Homeಅಂಕಣಗಳುಪುಸ್ತಕ ಪರಿಚಯ; 'ನೀಲವ್ವ': ಆಗುವಿಕೆಯನ್ನು ತೋರುವ ಕತೆಗಳು

ಪುಸ್ತಕ ಪರಿಚಯ; ‘ನೀಲವ್ವ’: ಆಗುವಿಕೆಯನ್ನು ತೋರುವ ಕತೆಗಳು

- Advertisement -
- Advertisement -

’ನೀಲವ್ವ’ ಸಂಕಲನದ ಕತೆಗಳು ಒಂದು ಸಹಜ ಮಾನವ ಸಂಬಂಧ, ಜೀವಸಂಬಂಧಕ್ಕೂ ಎಡೆಯಿಲ್ಲದಿರುವ ಬದುಕಿನ ವಿಕಾರವನ್ನು ಚಿತ್ರಿಸುತ್ತಲೇ, ಇದಕ್ಕೆ ಮದ್ದರೆಯುವ ಜೀವಸೆಲೆಯನ್ನು ಹುಡುಕುತ್ತಾ ಹೋಗುತ್ತದೆ. ’ನೀಲಿ’ ಎನ್ನುವುದು ಅರಿವು ಮತ್ತು ಎಚ್ಚರ ಸಂಕೇತದಂತೆ ಕಾಣುತ್ತದೆ. ಇಲ್ಲಿನ ಕತೆಗಳಿಗೆ, ನೇರ ಪ್ರತಿರೋಧಕ್ಕಿಂತ ಹೆಚ್ಚಾಗಿ ಆತ್ಮಸಾಕ್ಷಿಯನ್ನು ಕಲಕುವ ಗುಣವಿದೆ. ಬದಲಾವಣೆ, ಕ್ರಾಂತಿಯ ದಾರಿಯ ಹಾಗೆಯೇ ನಿರಂತರ ಎಚ್ಚರದ, ಸಾವಧಾನದ ಹಾದಿಯಿದೆ. ಈ ಹಾದಿಯಲ್ಲಿ ನೋವಿದೆ, ಆಕ್ರೋಶ ಇದೆ, ಎಚ್ಚರ ಇದೆ, ವಿವೇಕ ಇದೆ, ಬದಲಾಗಬಲ್ಲದೆಂಬ ಭರವಸೆ ಇದೆ. ‘ನೀಲವ್ವ’ ಸಂಕಲನದ ಕತೆಗಳು ನಮ್ಮನ್ನು ಆವರಿಸಿಬಿಡುವುದು ಹೀಗೇ.

ಇಲ್ಲಿ ಜಡೆಪ್ಪ, ಹುಲುಗ, ಸುಂಕ, ಭರಮಪ್ಪನ ಮಗ, ಉಮಾಶಂಕರ್ ಮುಂತಾದ ಪಾತ್ರಗಳು ತಾವು ಅನುಭವಿಸುತ್ತಿರುವ ಅಪಮಾನ, ಹಸಿವು, ನೋವುಗಳಿಂದ ಅನೇಕ ಸವಾಲುಗಳಿಗೆ ಎದುರಾಗುತ್ತಾ ಹೊಸಬದುಕಿನತ್ತ ಮುಖಮಾಡುತ್ತವೆ. ಇದು ಅವರ ವೈಯಕ್ತಿಕ ಬಿಡುಗಡೆಯ ಹಾದಿಯಷ್ಟೇ ಅಲ್ಲ ಅಥವಾ ಕೇವಲ ಅವರ ಸಮುದಾಯದ ಬಿಡುಗಡೆಯ ದಾರಿಯಷ್ಟೇ ಅಲ್ಲ; ಬದಲಿಗೆ ಒಟ್ಟು ಸಮಾಜವೇ ತನಗಂಟಿದ ಕ್ರೌರ್ಯದಿಂದ ಮುಕ್ತಗೊಳ್ಳುವ ದಾರಿಯೂ ಆಗಿದೆ. ‘ಒಂದು ಹೆಜ್ಜೆ’ ಕತೆಯಲ್ಲಿ ಬರುವ ಈಶ್ವರ್ ಸರ್, ‘ತೆರೆಮರೆಯ ಯೋಧ’ದ ದಿನೇಶ್, ‘ದೇವರಬಾವಿ’ಯ ವೈದ್ಯ ಇವರೆಲ್ಲ ತಮ್ಮನ್ನು ಕವಿದುಕೊಂಡಿದ್ದ ಮೌಢ್ಯದ ಪೊರೆ ಹರಿದು ಮಿಡಿಯುವುದು ಇದನ್ನು ಸಾಬೀತುಪಡಿಸುತ್ತದೆ. ‘ನೀಲವ್ವ’ಳ ಪ್ರಖರ ನ್ಯಾಯಪ್ರಜ್ಞೆ, ದೌರ್ಜನ್ಯವನ್ನು ಎದುರಾಗಬೇಕಾದ ಬಗೆಯನ್ನು ಕಾಣಿಸುವ ರೀತಿ ವಿಶಿಷ್ಟವಾಗಿದೆ. ಹೀಗಾಗಿ ಇಲ್ಲಿನ ಕತೆಗಳು ಚಲನೆಯನ್ನು, ಆಗುತ್ತಿರುವ ಬಗೆಯನ್ನು ಹಿಡಿದಿಡುವ ಕತೆಗಳಾಗಿ ನಮ್ಮೊಳಗನ್ನೂ ಕಲಕಿ ಪ್ರಶ್ನಿಸಿ ಜೊತೆಗೆ ಒಯ್ಯುತ್ತವೆ.

ಬದಲಾಗುತ್ತಿರುವ ಪರಿಸರದಲ್ಲಿ ಶೋಷಣೆಯ ಆಯಾಮಗಳೂ ಬದಲಾಗಿರುವುದನ್ನು ಇಲ್ಲಿನ ಕೆಲವು ಕತೆಗಳು ಸೂಕ್ಷ್ಮವಾಗಿ ಹಿಡಿದಿಟ್ಟಿವೆ. ’ಒಂದು ಹೆಜ್ಜೆ’ ಕತೆಯ ಉಮಾಶಂಕರ್, ವಿದ್ಯೆ, ಉದ್ಯೋಗ ಗಳಿಸುವ ಮೂಲಕ ಹಿಂದಿನ ತಲೆಮಾರಿಗಿಂತ ಭಿನ್ನವಾಗಿದ್ದಾನೆ. ಜೊತೆಗೆ ಅದೇ ತಾರತಮ್ಯ ಹೊಸ ರೂಪದಲ್ಲಿ ಅವನನ್ನು ಹಿಂಡುತ್ತಿದೆ. ಇದನ್ನು ತನ್ನದೇ ಆದ ರೀತಿಯಲ್ಲಿ ಎದುರಿಸುವ ಉಮಾಶಂಕರ್ ಹಾಗೂ ಅವನ ತಾಯಿಯ ನಡೆ ನಾವು ಈಗ ತಾರತಮ್ಯದ ನೆಲೆಗಳನ್ನು ಹೊಸ ಬಗೆಯಲ್ಲಿ ಎದುರಾಗಬೇಕು ಎನ್ನುವುದನ್ನು ಸೂಚಿಸುವಂತಿದೆ. ಶೋಷಕರ ಹೊಸ ಮುಖವಾಡಗಳಂತೆಯೇ ಶೋಷಣೆಯನ್ನು ರಮ್ಯಗೊಳಿಸುವ ಪರಿಭಾಷೆಯೂ ನಮ್ಮ ನಡುವೆ ಇದೆ. ‘ತೆರೆಮರೆಯ ಯೋಧ’ ಕತೆಯ ಕೊನೆಯಲ್ಲಿ ಯೋಧ ದಿನೇಶ್ ಪೌರಕಾರ್ಮಿಕನಾದ ಭರಮಪ್ಪನನ್ನು ‘ಕಾಣದ ಶತ್ರುಗಳನ್ನು ನಿವಾರಿಸುವ ತೆರೆಮರೆಯ ಯೋಧ’ ಎಂದು ಅಭಿನಂದಿಸಿದ ಸಂದರ್ಭಲ್ಲಿ ಭರಮಪ್ಪ ಮೈಕ್ ತೆಗೆದುಕೊಂಡು ‘ನನ್ನ ಮಗನಿಗೆ ಕೆಲಸ ಸಿಕ್ಕೈತೆ. ನಾಳೆಯಿಂದ ಈ ಕೆಲ್ಸ ಮಾಡಕ್ಕಿಲ್ಲ’ ಎನ್ನುವುದು ನಮ್ಮೆಲ್ಲರ ಒಳಗನ್ನೂ ಚುಚ್ಚುತ್ತದೆ.

ವಿಕಾಸ್‌ ಆರ್‌.ಮೌರ್ಯ

ಸಂಕಲನದಲ್ಲಿ ನಮ್ಮನ್ನು ಹಿಡಿದಿಡುವ ಇನ್ನೊಂದು ಕತೆ ‘ಚಿನ್ನದ ಕನ್ನಡಕ’. ಅಂಬೇಡ್ಕರ್ ಜಯಂತಿಯಂದು ಅವರ ಮೂರ್ತಿಗೆ ಚಿನ್ನದ ಕನ್ನಡಕ ತೊಡಿಸುವ ಸಂಭ್ರಮ, ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಸಂಭ್ರಮದ ಅಸಂಗತತೆ, ಬದಲಾಗದ ಬದುಕುಗಳನ್ನು ಕಾಣಿಸುತ್ತಾ ಹೋಗುತ್ತದೆ. ಆಶಯ ಮತ್ತು ವಸ್ತುಸ್ಥಿತಿಗಳ ನಡುವಣ ಬಿರುಕನ್ನು ಕತೆಗಾರ ವಿಕಾಸ್ ಶಕ್ತವಾಗಿ ಹಿಡಿದಿಡುತ್ತಾ ಹೋಗುತ್ತಾರೆ. ಅಂಬೇಡ್ಕರ್ ಜಯಂತಿಗೆ ಶುಭಕೋರುವ ಬ್ಯಾನರ್‌ನಲ್ಲಿ ಮುಂಡವಿಲ್ಲದ ರುಂಡಗಳಂತೆ ಕಾಣುವ ಶುಭಕೋರುವವರ ಚಿತ್ರಗಳು, ಸ್ವಾಧೀನ ಕಳೆದುಕೊಂಡ ನೀಲವ್ವ, ಭಾರ ಕಳೆದುಕೊಳ್ಳದ ಊಟದ ಬುತ್ತಿ, ಜನರ ಮುಗಿಯದ ನೋವಿನ ನಡುವೆಯೇ ಅಂಬೇಡ್ಕರ್‌ಗೆ ಹಾಕಿದ ಚಿನ್ನದ ಕನ್ನಡಕ ಮುಂತಾದ ಪ್ರತಿಮೆಗಳು ವರ್ತಮಾನದ ವ್ಯಂಗ್ಯವನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ‘ತಲೆ ತಲಾಂತರ’ ಕತೆ ಬೇರುಗಳನ್ನು ಕಳೆದುಕೊಂಡ ಸಮುದಾಯ, ತನ್ನ ಅಧೀನತೆಯನ್ನು ತೊರೆದು ಮೂಲಸಂಸ್ಕೃತಿಗೆ ಮರಳುವ ಮೂಲಕ ನೀಗಿಕೊಳ್ಳುವ ಹಾದಿ ತೋರುತ್ತದೆ.

ಹೊಸಪಟ್ಟುಗಳ ಮೂಲಕ ಶೋಷಣೆಯ ಹಿಡಿತವನ್ನು ಬಿಗಿಮಾಡುತ್ತಿರುವ ವ್ಯವಸ್ಥೆ, ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಸುಂಕ ಬಾವಿಗೆ ಹಾರಿ ಶಾರದೆಯ ಮಗುವನ್ನು ಕಾಪಾಡಲು ಅನುವು ಮಾಡಿಕೊಟ್ಟು ಅದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡುತ್ತದೆ. ಅದೇ ಸುಂಕನನ್ನು ಮನುಷ್ಯನೆಂದು ನೋಡಲು ನಿರಾಕರಿಸುತ್ತದೆ. ಎಲ್ಲವನ್ನೂ ಸಂಕೇತಗಳನ್ನಾಗಿಸಿಕೊಂಡು ಅವುಗಳ ವಿಜೃಂಭಣೆಯಲ್ಲೇ ಆಶಯಗಳನ್ನು ಮರೆತ ಜನಸಮೂಹವೂ ಇದೆ. ಈ ಎಲ್ಲದರ ನಡುವೆ ಸುಂಕ, ಗಂಟಪ್ಪ, ನೀಲವ್ವ ಎಲ್ಲ ನೋವುಗಳನ್ನು ನುಂಗಿಯೂ ಎಲ್ಲೂ ಎಚ್ಚರ ಕಳೆದುಕೊಳ್ಳುವುದಿಲ್ಲ. ‘ತೆರೆಮರೆಯ ಯೋಧ’ ಕತೆಯಲ್ಲಿ ಭರಮಪ್ಪನ ಮಗ ಓದಿ ಕೆಲಸ ತೆಗೆದುಕೊಳ್ಳುವುದು, ‘ಒಂದು ಹೆಜ್ಜೆ’ ಕತೆಯಲ್ಲಿ ಪೂರ್ಣಿಮಾ ಮೇಡಂಗೆ ಉಮಾಶಂಕರ್ ಹೋಳಿಗೆಯ ಬಾಕ್ಸ್ ಕೊಡುವುದು, ‘ದೇವರ ಬಾವಿ’ ಕತೆಯಲ್ಲಿ ಶಾರದೆ ಸುಂಕರಿಗೆ ನೆರವಾಗುವ ವೈದ್ಯರು ಎಲ್ಲದರ ಮಧ್ಯೆ ಭರವಸೆಯಂತೆ ಕಾಣುತ್ತಾರೆ.

ಬೆಳಗಿನ ವಾಕ್‌ಗೆ ಉಳ್ಳವರು ನಡೆದು ಬರುವ ಬಗೆಯನ್ನು ‘ದಢೂತಿ ದೇಹಗಳು ನೀರು ತುಂಬಿದ ಪ್ಲಾಸ್ಟಿಕ್ ಕವರುಗಳಂತೆ ತುಳುಕುತ್ತಾ ನಡೆದು ಬರುತ್ತಿದ್ದವು’ ಎಂದು ವಿಕಾಸ್ ಬರೆಯುತ್ತಾರೆ. ಜಡೆಪ್ಪ ಪಾಟಿಚೀಲ ಹೊತ್ತು ಬರುತ್ತಿರುವುದನ್ನು ನೋಡಿದ ರಮ್ಯ ಮತ್ತು ಲಚುಮಿಯ ಮೊಗಗಳು ‘ಬಾಡು ಕಂಡಂತಾದವು’ ಎಂಬ ಸೊಗಸಾದ ಹೋಲಿಕೆ ನೀಡುತ್ತಾರೆ. ಕತೆಗಳ ಹೆಣಿಗೆ ಅಲ್ಲಲ್ಲಿ ಸಡಿಲವಾದಂತೆನಿಸಿದರೂ ಸುತ್ತಲಿನ ಪರಿವೇಶವನ್ನು ಕತೆಗೆ ಪೂರಕವಾಗಿ ಕಟ್ಟಿಕೊಡುವ ಪ್ರಯತ್ನದಿಂದ ಇವರು ಇದನ್ನು ಮೀರುವ ಯತ್ನದಲ್ಲಿದ್ದಾರೆ.

ವಿಕಾಸ್ ಮೌರ್ಯ ಅವರದು ಒಬ್ಬ ಹೋರಾಟಗಾರನ ಮನಸ್ಸು. ಅವರು ಸುತ್ತಲಿನ ಪರಿಸರವನ್ನು ನೋಡುವ ಬಗೆ, ದಾಖಲಿಸುವ ಬಗೆ ಒಂದು ಸೃಜನಶೀಲ ಅಭಿವ್ಯಕ್ತಿಯಾಗಿರುವಂತೆಯೇ, ಇದು ಯಾಕೆ ಇನ್ನೂ ಹೀಗಿದೆ, ಬದಲಾಗುವ ಬಗೆಯೆಂತು ಎಂಬ ವ್ಯಗ್ರತೆಯನ್ನು ಎಳೆಯಾಗಿ ಹೊಂದಿದೆ. ಹೀಗಾಗಿ ಇವರ ಕತೆಗಳ ಆಶಯ ನಿಚ್ಚಳವಾಗಿದೆ. ವಿಕಾಸ್ ಅವರೊಳಗಿನ ತಲ್ಲಣ, ವ್ಯಗ್ರತೆ ಬರಹಕ್ಕೆ ಒಂದು ಶಕ್ತಿ ಕೊಟ್ಟಹಾಗೆಯೇ, ಹೇಳುವ ಧಾವಂತ ಮೂಡಿಸುತ್ತವೆ. ಕತೆಯ ಮೂಲಕ ಕಾಣಿಸುವುದಕ್ಕಿಂತ ಒಳಗೇ ಕುದಿಯುತ್ತಿರುವ ವಿಚಾರವನ್ನು ಹೊರಹಾಕಬೇಕು ಎಂಬ ತುಡಿತದಲ್ಲಿ ಇಲ್ಲಿನ ಕತೆಗಳು ಮೂಡಿವೆ. ಹೀಗಾಗಿ ಇಲ್ಲಿನ ಪಾತ್ರಗಳ ರೂಪುರೇಷೆ ಸ್ಪಷ್ಟ. ಬದುಕಿನ ಸಂಕೀರ್ಣತೆ, ಅನಿರೀಕ್ಷಿತತೆ ಇಲ್ಲಿ ಕಾಣುವುದಿಲ್ಲ. ಆದರೆ ಇಷ್ಟೆಲ್ಲ ಹೋರಾಟಗಳ ನಡುವೆಯೂ ಅವೇ ವಿಕಾರಗಳು ಎಲ್ಲೆಡೆಯಲ್ಲಿಯೂ ಮತ್ತೆ ಮತ್ತೆ ಢಾಳಾಗಿ ಕಾಣುತ್ತಿರುವ ಸಂದರ್ಭದಲ್ಲಿ ಅದು ಒಳಗೇ ಚುಚ್ಚಿದ ಮುಳ್ಳಿನಂತೆ ಬಾಧಿಸುವುದರಿಂದ ಬಿಡುಗಡೆಯಿಲ್ಲ. ಬದುಕಿನಲ್ಲಿ, ಸಮಾಜದಲ್ಲಿ ಮಾಯದ ಗಾಯಗಳಿರುವವರೆಗೂ ಬರೆಯುತ್ತಲೇ ಇರಬೇಕಾಗುತ್ತದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ನಡೆ-ನುಡಿಗಳಲ್ಲಿ ಪ್ರಖರ ಬದ್ಧತೆ ತೋರಿದ ಹೋರಾಟಗಾರನ ಸಾಂಸ್ಕೃತಿಕ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...