ಜುಲೈನಲ್ಲಿ ಕ್ಯಾಬಿನೇಟ್ ಪುನರ್ ರಚನೆಯಾದಾಗ ಕೇಂದ್ರದ ಸಂಪುಟ ಸೇರಿರುವ ಅಜಯ್ ಮಿಶ್ರಾ ಅವರು ಉತ್ತರ ಪ್ರದೇಶದಿಂದ ಸಂಪುಟಕ್ಕೆ ಆಯ್ಕೆಯಾದ ಏಳು ಮಂದಿಯಲ್ಲಿದ್ದ ಒಬ್ಬರೇ ಒಬ್ಬರು ಬ್ರಾಹ್ಮಣ ಪ್ರತಿನಿಧಿಯಾಗಿದ್ದಾರೆ.
ರೈತರ ಮೇಲೆ ವಾಹನ ಚಲಾಯಿಸಿ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಕೊಂದಿದ್ದಾರೆ ಎಂಬ ಆರೋಪ ಬಂದಿದ್ದು, ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ತೆಗೆಯಬೇಕು ಎಂಬ ಆಗ್ರಹ ಕೇಳಿಬಂದಿದೆ. ಒಂದು ವೇಳೆ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ತೆಗೆದರೆ ಎದುರಾಗುವ ಬ್ರಾಹ್ಮಣ ಪ್ರಾತಿನಿಧ್ಯವನ್ನು ಸರಿದೂಗಿಸುವುದು ಹೇಗೆ ಎಂಬ ಬಿಕ್ಕಟ್ಟು ಬಿಜೆಪಿಗೆ ಎದುರಾಗಿದೆ.
ಸಂಪುಟಕ್ಕೆ ಸೇರಿದ ಉತ್ತರ ಪ್ರದೇಶದ ಏಳು ಮಂದಿಯಲ್ಲಿ ಆರು ಮಂದಿ ಓಬಿಸಿ ಹಾಗೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೆಚ್ಚಿನ ಹೊಸ ಮುಖಗಳು ಸಂಸತ್ತಿನಲ್ಲಿ ಯಾವುದೇ ಅಭೂತಪೂರ್ವ ಸಾಧನೆಯನ್ನು ಮಾಡಿದವರಾಗಿರಲಿಲ್ಲ. ಹೇಳಬೇಕೆಂದರೆ ತಮ್ಮ ಕ್ಷೇತ್ರಗಳ ಹೊರಗೆ ಅಷ್ಟೇನೂ ಈ ಹೊಸ ಮುಖಗಳು ತಿಳಿದಿರಲಿಲ್ಲ. ಆದಾಗ್ಯೂ, ಮಿಶ್ರಾ ಅವರ ಸೇರ್ಪಡೆ ಹೆಚ್ಚಿನ ಗಮನ ಸೆಳೆಯಿತು. ಏಕೆಂದರೆ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪನಾಯಕರನ್ನಾಗಿ ನೇಮಿಸಲಾಯಿತು.
ಇದನ್ನೂ ಓದಿರಿ: ಲಖಿಂಪುರ್ಖೇರಿ ಹಿಂಸಾಚಾರವು ಕೇಂದ್ರ ಸಚಿವ, ಆತನ ಮಗನಿಂದಾದ ‘ಯೋಜಿತ ಪಿತೂರಿ’: ಎಫ್ಐಆರ್
ಉತ್ತರ ಪ್ರದೇಶದಲ್ಲಿ ಬಿಜೆಪಿ ಬ್ರಾಹ್ಮಣ ವಿರೋಧಿಯಾಗಿದೆ ಎಂಬ ಆರೋಪವನ್ನು ತೊಳೆದು ಹಾಕಲು ಮಿಶ್ರಾ ಅವರನ್ನು ಕ್ಯಾಬಿನೇಟ್ಗೆ ಸೇರಿಸಲಾಯಿತು. ಠಾಕೂರ್ ಜಾತಿಗೆ ಸೇರಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬ್ರಾಹ್ಮಣರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಟೀಕೆಗಳು ಈ ಹಿಂದಿನ ವರ್ಷಗಳಲ್ಲಿ ಕೇಳಿಬಂದಿದ್ದವು.
2022ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕೇಸರಿ ಪಕ್ಷವಾದ ಬಿಜೆಪಿ, ಮೇಲ್ಜಾತಿಯನ್ನು, ಯಾದವರಲ್ಲದ ಓಬಿಸಿಗಳನ್ನು ಜಾಠವರಲ್ಲದ ದಲಿತರನ್ನು ತನ್ನ ಹಿಡಿತಕ್ಕೆ ತರಲು ಯತ್ನಿಸಿದೆ. ಆದರೆ ಕೆಲವೇ ತಿಂಗಳಲ್ಲಿ ಮಿಶ್ರಾ ಅವರು ಬಿಜೆಪಿ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ ಅವರ ಹಾದಿಗೆ ಮುಳ್ಳಾಗಿ ಪರಿಣಮಿಸಿದ್ದಾರೆ. ಅಜಿತ್ ಮಿಶ್ರಾ ಅವರ ಮಗ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು, ರೈತರ ಕೊಲೆಯಲ್ಲಿ ಹೆಸರು ಕೇಳಿಬಂದಿರುವುದು ಬಿಜೆಪಿಗೆ ಅಘಾತ ತಂದಿದೆ ಎಂದು ‘ದಿ ವೈರ್’ ಸುದ್ದಿ ಜಾಲತಾಣ ಹೇಳಿದೆ.
ಉತ್ತರ ಪ್ರದೇಶ ಸರ್ಕಾರ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಿದೆ. ಸಾವನ್ನಪ್ಪಿದ ರೈತ ಕುಟುಂಬಗಳಿಗೆ 45 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ. ನಾಗರಿಕ ಸಮಾಜ ಹಾಗೂ ವಿರೋಧ ಪಕ್ಷಗಳ ವಿರೋಧಕ್ಕೆ ಘಟನೆ ಗುರಿಯಾಗಿದ್ದು, ಉತ್ತರ ಪ್ರದೇಶ ಪೊಲೀಸರು, ಆಶೀಶ್ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ. ಈ ಘಟನೆ ಬಿಜೆಪಿಯ ಮೇಲೆ ಚುನಾವಣೆಯ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನಲಾಗಿದೆ.
ರೈತರ ಕುಟುಂಬದಲ್ಲಿ ಜನಿಸಿದ ಮಿಶ್ರಾ ಅವರ ರಾಜಕೀಯ ವೃತ್ತಿಜೀವನ ವಿವಾದಗಳಿಂದ ಕೂಡಿದೆ. ರಾಜಕೀಯಕ್ಕೆ ಧುಮುಕುವ ಮುನ್ನ ಕಾನೂನು ಅಭ್ಯಾಸ ಮಾಡಿದ್ದರು. ಮುಂದೆ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಹಿಂದಿ ದಿನಪತ್ರಿಕೆಯಾದ ನವಭಾರತ್ ಟೈಮ್ಸ್ ಪ್ರಕಾರ 2000ರಲ್ಲಿ ಕೊಲೆ ಪ್ರಕರಣದಲ್ಲಿ ಮಿಶ್ರಾ ಆರೋಪಿಯಾಗಿದ್ದರು. ಆದರೆ 2004ರಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರು. 2012ರಲ್ಲಿ ನಿಗಾಸಸ್ನಿಂದ ಶಾಸಕರಾಗಿ ಆಯ್ಕೆಯಾದರು. ನಾಲ್ಕು ವರ್ಷಗಳ ಅವಧಿಯಲ್ಲಿ , ಅವರು 2014ರಲ್ಲಿ ಲಖಿಂಪುರ್ ಖೇರಿಯಿಂದ ಮೊದಲ ಬಾರಿಗೆ ಲೋಕಸಭಾ ಟಿಕೆಟ್ ಪಡೆದರು. ಅವರು 2014 ಮತ್ತು 2019ರ ಸಂಸತ್ ಚುನಾವಣೆಗಳಲ್ಲಿ ಭಾರೀ ಅಂತರದಿಂದ ಗೆದ್ದರು, ಯುಪಿಯಲ್ಲಿ ಪ್ರಸ್ತುತ ಬ್ರಾಹ್ಮಣ ಮುಖವನ್ನು ಹುಡುಕುತ್ತಿದ್ದಾಗ ಬಿಜೆಪಿ ನಾಯಕತ್ವದ ವಿಶ್ವಾಸವನ್ನು ಗಳಿಸಿದರು. ಒಂದು ದಶಕದಲ್ಲಿ ಬ್ರಾಹ್ಮಣ ನಾಯಕನಾಗಿ ಬೆಳೆದಿದ್ದಾರೆ. ಆದರೆ ರೈತರ ಹತ್ಯೆಯಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿರುವುದು ಒತ್ತಡಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿರಿ: ಲಖಿಂಪುರ್ ಖೇರಿ ಭೇಟಿಗೆ ರಾಹುಲ್ ಗಾಂಧಿ ನೇತೃತ್ವದ ನಿಯೋಗಕ್ಕೆ ಅನುಮತಿ ನೀಡದ ಯುಪಿ ಸರ್ಕಾರ


