ಇತ್ತಿಚಿಗೆ ಒಂದು ನಾಲ್ಕು ದಿನ ಜಯದೇವ ಆಸ್ಪತ್ರೆಯಲಿ ನಮ್ಮೆಲ್ಲರ ಸ್ಫೂರ್ತಿ ದೊರೆಸ್ವಾಮಿ ತಾತನ ಆರೈಕೆಯಲ್ಲಿ ಇದ್ದೆ. ಈ ಮುಂಚೆಯೂ ಮನೆಯಲ್ಲಿದ್ದಾಗಲೂ ಕೆಲವೊಮ್ಮೆ ಹೋಗಿದ್ದೆ. ತಾತಾನಿಗೆ ಅವರ ಜೊತೆ ಇರುವವರಿಗೆ ಯಾರಿಗೂ ತೊಂದರೆ ಕೊಡಬಾರದು, ಬೇಜಾರು ಮಾಡಬಾರದು ಎಂಬ ಸೂಕ್ಷ್ಮತೆ ತುಂಬಾ ಇತ್ತು.
ಒಮ್ಮೆ ಹೀಗೆ ರಾತ್ರಿ 12 ಸಮಯದಲ್ಲಿ ಒಮ್ಮೆ ಕರೆದು ‘ಏನಪ್ಪ ನಿನಗೆ ಈ ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ? ನಿನ್ನ ಅಭಿಪ್ರಾಯ ಏನು’ ಎಂದು ಕೇಳಿದರು. ನಾನು ಇಲ್ಲ ಅನಿಸುತ್ತೆ ತಾತಾ ಅಂದೆ. ಆಗ ಮತ್ತೆ ಅಲ್ಲಪ್ಪ ಹಾಗದರೆ ಈ ಬೆಟ್ಟ ಗುಡ್ಡ ಇಷ್ಟೆಲ್ಲ ಪರಿಸರ ಜಗತ್ತನ್ನ ಯಾರು ಸೃಷ್ಟಿ ಮಾಡಿದರು ಅದಕ್ಕೆ ಒಬ್ಬ ಸರ್ವಶಕ್ತನೋ ಸರ್ವಶಕ್ತೆಯೋ ಇರಬೇಕಲ್ಲ? ಅಂದರು. ನಾನು ತಾತ ಅದು ಏನು ಇದ್ದರೂ ಎಲ್ಲಾ ವೈಜ್ಞಾನಿಕವಾಗಿ ನಡೆಯುತ್ತೆ. ಈಗ ದೇವರು ದಿಂಡ್ರು ಅನ್ನೋ ಹೆಸರಲ್ಲಿ ಮೋಸ ನಡಿತಿದಿಯಲ್ಲ ಆ ದೇವರು ಇಲ್ಲ ಅಂದೆ. ಆಗ ಸ್ವಲ್ಪ ಯೋಚಿಸಿ ಸರಿ ಕಣಪ್ಪ ನಿನ್ನ ಅಭಿಪ್ರಾಯನು ನಾನು ಗೌರವಿಸ್ತೀನಿ ಅಂದರು. ಹೀಗೆ ಬೇರೆ ಬೇರೆ ವಿಚಾಗಳಲ್ಲಿ ಅಭಿಪ್ರಾಯ ಕೇಳುತ್ತಿದ್ದರು.

ಒಂದೆರಡು ದಿನ ರಾತ್ರಿ ಕೆಮ್ಮು ಮತ್ತು ಕಫದಿಂದ ತಾತಾ ನಿದ್ದೆ ಮಾಡೋಕೆ ಆಗಿರಲಿಲ್ಲ. ತಾತ ನನ್ನ ಕುಟುಂಬದ ಬಗ್ಗೆ ನಮ್ಮ ತಂದೆ ತಾಯಿ ಮಾಡೋ ಕೆಲಸದ ಬಗ್ಗೆ ವಿಚಾರಿಸಿದ್ದರು. ಸ್ವಾಭಿಮಾನಿ ಕುಟುಂಬ ವೆರಿ ಗುಡ್ ಎಂದರು.
ಇದನ್ನೂ ಓದಿ: ಗೌರವ ನಮನ | ದೊರೆಸ್ವಾಮಿ ಅವರ ಸಾರ್ಥಕ ಬದುಕಿನ ಮೈಲಿಗಲ್ಲುಗಳು
ನೀನು ಸಂಘಟನೆ ಹೋರಾಟದ ಸಹವಾಸಕ್ಕೆ ಹೇಗೆ ಬಂದೆ ಎಂದು ಕೇಳಿದ್ದಕ್ಕೆ, ಸಾಣೇಹಳ್ಳಿ ಮಠ – ರಂಗಭೂಮಿ – ಸಮಾನ ಶಿಕ್ಷಣಕ್ಕಾಗಿ ಹೋರಾಟ – ಉಡುಪಿ ಚಲೋ ಎಲ್ಲಾ ಕೇಳಿಸಿಕೊಂಡು ಮಧ್ಯೆ ಮಧ್ಯೆ ಪ್ರಶ್ನೆ ಮಾಡಿ ಎಲ್ಲಾ ವಿಚಾರಿಸಿಕೊಂಡು ಬೇಷ್ ಹೇಳಿದರು. ನಮ್ಮ ಊರು ಹಿಂದೂಪುರದ ಹತ್ತಿರ ಅಂದಾಗ ಅವರ ಮುಖ ಅರಳಿತು. ಅವರು ಸ್ವತಂತ್ರ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ಅವರ ಪತ್ರಿಕೆ ತಡೆದದ್ದರಿಂದ ಹಿಂದೂಪುರಕ್ಕೆ ಹೋಗಿ ಆಂಧ್ರದಿಂದ ಪತ್ರಿಕೆ ತಂದ ಸಾಹಸಗಳ ಬಗ್ಗೆ ಹೇಳಿದರು. ಅಲ್ಲಿ ಸಹಾಯ ಮಾಡಿದ ಗೆಳೆಯರನ್ನು ನೆನೆದರು.
ಆರೋಗ್ಯ ಕೈ ಕೊಟ್ಟಿದ್ದಕ್ಕಾಗಿ ತುಂಬಾ ನೊಂದಿದ್ದರು. ನಾನು ವಾಪಸ್ಸು ಆಸ್ಪತ್ರೆಯಿಂದ ಬರೋ ದಿನಕ್ಕಿಂತ ಮುಂಚಿನ ರಾತ್ರಿ ಕೆಮ್ಮು ಏನು ಇಲ್ಲದೆ ಚನ್ನಾಗಿ ನಿದ್ದೆ ಮಾಡಿದ್ದರು. ನನಗೆ ನೀನು ಮೊದಲು ಹೋಗಿ ರೆಸ್ಟ್ ಮಾಡು ಅಂದರು. ಎಲ್ಲಾ ಯುವ ಜನರು ಮೊದಲು ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕು. ಇಡೀ ದೇಶಕ್ಕೆ ಬಂದಿರೋದು ನನಗೂ ಬಂದಿದೆ (ಕೊರೊನಾ), ಇದನ್ನ ಗೆಲ್ಲಬೇಕಾದರೆ ಎಲ್ಲರೂ ಧೈರ್ಯ ಮತ್ತು ಪ್ರೀತಿಯಿಂದ ಜನರ ಬಳಿ ಹೋಗಬೇಕು. ಆಗ ಮಾತ್ರ ಗೆಲ್ಲೋಕೆ ಆಗುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್
ಅಂದಿನ ರಾತ್ರಿ ಸಿರಿಮನೆ ನಾಗರಾಜ್ ಅವರಿಗೆ ಕಾಲ್ ಮಾಡಿ ಹೆದರಬೇಡಿ ಅಂತ ಹೇಳಿದರು. ನೀವು ಅಷ್ಟು ಧೈರ್ಯಕೊಟ್ಟರೆ ಸಾಕು ಅಂತ ಸಿರಿಮನೆ ಕುಣಿದಾಡೋ ರೀತಿ ಮಾತಾಡಿದ್ದರು. ಬೆಳಿಗ್ಗೆ ನಾನು ಅಲ್ಲಿಂದ ಹೊರಡತೀನಿ ಎಂದು ಹೇಳಿದಾಗ ಮತ್ತೆ ಕಾಲ್ ಮಾಡಪ್ಪ ಮರಿಬೇಡ ದಿನಾ ಕಾಲ್ ಮಾಡು ಅಂತ ಹೇಳಿದರು.
ಅಭಿನಂದನ್, ಗಜೇಂದ್ರ (ಈ ಮುಂಚೆ ತಾತಾನನ್ನ ನೋಡಿಕೊಳ್ಳತ್ತಿದ್ದ ಇಬ್ಬರಿಗೂ ಆರೋಗ್ಯ ಕೆಟ್ಟಿತ್ತು) ಇಬ್ಬರಿಗೂ ಕಾಲ್ ಮಾಡೋಕೆ ಹೇಳು ಅವರಿಗೆ ಆರೋಗ್ಯ ನೋಡಿಕೊಳ್ಳೋಕೆ ಹೇಳು ಎಂದು ಹೇಳಿದರು.

ಪ್ರತಿ ದಿನ ರವಿಕೃಷ್ಣ ರೆಡ್ಡಿಯವರು ದೊರೆಸ್ವಾಮಿಯವರನ್ನು ಮಾತಾಡಿಸುತ್ತಿದ್ದು ಅವರಿಗೆ ತುಂಬಾ ರಿಲ್ಯಾಕ್ಸ್ ಕೊಡುತ್ತಿತ್ತು. ರವಿಕೃಷ್ಣ ರೆಡ್ಡಿಯವರಂತು ತುಂಬಾ ಕರ್ತವ್ಯ ಪ್ರಜ್ಞೆ, ತಾತನ ಮೇಲಿನ ಪ್ರೀತಿ, ಗೌರವಗಳನ್ನು ತುಂಬಾ ಗ್ರೇಟ್ಪುಲ್ ಆಗಿ ಅರ್ಪಿಸಿದರು. ತುಂಬಾ ಜನಕ್ಕೆ ಕಾಲ್ ಮಾಡೋಕೆ ಹೇಳಿ ಮಾತಾಡುತ್ತಿದ್ದರು. ಎಲ್ಲಾ ಪ್ರಗತಿಪರ ಹಿರಿಕಿರಿಯರನ್ನು ನೆನೆಸಿಕೊಳ್ಳುತ್ತಿದ್ದರು. ನಾನು ತುಂಬಾ ಒಳ್ಳೆಯ ಜನರ ಸಹವಾಸ ಮಾಡಿದೆ ಅದೇ ನನಗೆ ದೊಡ್ಡ ಸಾರ್ಥಕ ಎಂದು ಪದೇ ಪದೇ ಹೇಳುತ್ತಿದ್ದರು.
ಹಿಂದೂ ಪತ್ರಿಕೆಯ ಆದಿತ್ಯ ಅವರಿಗೆ ಕಾಲ್ ಮಾಡಿಸಿ ನನಗೆ ಪ್ರತಿದಿನ ಪತ್ರಿಕೆ ಬರೋ ವ್ಯವಸ್ಥೆ ಮಾಡಿಸಪ್ಪ ಎಂದಿದ್ದರು. ಅವರು ಪ್ರತಿದಿನ ಪತ್ರಿಕೆ ಸಿಗೋ ರೀತಿ ಮಾಡಿದ್ದರು.
ದೊರೆಸ್ವಾಮಿಯವರು ನಮ್ಮ ನಡುವೆ ದೈಹಿಕವಾಗಿ ಇಲ್ಲದಿರಬಹುದು ಆದರೆ ಅವರ ಆಶಯಗಳನ್ನು ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನವೇ ಅವರನ್ನ ಜೀವಂತ ಇರಿಸಲಿದೆ.
ಇದನ್ನೂ ಓದಿ: ‘ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು’


