ ಮಾತುಗಳನ್ನು ಲಕ್ಷ್ಯವಿಟ್ಟು ಕೇಳುತ್ತಿದ್ದರು. ಮುಂದೆ ನಾನು ಕಟ್ಟೆಪುರಾಣವನ್ನು ಪುಸ್ತಕವಾಗಿ ಪ್ರಕಟಿಸಿದಾಗ ಯೋಗಪ್ಪನವರಿಂದಲೇ ಮುನ್ನುಡಿ ಬರೆಸಿದ್ದೆ.

“ಪ್ರೀತಿಯೆಂಬುದು ಚಂದ್ರನ ದಯೆ” ಎಂಬ ಕಾವ್ಯದ ಗಣಿಯಂತಿರುವ ಪುಸ್ತಕವನ್ನು ಅವರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಈಗಾಗಲೇ ಕೆಎಎಸ್ ಅಧಿಕಾರಿಯಾಗಿರುವ ಅವರ ಮಗಳೊಂದಿಗೆ ದಿಢೀರನೆ ಪತ್ರಿಕೆ ಆಫೀಸಿಗೆ ಬಂದು ಗೌರಿ ಕೈಯಿಂದ ಬಿಡುಗಡೆ ಮಾಡಿಸಿದರು. ನಂತರ ಕ್ರಿಕೆಟ್ ಕ್ಲಬ್ಬಿನಲ್ಲಿ ಗೌರಿ, ಸತೀಶ್, ಶ್ರೀನಿವಾಸ ಕರಿಯಪ್ಪ ಮತ್ತು ಈ ಚಂದ್ರನಿಗೆ ಪಾರ್ಟಿ ಕೊಟ್ಟರು. ಸಾಮಾನ್ಯವಾಗಿ ಯಾರಾದರೂ ಕುಡಿಸಿದಾಗ ಆಗುವಂತೆಯೇ, ಜಾಸ್ತಿ ಕುಡಿದು ಪೊಲೀಸರಿಗೆ ಸಿಕ್ಕಿಬಿದ್ದೆವು. ಆಗ ಪೊಲೀಸರಿಗೆ, ಕೆಎಎಸ್ ಅಧಿಕಾರಿ ಮತ್ತು ಕನ್ನಡದ ದೊಡ್ಡ ಸಾಹಿತಿ ಯೋಗಪ್ಪನವರು ಪಾರ್ಟಿ ಕೊಟ್ಟರು, ಆದ್ದರಿಂದ ಬಿಡಿ ಸಾರ್ ಎಂದೆವು. ಸಾಹಿತಿ ಪಾರ್ಟಿ ಕೊಟ್ರು ಅಂತ ಇಷ್ಟೊಂದೇನ್ರಿ ಕುಡಿಯದು. ಈ ಕಡೆ ಬನ್ನಿ ಗಾಡಿ ಹಾಕಿ ಎಂದರು. ದಿಕ್ಕು ಕಾಣದ ನಾನು  ಕೊನೆಗೆ ಕಷ್ಟಪಟ್ಟು ಬಿಡಿಸಿಕೊಂಡು ಬರುವಷ್ಟರಲ್ಲಿ ಅರ್ಧ ರಾತ್ರಿಯಾಯ್ತು. ಇದನ್ನು ಯೋಗಪ್ಪನವರಿಗೆ ಹೇಳಿದಾಗ, ಅದಾಗಲೇ ಜಗತ್ತಿನ ರೂಪಕ ಲೇಖಕರ ಬಗ್ಗೆ ಅರೆದು ಕುಡಿದಿದ್ದ ಯೋಗಪ್ಪನವರು ತುಟಿ ಬಿರಿದು ಹೌದ್ರಾ ಎಂದಿದ್ದರು!

ಅವರು ’ಪ್ರೀತಿಯೆಂಬುದು ಚಂದ್ರನ ದಯೆ’ ಎಂಬ ಪುಸ್ತಕ ಕೊಟ್ಟು ಅಭಿಪ್ರಾಯ ಕೇಳಿದ್ದರು. ಆಗ ನಾನು ಫೋನು ಮಾಡಿ “ಸಂಗವ್ವಕ್ಕನ ಮುದ್ದಿನ.. ಬನಶಂಕರಿ ಜಾತ್ರೆಯಲ್ಲಿ ಮಾಯವಾದವಲ್ಲೊ ಎಂಬ ಹಾಡಿನ ಸಾಲುಗಳನ್ನು ರಾಗವಾಗಿ ಹೇಳಿ ಬನಶಂಕರಿ ಜಾತ್ರೆ ನೋಡಬೇಕಲ್ರಿ ಸರ ಎಂದಿದ್ದೆ. ಅದಕೇನಂತೆ ಈ ಬಾರಿ ನೋಡೋನು ಎಂದು ಆ ಜಾತ್ರೆಯನ್ನು ವರ್ಣಿಸಿದ್ದರು.

ಕಳೆದ ಕೊರೊನಾ ಟೈಮಿನಲ್ಲಿ ನಾನು ಮನೆಯಲ್ಲೇ ಇದ್ದು ಲಂಕೇಶರ ಒಡನಾಟದಲ್ಲಿನ ವಿವರಕ್ಕೆ ರೂಪಕೊಟ್ಟು ಒಂದು ಪುಸ್ತಕ ಮಾಡಿ ಅದಕ್ಕೊಂದು ಟೈಟಲ್ ಬೇಕು ಎಂದು ಕೇಳಿದ್ದೆ. ಅದಕ್ಕವರು, ಲಂಕೇಶ್ ಜೊತೆಯಾಗಿದ್ದವುರು ಏನೇನಾದ್ರು ಅನ್ನದನ್ನ ನೀವು ಮಾತ್ರ ಬರೀತಿರಿ ಅದಕ “ಲಂಕೇಶ್ ಜೊತೆಗೆ” ಅಂತ ಟೈಟಲ್ ಇಡ್ರಲ್ಲಾ ಎಂದಿದ್ದರು. ಆ ಪುಸ್ತಕವನ್ನು ಅವರಿಗೆ ಕೊಡಲು ಇಂದು ನಾಳೆ ಎನ್ನುತ್ತಿದ್ದ ನನಗೆ ಕೊರೊನಾ ಸರಿಯಾದ ಉತ್ತರ ಕೊಟ್ಟಿತು. ಆರೋಗ್ಯದ ವಿಷಯದಲ್ಲಿ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದ ಯೋಗಪ್ಪನವರು ಮಗನ ಮದುವೆ ಸಲುವಾಗಿ ಲಗ್ನಪತ್ರಿಕೆ ಕೊಡಲು ಹೋದಾಗ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗ ಚೇತರಿಸಿಕೊಂಡಿರುವುದು ಸುದೈವ. ಈಗಿನ ಸರಕಾರದ ಸುಮಾರು ಜನ ನಮಗೊಬ್ಬ ಸಮರ್ಥ ಪಿಎಸ್ ಬೇಕಾಗಿದ್ದಾರೆಂದು ವಿಚಾರಿಸುತ್ತಿದ್ದಾಗ ಬಸವರಾಜ ಹೊರಟ್ಟಿಯವರ ಗಮನಕ್ಕೆ ಯೋಗಪ್ಪನವರು ಬಂದಿದ್ದರು. ಇನ್ನೇನು ನೇಮಕ ಹೊರಬೀಳುವ ಸಮಯಕ್ಕೆ ಸರಿಯಾಗಿ ಅಪ್ಪ ಮಕ್ಕಳ ಪಕ್ಷ ತಮ್ಮ ಕಡೆಯವರೊಬ್ಬರನ್ನು ಹೊರಟ್ಟಿಯವರ ಮೇಲೆ ಹೇರಿದ್ದರು. ಎಂದಿನಂತೆ ಯೋಗಪ್ಪನವರು “ಬೇಷಾತು ಬಿಡ್ರಿ” ಎಂದು ನೆಮ್ಮದಿಯಾಗಿದ್ದರು.

ಯೋಗಪ್ಪನವರ ಬರವಣಿಗೆ ಕಡಿಮೆಯಿದ್ದರೂ ಅವು ಮತ್ತೆ ಮತ್ತೆ ಓದುವಂತಹ ತೂಕವುಳ್ಳ ಕೃತಿಗಳಾಗಿವೆ. ’ದೇವರ ಹೆಸರಲ್ಲಿ ಪ್ರಮಾಣ ಮಾಡಿ’ ಎಂಬ ಕಾದಂಬರಿ, ’ಆರಾಮ ಕುರ್ಚಿ’ ಎಂಬ ಕಥಾಸಂಕಲನ, ’ರೂಪಕ ಲೇಖಕರು’, ’ಪ್ರೀತಿಯೆಂಬುದು ಚಂದ್ರನ ದಯೆ’, ನೀಲು ಕುರಿತ ವಿಶ್ಲೇಷಣೆ ಇವೆಲ್ಲಾ ಕನ್ನಡ ಸಾಹಿತ್ಯಕ್ಕೆ ಯೋಗಪ್ಪನವರು ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.


ಇದನ್ನೂ ಓದಿ: ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...